ಮರಾಠಿ ಹುಡ್ಗಿಗೆ
ಪ್ರೀತಿ, ಎಲ್ಲ ಬಾಷೆ ಧರ್ಮಗಳನ್ನ ಮೀರಿದ್ದು ಅಂತ ತುಂಬಾನೆ ಓದ್ತಾನೆ ಇರ್ತೀವಿ ಅಲ್ವ ? ನಮ್ಮ ಜೀವನದಲ್ಲೂ ಇದು ನಿಜಾನೆ ಆಗುತ್ತೆ ಅಂತ ಕನಸಲ್ಲಾದ್ರೂ ಕನವರಿಸಿದ್ವಾ? ಇಲ್ಲ ಅಲ್ವ? ಇಬ್ಬರ ಪ್ರೀತಿಯ ಬಳ್ಳಿ ಎತ್ತರೆತ್ತರಕ್ಕೆ ಹಬ್ಬುತ್ತಲೇ ಹೋಯ್ತು, ಆ ದೇವರ ಕೆಟ್ಟ ಕಣ್ಣು ಬೀಳುವವರೆಗು. ನೀನು ನನ್ನ ಜೊತೆ ಮುನಿಸಿಕೊಂಡ ದಿನದಿಂದ, ನಿನ್ನ ಎಲ್ಲ ಮಾತುಗಳೂ ನಿಂತ ನಂತರ, ಅಂತಹ ದೊಡ್ಡ ಅನಾಹುತಗಳೇನು ನಡೆದಿಲ್ಲ. ಕಣ್ಣುಗಳು ಕನಸು ಕಾಣೋದನ್ನ ನಿಲ್ಲಿಸಿವೆ, ನಾನು ಪಡೆದುಕೊಂಡು ಬಂದಿದ್ದಿಷ್ಟೆ ಅಂತ ಈ ಹೃದಯ ತನ್ನನ್ನ ತಾನೆ ಸಂತೈಸಿಕೊಳ್ಳುತ್ತಿದೆ, ಬಣ್ಣ ತುಂಬಿದ್ದ ಬದುಕಿನ ಪುಟಗಳಲ್ಲಿ ಈಗ ನಿನ್ನ ಯಾವ ಸಾಲುಗಳೂ ಉಳಿದಿಲ್ಲ ಅಳಿಸಿಹೋಗಿವೆ, ಮತ್ತೆ ನಿನ್ನ ಕುರಿತು ಒಂದಿಷ್ಟು ಸಾಲುಗಳನ್ನ ಬರೆಯಬೇಕು, ನೆನಪುಗಳನ್ನ ತೆಗೆದುಕೊಂಡು ಹೋಗಿ ಕುಳಿತಿದ್ದೀಯ ಹ್ಯಾಗೆ ಬರಿಯೋದು? ಅದ್ಕೆ ಪೂರ್ತಿ ಮರ್ತುಬಿಟ್ಟಿದ್ದೀನಿ ನಿನ್ನ, ನೀನು ನನಗೆ ಸ್ವಲ್ಪವೂ ನೆನಪಾಗೊಲ್ಲ, ಎಲ್ಲ ನೆನಪುಗಳಿಗೂ ಸಮಾಧಿ ಕಟ್ಟಿಬಿಟ್ಟಿದ್ದೀನಿ,ಯಾವತ್ತೂ ನಿನ್ನ ನೆನಪು ಮಾಡ್ಕೊಳ್ಳೊಲ್ಲ, ನಿನ್ನ ಹೆಸರಿಡಿದು ಒಂದೇ ಒಂದು ಸಲ ಕರಿಯೋಕು ನನಗೆ ಮನಸ್ಸಾಗ್ತಿಲ್ಲ, ಹೋಗ್ಬಿಡು ತುಂಬಾನೆ ದೂರ, ಮತ್ಯಾವತ್ತೂ ನೆನಪಿಗೆ ಬರಲೇಬಾರದು ನೀನು. ತುಂಬಾನೆ ಸುಳ್ಳು ಹೇಳ್ತಿದ್ದೀನಿ ಅಲ್ವಾ? ನೀನು ನನಗೆ ತಿನ್ನಿಸಿದ ಕೈತುತ್ತು, ಮತ್ತು ನೀನು ನನಗೆ ಕೊಟ್ಟ ಅಷ್ಟೂ ಹೂಮುತ್ತುಗಳ ಮೇಲಾಣೆ, ನಿನ್ನ ಮರೆತುಬಿಟ್ಟಿದ್ದೀನಿ ಅಂತ ಸುಳ್ಳು ಹೇಳೋಕ್ ಕೂಡ ತುಂಬ ಕಷ್ಟ ಆಗ್ತಿದೆ ಕಣೆ.

ಈ ಎದೆಯಲ್ಲಿ ಪ್ರೀತಿಯ ಬಳ್ಳಿಯನ್ನ ನೆಟ್ಟು ಮತ್ಯಾರದೋ ಹೃದಯ ಸಾಮ್ರಾಜ್ಯದಲ್ಲಿ ಮಹರಾಣಿಯಾಗಿ ಮೆರೆಯೋ ಸಣ್ಣ ಮನಸ್ಸಿನವಳಲ್ಲ ನೀನು ಅನ್ನೋದು ನನಗೆ ಗೊತ್ತಿದೆ ಪುಟ್ಟ. ನಾನು ಕ್ಷಣಕ್ಷಣಕ್ಕೂ ನೆನಪಾಗ್ತಿದ್ದೀನಿ ಅಲ್ವಾ? ನ್ನ ಜೊತೆ ಮತ್ತೆ ಮಾತಾಡೋಕೆ ನಿನಗೆ ಒಂದು ಸಣ್ಣ ಸ್ವಾಭಿಮಾನ ಅಡ್ಡ ಬರ‍್ತಿದೆ ಅಲ್ವೇನೆ? ಬಿಟ್ಟುಬಿಡು ಕಂದ, ನೋಡು ಮಹಾನ್ ಸ್ವಾಭಿಮಾನಿಯಾದ ನಾನು ಎಲ್ಲದಕ್ಕೂ ತಿಲಾಂಜಲಿ ಬಿಟ್ಟು ನಿನ್ನ ಜೊತೆ ಮಾತಿಗಿಳಿದಿದ್ದೀನಿ, ನಿಂಗೆ ಮಾತ್ರ ಯಾಕೆ ಸಾಧ್ಯವಾಗೊಲ್ಲ ಹೇಳು? ಆದ್ರೂ ತುಂಬಾನೆ ದೂರ ಹೋಗ್ಬಿಟ್ಟೆ ಅಲ್ವಾ? ತುಂಬಾನೆ ದೂರ ಮಾಡ್ಬಿಟ್ಟೆ ಅಲ್ವಾ? ನಿಜ್ಜಾ… ನಂಗೆ ತುಂಬಾನೆ ಭಯ ಆಗ್ತಿದೆ, ಆವಾಗ್ಲೆಲ್ಲ ನೀನು ನನ್ನ ನೆತ್ತಿ ಮುಟ್ಟಿ ಮಾಡಿದ ಆಣೆ ಪ್ರಾಮಾಣಗಳೇ, ನನಗೆ ನೀನು ಮತ್ತೆ ಸಿಕ್ತೀಯ, ಮತ್ತೆ ಬೆಂಗಳೂರಿನ ಗಾಂಧಿ ಬಜಾರಿನ ಎಲ್ಲ ಕತ್ತಲೆಯ ಮೂಲೆಗಳು ನಾಚಿಕೊಳ್ಳುವಂತೆ ತಬ್ಬಿಕುಳಿತುಬಿಡ್ತೀಯಾ ಅನ್ನೊ ನಂಬಿಕೆಯನ್ನ ತರಿಸುತ್ತಿವೆ .

ನಿಂಗೆ ಗೊತ್ತಾ? ನೀನು ಮಾತು ನಿಲ್ಲಿಸಿದ ಮೇಲೆ ನನ್ನ ಮೊಬೈಲು ಕೂಡ ನನ್ನ ಜೊತೆ ಮುನಿಸಿಕೊಂಡು ಕುಳಿತಿದೆ. ಎಸ್ಸೆಮ್ಮೆಸ್ಸುಗಳಿಗೆ ಭಯಂಕರ ಜ್ವರ ಕಣೆ. …..೯೩೧೫ ಈ ನಂಬರಿನಿಂದ ಬರುವ ಒಂದು ಕಾಲ್ ಒಂದು ಮೆಸ್ಸೇಜಿಗಾಗಿ ನನ್ನ ಮೊಬೈಲಿನ ಜೊತೆ ನಾನು ಜೀವವನ್ನ ಕೈಯ್ಯಲ್ಲಿಟ್ಟುಕೊಂಡು ಕುಳಿತಿದ್ದೀನಿ, ನೋಡು ಕಂದ, ನಮ್ಮ ಹಳೆಯ ಕೆಲವು ಬಿನ್ನಾಭಿಪ್ರಾಯಗಳಿಗೆ ಒಂದು ಗತಿ ಕಾಣಿಸೋಣ, ನೀನು ಮಾಡಿದ ಪ್ರೀತಿಯ ಎಲ್ಲ ತಪ್ಪು ಒಪ್ಪುಗಳನ್ನ ಪ್ರೀತಿಯಿಂದಾನೆ ಕ್ಷಮಿಸಿಬಿಡ್ತೀನಿ, ಮರೆತುಬಿಡ್ತೀನಿ. ನನ್ನದಲ್ಲದ ತಪ್ಪು ಒಪ್ಪುಗಳಿಗೆ ನಾನಾಗೆ ನಿನ್ನ ಮುಂದೆ ಮಂಡಿಯೂರಿ ತಲೆತಗ್ಗಿಸಿ ಕುಳಿತುಬಿಡ್ತೀನಿ ಕ್ಷಮಿಸ್ತೀಯ ಅನ್ನೋ ಭರವಸೆಯಿಂದ. ನೀನು ಕೆಟ್ಟವಳಲ್ಲ, ಆದ್ರೆ ತುಂಬಾ ಚಿಕ್ಕವಳು. ಜಗತ್ತಿನಲ್ಲಿ ಚಿಕ್ಕವರು ಮಾಡಿದ ತಪ್ಪುಗಳಿಗೆ ಕ್ಷಮೆಗಳು ಇರುತ್ತೆ ಅಲ್ವಾ? ಇನ್ನು ನನ್ನ ಮರಾಠಿ ಪುಟ್ಟಿ ಮಾಡಿದ ತಪ್ಪುಗಳಿಗೆ ಕ್ಷಮೆಯ ಜೊತೆ ನನ್ನ ಪ್ರೀತಿಯೂ ಇರತ್ತೆ. ಮುನಿಸಿಕೊಂಡ ನಿನ್ನ ಮೂತಿಯನ್ನ ನೋಡೋಕೆ ಇಷ್ಟ ಆಗೊಲ್ವೆ. ಎಲ್ಲಿ ಒಂದು ಹತ್ತು ಸಲ ನಗು ನೋಡೋಣ? ಇಪ್ಪತ್ತು ಮೊಳ ಮಲ್ಲಿಗೆ ಹಿಡಿದು ಅದೇ ಗಾಂಧಿ ಬಜಾರಿನ ಕತ್ತೆಲೆಯ ಮೂಲೆಯಲ್ಲಿ ಜೀವನ ಪೂರ್ತಿ ಜೊತೆಗಿರುವ ನಂಬಿಕೆಯೊಂದಿಗೆ ನಿಂತಿರ್ತೀನಿ. ಮತ್ತೊಮ್ಮೆ ಪೂರ್ತಿ ಗಾಂಧಿ ಬಜಾರು ನಾಚಿಕೊಳ್ಳಲಿ ಬಿಡು, ನಗೆ ನೀನು, ನಿನಗೆ ನಾನು, ನಮಗಿಬ್ಬರು.

ಇಂತಿ ನಿನ್ನ ಪ್ರೀತಿಯ
ಕನ್ನಡ ಹುಡ್ಗ !

ಕವಿತೆಯ ಕೊನೆಯ
ಸಾಲಿನ ಬಳಿಕ,
ಸಂಜೆ ಕತ್ತಲಿನ ಕೊನೆಗೆ
ಮಾತುಗಳೆಲ್ಲ ಮುಗಿದ ನಂತರ
ಎಲ್ಲರ ಹಾರೈಕೆಗಳೂ ತೀರಿದ ತಕ್ಷಣ
ನೆನಪಾಗು.. ಬದುಕು ಮುಂದುವರಿಯಬೇಕು.
———————————————
ಮುಳುಗಲಿ ಜಗತ್ತು
ತೊಲಗಿ ಹೋಗಲಿ ಬೆಳಕು
ಆರಲಿ ಬಿಡು ದೀಪ
ನಾಶವಾಗಿ ಹೋಗಲಿ ಸುಖ ಸಂತೋಷ
ನಾನು ನಿನ್ನ ಮಡಿಲಲ್ಲಿರುವೆ.
——————————————————
ಅಲ್ಲಿ ಹರಿದ ತಾಯ ಸೆರಗಿತ್ತು
ಅಲ್ಲಿ ಅವಳ ಬಿರಿದ ಎದೆಯ
ಸುಂದರ ಬೆರಗಿತ್ತು.
ಹುಡುಗ ತಾಯ ಸೆರಗ ಹೊಲೆದುಕೊಟ್ಟ.
——————————————————–
ಅವನಿಗೆ ಕಾಯುತ್ತಿದ್ದ ಅವಳ
ನೆತ್ತಿಯ ಮೇಲೆ ದಶಕಗಳೆ
ಉರುಳಿ ತೆರಳಿ ಹೋಗಿದ್ದರೂ,
ಅವಳ ಎದೆಯ ಒಳಗೆ ಈಗಲೂ
ಅವನ ಪ್ರೀತಿಯ ಎರಡು ಸಾಲಿನ
ಕವಿತೆಳು ಜೀವ ತಳೆಯುತ್ತಲೇ ಇವೆ.
———————————————————-
ಜಗತ್ತು ಅವಳನ್ನು
ಹುಡುಕುತ್ತಿತ್ತು.
ಯಾರ ಕಣ್ಣಿಗೂ ಬೀಳದೆ
ಕವಿತೆಯೊಳಗಡಗಿ ಕುಳಿತಿದ್ದಳು
ನನ್ನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
——————————————————–
ಹಸಿವಿನಿಂದ ಹೊರಗೆ
ಕತ್ತಲಲ್ಲಿ ಮಲಗಿದ್ದ ಕೋಟ್ಯಾಂತರ
ಜನರ ಮೇಲೆ ಬೆಳದಿಂಗಳ ಸುರಿಸಿದ
ಚಂದಿರ, ಅವರ ಹಸಿವ ನೀಗಿಸಲಾರದ
ಅಸಾಹಾಯಕತೆಗೆ ಹನಿಗೂಡಿದ್ದಾನೆ.
————————————————————-
ಅವಳ ಕೈ ಹಿಡಿದುಕೊಂಡ
ಅವನ ಸಮಸ್ತ ಖುಷಿಗಿಂತ
ಹಿಡಿದ ಹಿಡಿತ ಸಡಿಲಾಗಬಾರದು
ದೇವರೆ ಎಂದು ಬೇಡಿಕೊಂಡ
ಪರಿ ದೊಡ್ಡದಿದೆ.
—————————————————————
ಪ್ರಪಂಚದ ಅತ್ಯುತ್ತಮ
ಚಿತ್ರಕಾರರೆಲ್ಲರೂ ಚಿತ್ರಿಸಿದ
ಚಿತ್ರಿಕೆಗಳೆಲ್ಲವೂ,
ನನ್ನ ಕಪ್ಪು ಬಿಳುಪು ಸುಂದರಿಯ ಹಳೆಯ
ಫೋಟೋದ ಮುಂದೆ ತಲೆ ತಗ್ಗಿಸಿವೆ.
————————————————————
ಹತ್ತು ಮಮತೆ,
ನೂರು ನಂಬಿಕೆ,
ಸಾವಿರ ಪ್ರಾಮಾಣಿಕತೆ,
ಸಾವಿರಾರು ಪ್ರೀತಿ ಪ್ರೇಮಗಳ
ಜೊತೆ ನನ್ನವನನ್ನ ತೂಗಿದ
ತಕ್ಕಡಿಯ ಭಾಗ
ಯಾವತ್ತೂ ಕೆಳಗೇ ಇರುತ್ತದೆ
————————————————————-
ನಾನು ಕೇಳಿದ ಅಷ್ಟೂ
ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರಿಸದ
ನಿನ್ನ ಪ್ರಮಾದಕ್ಕೆ ಒಂದು ಮುತ್ತನ್ನು
ಕೊಡಬೇಕೆಂಬ ಕಠಿಣ ಸಜೆಯನ್ನ ವಿಧಿಸುತ್ತಿದ್ದೇನೆ.

( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಸೂರಜ್ ಎಂಬ ಗೆಳೆಯನಿಗೆ

ನಾವಿಬ್ಬರೂ ಪ್ರೀತಿಯಿಂದ, ಅಷ್ಟೇ ಮಮತೆಯಿಂದ, ಅಷ್ಟೇ ಸಂಯಮದಿಂದ ಕಟ್ಟಿದ ಪ್ರೀತಿಯ ಅರಮನೆಯಿಂದ ನಾನು ನಿನಗೆ ಹೇಳದೆ ಕೇಳದೇ ಹೊರನಡೆದ ನನ್ನ ತಪ್ಪನ್ನ ಮನ್ನಿಸಿಬಿಡು. ನಿನ್ನೆದೆಯೊಳಗಿನ ಅಷ್ಟೂ ಮಮತೆಗೆ ಘೋರಿ ಕಟ್ಟಿದ ನನ್ನ ಅಸಹಾಯಕತೆಯನ್ನ ಮನ್ನಿಸಿಬಿಡು. ನಿನ್ನ ಜೊತೆ ಕೊನೆಯವರೆಗೂ ಬರಲಾರದ ಈ ಹೆಜ್ಜೆಗಳ ತಪ್ಪನ್ನ ಮತ್ತೊಮ್ಮೆ ಮನ್ನಿಸಿಬಿಡು. ನಿನಗಿಟ್ಟ ಸಾವಿರಾರು ಆಣೆ ಪ್ರಮಾಣಗಳನ್ನ ಒಂದೇ ಸಲ ಸುಳ್ಳಾಗಿಸಿದ ಈ ಗೆಳತಿಯನ್ನ ಮತ್ತೊಮ್ಮೆ ಮನ್ನಿಸಿಬಿಡು. ಪ್ರಪಂಚದಲ್ಲಿರುವ ಎಲ್ಲ ಪ್ರೇಮಕಥೆಗಳನ್ನ ನಿನ್ನ ಭುಜಕ್ಕೊರಗಿ ಓದಿ ಹೇಳುತ್ತಾ, ಕೊನೆಗೆ ನಮ್ಮ ಪಾಲಿನ ಪ್ರೇಮದ ಪುಸ್ತಕದಲ್ಲಿ ಒಂದೇ ಒಂದು ವಾಕ್ಯವನ್ನೂ ಬರೆಯದೇ ಎದ್ದು ಹೊರಟು ಬಂದ ಈ ನಿನ್ನ ಹುಡುಗಿಯನ್ನ ಕೊನೆಯ ಸಲ ಕ್ಷಮಿಸಿಬಿಡೋ ಪ್ಲೀಸ್.

ನಿನ್ನ ಕುರಿತಾಗಿ ಅದೆಷ್ಟು ಕನಸುಗಳನ್ನ ಕಂಡಿದ್ದೆನೋ ಕಣೊ. ಹಾಳಾದ್ದು ಕೊನೆಗೂ ಒಂದೂ ನೆಪಮಾತ್ರಕ್ಕಾದರೂ ನನಸಾಗಲಿಲ್ಲ. ಅಷ್ಟು ಕನಸುಗಳ ಮೇಲೆ ನೆಪ ಮಾತ್ರಕ್ಕಾದರೂ ಅಷ್ಟೊಂದು ದೇವರುಗಳ ಒಂದೇ ಒಂದು ಆಶೀರ್ವಾದ ಬೀಳಲಿಲ್ಲ. ಬೇಡಿಕೊಂಡ ಒಂದೇ ಒಂದು ಕನಸು ನನಸಾಗಿದ್ದರೂ ನಾನು ನಿನ್ನ ಮಡಿಲಲ್ಲಿರುತ್ತಿದ್ದೆ. ತಬ್ಬಿಕೊಂಡು ನಿನ್ನ ಉಸಿರುಗಟ್ಟಿಸುತ್ತಿದ್ದೆ, ನಮಗೆ ಹುಟ್ಟಲಿರುವ ಮಗುವ ಹೆಸರ ಇಡೋದಕ್ಕೆ ನಿನ್ನ ಜೊತೆ ಜಗಳಕ್ಕೆ ಬೀಳುತ್ತಿದ್ದೆ, ಸುಮ್ಮನೆ ಮುನಿಸಿಕೊಳ್ಳುತ್ತಿದ್ದೆ, ನಾನೆ ಸ್ಸಾರಿ ಕೇಳುತ್ತಿದ್ದೆ. ಎಲ್ಲಾ ಕನಸು ಕಣೊ. ಇದೆಲ್ಲ ನೋಡಿದ್ರೆ ಏನ್ ಅನ್ಸುತ್ತೆ ಗೊತ್ತಾ? ಪ್ರಪಂಚದ ಅತ್ಯಂತ ದುರದೃಷ್ಟ ಪ್ರೇಮಿಗಳಲ್ಲಿ ನಾವೆ ಮೊದಲ ಸಾಲಿನಲ್ಲಿ ನಿಲ್ಲೋರು ಅಲ್ವೇನೊ?

ಬದುಕು ಒಂದೊಂದು ಸಲ ತುಂಬಾ ಕ್ರೂರಿ ಅನ್ನಿಸಿಬಿಡುತ್ತೆ. ಇಲ್ಲಿ ನಮ್ಮಂತವರ ಪ್ರೀತಿ ಗುಣಿಸಿಕೊಳ್ಳೋದಿಲ್ಲ. ಕೇವಲ ಕಳೆದುಕೊಳ್ಳುತ್ತದೆ. ಕೆಲವು ಬಿಡಿಸಲಾರದ ಬಂಧನಗಳ ಸಂಕೋಲೆಗಳು ಒಂದು ನಿರ್ಮಲವಾದ ಪ್ರೀತಿಯನ್ನ ಬಂಧಿಸಿಬಿಡುತ್ತವೆ. ನನ್ನಂತ ಸೆಂಟಿಮೆಂಟಲ್ ಹುಡುಗಿಯರು ಬಂಧನದಿಂದ ಬಿಡಿಸಿಕೊಳ್ಳಲಾರದೆ ಕಣ್ಣೀರಿಡುತ್ತಾರೆ. ಹುಡುಗಿಯರೆಂದರೇ ಬರಿ ಕೈ ಕೊಡೋರು ಅನ್ನುವ ಮಾತಿಗೆ ಮತ್ತಷ್ಟು ಪುರಾವೆ ಒದಗಿಸುತ್ತಾರೆ. ಒಂದಷ್ಟು ಧೈರ್ಯ ತೆಗೆದುಕೊಂಡು ಒಂದಡಿ ಮುಂದೆ ಹೆಜ್ಜೆಯಿಟ್ಟರೂ ಕಾಣದ ಕೈಗಳು ಮತ್ತಷ್ಟು ಹಿಂದಕ್ಕೆಳೆಯುತ್ತವೆ. ಬದುಕು ಅಂದ್ರೆ ಕಾಂಪ್ರೋಮೈಸ್ ಅಂದ್ಕೊಂಡಿದ್ದೆ. ಆದರೆ ಇಷ್ಟೊಂದು ಅಂತ ನಿನ್ನಾಣೆ ಅಂದ್ಕೊಂಡಿರಲಿಲ್ಲ. ನನ್ನ ಮುಂದಿದ್ದು ಎರಡು ಆಯ್ಕೆ ಕಣೊ.. ಅಪ್ಪ ಅಮ್ಮ ಮತ್ತು ನೀನು. ನಾನು ಮೊದಲನೆಯದನ್ನ ಆಯ್ದುಕೊಂಡು ಮುದ್ದಿನ ಮಗಳು ಅನ್ನಿಸಿಕೊಂಡರೂ ಪ್ರೇಮ ಲೋಕದ ಪಾಲಿಗೆ ಕೈ ಕೊಟ್ಟವಳು ನಂಬಿಕೆ ದ್ರೋಹಿ ಅನ್ನಿಸಿಕೊಳ್ತಾನೆ ನಿನ್ನ ಮನದ ಗುಡಿಯಿಂದ ಎದ್ದು ಹೋಗ್ತಾ ಇದ್ದೀನಿ.. ಪ್ಲೀಸ್ ನೀನು ನನ್ನ ಪ್ರೀತಿಸಿದ್ದು ನಿಜವೇ ಆದರೇ ನನ್ನನ್ನ ಕೊನೆಯ ಬಾರಿಗೆ ಕ್ಷಮಿಸಿ ಬಿಡು.

ನಿನ್ನ ಪೂಜಿತ

ಮೊದಲು ತೊದಲುತ್ತ ಬೆರೆದಿದ್ದ
ಬರೆಯಲಾರದೆ ಬಿಕ್ಕಿ ಅತ್ತಿದ್ದ
ಎರಡು ಸಾಲು ಬರೆಯಲೂ
ಲೆಕ್ಕವಿಲ್ಲದಷ್ಟು ನೆನಪು ಮಾಡಿಕೊಂಡು
ಅರ್ದ ಬರೆದಿಟ್ಟಿದ್ದ ಕವಿತೆ ಕಳೆದು ಹೋಗಿದೆ.

ಅಲ್ಲಿ ಬರೆದ ಒಂದು ಸಾಲು
ಒಂದಕ್ಷರ ಏನೆಂದರೇನೂ ನೆನಪಿಲ್ಲ
ಅಲ್ಲಿ ನಾನು ಬರೆದ ಸಾಲುಗಳಿಗಿಂತ
ಬರೆಯದೇ ಉಳಿಸಿಕೊಂಡ ಸಾಲಿನ
ಸಾಲ ತೀರಿಸಲಾರದ ಕವಿತೆ ಕಳೆದುಹೋಗಿದೆ.

ಅವಳು ನನಗಂತಲೇ
ಬಿಟ್ಟು ಹೋದ ಎಂದೂ
ಮುಗಿಯದ ವಿರಹವನ್ನು
ಕೇವಲ ಮೂರು ಸಾಲುಗಳಲ್ಲಿ ಬರೆದ
ಕವಿತೆ ಕಳೆದು ಹೋಗಿದೆ.

ಅವಳೊಂದಿಗೆ ಕಳೆದ
ಕೆಲವೇ ಕೆಲವು ಕ್ಷಣಗಳನ್ನ
ನನ್ನಿಡೀ ಬದುಕಿಗೆ ವಿಸ್ತರಿಸಿಕೊಂಡ
ಕೆಲವು ಮಾಯಾವಿ ಸಾಲುಗಳ
ಕವಿತೆ ಕಳೆದು ಹೋಗಿದೆ.

ನನಗೆ ಬೆನ್ನು ಮಾಡಿ
ಹೊರಟು ಹೋದವಳ
ಮೊಗದಲ್ಲಿ ಮೂಡಿದ
ಸಣ್ಣ ನಗೆಯನ್ನೂ
ಪ್ರೀತಿಸಿ ಬರೆದ ಸಾಲುಗಳ
ಕವಿತೆ ಕಾಣೆಯಾಗಿದೆ.

ತಾಯಿ ಮತ್ತು ದೇವರು ಹಾಗು
ಅವಳು ಸಮನಾರ್ಥಕ ಪದಗಳೆಂದು
ಹೇಳಿ ನನೊಳಗೆ ಸುಖಿಸಿದ
ಸಾಲುಗಳ ಕವಿತೆ ಕಳೆದು ಹೋಗಿದೆ.

ದೂರಾಗುವ ಮಾತು ನೀನಾಡಿದ
ಕೂಡಲೇ ನಾನು ನಿನ್ನ ಕಾಲಿಗೊರಗಿ
———————-
———————-
ಆ ಕವಿತೆ ಕಳೆದು ಹೋಗಿದೆ
ಬದುಕು ಮುಂದುವರಿಯಬೇಕಿದೆ
ಕವಿತೆ ಬೇಕಿದೆ.

ಕೆಲವೊಮ್ಮೆ
ಬಳ್ಳಾರಿ ಸೀಮೆಯ ಬಿಸಿಲು
ಮತ್ತೊಮ್ಮೆ
ಮಲೆನಾಡ ಬಾಳೇಗಿಡದ
ಟಿಸಿಲು.

ಒಪ್ಪಿಕೊಂಡರೆ ಎದೆಯೊಳಗೆ
ಡಜನ್ಗಟ್ಟಲೇ ಮುಗಿಲು.
ತಬ್ಬಿಕೊಂಡರೆ ಆಹಾ
ಕಲ್ಲೆದೆಗೂ ಎಂಥಹ ದಿಗಿಲು.

ನಾನು ಒಮ್ಮೊಮ್ಮೆ
ತುಂಟನಾದಾಗ
ಅವಳು ಹುಡುಗಿ
ಬೇಲೂರು.
ಒಳಗಣ್ಣ ತೆರೆದಾಗ
ಅವಳು ಗೌರಿ ನಮ್ಮೂರು.

ಆಹಾ ಹಿಂಡಿಬಿಡಬೇಕು
ಸಂಪಿಗೆಯಂತಹ ಮೂಗು.
ಹಾಗೆ ನಕ್ಕರಂತೂ
ಹೋಟೇಲ್ ಆಂದ್ರಾ ಶೈಲಿಯ ಸಾಗು.

ಕಾಣುತ್ತಾಳೆ ಒಮ್ಮೊಮ್ಮೆ
ಹೇಗೆಂದರೆ ಮಗು ಅತ್ತರೆ..
ಅಳಲಿ ನಗಲಿ ಬಿಡು
ಮಾರಾಯ ತುಟಿ ಸಕ್ಕರೆ.

ಕೇವಲ ತಿಂಗಳು ದಿನಗಳ
ಲೆಕ್ಕದಲ್ಲೇ ನಿಮ್ಮಂತವರ
ಆಸ್ತಿಯೆಲ್ಲ ಮಾಗಿ,
ವರ್ಷ ಪೂರ್ತಿ ಬಾಗಿ ದುಡಿದರೂ
ಬಿಸಿಲ ದೇಶದ ಇವರು ನಿತ್ಯ ರೋಗಿ.

ಬಗೆದು ಅಗೆದು ಬಿಟ್ಟಿರಿ
ತಾಯೊಡಲ, ತುಂಬಬಹುದು
ನಿಮ್ಮ ರೊಕ್ಕದ ಚೀಲ,
ಅಳುವ ಕಂದನ ಒಣಗಿದ
ತುಟಿಯ ಒರೆಸಲು ಲೊಳ್ಳೆ ಹಾಲಿಗೂ
ದೊರಕುತ್ತಿಲ್ಲ ರೂಪಾಯಿ ಸಾಲ.

ತನ್ನೊಡಲ ತುಂಬಿಕೊಂಡ
ನಿಮ್ಮ ರೊಕ್ಕದ ಚೀಲ
ಹಾಕುತ್ತಿರಬಹುದು ಕೇಕೆ,
ಅರೆ ಹೊಟ್ಟೆ ಮಗುವ, ಅರೆ ಬಟ್ಟೆ ತಾಯ ನೋಡಿ
ಮೊಸಳೆ ನೀರು ಸುರಿಸಿದರೆ ಸಾಕೆ?

ಸಾಕು ದಯಮಾಡಿ ಕೃಪೆ ತೋರಿ
ಭೂಮಿ ತಾಯ ಸೆರಗನ್ನು ಬಿಡಿ,
ಅದೋ ನೋಡಿ ಅಳುವ ಮಗುವಿನ
ಹಾಲಿಗೆ ಎರಡು ರೂಪಾಯಿಯನ್ನಾದರೂ ಕೊಡಿ.

ನಿನಗೆ ಕೊನೆಯ ಪತ್ರ ಬರೆಯಲು ಕುಳಿತಿದ್ದೇನೆ. ಕೈ ನಡುಗುತ್ತಿದೆ, ನನ್ನ ಇಲ್ಲದ ಅದೃಷ್ಟಕ್ಕೆ ನಾನೆ ಶಪಿಸಿಕುಳ್ಳುತ್ತಾ ಕೆಲವು ಸಾಲುಗಳನ್ನಾದರೂ ಕಷ್ಟ ಪಟ್ಟು ಈ ಪತ್ರದಲ್ಲಿ ತುಂಬಿಸಲು ಕುಳಿತಿದ್ದೇನೆ. ಕಣ್ಣಿಂದ ಒಂದೊಂದೆ ಹನಿಗಳು ಜಾರುತ್ತಿವೆ ಥೇಟ್ ನಿನ್ನ ನೆನಪಿನ ಹಾಗೆ. ಇಷ್ಟು ದಿನಗಳೂ ಅವು ಕೊಡುವ ಸುಳ್ಳು ಭರವಸೆಗಳಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಿನ ಒಂದೊಂದೆ ಹೆಜ್ಜೆಯನಿಡುತ್ತಿದ್ದೆ. ಅಂಕೆ ತಪ್ಪಿದರೂ ಕೈಹಿಡಿದೆತ್ತಲು ನೀನಿದ್ದೀಯ ಎಂಬ ಸಣ್ಣ ಭರವಸೆಯಾದರೂ ಇತ್ತು. ಆದರೆ ಈಗ? ತುಂಬಾ ದೊಡ್ಡ ಜಗದೊಳಗೆ ಯಾಕೋ ಒಂಟಿಯಾಗಿ ಬಿಟ್ಟೆ. ಕಾರಣ ಗೊತ್ತಿಲ್ಲ. ನಿನ್ನ ತಪ್ಪುಗಳ ಪಟ್ಟಿ ಮಾಡಿ ನಿನ್ನ ಮುಂದೆ ಹಿಡಿಯುವ ಧೈರ್ಯ ಸಾಲುತ್ತಿಲ್ಲ. ಕಾರಣ ಗೊತ್ತಾ? ತುಂಬಾ ಪ್ರೀತಿಸಿದವನು ನಾನು. ಇಲ್ಲಿ ನಿನ್ನ ಸರಿ ತಪ್ಪುಗಳ ಲೆಕ್ಕ ಸಿಗುತ್ತಿಲ್ಲ. ಕೇವಲ ನಿನ್ನ ಪಡೆಯಲಾರದ ನನ್ನ ಖೊಟ್ಟಿ ನಸೀಬು ದೊಡ್ಡದಿದೆ ಬಿಡು.

ನಕ್ಕಾಗ, ಅತ್ತಾಗ, ನೀನು ಸುಮ್ಮನೇ ಮುನಿಸಿಕೊಂಡಾಗ, ಮಾತೆ ಆಡದಿದ್ದಾಗ, ನನ್ನ ಬೆನ್ನ ಮೇಲೆ ಮಗುವಿನಂತೆ ಕೂಸುಮರಿಯಾಡುತ್ತಿದ್ದಾಗ ಒಂದೊಂದು ಕವಿತೆಯನ್ನ ಬರೆದು ಬರೆದು ನಿನ್ನ ಕೈಗಿಡುತ್ತಿದ್ದೆ ಅಲ್ವ? ನಿಜ ಹೇಳು ಅಷ್ಟು ಕವಿತೆಗಳಲ್ಲಿ ಒಂದು ಸಾಲೂ ನೆನಪಾಗುತ್ತಿಲ್ಲವಾ? ಪ್ರತಿ ಸಲ ಕೋಳಿ ಜಗಳಗಳಾದಗ, ಕೆಲವೊಮ್ಮೆ ಮಹಾಯುದ್ಧಗಳು ನಮ್ಮ ಮಧ್ಯೆ ನಡೆದಾಗ ಮೊದಲು ಕೇಳುತ್ತಿದ್ದ ಸ್ಸಾರಿ? ಜಾರಿ ಮುಗ್ಗರಿಸಿ ಬೀಳುತ್ತಿದ್ದಾಗ ಆಸರೆಯಾಗುತ್ತಿದ್ದ ಕೈ? ಚೂರೆ ಚೂರು ನೊಂದುಕೊಂಡರೂ ಈ ಕಣ್ಣುಗಳು ಸುರಿಸುತ್ತಿದ್ದ ಹನಿ? ನನ್ನ ಬಾಹುಗಳಲ್ಲಿ ಪೂರ್ತಿ ನೀನಿದ್ದಾಗಲೂ ಕಳೆದು ಕೊಳ್ಳದ ನನ್ನ ತಾಳ್ಮೆ ಸಂಯಮ? ಪಡೆದ ಮುತ್ತು? ತೆಗೆದುಕೊಂಡ ಮುತ್ತು? ಪರಸ್ಪರ ತಿನಿಸುಕೊಂಡ ತುತ್ತುಗಳು? ಇಬ್ಬರೆ ನಡೆದ ಮೌನದ ಹಾದಿ? ಹಾಡಿದ ಸಾಲುಗಳು? ಕಟ್ಟಿದ ಗುಬ್ಬಿಗೂಡು? ಆಡಿಕೊಂಡ ಅಪ್ಪ ಅಮ್ಮ ಆಟ? ಹೇಳು ಇದ್ಯಾವುದೂ
ನಿನಗೆ ನೆನಪಾಗುತ್ತಿಲ್ಲವ?

ಚಿಂತೆಯಿಲ್ಲ ಬಿಡು. ನಿನ್ನ ಜೊತೆಯಿದ್ದಾಗ ಒಂದು ನಿರ್ಮಲ ಪ್ರೀತಿಗೆ ನಾನು ಮಾಡಬೇಕಾದ ಋಣಸಂದಾಯವನ್ನ ನಾನು ಪ್ರಾಮಾಣಿಕವಾಗಿ ಮಾಡಿಯಾಗಿದೆ. ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇದೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ. ನಿನ್ನ ವಿನಾಕಾರಣ
ಪ್ರೀತಿಸಿದವನು ನಾನು. ಕಾರಣವಿಲ್ಲದ ದೂರ ಹೋಗುತ್ತಿರುವವಳು ನೀನು. ಹೇಳು ಹೋಗು ಕಾರಣ ಎಂದು ನಿನ್ನ ಕೈ ಹಿಡಿದು ಕೇಳುವುದಿಲ್ಲ. ಬಲವಂತದಿಂದ ಪಡೆದುಕೊಂಡ ಪ್ರೀತಿಗೆ ಆಯಸ್ಸು ಆರೋಗ್ಯ ತುಂಬಾ ಕಡಿಮೆಯಂತೆ. ಚಂದದ ಬದುಕನ್ನರಸಿ ಅದೆಲ್ಲಿಗೋ ಹೊರಟು ನಿಂತಿದ್ದೀಯ ನೀನು. ಹೋಗುತ್ತಿರುವ ದಾರಿಯಲ್ಲೆಲ್ಲ ಕೇವಲ ಸುಖದ ಹೂವುಗಳು, ಪ್ರೀತಿಯ ಊರುಗಳು ಕಾಣಿಸಲಿ ಎಂದು ದೇವರ ಮುಂದೆ ಕೈಜೋಡಿಸಿ ನಿಂತಿರುವ ನಾನು. ಸಾಗುವ ದಾರಿಯಲ್ಲಿ ನೆಪಮಾತ್ರಕ್ಕಾದರೂ ಹಿಂತಿರುಗಿ ನೋಡಬೇಡ. ಈ ಬಂಗಾರದಂತ ಹುಡುಗನ ಪ್ರಾಮಾಣಿಕ ಪ್ರೀತಿ, ನೀನು ಬೇರೆ ಪ್ರೀತಿಯನ್ನರಸಿಕೊಂಡು ಹೊರಟ ನಿರ್ಧಾರವನ್ನು ಬದಲಿಸಿದರೂ ಬದಲಿಸಬಹುದು.

ಹೇಳಲು ಕಷ್ಟವಾದರೂ ಹೇಳುತ್ತಿದ್ದೀನಿ. ನಿನ್ನ ಪ್ರೀತಿಗೆ ಜಯವಾಗಲಿ bye.
ಕ್ಷಮಿಸು ಗುಡ್ bye..!

ನವಿಲೂರಿನ ನತದೃಷ್ಟ

ಅವಳ ಬಿರಿದ ಮಲ್ಲಿಗೆ ಎದೆಯ
ಹಾಗೆ ನೋಡದಿರು ಗೆಳೆಯ.
ನೋಯದೇ ಇದ್ದೀತೆ, ಯಾರ ಕಣ್ಣೂ
ಬೀಳದಿರಲೆಂದು ಲಟಿಗೆ ತೆಗೆದು
ಮಗಳ ಹೊರಗೆ ಕಳುಹಿಸಿದ ತಾಯ ಹೃದಯ.

ನೋಡ ನೋಡುತ್ತಲೆ ಅವಳ
ತುಟಿಯ ಸವಿಯುವ ನಿನ್ನ
ದುರಾಸೆಯ ಆಚೆ ಚೆಲ್ಲು,
ಅವಳದೆಲ್ಲವ ಸವಿಯುವ ಅವಳ
ರಾಜಕುಮಾರನಿದ್ದರೂ ಇರಬಹುದು
ದೂರ ನಿಲ್ಲು.

ಕನಸಿನಲ್ಲಿಯೇ ಮೈಬಳಸಿ
ತೋಳ್ಬಳಸಿ ಅವಳದೆಲ್ಲವ
ಪಡೆದ ಕನಸು ಕಾಣಬೇಕೇ?
ಇನ್ನು ಚಿಕ್ಕ ಹುಡುಗಿ ಮಲ್ಲಿಗೆಯಂತ ಕೂಸು
ನಿಮ್ಮಂತವರ ವಿಕೃತವ ನೋಡಬೇಕೆ?

ಕೈಮುಗಿವೆ ದಯಮಾಡಿ
ಹಾಕಿಕೊಳ್ಳಿ ನಿಮ್ಮಾಸೆಗಳಿಗೆಲ್ಲ ಬೇಲಿ.
ನನಗದು ಅನ್ವಯಿಸುವುದಿಲ್ಲ
ನಾನಂತೂ ಹುಟ್ಟು ಪೋಲಿ.

೧.ಜಗತ್ತಿನ ಉತ್ತಮ ವಿರಹ ಕವಿಯ ಕವನಗಳ ಜೀವಾಳ ಮತ್ತು ನೋವಿನ ರಹಸ್ಯಗಳೆಲ್ಲ ಆತನ ವಿಫಲ ಪ್ರೇಮದ ಗುರುತುಗಳಂತೆ.

೨.ಕೇವಲ ಮಾರು ದೂರವಿದ್ದ ಹಾದಿಯನ್ನ ಒಬ್ಬಳೇ ದಾಟಲಾಗದೇ ಕುಸಿದು ಕುಳಿತ ಅವಳ ಅಸಹಾಯಕತೆಗೆ ನಗಬಾರದು. ಬದಲಾಗಿ ಅವಳ ಅಪ್ಪಟ ಪ್ರೀತಿಗೆ ಚಪ್ಪಾಳೆ ತಟ್ಟಬೇಕಂತೆ.

೩.ದೇವರ ಮುಂದೆ ದೀಪಗಳನ್ನ ಹಚ್ಚಿ ತನ್ನ ಕನಸುಗಳೇನೆಂದು ಹೇಳಿಕೊಂಡ ಅವಳ ಪ್ರೀತಿಗೆ ದೇವರೇ ಲೆಕ್ಕ ತಪ್ಪಿದ್ದು ಸುಳ್ಳಲ್ಲ.

೪.ಒಂದಷ್ಟು ಕಣ್ಣೀರ ಕತೆಗಳನ್ನ ಹುಡುಕೊಂಡು ಹೋದವರು ಬರಿಗೈಯ್ಯಲ್ಲಿ ವಾಪಾಸಾದರು. ಬಹುಷ್ಯ ನಾಡಿನ ರೈತರ ವಿಳಾಸ ಮರೆತಿದ್ದರು ಅನ್ನಿಸುತ್ತೆ.

೫.ಅತೀ ಹೆಚ್ಚು ಕಳ್ಳತನವಾದ ಸ್ಥಳಗಳನ್ನೆಲ್ಲ ಪೋಲೀಸರು ಹುಡುಕುತ್ತಿದ್ದರು. ತುಂಟ ಗೆಳೆಯನೊಬ್ಬ ತನ್ನ ಗೆಳತಿಯ ತುಟಿಗಳಿಗೆ ಕಾವಲು ನಿಂತ .

೬.ಭಗ್ನ ಪ್ರೇಮಿಯನ್ನ ಎಲ್ಲರೂ ದೂರವಿಟ್ಟರು. ಆದರೇ ತುಂಬು ಹೃದಯದಿಂದ ವಿರಹ ಗೀತೆಗಳು ಅಪ್ಪಿಕೊಂಡು ಮತ್ತಷ್ಟು ಶ್ರೀಮಂತವಾದವು.

೭.ಅವನ ನೆನಪಿಗೊಂದರಂತೆ ಇವಳು ಹಚ್ಚಿಟ್ಟಿದ್ದ ದೀಪಗಳ ಸಾಲುಗಳ ನೋಡಿ ಅಸಂಖ್ಯಾತ ನಕ್ಷತ್ರಗಳು ಸೋಲೊಪ್ಪಿಕೊಂಡು ಮರೆಯಾದವು

೮.ಅಗಲುವ ಭಯದಿಂದ ಮನೆಯಿಂದ ಹೊರ ಬಂದ ಜೋಡಿಗಳು ರಾತ್ರಿಯಿಡೀ ತಬ್ಬಿಕೊಂಡು ಮಲಗಿದ್ದರೂ ದೇಹಗಳು ಬೆಸೆದುಕೊಳ್ಳಲ್ಲಿಲ್ಲವಂತೆ.

೯.ಅವಳ ನೆನಪಿನಲ್ಲಿ ಒಂದು ಸಾಲಿನಲ್ಲಿ ಕಥೆ ಬರೆಯ ಹೊರಟಾಗಲೆಲ್ಲ ಒಂದು ಕತೆ ಹೊಳೆಯಲಿಲ್ಲ. ಬದಲಾಗಿ ಇವನಿಗೆ ಕತೆಗಳ ಕಣಜಗಳೆ ಸೃಷ್ಟಿಯಾದವು.

೧೦.ನಿನ್ನ ಮನಸ್ಸು ಶೃಂಗಾರ ಬಂಗಾರವೆಂದು ಹೊಗಳಿದ ಗೆಳೆಯನತ್ತ ತಿರುಗಿ ಕೂಡ ನೋಡದ ಹುಡುಗಿ ವಾಸ್ತವಿಕತೆಯ ಒಂದು ಸಾಲಿನ ಮಾತಿಗೆ ತಿರುಗಿ ಮುಗುಳ್ನಕ್ಕಳು.

( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

313309~Indian-village-girl-near-Haridwar-Posters

ಹದಿನೇಳನೆಯ ಕ್ರಾಸಿನ ಹುಡುಗಿಗೆ !

ತುಂಬಾ ದಿನಗಳಾದ ಮೇಲೆ ಪತ್ರ ಬರ್ದಿದ್ದಾನೆ ಕರಿಯಾ ಅಂತ ಒಂದು ಮುಕ್ಕಾಲು ಕೇಜಿ ಕೋಪ ಬಂದಿರಬೇಕು ಅಲ್ಲವಾ? ಇಲ್ಲಿ ನಾನು ನಿನ್ನ ಒಂದುವರೆ ಇಂಚು ಮೂಗು ನೀನು ಕೋಪಿಸಿಕೊಂಡಾಗ ಹೇಗೆ ಕಾಂಡೀತು ಎಂದು ನೆನೆಯುತ್ತ ಮತ್ತೆ ನಿನ್ನ ನೆನೆಯುತ್ತಾ ಮತ್ತೆ ನಿನ್ನೊಬ್ಬಳನ್ನೆ ನೆನೆಯುತ್ತಾ ಈ ಪತ್ರವನ್ನ ಬರೆಯುತ್ತಿದ್ದೇನೆ. ಎಂದಿನಂತೆ ನಾನು ನಿನ್ನ ನೆನಪಲ್ಲಿ ಫ಼ುಲ್ ದಿಲ್ಕುಷ್. ನೀನು ಕೊಟ್ಟ ಅಷ್ಟೂ ಮುತ್ತುಗಳನ್ನ ಈ ಎದೆಯೊಳಗೆ ಜೋಪಾನವಾಗಿ ಜೋಡಿಸಿಟ್ಟು ದಿನಕ್ಕೊಂದರಂತೆ ತೆಗೆದುಕೊಂಡು ಮತ್ತಷ್ಟು ಮುತ್ತುಗಳಿಗೆ ಬೇಡಿಕೆ ಸಲ್ಲಿಸುವವನಿದ್ದೀನಿ. ಮುತ್ತು ಮತ್ತು ನನ್ನ ಬಗೆಗಿರುವ ಪ್ರೀತಿಯ ವಿಷಯದಲ್ಲಿ ನೀನು ಅಕ್ಷಯ ಪಾತ್ರೆ ಮತ್ತು ನಾನು ಅಕ್ಷಯಪಾತ್ರೆಯನ್ನೂ ಖಾಲಿಮಾಡಿ ಬಿಡುತ್ತೇನೆಂದು ಹೊರಟ ಒರಟ.

ಮತ್ತೆ ಹೇಗಿದ್ದಾರೆ ನಿನ್ನ ದೂರ್ವಾಸಮುನಿಯಂತ ಮೂರು ಜನ ಅಣ್ಣಂದಿರು? ಸುಂದರವಾದ ಹುಡುಗಿಯ ಹಿಂದೆ ಈ ದೇವರು ಅನ್ನುವ ಪಾಪಿಷ್ಟ, ಬಲಿಷ್ಟ ಅಣ್ಣಂದಿರನ್ನ ಹುಟ್ಟಿಸಿರುತ್ತಾನೆ ಅನ್ನುವ ಮಾತು ಕೇಳಿದ್ದೆ, ಆದರೆ ಇದು ನಿನ್ನ ವಿಷಯದಲ್ಲಿ ನಿಜವಾಯ್ತು ಅಲ್ವಾ? ದೂರ್ವಾಸಮುನಿಯಂತ ನಿನ್ನಣ್ಣಂದಿರಿಂದ ಅದೆಷ್ಟು ಕಿಸ್ಸುಗಳು ಮಿಸ್ಸಾದವು ನೆನಪಿದೆಯಾ? ಅದೆಷ್ಟು ಅಪ್ಪುಗೆಗಳು ತಬ್ಬಲಿಗಳಾದವು ನೆನಪಿದೆಯಾ? ಅದೆಷ್ಟು ಮಾರ್ನಿಂಗ್ ಶೋ ಸಿನಿಮಾಗಳು ಲಾಸು ಮಾಡಿಕೊಂಡವು ನೆನಪಿದೆಯಾ? ತುಂಬಾ ಹೂವುಗಳು ನಿನ್ನ ಮುಡಿಗೇರಲಿಲ್ಲ.. ತುಂಬಾ ತುಂಬಾ ಬೇಜಾರಾದಾಗಾ ನನ್ನ ಕಣ್ಣ ಹನಿಗಳು ನಿನ್ನ ಮಡಿಲು ಸೇರಲಿಲ್ಲ. ಪಾರ್ಕಿನ ಮೂಲೆಯ ಬೆಂಚುಗಳು ಮತ್ತು ನಿನ್ನ ಮನೆಯ ಹದಿನೇಳನೆಯ ಕ್ರಾಸಿನ ಮೂಲೆಯ ಕತ್ತಲು ನಾಚಿಕೊಳ್ಳಲಿಲ್ಲ.. ನಿನ್ನ ಬಂಗಾರದಂತ ಕಾಲ ಬೆರಳುಗಳಿಗೆ ನನ್ನ ಒರಟು ಒರಟು ಕಾಲ ಬೆರಳು ತಾಗಿಸಿಕೊಂಡು ನಡೆಯುವಾಗ ನನಗಾಗುತ್ತಿದ್ದ ಕುಷಿ ಮತ್ತೆ ನನಗೆ ಸಿಗಲಿಲ್ಲ..ನಿನ್ನ ಕೈ ಹಿಡಿದು ನಡೆಯುತ್ತಿದ್ದರೆ ಊರಲ್ಲಿರೊ ಅಷ್ಟೂ ಹುಡುಗರ ಹೊಟ್ಟೆ ಉರಿಯುವುದನ್ನ ಮತ್ತೆ ನೋಡಲಾಗಲೇ ಇಲ್ಲವಲ್ಲಾ? ಇಷ್ಟೆಲ್ಲ ಲಾಸುಗಳನ್ನ ಅದ್ಯಾವ ದೇವರು ತಂದುಕೊಡುತ್ತಾನೆ? ತುಂಬಿಕೊಡುತ್ತಾನೆ?

ನಿಂಗೆ ಈ ಪತ್ರ ಓದಿ ನಗು ಬರ್ತಿದ್ಯಾ? ಪತ್ರ ತಮಾಷೆ ತರ ಕಾಣ್ಸುತ್ತಾ ? ಸರಿ ಹಗಾದ್ರೆ ಕೇಳಿಲ್ಲಿ.. ನಂಗೆ ನಿನ್ನ ಬಿಟ್ಟು ಬದುಕಿರೋ ಶಕ್ತಿ ಇದ್ಯಾ ಅಂತ ತುಂಬಾ ಸಲ ಕನ್ನಡಿ ಮುಂದೆ ನಿಂತು ಕೇಳಿಕೊಂಡಿದ್ದೀನಿ. ನನ್ನ ಕಣ್ಣುಗಳೇ ಧಾರಾಕಾರವಾಗಿ ಅಳುವ ಮೂಲಕ ನನ್ನ ಪ್ರಶ್ನೆಗೆ ಉತ್ತರಿಸಿವೆ. ನನ್ನಿಂದ ನಿನ್ನನ್ನ ದೂರ ಮಾಡಿದ ನಂತರದ ಒಂದು ಕ್ಷಣದಿಂದಲೇ ನಿನ್ನ ಮೇಲಿನ ನನ್ನ ಪ್ರೀತಿ ಇಮ್ಮಡಿಯಾಗಿದೆ..ಅದಕ್ಕಾಗಿ ನಿನ್ನ ಮನೆಯವರಿಗೆ ಗೌರವಪೂರ್ವಕವಾಗಿ ಒಂದು ದೊಡ್ಡ ಥ್ಯಾಂಕ್ಸ್. ಮತ್ತಷ್ಟು ದೂರ ಮಾಡದೇ ಇದ್ದರೆ ಆ ಇಲ್ಲದ ದೇವರಿಗೂ ಒಂದು ದೊಡ್ಡ ಥ್ಯಾಂಕ್ಸ್ ಮತ್ತು ಇಲ್ಲಿಂದಾನೆ ಒಂದು ಫ಼್ಲಯಿಂಗ್ ಕಿಸ್ಸು. ಮತ್ತೆ ನೀನು ನಂಬುವ ನಾನು ನಂಬದೇ ಇರುವ ದೇವರಲ್ಲಿ ನಾನು ಕೇಳಿಕೊಳ್ಳುವುದಿಷ್ಟೆ. ಈ ಪೆದ್ದು ಹುಡುಗಿಗೆ ಒಂದಿಷ್ಟು ಗ್ರಾಮುಗಳ ತೂಕದ ದೈರ್ಯವನ್ನಾದರೂ ಕೊಡು ಅಂತ. ಆ ಮೂಲಕವಾದರೂ ತನ್ನ ಅಣ್ಣಂದಿರ ಮುಂದೆ ನಿಂತು, ನಂಗೆ ಆ ಕರಿಯನನ್ನ ಕೊಡ್ಸಿ ಅನ್ನುವ ಮಾತು ಆಡ್ತಿಯೇನೊ ಅಂತ. ಇಲ್ಲವಾದರೇ ಹೇಗಿದ್ದೀಯೋ ಹಾಗೆ ಮನೆಯ ಬಾಗಿಲಿಗೆ ಬಂದುಬಿಡು. ಮನೆಯ ಮತ್ತು ಈ ಎದೆಯ ಹೊಸ್ತಿಲು ಯಾವತ್ತು ನಿನಗೆ ಅಂತಾನೆ ಕಾಯುತ್ತಿರುತ್ತೆ.

ನಿನಗೆ ಗೊತ್ತ? ಪ್ರತಿದಿನ ನಾನು ದೀಪ ಹಚ್ಚುವಾಗ ಆರಿಸುವಾಗ ಮತ್ತು ಮಲಗುವಾಗ ನಿನ್ನ ನೆನಪು ಮಾಡಿಕೊಳ್ಳುತ್ತೇನೆ.. ನನಗೆ ನೀನೆಂದರೆ ಬೆಳಕು, ನೀನೆಂದರೆ ಕತ್ತಲು ನೀನೆಂದರೆ ಹಾಸಿಗೆ ಮತ್ತೆ ಕೊನೆಯದಾಗಿ ನೀನೆಂದರೆ ನನ್ನ ಎಲ್ಲ ನೆನಪುಗಳ ಮೆರವಣಿಗೆ ಮತ್ತೆ ನೀನೆಂದರೆ ನನ್ನ ಮುಂದಿರುವ ಪೂರ್ತಿ ಬದುಕು !

ನಿನ್ನವನೆ

ನವಿಲೂರ್ ಹುಡ್ಗ

Next Page »