ಮೊದಲು ತೊದಲುತ್ತ ಬೆರೆದಿದ್ದ
ಬರೆಯಲಾರದೆ ಬಿಕ್ಕಿ ಅತ್ತಿದ್ದ
ಎರಡು ಸಾಲು ಬರೆಯಲೂ
ಲೆಕ್ಕವಿಲ್ಲದಷ್ಟು ನೆನಪು ಮಾಡಿಕೊಂಡು
ಅರ್ದ ಬರೆದಿಟ್ಟಿದ್ದ ಕವಿತೆ ಕಳೆದು ಹೋಗಿದೆ.

ಅಲ್ಲಿ ಬರೆದ ಒಂದು ಸಾಲು
ಒಂದಕ್ಷರ ಏನೆಂದರೇನೂ ನೆನಪಿಲ್ಲ
ಅಲ್ಲಿ ನಾನು ಬರೆದ ಸಾಲುಗಳಿಗಿಂತ
ಬರೆಯದೇ ಉಳಿಸಿಕೊಂಡ ಸಾಲಿನ
ಸಾಲ ತೀರಿಸಲಾರದ ಕವಿತೆ ಕಳೆದುಹೋಗಿದೆ.

ಅವಳು ನನಗಂತಲೇ
ಬಿಟ್ಟು ಹೋದ ಎಂದೂ
ಮುಗಿಯದ ವಿರಹವನ್ನು
ಕೇವಲ ಮೂರು ಸಾಲುಗಳಲ್ಲಿ ಬರೆದ
ಕವಿತೆ ಕಳೆದು ಹೋಗಿದೆ.

ಅವಳೊಂದಿಗೆ ಕಳೆದ
ಕೆಲವೇ ಕೆಲವು ಕ್ಷಣಗಳನ್ನ
ನನ್ನಿಡೀ ಬದುಕಿಗೆ ವಿಸ್ತರಿಸಿಕೊಂಡ
ಕೆಲವು ಮಾಯಾವಿ ಸಾಲುಗಳ
ಕವಿತೆ ಕಳೆದು ಹೋಗಿದೆ.

ನನಗೆ ಬೆನ್ನು ಮಾಡಿ
ಹೊರಟು ಹೋದವಳ
ಮೊಗದಲ್ಲಿ ಮೂಡಿದ
ಸಣ್ಣ ನಗೆಯನ್ನೂ
ಪ್ರೀತಿಸಿ ಬರೆದ ಸಾಲುಗಳ
ಕವಿತೆ ಕಾಣೆಯಾಗಿದೆ.

ತಾಯಿ ಮತ್ತು ದೇವರು ಹಾಗು
ಅವಳು ಸಮನಾರ್ಥಕ ಪದಗಳೆಂದು
ಹೇಳಿ ನನೊಳಗೆ ಸುಖಿಸಿದ
ಸಾಲುಗಳ ಕವಿತೆ ಕಳೆದು ಹೋಗಿದೆ.

ದೂರಾಗುವ ಮಾತು ನೀನಾಡಿದ
ಕೂಡಲೇ ನಾನು ನಿನ್ನ ಕಾಲಿಗೊರಗಿ
———————-
———————-
ಆ ಕವಿತೆ ಕಳೆದು ಹೋಗಿದೆ
ಬದುಕು ಮುಂದುವರಿಯಬೇಕಿದೆ
ಕವಿತೆ ಬೇಕಿದೆ.

ಕೆಲವೊಮ್ಮೆ
ಬಳ್ಳಾರಿ ಸೀಮೆಯ ಬಿಸಿಲು
ಮತ್ತೊಮ್ಮೆ
ಮಲೆನಾಡ ಬಾಳೇಗಿಡದ
ಟಿಸಿಲು.

ಒಪ್ಪಿಕೊಂಡರೆ ಎದೆಯೊಳಗೆ
ಡಜನ್ಗಟ್ಟಲೇ ಮುಗಿಲು.
ತಬ್ಬಿಕೊಂಡರೆ ಆಹಾ
ಕಲ್ಲೆದೆಗೂ ಎಂಥಹ ದಿಗಿಲು.

ನಾನು ಒಮ್ಮೊಮ್ಮೆ
ತುಂಟನಾದಾಗ
ಅವಳು ಹುಡುಗಿ
ಬೇಲೂರು.
ಒಳಗಣ್ಣ ತೆರೆದಾಗ
ಅವಳು ಗೌರಿ ನಮ್ಮೂರು.

ಆಹಾ ಹಿಂಡಿಬಿಡಬೇಕು
ಸಂಪಿಗೆಯಂತಹ ಮೂಗು.
ಹಾಗೆ ನಕ್ಕರಂತೂ
ಹೋಟೇಲ್ ಆಂದ್ರಾ ಶೈಲಿಯ ಸಾಗು.

ಕಾಣುತ್ತಾಳೆ ಒಮ್ಮೊಮ್ಮೆ
ಹೇಗೆಂದರೆ ಮಗು ಅತ್ತರೆ..
ಅಳಲಿ ನಗಲಿ ಬಿಡು
ಮಾರಾಯ ತುಟಿ ಸಕ್ಕರೆ.

ಕೇವಲ ತಿಂಗಳು ದಿನಗಳ
ಲೆಕ್ಕದಲ್ಲೇ ನಿಮ್ಮಂತವರ
ಆಸ್ತಿಯೆಲ್ಲ ಮಾಗಿ,
ವರ್ಷ ಪೂರ್ತಿ ಬಾಗಿ ದುಡಿದರೂ
ಬಿಸಿಲ ದೇಶದ ಇವರು ನಿತ್ಯ ರೋಗಿ.

ಬಗೆದು ಅಗೆದು ಬಿಟ್ಟಿರಿ
ತಾಯೊಡಲ, ತುಂಬಬಹುದು
ನಿಮ್ಮ ರೊಕ್ಕದ ಚೀಲ,
ಅಳುವ ಕಂದನ ಒಣಗಿದ
ತುಟಿಯ ಒರೆಸಲು ಲೊಳ್ಳೆ ಹಾಲಿಗೂ
ದೊರಕುತ್ತಿಲ್ಲ ರೂಪಾಯಿ ಸಾಲ.

ತನ್ನೊಡಲ ತುಂಬಿಕೊಂಡ
ನಿಮ್ಮ ರೊಕ್ಕದ ಚೀಲ
ಹಾಕುತ್ತಿರಬಹುದು ಕೇಕೆ,
ಅರೆ ಹೊಟ್ಟೆ ಮಗುವ, ಅರೆ ಬಟ್ಟೆ ತಾಯ ನೋಡಿ
ಮೊಸಳೆ ನೀರು ಸುರಿಸಿದರೆ ಸಾಕೆ?

ಸಾಕು ದಯಮಾಡಿ ಕೃಪೆ ತೋರಿ
ಭೂಮಿ ತಾಯ ಸೆರಗನ್ನು ಬಿಡಿ,
ಅದೋ ನೋಡಿ ಅಳುವ ಮಗುವಿನ
ಹಾಲಿಗೆ ಎರಡು ರೂಪಾಯಿಯನ್ನಾದರೂ ಕೊಡಿ.

ನಿನಗೆ ಕೊನೆಯ ಪತ್ರ ಬರೆಯಲು ಕುಳಿತಿದ್ದೇನೆ. ಕೈ ನಡುಗುತ್ತಿದೆ, ನನ್ನ ಇಲ್ಲದ ಅದೃಷ್ಟಕ್ಕೆ ನಾನೆ ಶಪಿಸಿಕುಳ್ಳುತ್ತಾ ಕೆಲವು ಸಾಲುಗಳನ್ನಾದರೂ ಕಷ್ಟ ಪಟ್ಟು ಈ ಪತ್ರದಲ್ಲಿ ತುಂಬಿಸಲು ಕುಳಿತಿದ್ದೇನೆ. ಕಣ್ಣಿಂದ ಒಂದೊಂದೆ ಹನಿಗಳು ಜಾರುತ್ತಿವೆ ಥೇಟ್ ನಿನ್ನ ನೆನಪಿನ ಹಾಗೆ. ಇಷ್ಟು ದಿನಗಳೂ ಅವು ಕೊಡುವ ಸುಳ್ಳು ಭರವಸೆಗಳಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಿನ ಒಂದೊಂದೆ ಹೆಜ್ಜೆಯನಿಡುತ್ತಿದ್ದೆ. ಅಂಕೆ ತಪ್ಪಿದರೂ ಕೈಹಿಡಿದೆತ್ತಲು ನೀನಿದ್ದೀಯ ಎಂಬ ಸಣ್ಣ ಭರವಸೆಯಾದರೂ ಇತ್ತು. ಆದರೆ ಈಗ? ತುಂಬಾ ದೊಡ್ಡ ಜಗದೊಳಗೆ ಯಾಕೋ ಒಂಟಿಯಾಗಿ ಬಿಟ್ಟೆ. ಕಾರಣ ಗೊತ್ತಿಲ್ಲ. ನಿನ್ನ ತಪ್ಪುಗಳ ಪಟ್ಟಿ ಮಾಡಿ ನಿನ್ನ ಮುಂದೆ ಹಿಡಿಯುವ ಧೈರ್ಯ ಸಾಲುತ್ತಿಲ್ಲ. ಕಾರಣ ಗೊತ್ತಾ? ತುಂಬಾ ಪ್ರೀತಿಸಿದವನು ನಾನು. ಇಲ್ಲಿ ನಿನ್ನ ಸರಿ ತಪ್ಪುಗಳ ಲೆಕ್ಕ ಸಿಗುತ್ತಿಲ್ಲ. ಕೇವಲ ನಿನ್ನ ಪಡೆಯಲಾರದ ನನ್ನ ಖೊಟ್ಟಿ ನಸೀಬು ದೊಡ್ಡದಿದೆ ಬಿಡು.

ನಕ್ಕಾಗ, ಅತ್ತಾಗ, ನೀನು ಸುಮ್ಮನೇ ಮುನಿಸಿಕೊಂಡಾಗ, ಮಾತೆ ಆಡದಿದ್ದಾಗ, ನನ್ನ ಬೆನ್ನ ಮೇಲೆ ಮಗುವಿನಂತೆ ಕೂಸುಮರಿಯಾಡುತ್ತಿದ್ದಾಗ ಒಂದೊಂದು ಕವಿತೆಯನ್ನ ಬರೆದು ಬರೆದು ನಿನ್ನ ಕೈಗಿಡುತ್ತಿದ್ದೆ ಅಲ್ವ? ನಿಜ ಹೇಳು ಅಷ್ಟು ಕವಿತೆಗಳಲ್ಲಿ ಒಂದು ಸಾಲೂ ನೆನಪಾಗುತ್ತಿಲ್ಲವಾ? ಪ್ರತಿ ಸಲ ಕೋಳಿ ಜಗಳಗಳಾದಗ, ಕೆಲವೊಮ್ಮೆ ಮಹಾಯುದ್ಧಗಳು ನಮ್ಮ ಮಧ್ಯೆ ನಡೆದಾಗ ಮೊದಲು ಕೇಳುತ್ತಿದ್ದ ಸ್ಸಾರಿ? ಜಾರಿ ಮುಗ್ಗರಿಸಿ ಬೀಳುತ್ತಿದ್ದಾಗ ಆಸರೆಯಾಗುತ್ತಿದ್ದ ಕೈ? ಚೂರೆ ಚೂರು ನೊಂದುಕೊಂಡರೂ ಈ ಕಣ್ಣುಗಳು ಸುರಿಸುತ್ತಿದ್ದ ಹನಿ? ನನ್ನ ಬಾಹುಗಳಲ್ಲಿ ಪೂರ್ತಿ ನೀನಿದ್ದಾಗಲೂ ಕಳೆದು ಕೊಳ್ಳದ ನನ್ನ ತಾಳ್ಮೆ ಸಂಯಮ? ಪಡೆದ ಮುತ್ತು? ತೆಗೆದುಕೊಂಡ ಮುತ್ತು? ಪರಸ್ಪರ ತಿನಿಸುಕೊಂಡ ತುತ್ತುಗಳು? ಇಬ್ಬರೆ ನಡೆದ ಮೌನದ ಹಾದಿ? ಹಾಡಿದ ಸಾಲುಗಳು? ಕಟ್ಟಿದ ಗುಬ್ಬಿಗೂಡು? ಆಡಿಕೊಂಡ ಅಪ್ಪ ಅಮ್ಮ ಆಟ? ಹೇಳು ಇದ್ಯಾವುದೂ
ನಿನಗೆ ನೆನಪಾಗುತ್ತಿಲ್ಲವ?

ಚಿಂತೆಯಿಲ್ಲ ಬಿಡು. ನಿನ್ನ ಜೊತೆಯಿದ್ದಾಗ ಒಂದು ನಿರ್ಮಲ ಪ್ರೀತಿಗೆ ನಾನು ಮಾಡಬೇಕಾದ ಋಣಸಂದಾಯವನ್ನ ನಾನು ಪ್ರಾಮಾಣಿಕವಾಗಿ ಮಾಡಿಯಾಗಿದೆ. ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇದೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ. ನಿನ್ನ ವಿನಾಕಾರಣ
ಪ್ರೀತಿಸಿದವನು ನಾನು. ಕಾರಣವಿಲ್ಲದ ದೂರ ಹೋಗುತ್ತಿರುವವಳು ನೀನು. ಹೇಳು ಹೋಗು ಕಾರಣ ಎಂದು ನಿನ್ನ ಕೈ ಹಿಡಿದು ಕೇಳುವುದಿಲ್ಲ. ಬಲವಂತದಿಂದ ಪಡೆದುಕೊಂಡ ಪ್ರೀತಿಗೆ ಆಯಸ್ಸು ಆರೋಗ್ಯ ತುಂಬಾ ಕಡಿಮೆಯಂತೆ. ಚಂದದ ಬದುಕನ್ನರಸಿ ಅದೆಲ್ಲಿಗೋ ಹೊರಟು ನಿಂತಿದ್ದೀಯ ನೀನು. ಹೋಗುತ್ತಿರುವ ದಾರಿಯಲ್ಲೆಲ್ಲ ಕೇವಲ ಸುಖದ ಹೂವುಗಳು, ಪ್ರೀತಿಯ ಊರುಗಳು ಕಾಣಿಸಲಿ ಎಂದು ದೇವರ ಮುಂದೆ ಕೈಜೋಡಿಸಿ ನಿಂತಿರುವ ನಾನು. ಸಾಗುವ ದಾರಿಯಲ್ಲಿ ನೆಪಮಾತ್ರಕ್ಕಾದರೂ ಹಿಂತಿರುಗಿ ನೋಡಬೇಡ. ಈ ಬಂಗಾರದಂತ ಹುಡುಗನ ಪ್ರಾಮಾಣಿಕ ಪ್ರೀತಿ, ನೀನು ಬೇರೆ ಪ್ರೀತಿಯನ್ನರಸಿಕೊಂಡು ಹೊರಟ ನಿರ್ಧಾರವನ್ನು ಬದಲಿಸಿದರೂ ಬದಲಿಸಬಹುದು.

ಹೇಳಲು ಕಷ್ಟವಾದರೂ ಹೇಳುತ್ತಿದ್ದೀನಿ. ನಿನ್ನ ಪ್ರೀತಿಗೆ ಜಯವಾಗಲಿ bye.
ಕ್ಷಮಿಸು ಗುಡ್ bye..!

ನವಿಲೂರಿನ ನತದೃಷ್ಟ

ಅವಳ ಬಿರಿದ ಮಲ್ಲಿಗೆ ಎದೆಯ
ಹಾಗೆ ನೋಡದಿರು ಗೆಳೆಯ.
ನೋಯದೇ ಇದ್ದೀತೆ, ಯಾರ ಕಣ್ಣೂ
ಬೀಳದಿರಲೆಂದು ಲಟಿಗೆ ತೆಗೆದು
ಮಗಳ ಹೊರಗೆ ಕಳುಹಿಸಿದ ತಾಯ ಹೃದಯ.

ನೋಡ ನೋಡುತ್ತಲೆ ಅವಳ
ತುಟಿಯ ಸವಿಯುವ ನಿನ್ನ
ದುರಾಸೆಯ ಆಚೆ ಚೆಲ್ಲು,
ಅವಳದೆಲ್ಲವ ಸವಿಯುವ ಅವಳ
ರಾಜಕುಮಾರನಿದ್ದರೂ ಇರಬಹುದು
ದೂರ ನಿಲ್ಲು.

ಕನಸಿನಲ್ಲಿಯೇ ಮೈಬಳಸಿ
ತೋಳ್ಬಳಸಿ ಅವಳದೆಲ್ಲವ
ಪಡೆದ ಕನಸು ಕಾಣಬೇಕೇ?
ಇನ್ನು ಚಿಕ್ಕ ಹುಡುಗಿ ಮಲ್ಲಿಗೆಯಂತ ಕೂಸು
ನಿಮ್ಮಂತವರ ವಿಕೃತವ ನೋಡಬೇಕೆ?

ಕೈಮುಗಿವೆ ದಯಮಾಡಿ
ಹಾಕಿಕೊಳ್ಳಿ ನಿಮ್ಮಾಸೆಗಳಿಗೆಲ್ಲ ಬೇಲಿ.
ನನಗದು ಅನ್ವಯಿಸುವುದಿಲ್ಲ
ನಾನಂತೂ ಹುಟ್ಟು ಪೋಲಿ.

೧.ಜಗತ್ತಿನ ಉತ್ತಮ ವಿರಹ ಕವಿಯ ಕವನಗಳ ಜೀವಾಳ ಮತ್ತು ನೋವಿನ ರಹಸ್ಯಗಳೆಲ್ಲ ಆತನ ವಿಫಲ ಪ್ರೇಮದ ಗುರುತುಗಳಂತೆ.

೨.ಕೇವಲ ಮಾರು ದೂರವಿದ್ದ ಹಾದಿಯನ್ನ ಒಬ್ಬಳೇ ದಾಟಲಾಗದೇ ಕುಸಿದು ಕುಳಿತ ಅವಳ ಅಸಹಾಯಕತೆಗೆ ನಗಬಾರದು. ಬದಲಾಗಿ ಅವಳ ಅಪ್ಪಟ ಪ್ರೀತಿಗೆ ಚಪ್ಪಾಳೆ ತಟ್ಟಬೇಕಂತೆ.

೩.ದೇವರ ಮುಂದೆ ದೀಪಗಳನ್ನ ಹಚ್ಚಿ ತನ್ನ ಕನಸುಗಳೇನೆಂದು ಹೇಳಿಕೊಂಡ ಅವಳ ಪ್ರೀತಿಗೆ ದೇವರೇ ಲೆಕ್ಕ ತಪ್ಪಿದ್ದು ಸುಳ್ಳಲ್ಲ.

೪.ಒಂದಷ್ಟು ಕಣ್ಣೀರ ಕತೆಗಳನ್ನ ಹುಡುಕೊಂಡು ಹೋದವರು ಬರಿಗೈಯ್ಯಲ್ಲಿ ವಾಪಾಸಾದರು. ಬಹುಷ್ಯ ನಾಡಿನ ರೈತರ ವಿಳಾಸ ಮರೆತಿದ್ದರು ಅನ್ನಿಸುತ್ತೆ.

೫.ಅತೀ ಹೆಚ್ಚು ಕಳ್ಳತನವಾದ ಸ್ಥಳಗಳನ್ನೆಲ್ಲ ಪೋಲೀಸರು ಹುಡುಕುತ್ತಿದ್ದರು. ತುಂಟ ಗೆಳೆಯನೊಬ್ಬ ತನ್ನ ಗೆಳತಿಯ ತುಟಿಗಳಿಗೆ ಕಾವಲು ನಿಂತ .

೬.ಭಗ್ನ ಪ್ರೇಮಿಯನ್ನ ಎಲ್ಲರೂ ದೂರವಿಟ್ಟರು. ಆದರೇ ತುಂಬು ಹೃದಯದಿಂದ ವಿರಹ ಗೀತೆಗಳು ಅಪ್ಪಿಕೊಂಡು ಮತ್ತಷ್ಟು ಶ್ರೀಮಂತವಾದವು.

೭.ಅವನ ನೆನಪಿಗೊಂದರಂತೆ ಇವಳು ಹಚ್ಚಿಟ್ಟಿದ್ದ ದೀಪಗಳ ಸಾಲುಗಳ ನೋಡಿ ಅಸಂಖ್ಯಾತ ನಕ್ಷತ್ರಗಳು ಸೋಲೊಪ್ಪಿಕೊಂಡು ಮರೆಯಾದವು

೮.ಅಗಲುವ ಭಯದಿಂದ ಮನೆಯಿಂದ ಹೊರ ಬಂದ ಜೋಡಿಗಳು ರಾತ್ರಿಯಿಡೀ ತಬ್ಬಿಕೊಂಡು ಮಲಗಿದ್ದರೂ ದೇಹಗಳು ಬೆಸೆದುಕೊಳ್ಳಲ್ಲಿಲ್ಲವಂತೆ.

೯.ಅವಳ ನೆನಪಿನಲ್ಲಿ ಒಂದು ಸಾಲಿನಲ್ಲಿ ಕಥೆ ಬರೆಯ ಹೊರಟಾಗಲೆಲ್ಲ ಒಂದು ಕತೆ ಹೊಳೆಯಲಿಲ್ಲ. ಬದಲಾಗಿ ಇವನಿಗೆ ಕತೆಗಳ ಕಣಜಗಳೆ ಸೃಷ್ಟಿಯಾದವು.

೧೦.ನಿನ್ನ ಮನಸ್ಸು ಶೃಂಗಾರ ಬಂಗಾರವೆಂದು ಹೊಗಳಿದ ಗೆಳೆಯನತ್ತ ತಿರುಗಿ ಕೂಡ ನೋಡದ ಹುಡುಗಿ ವಾಸ್ತವಿಕತೆಯ ಒಂದು ಸಾಲಿನ ಮಾತಿಗೆ ತಿರುಗಿ ಮುಗುಳ್ನಕ್ಕಳು.

( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

313309~Indian-village-girl-near-Haridwar-Posters

ಹದಿನೇಳನೆಯ ಕ್ರಾಸಿನ ಹುಡುಗಿಗೆ !

ತುಂಬಾ ದಿನಗಳಾದ ಮೇಲೆ ಪತ್ರ ಬರ್ದಿದ್ದಾನೆ ಕರಿಯಾ ಅಂತ ಒಂದು ಮುಕ್ಕಾಲು ಕೇಜಿ ಕೋಪ ಬಂದಿರಬೇಕು ಅಲ್ಲವಾ? ಇಲ್ಲಿ ನಾನು ನಿನ್ನ ಒಂದುವರೆ ಇಂಚು ಮೂಗು ನೀನು ಕೋಪಿಸಿಕೊಂಡಾಗ ಹೇಗೆ ಕಾಂಡೀತು ಎಂದು ನೆನೆಯುತ್ತ ಮತ್ತೆ ನಿನ್ನ ನೆನೆಯುತ್ತಾ ಮತ್ತೆ ನಿನ್ನೊಬ್ಬಳನ್ನೆ ನೆನೆಯುತ್ತಾ ಈ ಪತ್ರವನ್ನ ಬರೆಯುತ್ತಿದ್ದೇನೆ. ಎಂದಿನಂತೆ ನಾನು ನಿನ್ನ ನೆನಪಲ್ಲಿ ಫ಼ುಲ್ ದಿಲ್ಕುಷ್. ನೀನು ಕೊಟ್ಟ ಅಷ್ಟೂ ಮುತ್ತುಗಳನ್ನ ಈ ಎದೆಯೊಳಗೆ ಜೋಪಾನವಾಗಿ ಜೋಡಿಸಿಟ್ಟು ದಿನಕ್ಕೊಂದರಂತೆ ತೆಗೆದುಕೊಂಡು ಮತ್ತಷ್ಟು ಮುತ್ತುಗಳಿಗೆ ಬೇಡಿಕೆ ಸಲ್ಲಿಸುವವನಿದ್ದೀನಿ. ಮುತ್ತು ಮತ್ತು ನನ್ನ ಬಗೆಗಿರುವ ಪ್ರೀತಿಯ ವಿಷಯದಲ್ಲಿ ನೀನು ಅಕ್ಷಯ ಪಾತ್ರೆ ಮತ್ತು ನಾನು ಅಕ್ಷಯಪಾತ್ರೆಯನ್ನೂ ಖಾಲಿಮಾಡಿ ಬಿಡುತ್ತೇನೆಂದು ಹೊರಟ ಒರಟ.

ಮತ್ತೆ ಹೇಗಿದ್ದಾರೆ ನಿನ್ನ ದೂರ್ವಾಸಮುನಿಯಂತ ಮೂರು ಜನ ಅಣ್ಣಂದಿರು? ಸುಂದರವಾದ ಹುಡುಗಿಯ ಹಿಂದೆ ಈ ದೇವರು ಅನ್ನುವ ಪಾಪಿಷ್ಟ, ಬಲಿಷ್ಟ ಅಣ್ಣಂದಿರನ್ನ ಹುಟ್ಟಿಸಿರುತ್ತಾನೆ ಅನ್ನುವ ಮಾತು ಕೇಳಿದ್ದೆ, ಆದರೆ ಇದು ನಿನ್ನ ವಿಷಯದಲ್ಲಿ ನಿಜವಾಯ್ತು ಅಲ್ವಾ? ದೂರ್ವಾಸಮುನಿಯಂತ ನಿನ್ನಣ್ಣಂದಿರಿಂದ ಅದೆಷ್ಟು ಕಿಸ್ಸುಗಳು ಮಿಸ್ಸಾದವು ನೆನಪಿದೆಯಾ? ಅದೆಷ್ಟು ಅಪ್ಪುಗೆಗಳು ತಬ್ಬಲಿಗಳಾದವು ನೆನಪಿದೆಯಾ? ಅದೆಷ್ಟು ಮಾರ್ನಿಂಗ್ ಶೋ ಸಿನಿಮಾಗಳು ಲಾಸು ಮಾಡಿಕೊಂಡವು ನೆನಪಿದೆಯಾ? ತುಂಬಾ ಹೂವುಗಳು ನಿನ್ನ ಮುಡಿಗೇರಲಿಲ್ಲ.. ತುಂಬಾ ತುಂಬಾ ಬೇಜಾರಾದಾಗಾ ನನ್ನ ಕಣ್ಣ ಹನಿಗಳು ನಿನ್ನ ಮಡಿಲು ಸೇರಲಿಲ್ಲ. ಪಾರ್ಕಿನ ಮೂಲೆಯ ಬೆಂಚುಗಳು ಮತ್ತು ನಿನ್ನ ಮನೆಯ ಹದಿನೇಳನೆಯ ಕ್ರಾಸಿನ ಮೂಲೆಯ ಕತ್ತಲು ನಾಚಿಕೊಳ್ಳಲಿಲ್ಲ.. ನಿನ್ನ ಬಂಗಾರದಂತ ಕಾಲ ಬೆರಳುಗಳಿಗೆ ನನ್ನ ಒರಟು ಒರಟು ಕಾಲ ಬೆರಳು ತಾಗಿಸಿಕೊಂಡು ನಡೆಯುವಾಗ ನನಗಾಗುತ್ತಿದ್ದ ಕುಷಿ ಮತ್ತೆ ನನಗೆ ಸಿಗಲಿಲ್ಲ..ನಿನ್ನ ಕೈ ಹಿಡಿದು ನಡೆಯುತ್ತಿದ್ದರೆ ಊರಲ್ಲಿರೊ ಅಷ್ಟೂ ಹುಡುಗರ ಹೊಟ್ಟೆ ಉರಿಯುವುದನ್ನ ಮತ್ತೆ ನೋಡಲಾಗಲೇ ಇಲ್ಲವಲ್ಲಾ? ಇಷ್ಟೆಲ್ಲ ಲಾಸುಗಳನ್ನ ಅದ್ಯಾವ ದೇವರು ತಂದುಕೊಡುತ್ತಾನೆ? ತುಂಬಿಕೊಡುತ್ತಾನೆ?

ನಿಂಗೆ ಈ ಪತ್ರ ಓದಿ ನಗು ಬರ್ತಿದ್ಯಾ? ಪತ್ರ ತಮಾಷೆ ತರ ಕಾಣ್ಸುತ್ತಾ ? ಸರಿ ಹಗಾದ್ರೆ ಕೇಳಿಲ್ಲಿ.. ನಂಗೆ ನಿನ್ನ ಬಿಟ್ಟು ಬದುಕಿರೋ ಶಕ್ತಿ ಇದ್ಯಾ ಅಂತ ತುಂಬಾ ಸಲ ಕನ್ನಡಿ ಮುಂದೆ ನಿಂತು ಕೇಳಿಕೊಂಡಿದ್ದೀನಿ. ನನ್ನ ಕಣ್ಣುಗಳೇ ಧಾರಾಕಾರವಾಗಿ ಅಳುವ ಮೂಲಕ ನನ್ನ ಪ್ರಶ್ನೆಗೆ ಉತ್ತರಿಸಿವೆ. ನನ್ನಿಂದ ನಿನ್ನನ್ನ ದೂರ ಮಾಡಿದ ನಂತರದ ಒಂದು ಕ್ಷಣದಿಂದಲೇ ನಿನ್ನ ಮೇಲಿನ ನನ್ನ ಪ್ರೀತಿ ಇಮ್ಮಡಿಯಾಗಿದೆ..ಅದಕ್ಕಾಗಿ ನಿನ್ನ ಮನೆಯವರಿಗೆ ಗೌರವಪೂರ್ವಕವಾಗಿ ಒಂದು ದೊಡ್ಡ ಥ್ಯಾಂಕ್ಸ್. ಮತ್ತಷ್ಟು ದೂರ ಮಾಡದೇ ಇದ್ದರೆ ಆ ಇಲ್ಲದ ದೇವರಿಗೂ ಒಂದು ದೊಡ್ಡ ಥ್ಯಾಂಕ್ಸ್ ಮತ್ತು ಇಲ್ಲಿಂದಾನೆ ಒಂದು ಫ಼್ಲಯಿಂಗ್ ಕಿಸ್ಸು. ಮತ್ತೆ ನೀನು ನಂಬುವ ನಾನು ನಂಬದೇ ಇರುವ ದೇವರಲ್ಲಿ ನಾನು ಕೇಳಿಕೊಳ್ಳುವುದಿಷ್ಟೆ. ಈ ಪೆದ್ದು ಹುಡುಗಿಗೆ ಒಂದಿಷ್ಟು ಗ್ರಾಮುಗಳ ತೂಕದ ದೈರ್ಯವನ್ನಾದರೂ ಕೊಡು ಅಂತ. ಆ ಮೂಲಕವಾದರೂ ತನ್ನ ಅಣ್ಣಂದಿರ ಮುಂದೆ ನಿಂತು, ನಂಗೆ ಆ ಕರಿಯನನ್ನ ಕೊಡ್ಸಿ ಅನ್ನುವ ಮಾತು ಆಡ್ತಿಯೇನೊ ಅಂತ. ಇಲ್ಲವಾದರೇ ಹೇಗಿದ್ದೀಯೋ ಹಾಗೆ ಮನೆಯ ಬಾಗಿಲಿಗೆ ಬಂದುಬಿಡು. ಮನೆಯ ಮತ್ತು ಈ ಎದೆಯ ಹೊಸ್ತಿಲು ಯಾವತ್ತು ನಿನಗೆ ಅಂತಾನೆ ಕಾಯುತ್ತಿರುತ್ತೆ.

ನಿನಗೆ ಗೊತ್ತ? ಪ್ರತಿದಿನ ನಾನು ದೀಪ ಹಚ್ಚುವಾಗ ಆರಿಸುವಾಗ ಮತ್ತು ಮಲಗುವಾಗ ನಿನ್ನ ನೆನಪು ಮಾಡಿಕೊಳ್ಳುತ್ತೇನೆ.. ನನಗೆ ನೀನೆಂದರೆ ಬೆಳಕು, ನೀನೆಂದರೆ ಕತ್ತಲು ನೀನೆಂದರೆ ಹಾಸಿಗೆ ಮತ್ತೆ ಕೊನೆಯದಾಗಿ ನೀನೆಂದರೆ ನನ್ನ ಎಲ್ಲ ನೆನಪುಗಳ ಮೆರವಣಿಗೆ ಮತ್ತೆ ನೀನೆಂದರೆ ನನ್ನ ಮುಂದಿರುವ ಪೂರ್ತಿ ಬದುಕು !

ನಿನ್ನವನೆ

ನವಿಲೂರ್ ಹುಡ್ಗ

shhhh

ಯಾರಲ್ಲಿ?..!
ಈಗಷ್ಟೇ ಹದಿನಾರು ತುಂಬಿ ಹದಿನೇಳು ಅಷ್ಟೇ.. ಅಷ್ಟೇನಾ? ನಿಜ ಹೇಳ್ಬೇಕು ಅಂದ್ರೆ ಹುಡುಗೀರು ನಮ್ ನಮ್ ವಯಸ್ಸನ್ನ ಕುಚ್ ಕುಚ್ ಕಮ್ಮಿ ನೇ ಹೇಳ್ಕೊಳ್ಳೋದು. ನಿಜ ಹೇಳಬೇಕು ಅಂದ್ರೆ ನನಗೆ ಹದಿನೇಳಾಗಿ ಒಂದು ವರ್ಷ ಆಯ್ತಪ್ಪ ! ಇಲ್ಲಿವಯವರೆಗು ನಾನಾಯ್ತು, ನನ್ನ ಪುಸ್ತಕಗಳಾಯ್ತು, ನನ್ನ ಪುಟಾಣಿ ಸ್ಕೂಟಿ, ನಮ್ಮಪ್ಪಾಮ್ಮ ನನ್ ಕೆಲ್ವು ಜಿಗ್ರಿ ದೋಸ್ತುಗಳಾಯ್ತು ಅಂತ ಇದ್ಬಿಟ್ಟೆ. ಮತ್ಯಾಕೆ ಈ ಪತ್ರ ಬರೆಯುವ ಉಮೇದು ಬಂದಿದ್ದು ಅಂತ ಕೇಳಬೇಡಿ..ನಾಚಿ ನೀರಾಗಿ ಹೋಗ್ಬಿಡ್ತೀನಿ ಅಷ್ಟೆ. ಹೊರಗೆಲ್ಲೋ ಅಪಾಚ್ಚಿ ಬೈಕಿನ ಸದ್ದು ಕೇಳಿದರೆ ನನಗ್ಯಾಕೊ ಇಲ್ಲಿ ಸುಮ್ನಿರೋಕಾಗ್ತಿಲ್ಲ! ಅದ್ಯಾರೋ ಪೋಲಿ ಹುಡುಗನ ಬೆನ್ನಿಗೆ ತನ್ನನ್ನಂಟಿಸಿಕೊಂಡು ಕುಳಿತಿರುವ ಆ ಹುಡುಗಿ ನನ್ನ ಸವತಿಯೇನೋ ಅನ್ನಿಸಿಬಿಡತ್ತೆ. ಪುಸ್ತಕವನ್ನ ಎದೆಗೊತ್ತಿಕೊಂಡು ಸುಮ್ಮನೆ ತಲೆಬಗ್ಗಿಸಿ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಮೊದ್ಲಿನ್ ತರ ಓಡಡೋಕ್ ಆಗ್ತಿಲ್ಲ. ಕಣ್ಣು ಕ್ಯಾಂಪಸ್ಸಿನಲ್ಲಿ ಕುಳಿತ ಚಂದನೆಯ ಕಣ್ಣುಗಳ ಭೇಟೆಯಾಡುತ್ತೆ. ಮನೇನಲ್ಲಿ ಸುಮ್ಮನೆ ಸೀರೆ ಸುತ್ತಿಕೊಂಡು ಕನ್ನಡಿ ಮುಂದೆ ನಿಂತ್ಕೊಂಡು ಬಿಟ್ರೆ ನಿಮಿಷ ಘಂಟೆಗಳೆಲ್ಲ ಆತ್ಮಹತ್ಯೆ ಮಾಡ್ಕೋತಾವೆ. ಅಮ್ಮ ಅನುಮಾನದ ಕಣ್ಣುಗಳಲ್ಲಿ ನೋಡ್ತಾಳೆ. ನಾನು ಸುಮ್ಮನೆ ತುಂಟನಗು ನಕ್ಕು ಬಾಗಿಲು ಹಾಕೊಂಡ್ಬಿಡ್ತೀನಿ. ದಿಂಬು ಉಸಿರುಗಟ್ಟಿ ಸಾಯುತ್ತೆ. ಮತ್ತೇ ಮತ್ತೇ ಮುಂದೇ ಎನ್ ಗೊತ್ತ?..ಬೇಡ ಸೆನ್ಸಾರ್ ಕಟ್ ಪ್ಲೀಸ್..!
ಪ್ಲೀಸ್ ಬೈಯ್ಕೋಬೇಡಿ ನಾನು ತುಂಬಾ ತುಂಬಾ ಒಳ್ಳೆ ಹುಡುಗಿ ಗೊತ್ತ !

ನಿಜ ಕಣ್ರಿ ಐ ಯಾಮ್ ಇನ್ ಲವ್ ! ಹಾಗಂತ ಇನ್ನೂ ಯಾರನ್ನೂ ಇಷ್ಟಪಟ್ಟಿಲ್ಲ! ನನಗೂ ಒಬ್ಬ ಗೆಳೆಯ ಅಂತ ಇದ್ದಿದ್ರೆ ಅನ್ನಿಸೋಕೆ ಶುರುವಾಗಿದೆ ! ಕ್ಯಾಂಪಸ್ಸಿನ ಮಸಾಲ ದೊಸೆಯನ್ನ ಇಬ್ಬರೂ ಹರಿದು ಮುರಿದು ತಿನ್ನಬೇಕು ಅನ್ನಿಸ್ತಿದೆ, ಯಾವುದಾದರೂ ಎರೆಡು ಕಣ್ಣುಗಳೂ ಸುಮ್ಮನೆ ನನ್ನೇ ನೋಡ್ಬೇಕು ಅನ್ನಿಸ್ತಿದೆ, ಅವನ ತಬ್ಬಿಕೊಂಡು ಹಿ ಈಸ್ ಮೈ ಡ್ರೀಮ್ ಬಾಯ್ ಅಂತ ನನ್ನ flirt ಗೆಳತಿಯರ ಮುಂದೆ ನಿಲ್ಬೇಕು ಅನ್ನಿಸ್ತಿದೆ. ಈ ಹೆಗಲ ಮೇಲೆ ಒಂದಿಷ್ಟು ಕೇಜಿ ತೂಕದ ಕೈ ಯಾವಗಲೂ ಇರಬೇಕು ಅನ್ನಿಸ್ತಿದೆ. ಹಾದಿ ಬೀದೀಲಿ ನನ್ನ ರೇಗಿಸಿದೋರ ಮೂತಿ ಕೆಂಪಾಗಿಸೋ ಕಪ್ಪು ಬಣ್ಣದ ರಾಜಕುಮಾರ ಬೇಕು. ಮೊದಲೇ ಹೇಳಿಬಿಡ್ತೀನಿ ನನಗೆ ಕಪ್ಪು ಬಣ್ಣದ ರಾಜಕುಮಾರನೇ ಬೇಕು. ಯಾಕೋ ಕಪ್ಪು ಬಣ್ಣ ಅಂದ್ರೆ ನನಗಿಷ್ಟಾನಪ್ಪ. ಆದ್ರೆ ತುಂಬ ಚಂದ ಇರ್ಬೇಕು ಓಕೆ ನ? ಯಾಕೆ ಅಂತ ಸ್ವಲ್ಪ ಕೇಳಿ.. ನಾನು ಇಡೀ ಕಾಲೇಜಿನ ಹಾಟ್ ಕೇಕ್ ತರ ಇದ್ದೀನಿ. ಇಂತ ಕ್ಯೂಟ್ ಹುಡುಗಿಗೆ ಎಂತ ಹುಡುಗ ಇರ್ಬೇಕು ಅಲ್ವಾ?

ಇದನ್ನೇ ಅಡ್ವಾಂಟೇಜ್ ಆಗಿ ತಗೊಳ್ಳೋದಾದ್ರೆ ನನಗವನು ಖಂಡಿತ ಬೇಡ ! ಅವನ ಜೊತೆ ನಾನ್ ಪಾರ್ಕಿಗೆ ಬರೋಲ್ಲ! ಅಪ್ಪು ಸಿನಿಮಾಗೆ ಆದ್ರೆ ಖಂಡಿತ ಮಾರ್ನಿಂಗ್ ಷೋಗೆ ಬಂದೇ ಬರ್ತೀನಿ! ಸಿನಿಮಾದ ಕತ್ತಲಲ್ಲಿ ಏನಾದ್ರೂ ಆಟ ಆಡಿದ್ರೆ ಹುಷಾರ್! ನನಗಿಷ್ಟ ಆಯ್ತು ಅಂದ್ರೆ ಸುಮ್ಮನೆ ಯಾರಿಗೂ ಗೊತ್ತಾಗದ ಹಾಗೆ ಒಂದು ಚೋಟ ಮುತ್ತು ಕೊಟ್ಬಿಡ್ತೀನಿ ಹಾಗಂತ ಮತ್ತೆ ಅವನು ಮುಂದುವರಿಯೋ ಹಾಗಿಲ್ಲ ! ತುಂಬಾ ಪುಟ್ಟ ಹುಡುಗಿ ನನಗೆ ಏನೂ ಗೊತ್ತಾಗೊಲ್ಲ ಅಂದುಕೊಂಡು ಸುಮ್ಮನೆ ಬೈಕಿಗೆ ಬ್ರೇಕು ಹಾಕಿದ್ರೆ ಸರಿ ಇರಲ್ಲ ಮತ್ತೆ!
ನನಗಿಷ್ಟ ಆದ್ರೆ ನಿನ್ನ ಉಸಿರುಕಟ್ಟೋ ಹಾಗೆ ತಬ್ಬಿಕೊಳ್ಳೋಕು ಬರುತ್ತೆ ಚಿಂತೆ ಬೇಡ ! ತುಂಬಾ ಮುದ್ದಾಗಿ ಬೆಳೆದ ಹುಡುಗಿ ನಾನು ಅದಕ್ಕಿಂತ ಮುದ್ದಾಗಿ ನೋಡ್ಕೋಬೇಕು ! ಅಪ್ಪ ಅಮ್ಮಾ ಅಂದ್ರೆ ಪ್ರಾಣ ನನಗೆ
ಅವರ ಕೈಕಾಲು ಹಿಡಿದಾದ್ರು ಒಪ್ಪಿಸ್ಬೇಕು ! ಮನೆ ಬಿಟ್ಟು ಬರೋ ಜಾಯಮಾನ ನನ್ನದಂತೂ ಅಲ್ಲ ಇದೊಂದು ವಿಷ್ಯದಲ್ಲಿ ನೋ ಕಾಂಪ್ರೋಮೈಸ್ ಡಿಯರ್ !

ಲವ್ ಲೆಟರ್ ಎಲ್ಲ ಬರಿಯೋ ಹುಡುಗಿ ಹೇಗೋ ಏನೋ ಅಂತ ಯೋಚನೆ ಬೇಡ. ನನಗೆ ಗೊತ್ತು ನಾನ್ ಸೂಪರ್ ಹುಡುಗಿ ಅಂತ. ನನಗೊಬ್ಬ ಸೂಪರ್ ಗೆಳೆಯ ಬೇಕು ಅಷ್ಟೇ ! ಪ್ಲೀಸ್ ಕೆಳಗಿನ ನಂಬರ್ ಗೆ ಒಂದು ಕಾಲ್ ಮಾಡಿ ಕಾಯ್ತ ಇರ್ತೀನಿ. ಸುಮ್ಮನೆ ಒಂದು ಸಲ ನನ್ನ ಧ್ವನಿ ಕೇಳೋಕಾದ್ರೂ ಮಾಡ್ತೀರಿ ಅಲ್ವಾ?

ಈ ನಂಬರಿನ ಹುಡುಗಿ !
9986843622

ಅವನ ಮೇಲಿನ
ಒಂದು ದಿನದ ಹಂಬಲದ
ಮುಂದೆ ಶಬರಿಯ ವರ್ಷದ
ದಾಖಲೆಗಳೆಲ್ಲ ಚಿಂದಿಯಾದವು !
———————
ನಿನ್ನೆ ಮದ್ಯದ ಹನಿಯ
ಜೊತೆ ಸಿಗರೇಟಿನ
ಘಾಟು ಜೊತೆಯಾಗಿದ್ದಾಗ
ನೀನು ನೆನಪಾಗಲಿಲ್ಲ..
ಹಾಗಾದರೆ ಯಾರು ಪವಿತ್ರ !
———————

ನೋವನ್ನು
ಆಚರಿಸುತ್ತಿದ್ದೇನೆ !
ನಿನ್ನ ಸಹಾಯಕ್ಕೆ
ಧಿಕ್ಕಾರ ಹಾಗೂ
ಧನ್ಯವಾದಗಳು
———————
ಈಗೀಗ ಮಗ್ಗಲು
ಬದಲಿಸಲೂ ಭಯ !

ಪಕ್ಕದಲ್ಲಿ ನೀನಿಲ್ಲದಿದ್ದರೆ ?
———————

ನಿನ್ನ ಹೆಸರು
ಬರೆದ ಪೆನ್ನಿನ ತುದಿಯನ್ನ
ಅಕ್ಕಸಾಲಿಗ
ಕೊಂಡೊಯ್ದಿದ್ದಾನೆ !
———————

ಎಂತಹ ಅದೃಷ್ಟಶಾಲಿ !
ಕೊನೆಯ ಪಕ್ಷ
ನಿನ್ನ ನೆನಪಾದರೂ
ಜೊತೆಗಿದೆ
———————

( ಹಾಯ್-ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟಿತ)

ಸತ್ತ ಬೇರು
ಚಿಗುರಿಬಿಟ್ಟಿದೆ !
ನೀನೆ ಬೇಡಿಕೊಂಡಿರಬೇಕು!
ಇಲ್ಲಾ ಮರದ ಮರೆಗೆ ನಿಂತು
ಹಾಡಿರಬೇಕು !

ನೀನು ನಿನ್ನೆ
ಹಾಡಿದ ಹಾಡಿಗೆ
ತೂಕ ಬಂದುಬಿಟ್ಟಿದೆ !

ನನ್ನ ಜೊತೆ
ಅವನಿಲ್ಲವಾದ ದಿನ
ಜಗತ್ತಿನ ಸಮಸ್ತ
ದೇವರುಗಳಿಗೆ ಒಂದಿಷ್ಟು
ಶಾಪಗಳು ಹೆಗಲೇರಲಿವೆ !

ಇಲ್ಲಿ ಒಂದು ಪಂದ್ಯ,
ತಾಕತ್ತಿದ್ದರೆ ಸಮಸ್ತ
ಸಾಗರಗಳು ಈ ಎದೆಯ
ಒಲವನ್ನ ತುಂಬಿಸಿಕೊಳ್ಳಲಿ

ಒಂದು ದಿನ
ನಿನ್ನೊಂದಿಗೆ
ಮಾತನಾಡಲಿಲ್ಲ!
ಜೀವನಪೂರ್ತಿ
ನಿನ್ನ ಜೊತೆಗಿರುವ
ಶಿಕ್ಷೆ ವಿಧಿಸಿಬಿಡು !

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

Next Page »