ನಿಮ್ಮ ಭಾವನೆಗೆ ನನ್ನ ಕೆಲವೇ ಕೆಲವು ಪದಗಳು
ಇಲ್ಲಿರುವ ಯಾವುದೇ ಕವಿತೆಗಳಿಗೆ ಮತ್ತು ಹಾಳುಮೂಳು ಬರಹಗಳಿಗೆ ಒಂದು ದೃಷ್ಟಿಕೋನ ಒಂದು ಗುರಿ,ಧ್ಯೇಯ ಯಾವುದು ಇಲ್ಲ.ಇಲ್ಲಿರುವ ಪದಗಳಿಗೆ ಕವಿತೆ ಅನ್ನುವ ಚಂದದ ಹೆಸರಿನಿಂದ ಕರೆಯಬೇಕ? ಅದೂ ತೋಚುತ್ತಿಲ್ಲ.ಕೊನೆಗೆ ಈ ಪದಗಳ ಮೂಲಕ ನಾನು ಏನು ಹೇಳಲಿಕ್ಕೆ ಹೊರಟಿದ್ದೇನೆ ಅಂತ ಕೆಲವೊಂದು ಸಲ ನನಗೂ ಅರ್ಥವಾಗುವುದಿಲ್ಲ. ಇಲ್ಲಿರುವುದೆಲ್ಲ ಕೇವಲ ಹುಚ್ಚು ಮನಸ್ಸಿನ ಭೋರ್ಗರೆತಗಳು ಮಾತ್ರ. ಇವನ್ನ ಕವಿತೆ ಮತ್ತು ಅದ್ಭುತ ಬರಹ ಅಂತ ಓದುವ ನಿಮಗೆ ಮತ್ತು ನಿಮ್ಮ ಸಹನೆಗೆ ಮತ್ತು ಅತ್ಯಮೂಲ್ಯ ಸಮಯಕ್ಕೆ ನಾನು ಅಭಾರಿ…….ಮತ್ತೆ ಇಲ್ಲಿ ಕೆಲವೊಂದು ಸಲ ಕೆಲವು ಘಟನೆಗಳನ್ನ ನೆರವಾಗಿ ಹೇಳಬೇಕಾದ ಸಮಯದಲ್ಲಿ ಅನಿವಾರ್ಯವಾಗಿ ಅಸಂಬದ್ದ ಪದಗಳನ್ನ ಉಪಯೋಗಿಸಲೇ ಬೇಕಾಗುತ್ತದೆ ..ಮಡಿವಂತ ಮಹಾಶಯರು ನನ್ನ ಈ ಒಂದು ತಪ್ಪನ್ನ ಕ್ಷಮಿಸಿಬಿದಬೇಕು…….ಇಂತಿ ನಿಮ್ಮ ಪ್ರೀತಿಯ ನವಿಲುಗರಿ ಹುಡುಗ

Apr
20

ಊರಿಗೊಬ್ಳೆ ನಳಿನಾಕ್ಷಿ ಅನ್ನೊ ತರ ಆಡ್ತ ಇದ್ಲು. ಅಹಂಕಾರ ಅನ್ನೋದು ಅವಳ್ ಮೈ ರಕ್ತದಲ್ಲಿ ಅವರಪ್ಪ ಕೊಟ್ಟ ಬಳುವಳಿ. ಅವರಪ್ಪಾನು ಹಾಗೆ ಊರಿಗೊಬ್ನೆ ಈರಪ್ಪ ಅನ್ನೊ ತರ ಅಡ್ಥ ಇದ್ದ. ತಾನು ಎಲ್ಲರಿಗಿಂತ ರೂಪಸಿ ಅಂದ ಚೆಂದದಲ್ಲಿ ತನ್ನ ಸೋಲ್ಸೋರಿಲ್ಲ ಅನ್ನೊ ದುರಹಂಕಾರ ಅವಳ ರಕ್ತದಲ್ಲೆ ಮನೆ ಮಾಡಿತ್ತು. ಅದ್ರೇನ್ ಬಂತು ಅವರಪ್ಪ ಕತರ್ನಾಕ್ ಹೆಸರಿಟ್ಟಿದ್ದ ಕೆರಿಯಮ್ಮ ಅಂತ ಹಹಹ..ಅಯ್ಯೋ ಬಿಡಿ ಹೆಸರಲ್ಲೇನಿದೆ ಅಲ್ಲವ? ಅದ್ರು ಅವಳಿಗಿರೊ ರೂಪಕ್ಕೆ ಅಷ್ಟೋಂದು ಹಾರಾಡ್ತ ಇದ್ದೋಳು ಅವಳಿಗಿರೊ ಹೆಸರಿಗದ್ರು ಸ್ವಲ್ಪ ತನ್ನ ಅಹಂಕಾರವನ್ನ ಕಮ್ಮಿ ಮಡಿಕೊಂಡಿದ್ರೆ ಒಳ್ಳೇದಿತ್ತು ಅಲ್ಲವ? ಅದೆ ಅವಗ್ಲೆ ಹೇಳಿದ್ನಲ್ಲ? ಅವರಪ್ಪನ್ ದರಿದ್ರೆ ರಕ್ತ ಇತ್ತು ಅದ್ಕೆ ಹಾಗೆ ಅಡ್ತ ಇದ್ಲು ಅನ್ಸುತ್ತೆ ಅವರಪ್ಪಾನು ಹಾಗೆ ಎಷ್ಟ್ ಮನೆ ಬೇಲಿಹಾರಿದ್ನೋ ದೇವರಿಗೆ ಗೊತ್ತು ಅದೇನೊ ಹೇಳ್ತಾರಲ್ಲ ಕಲಿಯುಗದ ಶ್ರೀ ಕ್ರಿಷ್ಣ ಅಂತ ಹಾಗ್ ಆಡ್ತ ಇದ್ದ ಕಚ್ಚೆ ಹರುಕ ಬಡ್ಡಿ ಮಗ..ಊರ ಹೆಂಗಸರಲ್ಲಿ ತನ್ನ್ ಹೆಂಡ್ರು ಹುಡುಕೊ ಬಡ್ಡಿ ಮಗ ಅವನು.ಅವನ್ ಹೆಸರು ಹಂಗೆ ಇತ್ತು ಬಿಡಿ ಗುತ್ಯಪ್ಪ ಅಂತ ಹಹಹ ಅಯ್ಯೋ ಬಿಡಿ ಹೆಸರಲ್ಲೇನಿದೆ ಅಲ್ಲವ? ಆದ್ರು ಒಂದು ಮಾತು ಕಣ್ರಿ ಮಗಳು ಮಾತ್ರ ಸಕತ್ತು ಅಂದ್ರೆ ಸಕತ್ತು….ಹಹಹಹಹಹ

ನಮ್ ಶಾಲೆನಲ್ಲೂ ಅಷ್ಟೆ ಕಣ್ರಿ ಅವಳು ಕೂರೊ ಜಾಗದಲ್ಲಿ ಉಫ಼್ ಅಂತ ಹತ್ತು ಸಲ ಬಾಯಿಂದ ಗಾಳಿ ಊದಿಸ್ಕೊಂಡು ಕೂರ್ತ ಇದ್ಲು. ಅವಳ ಮೈ ಗೆ ಹುಡುಗರಿರಲಿ ಹುಡುಗೀರು ಕೂಡ ತಾಗಿಸೋ ಹಾಗಿರ್ಲಿಲ್ಲ ಕುವ್ ಅಂತ ಕುನ್ನಿ ತರ ಆಡೋಳು. ನಾವ್ ಬಿಡಿ ಅವಾಗ ಸ್ನಾನ ಮಾಡೋದೆ ವಾರಕ್ಕೆರೆಡು ಸಲ ಮತ್ತೆ ನಮಗೆ ಇದ್ದಿಲು ಬಿಟ್ರೆ ಹಲ್ಲುಜ್ಜೋಕೆ ಬೇರೆ ಗತಿ ಇರ್ಲಿಲ್ಲ ಆದ್ರೆ ಇವಳು ಸ್ನಾನ ಮಾಡೊದಿಕ್ಕೆ ಲೇಟ್ ಆಯ್ತು ಸಾ….ಹಲ್ಲುಜ್ಜೋಕೆ ಲೇಟ್ ಆಯ್ತು ಸಾ……..ಅಂತ ನುಲ್ಕೋತ ಬರೋಳು ಶಾಲೆಗೆ . ಅಷ್ಟೆ ಅಲ್ಲ ಕಣ್ರಿ ನಮ್ಮೂರಲ್ಲಿ ಅವಗ ಪೆಸ್ಟ್ ಸಿಗ್ಥ ಇರ್ಲಿಲ್ಲ ಆದ್ರೆ ಅವರಪ್ಪನ ಕೈನಲ್ಲಿ ಪಕ್ಕದೂರಿನಿಂದ ಅಜಂತಾ ತೂಥ್ ಪೇಸ್ಟ್ ನ ತರ್ಸೋಳು. ಅವಳ ಗತ್ತು ಎಷ್ಟಿತ್ತು ಅಂದ್ರೆ ನಮಗೆಲ್ಲ ಕಣೋ ಹಾಗೆ ಮನೆ ಮುಂದೆ ಬಂದು ಹಲ್ಲುಜ್ಜೋಳು. ಅದರ ಅರ್ತ ನೋಡ್ರೋ ಮುಂಡೆ ಮಕ್ಕಳ ನಾನ್ ಬ್ರಷ್ ನಲ್ಲಿ ಹಲ್ಲುಜ್ಜುತ್ತ ಇದ್ದಿನಿ ನಿಮ್ ತರ ಕರಿ ಇದ್ದಿಲಲ್ಲಿ ಅಲ್ಲ ಅಂತ ತೋರ್ಸೋ ನರಿ ಬುದ್ದಿ ಅವಳದ್ದು…ನಾವ್ ಬಿಡಿ ಅವಳ ಬಾಯಿಂದ ಬರೋ ನೊರೆನ ಒಳ್ಳೆ ಹಾಲಿನ್ ಕೆನೆ ಏನೋ ಅನ್ನೋತರ ನೋಡ್ತ ಇದ್ವಿ….

ಒಂದು ದಿನ ಇದ್ದಕ್ಕಿದ್ದ ಹಾಗೆ ಶಾಲೆನಲ್ಲಿ ಗೋಳೋ ಅಂತ ಅಳೋಕೆ ಶುರು ಮಾಡಿದ್ಲು. ಅವಳ ಸ್ಟೈಲ್ ಹೇಗಿತ್ತು ಅಂದ್ರೆ ಅತ್ಲಾಗೆ ಅತ್ತ ಹಾಗು ಅಲ್ಲ ನಕ್ಕ ಹಾಗು ಅಲ್ಲ. ನಾವೆಲ್ಲ ಏನಾಗೋಯ್ತಪ್ಪ ಅಂತ ಕೊಕ್ಕೋ ಆಟ ಆಡ್ತ ಇದ್ದೋರು ಓಡಿ ಬಂದ್ವಿ. ಒಂದೆ ಸಮನೇ ಅಳ್ತ ಕೂತಿದ್ಲು. “ಪುಣ್ಯಾತ್ಗಿತ್ತಿ ಏನ್ ಆಯ್ತಮ್ಮ” ಅಂತ ಕೇಳಿದ್ರೂ ಹೇಳ್ತ ಇಲ್ಲ ಸುಮ್ಮೇ ಅಳ್ತ ಕೂತಿದ್ಲು. ಹುಡುಗೀರೆಲ್ಲ ’ಕೆರಿ ಎನ್ ಆಯ್ತೆ ಕೆರಿ’ ಅಂತ ಕೇಳ್ತ ಇದ್ರೆ ಇವಳೂ ಅಳೋದು ನಿಲ್ಲಿಸ್ಲಿಲ್ಲ. ಸರಿ ಅಂತ ನಾವು ಸುಮ್ಮನಾದ್ವಿ. ಇವಳು ಅಳೋದ್ ಯಾಕೋ ಜಾಸ್ತಿ ಆಯ್ತು ಪಕ್ಕದ ಕೊಣೆಯಲ್ಲಿದ್ದ ಪಿ ಟಿ ಮೇಸ್ಟ್ರು ಬಂದು ಕೇಳಿದ್ರು “ಯಾಕೆ ಕೆರಿ ಎನಾಯ್ತು ಹೇಳಮ್ಮ” ಅಂದಿದ್ದಕ್ಕೆ ..” ಸಾ… ಸಾ… ನನಗ್ಯಾರೋ ಲವ್ ಚೀಟಿ ಬರ್ದವ್ರೇ ಸಾರ್ ನಮ್ಮಪ್ಪುಗ್ ಗೊತ್ತಾದ್ರೆ ನನ್ ಕೆರೆನಲ್ಲ್ ಮುಳುಗುಸ್ ಬುಡ್ತಾನೆ ಸಾ…. ” ಅಂದ್ಲು… ನಮಗೆಲ್ಲ ತಲೆ ಕೆಟ್ಟೋಯ್ತು ಯಾರಪ್ಪ ಬರೆದವರು ಅಂತ.. ಬರೆದವನಾದ್ರು ಎನ್ ಬರೆದಿದ್ದ ಅಂತೀರಿ? ಅವನು ಬರೆದಿದ್ದು ಇಷ್ಟೆ…..[ ಕೆರಿಯಮ್ಮ ನಿನ್ನ ಕಂಡ್ರೆ ನಂಗೆ ಬಾಳ ಇಷ್ಟ ,ನೀನು ನೊಡಾಕೆ ಚೆಂದಾಕಿದ್ದಿಯ] ಅಷ್ಟೆ ಕಣ್ರಿ ಅವನು ಬರೆದಿದ್ದು. ಪುಣ್ಯಾತ್ಮ ಅವನು ಯಾರು ಇಲ್ಲದ ಸಮಯ ನೋಡಿ ಬರೆದಿಟ್ಟು ನಮ್ ಗುಂಪ್ನಲ್ಲೆ ಅರಾಮಗಿದ್ದ ಬಡ್ಡಿ ಮಗ.

ಅಬ್ಬ ಯಾವನಾದ್ರು ಮಂತ್ರಿ ಸತ್ರೆ ನಮ್ ದೇಶಕ್ಕೆ ಅಷ್ಟು ಬೇಗ ಗೊತ್ತಗುತ್ತೋ ಇಲ್ಲವೊ … ಆದ್ರೆ ಕೆರಿಯಮ್ಮಗೆ ಲವ್ ಲೆಟರ್ ಬರೆದಿದ್ದು ಸುದ್ದಿ ಆಗೋಯ್ತು. ಅಕ್ಕ ಪಕ್ಕದ ಊರಲ್ಲೆಲ್ಲ ಇದೇ ಮಾತು. ಯಾಕಂದ್ರೆ ಅವತ್ತಿನ ಮಟ್ಟಿಗೆ ಹಳ್ಳಿ ಕಡೆ ಲವ್ವು ಡವ್ವು ಹುಡುಗ ಹುಡುಗಿ ಗುಸ ಗುಸ ಪಿಸ ಪಿಸ ಅನ್ನೊದು ಒಟ್ಟಿಗೆ ನಿಂತು ಮಾತಾಡೊದು ಅವತ್ತಿನ ಮಟ್ಟಿಗೆ ನಿಶಿದ್ದ. ಈಗ ಬಿಡಿ ನಮ್ ಹಳ್ಳೀ ಹೈಕಳು ಪ್ಯಾಟೆ ಹುಡುಗ್ರನ್ನ ಮೀರುಸ್ತಾರೆ. ಸರಿ ಎಲ್ಲ ವಿಷ್ಯ ಗೊತ್ತಯ್ತು. ತಗಾಳಪ್ಪ ಅವರಪ್ಪ ಮಾರನೆ ದಿನ ಶಾಲೇಗೆ ಬಂದು ಬಿಟ್ಟ “ಯಾವನಲೆ ಮಿಂಡ್ರಿಗುಟ್ಟುದೋನು ನನ್ ಮಗಳಿಗೆ ಲವ್ ಚೀಟಿ ಬರದವ್ನು .. ಯಾವನಂತ ಹೇಲ್ರೊ ಕಳ್ ಸೂಳೆ ಮಕ್ಳ ನಮ್ಮಮ್ಮುನ್ನ್ ಆಣೆ ನಮ್ ಊರು ಬೂತಪ್ಪನ ಮೇಲಾಣೆ ಅವ್ನ್ ನಾನ್ ಸುಮ್ನೆ ಬಿಡಾದಿಲ್ಲ ಮಾರಿ ಹಬ್ಬುಕ್ ಬಲಿ ಕೊಡ್ತಿನಿ ಕಳ್ಳ್ ರಂಡೆ ಮಗುನ್ನ” ಅಂತ ಬಾಯ್ ಬಡ್ಕೊತಾನೆ ಇದ್ದ. ಅವನನ್ನ ಸಮಧಾನ ಮಾಡಿ ಮನೆಗೆ ಕಳಿಸೋಸ್ಟ್ರಲ್ಲಿ ನಮ್ ಮೆಷ್ಟ್ರುಗಳಿಗೆ ಉಸ್ಸಪ್ಪೊ…!!!!

ಪುಣ್ಯಾತ್ಗಿತ್ತಿ ಸುಮ್ನೆ ಕೂರ್ತ ಇದ್ಲು …ಯಾವಗ ಮಾಸ್ಟ್ರು ಪಾಟ ಮಾಡೊಕ್ ಬಂದ್ರು ಅವಗ ಅಳೋಕೆ ಶುರುಮಾಡೋಳು.ಸರಿ ಮಾಸ್ಟು ಯಾವನಲೆ ಬರೆದವನು ಅಂತ ಎಲ್ಲಾರ್ನು ಎಬ್ಸಿ ನಿಲ್ಸಿದ್ರು. ಯಾರ್ ಒಪ್ಕೋತಾರೆ? ನಾವಲ್ಲ್ಲ ಸಾ… ನಾವಲ್ಲ ಸಾ… ಇದೋಂದೆ ಹೇಳ್ತಾ ಇದ್ರು. ಸರಿ ನಿನಗೆ ಯಾರ ಮೇಲಾದ್ರು ಅನುಮಾನ ಐತೇನಮ್ಮ? ಅಂತ ಕೇಳಿದ್ದಕ್ಕೆ… ” ಅದೆ ಸಾ……..ಈಸುರಣ್ಣನ ಮಗ[ನಮ್ ಅಪ್ಪ] ಸೋಮ ಮ್ಯಾಲೆ ಐತೆ.ಅವನೊಬ್ನೆ ಕನ್ನಡನ ಇಷ್ಟು ದುಂಡುಗೆ [ಸುಂದರವಾಗಿ] ಬರಿಯಾದು ಅವನೆ ಸಾ……. ಅವನೆ ಬರ್ದವನೆ ” ಅಂದೆ ಬಿಡೋದ?…ಅವಳು ಹೇಳಿದ್ದೆ ತಡ ಮುಖ ಮೂತಿ ನೋಡದೆ ನಾಲ್ಕು ಬಾರಿಸಿ ಬಿಟ್ರು…”ಯಾಕಲೆ ಹಿಂಗೆ ಮಾಡ್ ದೆ ಸೋಮ ನಿನ್ ಒಳ್ಳೆ ಹುಡುಗ ಅಂನ್ಕಂಡಿದ್ನಲ್ಲೋ” ಅಂದ್ರು ಅದ್ಕೆ…’ ಸಾ…. ನಮ್ಮ್ಮವ್ವುನ್ ಮೇಲಾಣೆ ಸಾ…ನಾನ್ ಬರ್ದಿಲ್ಲ ನಮ್ ಅಪ್ಪುನ್ ಮ್ಯಾಲಾಣೆ ಸಾ…” ಕೆರಿಯಮ್ಮಗಿಂತ ಜಾಸ್ತಿ ಅಳೋಕೆ ಶುರು ಮಾಡಿದೆ ಅವತ್ತು ಎಲ್ಲರ ಮುಂದೆ ನಾನು ಇದ್ದ ಪರಿಸ್ತಿತಿನ ನೆನೆಸಿಕೊಂಡ್ರೆ ಇಅವ್ತ್ತು ಅಯ್ಯೋ ಸೋಮ ಅನ್ಸುತ್ತೆ..!!

ಆದ್ರೆ ಅವರಪ್ಪ ಬಿಡಬೇಕಲ್ಲ..೨ ದಿನ ಬಿಟ್ಟು ಬಂದ .ಬಂದವನ ಕೈನಲ್ಲಿ ಒಂದು ತೆಂಗಿನ ಕಯಿ ಇತ್ತು. ಅವನೇನ್ ಸಾಮಾನ್ಯದವನಲ್ಲ ಬಿಡಿ..ಸೀದ ಹೋಗಿ ಅವನು ಸಿಗಂದೂರಿ ಗೆ ಹೋಗಿ ತೆಂಗಿನ ಕಾಯಿನ ಪೂಜೆ ಮಾಡಿಸಿಕೊಂಡು ಬಂದಿದ್ದ. [ ಸಿಗಂದೂರು ಅನ್ನೋದು ನಮ್ಮ ಕಡೆ ಒಂದು ಪವಿತ್ರವದ ದೇವರ ಸನ್ನಿದಿ ಅಲ್ಲಿ ಪೂಜೆ ಮಾಡಿಸಿಕೊಂಡು ಬಂದ ತೆಂಗಿನ ಕಾಯಿ ದೇವರ ಸಮಾನ ಅದನ್ನ ಮುಟ್ಟಿ ಸುಳ್ಳು ಹೇಳೋದಕ್ಕೆ ಯಾರು ಸಿದ್ದರಿರಲಿಲ್ಲ. ಈಗಲು ಕೂಡ]… ಬಂದವನೆ ಯಾವನಲೇ ಮಿಂಡ್ರಿಗುಟ್ಟುದೋನು ಮುಟ್ರುಲಾ ತೆಂಗಿನ ಕಾಯಿನ ಅಂದವನೆ ಕ್ಲಾಸೊಳಗೆ ಬಂದ. ಸರಿ ಎಲ್ಲಾರು ಮುಟ್ರಪ್ಪ ಅಂತ ಮಾಸ್ಟ್ರು ಕೂಡ ಹೇಳಿದ್ರು. ಎಲ್ಲಾರು ಮುಟ್ಕೋತ ಬಂದ್ರು ನನ್ ಸರದಿ ಬಂತು….” ನೋಡು ಗುತ್ಯಣ್ಣ ನಮ್ ತಾಯಾನೆ ಈ ಸಿಗಂದೂರ್ ಅಮ್ಮನ ಮೇಲಾಣೆ ಕೆರಿ ಗೆ ಲವ್ ಚೀಟಿ ಬರೆದವ್ನು ನಾಲ್ ಅಲ್ಲ” ಅಂತ ಹೇಳಿ ೨ ಸಲ ಮುಟ್ಟಿದೆ. ಅವತ್ತು ನೋಡಬೇಕಿತ್ತು ಅವಳ ಮುಖಾ ನ….! ಸರಿ ಕೊನೆಗೆ ನಮ್ ಕ್ಲಾಸಿನ್ ಗಣೇಶ ಮುಟ್ಟೊಕ್ ಹೆದುರೋಕೆ ಶುರು ಮಡಿದ ಬಲವಂತ ಮಾಡಿದ್ದಕ್ಕೆ ” ಇನ್ ಮ್ಯಾಗೆ ಹಂಗೆ ಮಡಲ್ಲ ಸಾ………… ತಪ್ಪಾತು ಸಾ……. ನಾನೆ ಸಾ…. ಬರೆದಿದ್ದು” ಅಂತ ಒಪ್ಕೊಂಡು ಬಿಟ್ಟ. ಹಡ್ಸಿ ಮಗನೆ ಅಂದವ್ನು ಗಣೇಶನ ಕುತ್ಗೆಗೆ ಕೈ ಹಾಕಿ ಹಿಡ್ಕೊಂಡ್ ಬಿಟ್ಟ ಅವತ್ತು ಅವನ ಕೈನಲ್ಲಿ ಬಿಡ್ಸಿದ್ದು ನಮ್ ಗಣೇಶ ಗೆ ಪುನರ್ಜನ್ಮ ಸಿಕ್ಕ ಹಾಗೆ ಆಗಿತ್ತು ಪಾಪ …

ಸರಿ ಅದೆಲ್ಲ ಗಲಾಟೆ ಮುಗಿತು . ನಮ್ ಶಾಲೆ ಇಂದ ಪ್ರವಾಸ ಹೋಗೋಕೆ ಅಂತ ಪ್ಲಾನ್ ಹಾಕಿದ್ರು. ” ಯಾರ್ ಯಾರ್ ಬರ್ತಿರ ” ಅಂತ ಮಾಸ್ಟ್ರು ಕೇಳಿದ್ದೆ ತಡ ” ನಾನ್ ಬರ್ತಿನಿ ನಮ್ ಅಪ್ಪ ದುಡ್ ಕೊಡ್ತಾನೆ ” ಅಂತ ಮೊದ್ಲು ಎದ್ ನಿಂತೋಳೆ ನಮ್ ಕೆರಿಯಮ್ಮ… ಹಹಹಹಹ.. ಸರಿ ನಮ್ಮ್ ಶಾಲೆ ಇಂದ ೩೪ ಜನ ಹೊರಟ್ವಿ ಪ್ರವಾಸಕ್ಕೆ ಅಂತ ಆಗುಂಬೆ ಹೊರನಡು ಕಳಸ.. ಹೀಗೆ ಸ್ವಲ್ಪ ಊರುಗಳಿಗೆ ಪ್ರವಾಸ ಹೋಗೋದು ಅಂತ ತೀರ್ಮಾನ ಆಯ್ತು.ಅವತ್ತು ನೋಡಬೇಕಿತ್ತು ಕೆರಿಯಮ್ಮನ ಅವತಾರ ನ ಅದೇನ್ ವಯ್ಯಾರ ಅದೇನ್ ಸಿಂಗಾರ ಅಬ್ಬ ಅದೇ ಹೇಳಿದ್ನಲ್ಲ ಊರಿಗೊಬ್ಳೆ ನಳಿನಾಕ್ಷಿ ಅಂತ ಹಾಗೆ.. ಅಪ್ಪ ಪಕ್ಕ ಕೂತೋರ್ ಮೇಲೆಲ್ಲ ಕುಯ್ ಅನ್ನೋಳು. ಟೂರ್ ಹೋದಲ್ಲೆಲ್ಲ ಅವಳದೇನ್ ಕರೀದಿ ಅಂತೀರಿ? ಅಬ್ಬ ನಮಗೆ ಸುಸ್ತಾಗಿ ಹೋಗಿತ್ತು ನಾವ್ ಟೂರ್ ಕರ್ಚಿಗೆ ನಲವತ್ತು ಐವತ್ತು ರೂಪಾಯಿ ತಗೊಂಡು ಹೋದ್ರೆ ಅವಳು ಅವಾಗಿನ್ ಕಾಲಕ್ಕೆ ಅವಳು ೫೦೦ ರೂಪಾಯಿ ತಂದಿದ್ಲು..! ಒಬ್ಬರಿಗೆ ಒಂದು ರೂಪಾಯ್ ಕೇಳಿದ್ರು ಕೊಡ್ತ ಇರ್ಲಿಲ್ಲ ದುರಹಂಕಾರಿ. ಸರಿ ಎಲ್ಲ ಊರು ಸುತ್ತಾಡಿಕೊಂಡು ಮನೆ ಕಡೆ ನಮ್ ವ್ಯಾನು ಬರ್ಥ ಇತ್ತು ೩೪ ಜನ ನ ಒಳ್ಳೆ ಕುರಿ ತುಂಬಿದ ಹಾಗೆ ತುಂಬಿದ್ರು ..ಅಷ್ಟರಲ್ಲಿ ಏನೋ ವಾಸನೆ ಬರೋಕೆ ಶುರು ಆಯ್ತು. ಎಲ್ಲ ಹುಡುಗ ಹುಡುಗಿ ಸಾ,,,,, ಸ,,,,, ಅನ್ನೋಕೆ ಶುರು ಮಾಡಿದ್ರು.. ” ಎನ್ರಪ್ಪ ನಿಮ್ ಗಲಾಟೆ ” ಅಂತ ಕೇಳಿದ್ದಕ್ಕೆ ನಮ್ ಗಣೇಶ ” ಸಾ.. ಎನೋ ವಾಸನೆ ಬರ್ತ ಇದೆ ಸಾ…” ಅಂದ..ಅದಕ್ಕೆ ನಮ್ಮ ಮಾಸ್ಟ್ರು ” ಲೋ ಸೋಮ ಅದೇನು ನೋಡಲ ಸ್ವಲ್ಪ ಅಂತ ಹೇಳಿ ವ್ಯಾನ್ ನಿಲ್ಲಿಸೋಕೆ ಹೇಳಿದ್ರು. ಸರಿ ನನ್ ಎಲ್ಲಾರ್ನು ಕೆಳಗಿಳಿಸೋಕೆ ಶುರು ಮಾಡಿದೆ.. ಆದ್ರೆ ವೀಣ ವಿಜಯ ಮತ್ತೆ ನಮ್ ಕೆರಿಯಮ್ಮ ಮಾತ್ರ ಇಳಿತಾ ಇಲ್ಲ..”ವೀಣ ವಿಜ್ಯ ಈಕಡೆ ಬನ್ರೆ” ಅಂತ ಹೇಳಿದ್ದಕ್ಕೆ ” ಏನು ಇಲ್ಲ ಬಿಡು ಸೋಮ” ಅಂತ ಹೇಳಿದ್ರು….. ನಾನ್ ಬಿಡಬೇಕಲ್ಲ ಅವರನ್ನ ಬಲವಂತವಗಿ ವ್ಯಾನ್ ಇಂದ ಇಳಿಸಿದೆ.. ಇನ್ನು ಉಳಿದವಳು ಕೆರಿಯಮ್ಮ ಅವಳ ಕಡೆಯಿಂದಾನೆ ಕೆಟ್ಟ ವಾಸನೆ ಬರ್ತ ಇತ್ತು. ಹತ್ತಿರ ಹೋದೋನೆ..ಜೋರಾಗಿ ಕೂಗೋಕೆ ಶುರು ಮಾಡಿದೆ………. ಸಾ……………………. ಕೆರಿಯಮ್ಮ ಹೇತ್ಕೋಂಡಿದ್ದಾಳೆ ಸಾ……ಕೆರಿಯಮ್ಮ ಹೇತ್ಕೋಂಡು ಬಿಟ್ಟಿದ್ದಾಳೆ ಸಾ……………. ಅಂತ

ಅಷ್ಟೆ. ಆ ಹುಡುಗಿ ಶಾಲೆಯ ಕಡೆ ಮುಖ ಕೂಡ ಹಾಕಲಿಲ್ಲ. ನಮ್ಮೂರಿಂದ ಸ್ವಲ್ಪಾನೆ ದೂರ ಇರುವ ಅವಳ ಮನೆಗೆ ನಮ್ಮ ಶಾಲೆ ಹುಡುಗ ಹುಡುಗಿಯರೆಲ್ಲ ಹೋಗಿ ಕರೆದ್ರು ಅವಳು ಶಾಲೆಗೆ ಬರಲೆ ಇಲ್ಲ ನಮ್ಮ ಮಾಸ್ಟು ಕೂಡ ಅವಳ ಮನೆಗೇನೆ ಹೋಗಿ ಕರೆದ್ರು ಆದ್ರು ಕೆರಿಯಮ್ಮ ಬರಲೆ ಇಲ್ಲ. ನಾನು ಮಾಡಿದ್ದು ತಪ್ಪು ಅಂತ ಇವತ್ತು ನನಗೆ ಅನ್ನಿಸ್ತ ಇರ್ಬೋದು ಆದರೆ ಅವತಿನ ನಮ್ಮ ಹುಡುಗಾಟದ ಜೀವನದಲ್ಲಿ ಇದ್ಯಾವದನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ ..ಒಂದು ಹುಡುಗಿಯ ವಿದ್ಯಾಭ್ಯಾಸವನ್ನ ಹಾಳು ಮಾಡೊಕೆ ನಮ್ಮ ಅವತ್ತಿನ ಹುಡುಗಾಟ ಕಾರಣವಯಿತು. ೩ ವರ್ಶದ ಹಿಂದೆ ಊರಿಗೆ ಹೋದಾಗ ” ನನ್ ಮದ್ವಿ ಇದೆ ಸೋಮ ನೀನ್ ಬರ್ಬೇಕು ನೋಡು” ಅಂತ ಪ್ರೀತಿ ಇಂದ ಕರೆದಿದ್ಲು ಕೆರಿಯಮ್ಮ. ಹೊಗೋಕ್ ಆಗ್ಲಿಲ್ಲ.. ಹೋದ ವರ್ಶ ತಂಗಿ ಪೋನ್ ಮಾಡಿ “ಅಣ್ಣ ಕೆರಿಯಮ್ಮ ಗೆ ಗಂಡು ಮಗು ಅಂತೆ ಕಣೊ ಮಗು ಹೆಸರು ಬಸಪ್ಪ ಅಂತೆ ” ಅಂದ್ಲು !! ಅನ್ಕೊಂಡೇ ಚೆ ಈ ಕೆರಿಯಮ್ಮ ಫ಼್ಯಾಮಿಲಿಗೆ ಹೆಸರಿಡೋಕೆ ಬರಲ್ಲವ? ಅಪ್ಪುನ್ ಹೆಸರು ಗುತ್ಯಪ್ಪ ಅಮ್ಮ ದಾನಮ್ಮ ಇವಳು ಕೆರಿಯಮ್ಮ ಮಗ ಬಸಪ್ಪ….. ಗಂಡನ ಹೆಸರು ಕಾಳಪ್ಪ…..ಅಯ್ಯೋ ಬಿಡಿ ಹೆಸರಲ್ಲೇನಿದೆ ಅಲ್ಲವ?

Apr
20

ಅದೊಂದು ದೊಡ್ಡ ಸಂಸಾರ..೫ ಜನ ಅಣ್ಣತಮ್ಮಂದಿರು ಮತ್ತೆ ೪ ಅಕ್ಕ ತಂಗಿಯರು. ಹಾಗಂತ ಆನಂದ ಸಾಗರವೇನು ಅಲ್ಲ…ಕಿತ್ತಾಟ ಮುನಿಸು ಒಳಜಗಳಗಳು ಕೋಪ ಒಬ್ಬರನ್ನೊಬ್ಬರು ಹೀಯಾಳಿಸುವುದು ಅಣ್ಣತಮ್ಮಂದಿರಲ್ಲೆ ಕತ್ತಿ ಮಸೆಯುವುದು ಒಬ್ಬರನ್ನೊಬ್ಬರು ತುಳಿಯುವುದು ಮಾಮೂಲೆ..ಇಷ್ಟೆಲ್ಲ ಒಳಜಗಳಗಳಿದ್ದರೂ ಅ ಕುಟುಂಬ ಈ ತನಕ ಅವಿಭಕ್ತ ಕುಟುಂಬವಾಗಿದ್ದರ ಬಗ್ಗೆ ನನಗೆ ಅಭಿಮಾನ ಮತ್ತು ಆಶ್ಚರ್ಯ ಮತ್ತು ಒಂದು ತರನಾದ ನಿಗೂಢತೆ ಇನ್ನು ನನ್ನ ಮನಸ್ಸಿನಿಂದ ಮರೆಯಾಗಿಲ್ಲ..ಅವರು ಕಿತ್ತಾಡುತ್ತಿರುವುದರ ಹಿಂದೆ ಅವರು ಅನಕ್ಷರಸ್ತರಾದ ಒಂದು ಕಾರಣವಿರಬಹುದು ಮತ್ತು ಇಲ್ಲಿಯವರೆಗೆ ಆ ಮನೆಯು ಅವಿಭಕ್ತ ಕುಟುಂಬವಾಗೆ ಇದ್ದುದ್ದರ ಹಿಂದೆ ಮನೆಯ ಹಿರಿಯಪ್ಪ ನ ಮುಗ್ಧತೆ ಮತ್ತು ಪ್ರಾಮಾಣಿಕತೆಯಿರಲೂಬಹುದು…

ಹಿರಯಪ್ಪ ಮನೆಯ ಹಿರಿಯ ಸದಸ್ಯ ಅನಕ್ಷರಸ್ತ ಶಾಲೆಯ ಮೆಟ್ಟಿಲು ಹತ್ತಿದವನಲ್ಲ.. ಅವನಾಯಿತು ಅವನ ಮನೆಯಾಯಿತು ತನ್ನ ಮಕ್ಕಳಾಯಿತು ಹಾಗು ಅವನ ಅವಿವೇಕಿ ಹೆಂಡತಿಯಾಯಿತು.. ಇಷ್ಟರಲ್ಲೆ ತನ್ನ ಸುಖ? ಸಂತೋಷ?ಗಳನ್ನು ಕಂಡುಕೊಂಡ ಅಲ್ಪ ಸಂತೋಷಿ.. ಊರ್‍ಇನಲ್ಲಿ ಹಿರಿಯಪ್ಪನಿಗೆ ಒಳ್ಳೆಯ ಹೆಸರಿದ್ದರೂ ಕೆಲವೊಮ್ಮೆ ಅವನು ಕುಡಿದು ಆಡುವ ರೀತಿಯಿಂದ ಒಂದೊಂದು ಸಲ ಜನರ ಹಾಳು ಬಾಯಿಗೆ ಅಹಾರವಗುತ್ತಿದ್ದ…ದಿನಪೂರ್ತಿ ಕಷ್ಟಪಟ್ಟು ಕೆಲಸ ಮಾಡಿ ಸಂಜೆ ಸ್ವಲ್ಪ ಹುಳಿ ಹೆಂಡವಾದರೆ ಸಾಕು ಕಂಠಪೂರ್ತಿ ಕುಡಿದು ಮಲಗಿಬಿಡುತ್ತಿದ್ದ… ಅವನಿಗೊಬ್ಬಳು ಶೂರ್ಪನಖಿಯಂತ ಹೆಂಡತಿ, ಅವನ ಅಷ್ಟೂ ದೌರ್ಬಲ್ಯಗಳ ಪ್ರತಿರೂಪವೇನೋ ಅನ್ನುವಂತ ಹೆಂಗಸು..ಗಂಡ ಹೆಂಡತಿಯಲ್ಲಿ ಅಷ್ಟೇನು ಒಳಜಗಳಗಳಿಲ್ಲದಿದ್ದರು ಆ ಅವಿಭಕ್ತ ಕುಟುಂಬಕ್ಕೆ ತಕ್ಕ ಸೊಸೆ ಅವಳಾಗಿರಲಿಲ್ಲ… ಮನೆಯ ಸದಸ್ಯರೂ ಅಷ್ಟೆ ಅವನ ಎಲ್ಲಾ ದೌರ್ಬಲ್ಯಗಳನ್ನು ಸರಿಯಾಗಿ ಬಳಸಿಕೊಳ್ಳುತಿದ್ದರು.. ಕತ್ತೆಯ ಹಾಗೆ ದುಡಿಯುವ ಒಬ್ಬ ಅಣ್ಣ ಅವರಿಗೆ ಸಾಕಾಗಿತ್ತು..

ಹಾಗಂತ ಅವರ್‍ಏನು ಅಂತಾ ಸ್ಥಿತಿವಂತರೇನು ಅಲ್ಲ.. ಇದ್ದಿದ್ದು ೫ ಎಕೆರೆ ಜಮೀನು ಅದರಲ್ಲಿ ೫ ಜನ ಅಣ್ಣತಮ್ಮಂದಿರು..ಹಿರಿಯಪ್ಪನೇ ಕಷ್ಟಪಟ್ಟು ನಾಲ್ಕು ಜನ ತಂಗಿಯರ ಮದುವೆ ಮಾಡಿದ[ ಒಬ್ಬನೇ ಮಾಡದಿದ್ದರು ಹೆಚ್ಚಿನ ಪಾಲು ಅವನದಿತ್ತು]..ತನ್ನ ತಂಗಿಯರನ್ನ ಒಳ್ಳೆಯ ಕಡೆ ಸೇರಿಸಿದ ಬಗ್ಗೆ ಅವನಿಗೆ ಹೆಮ್ಮೆ ಇತ್ತು..ಊರಲ್ಲೂ ಕೂಡ ಜನ ಮಾತಾಡಿಕೊಳ್ತ ಇದ್ರು ..ಇದ್ರೆ ಇಂತ ಅಣ್ಣ ಇರಬೇಕು ಅಂತ… ಆದರೆ ಅವನ ಹೆಂಡತಿಗೆ ಸ್ವಲ್ಪ ಹೊಟ್ಟೆ ಉರಿ ಎಲ್ಲ ನನ್ನ ಗಂಡ ಮಾಡಿದ ತನಗಾಗಿ ಏನೂ ಮಾಡಲಿಲ್ಲವೆಂದು..ಹಾಗಂತ ತನ್ನ ಹೆಂಡರು ಮಕ್ಕಳನ್ನ ಅವನು ಯಾವತ್ತು ಉಪವಾಸವಿಡಲಿಲ್ಲ. ತನಗಿದ್ದ ೨ ಹೆಣ್ಣುಮಕ್ಕಳನ್ನೂ ಊರಿನಲ್ಲಿ ಶಾಲೆಯಿದ್ದರೂ ಪಕ್ಕದೂರಿನ ಒಳ್ಳೆಯ ಶಾಲೆಗೆ ಸೇರಿಸಿದ್ದ. ತನ್ನಂತೆ ತನ್ನ ಮಕ್ಕಳಾಗಬಾರದೆಂದು.. ೨ ಹೆಣ್ಣು ಮಕ್ಕಳಾದಾಗ ಹಿರಿಯಪ್ಪ ನನಗೆ ಸಾಕು ಲಕ್ಷಿ ತರ ನನ್ನ ೨ಹೆಣ್ಣುಮಕ್ಕಳಿದ್ದಾರೆ ನನಗಿನ್ನು ಮಕ್ಕಳೇ ಬೇಡವೆಂದು ತೀರ್ಮಾನಿಸಿದ್ದ…ತನ್ನ ಹೆಂಡತಿ ೩ ನೇ ಮಗೂವಾದರೂ ಗಂಡಾಗಬಹುದು ಎಂದು ಅಂಗಾಲಾಚಿದರು, ಹಿರಿಯಪ್ಪ ಪಕ್ಕದೂರಿನ ಅಸ್ಪತ್ರೆಯಲ್ಲಿ ಅವನೊಬ್ಬನೇ ಹೋಗಿ ಸಂತಾನಹರಣ ಚಿಕಿತ್ಸೆಮಾಡಿಸಿಕೊಂಡು ಬಂದಿದ್ದ..ಅವನಿಗಿದ್ದ ಒಂದೇ ಬಯವೆಂದರೆ ಮತ್ತೂ ಒಂದು ಹೆಣ್ಣಾದರೆ ಏನೂ ಮಾಡುವುದು?..

ದಿನದಿಂದ ದಿನಕ್ಕೆ ಮನೆಯಲ್ಲಿ ಒಳಜಗಳಗಳು ಶುರುವಾದಂತೆ ಹಿರಿಯಪ್ಪ ಖಿನ್ನನಾಗುತ್ತಿದ್ದ.. ಜೊತೆಗೆ ಹೆಂಡತಿ ಬೇರೆಯಾಗುವಂತೆ ಒತ್ತಡ ತರೋಕೆ ಶುರು ಮಾಡ್ತ ಇದ್ಲು.. ಮನೆಯವರಿಗೂ ಇದೇ ಬೇಕಾಗಿತ್ತು..ಎಲ್ಲ ಅಣ್ಣ-ತಮ್ಮಂದಿರ ಮನೆಯಲ್ಲಿರುವಂತೆ ಇಲ್ಲು ಒಳಜಗಳಗಳಿದ್ದರೂ ಹಿರಿಯಪ್ಪನನ್ನ ಅಷ್ಟೋಂದು ದೂರ ಮಡೋದಿಕ್ಕೆ ಅವರಿಗೂ ಕಾರಣಗಳಿರಲಿಲ್ಲ…ಆದರೆ ಅವರಿಗೆ ದೂರಾಲೋಚನೆ..ಎಲ್ಲಿ ಹಿರಿಯಪ್ಪ ತನ್ನ ೨ ಹೆಣ್ಣುಮಕ್ಕಳನ್ನ ಈ ಮನೆಯ ಕರ್ಚಿನಲ್ಲೆ ಮದುವೆ ಮಾಡಿಬಿಡುತಾನೊ ಎಲ್ಲಿ ಎಲ್ಲಾ ಸಾಲವನ್ನು ನಾವೇ ತೀರಿಸಬೇಕಾಗಿ ಬರುವುದೋ ಎಂಬ ಆತಂಕ ಅವರಲ್ಲಿ ಮನೆಮಾಡಿತ್ತು…..ಹಾಗಾಗಿಯೆ ಒಂದೆರೆಡು ಸಲ ಜಗಳಗಳೂ ವಿಪರೀತವಾದಾಗ ಹಿರಿಯಪ್ಪನನ್ನ ಅವನ ೨ ಜನ ತಮ್ಮಂದಿರೂ ಹೊಡೆದಿದ್ದು ಇದೆ….

ದಿನದಿಂದ ದಿನಕ್ಕೆ ಮನೆಯ ವಾತಾವರಣ ಹದಗೆಟ್ಟಂತೆ ಹಿರಿಯಪ್ಪ ಖಿನ್ನನಾಗುತ್ತಿದ್ದ..ಜಗಳಗಳಿಂದ ನನ್ನನ್ನೆಲ್ಲಿ ಈ ಮನೆಯಿಂದ ದೂರಮಾಡಿಬಿಡುತ್ತಾರೋ ನನ್ನ ಎರೆಡು ಹೆಣ್ಣುಮಕ್ಕಳ ಪಾಡೇನೋ ಅನ್ನುವ ಚಿಂತೆಗೆ ಬಿದ್ದ ಹಿರಿಯಪ್ಪ ವಿಪರೀತ ಕುಡಿಯುತ್ತಿದ್ದ..ಕುಡಿದು ಅಣ್ಣ-ತಮ್ಮಂದಿರ ಜೊತೆಗೆ ಜಗಳವಾಡುತ್ತಿದ್ದ…ಅವನ ಹೆಂಡತಿಯೂ ಅಷ್ಟೆ ಮನೆಯಲ್ಲಿದ್ದ ಅಷ್ಟು ಜನರ ಹತ್ತಿರ ಜಗಳವಾಡಿಕೊಂಡ್ದಿದಳು..ಒಂದು ದಿನ ಕೊನೆಗೆ ಜಗಳ ವಿಪರೀತವಾದಾಗ ಮನೆಯವರೆಲ್ಲರೂ ಸೇರಿ ಮನೆಯಿಂದ ಹೊರಗೆ ಹಾಕಿ ಬಿಟ್ರು..ಇದ್ದ ಐದು ಎಕೆರೆ ಜಮೀನಿನಲ್ಲಿ ಒಂದು ಎಕರೆ ಜಮೀನನ್ನು ಅವನ ಹೆಸರಿಗೆ ಬರೆಯಿಸಿ ಮನೆಯಿಂದ ಹೊರಗೆ ಹಾಕಿಬಿಟ್ರು..ಹಿರಿಯಪ್ಪನನ್ನ ಮನೆಯಿಂದ ಹೊರಗೆ ಹಾಕಿದ್ದೇನೋ ನಿಜ..ಆದರೆ ಅವನಿಗೆ ಇರೋಕೆ ಅಂತ ಮನೆ ಎಲ್ಲಿತ್ತು? ಇದ್ದ ಚಿಕ್ಕ ಮನೆಯಲ್ಲಿ ನಾನೆಂತ ಪಾಲು ಕೇಳುವುದು? ನನ್ನ ಅಣ್ಣ-ತಮ್ಮಂದಿರೆ ಇರಲಿ ಬಿಡು ಅಂದು ಕೊಂಡು ತಾನು ಊರ ಹೊರಗೆ ಒಂದು ಚಿಕ್ಕ ಗುಡಿಸಲು ಕಟ್ಟಿಕೊಂಡು ಹೆಂಡತಿಮಕ್ಕಳೊಡನೆ ಅವನ ಪಾಡಿಗೆ ಅವನಿದ್ದ..

ಮನೆಯಿಂದ ಹೊರಬಿದ್ದವನೇನು ಸುಮ್ಮನಿರಲಿಲ್ಲ..ಮನೆಪಕ್ಕದಲ್ಲಿದ್ದ ದಟ್ಟಾನುದಟ್ಟ ಕಾಡನ್ನು ಕಡಿದು ಅಲ್ಲಿ ವ್ಯಾವಸಾಯ ಮಾಡೋಕೆ ಶುರುಮಾಡಿದ..ಕಷ್ಟ ಪಟ್ಟು ತನ್ನದೇ ಅಂತ ಮನೆ ಮಾಡಿದ. ಇದ್ದ ಒಂದು ಎಕರೆ ಜಮೀನಿನಲ್ಲೆ ತನಗಾಗುವಷ್ಟು ಅನ್ನವನ್ನ ಸಂಪಾದಿಸಿಕೊಳ್ಳುತ್ತಿದ್ದ.ಮನೆಯಿಂದ ಹೊರಗಿದ್ದರೂ ತನ್ನ ಮನೆಯ ಅಪ್ಪ ಅಮ್ಮನ ಅಣ್ಣತಮ್ಮಂದಿರ ಬಗ್ಗೆ ಸ್ವಲ್ಪವೂ ಪ್ರೀತಿ ಕಡಿಮೆಯಾಗಿರಲಿಲ್ಲ…ಅವನಿಗಿದ್ದ ಒಂದೇ ಚಿಂತೆಯೆಂದರೆ ತನ್ನ ೨ ಹೆಣ್ಣುಮಕ್ಕಳನ್ನ ಮದುವೆ ಮಾಡುವುದು ಹೇಗೆ? ಅದರ ಜೊತೆಗೆ ಹೆಂಡತಿಯೂ ಆಗಾಗ ವಿಪರೀತಿ ಜಗಳ ಆಡ್ತ ಇದ್ಲು..ಅವಳಿಗೆ ಜಗಳ ಆಡೋಕೆ ಕಾರಣಗಳೇ ಇರಲಿಲ್ಲ…ನಿಜಕ್ಕೂ ಹೇಳಬೇಕೆಂದರೆ ಅವಳಿಗೆ ಜಗಳ ಆಡೋಕೆ ಕಾರಣವೇ ಬೇಕಾಗಿರಲಿಲ್ಲ ಅಂತ ಹೆಂಗಸು…ಗಂಡ ಹೆಂಡತಿಯ ಜಗಳಗಳಾದಗ ಹಿರಿಯಪ್ಪ ವಿಪರೀತ ಕುಡಿಯುತ್ತಿದ್ದ..ಕುಡಿದ ಅಮಲಿನಲ್ಲಿ ಹೆಂಡತಿ ಮಕ್ಕಳಿಗೆ ಒಂದೆರೆಡು ಮಾತು ಬೈಯ್ಯುತ್ತಿದ್ದನೇ ವಿನಹ ಕೈಮಾಡೊ ನೀಚ ಗುಣದವನಾಗಿರಲಿಲ್ಲ. ಕುಡಿದು ಬಂದರೆ ತನ್ನ ಪಾಡಿಗೆ ತಾನು ಏನಾದರು ಮಾತಾಡಿಕೊಂಡು ಅಳುತ್ತ ಕೂರುತ್ತಿದ್ದವನು ಒಂದೊಂದು ಸಲ ಜೋರಾಗಿ ಹೆಂಡತಿಗೆ ಬಯ್ಯುತ್ತಿದ್ದ…”ನಿನ್ನಿಂದಲೇ ನನ್ನ ಅಣ್ಣ-ತಮ್ಮಂದಿರು ನನ್ನಿಂದ ದೂರಾದರು …ನಾನು ವಿಷ ಕುಡಿದು ಸತ್ತೋಗ್ತೀನಿ” ಅಂತ ಒಂದೋದು ಸಲ ಜೋರಾಗಿ ಕೂಗ್ತ ಇದ್ದ…..ಹಿರಿಯಪ್ಪ ಜಗಳವಾಡಿದಾಗಲೆಲ್ಲ ಆ ನೀಚ ಹೆಂಗಸು ತವರುಮನೆಗೆ ಹೋಗಿ ಬಿಡ್ತ ಇದ್ಲು…ಮತ್ತೆ ಇವನೇ ನಾಚಿಕೆ ಬಿಟ್ಟು ಹೋಗಿ ಕರೆದುಕೊಂಡು ಬರುತ್ತ ಇದ್ದ…ಬಂದವಳೆ ಮತ್ತೆ ಗಲಾಟೆ ಶುರುಮಾಡ್ತ ಇದ್ಲು….

ದಿನದಿಂದ ದಿನಕ್ಕೆ ಹಿರಿಯಪ್ಪನ ಹೆಂಡತೀ ಕೂಡ ಖಾಯಿಲೆ ಬಿಳೋಕೆ ಶುರು ಮಾಡಿದ್ಲು..ಅವಳ ಕೈಮೇಲೆ ವಿಚಿತ್ರ ಹುಣ್ಣುಗಳಾಗುತ್ತ ಬಂದ್ವು…ಅವಾಗ ನೋಡಬೇಕಿತ್ತು ಹಿರಿಯಪ್ಪನ ಹೆಂಡತಿ ಮೇಲಿನ ಪ್ರೀತಿ..ಎಲ್ಲೆಲ್ಲಿ ಸಾದ್ಯವಾಗುತೊ ಅಲ್ಲಿಗೆಲ್ಲ ತನ್ನ ಹೆಂಡತಿಯನ್ನ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದ… ಗಾಯಗಳೇನೊ ವಾಸಿಯಾದರೂ ಮೊದಲಿನ ಹಾಗೆ ಕೆಲಸ ಮಾಡೋಕೆ ಆಗುತ್ತಿರಲಿಲ್ಲ.. ಸರಿಯಾಗಿ ನಡೆದಾಡಲಾಗುತ್ತಿರಲಿಲ್ಲ..ಒಂದೋಂದು ಸಲ ಅಡುಗೆಮಾಡುವುದು ಕಷ್ಟಾವಾಗುತ್ತಲಿತ್ತು ಹಿರಿಯಪ್ಪನ ಹೆಂಡತಿಗೆ. ಆವಾಗಲೆಲ್ಲ ತಾನೆ ಅಡುಗೆ ಮಾಡಿ ತನ್ನ ಮಕ್ಕಳು ಮತ್ತೆ ಹೆಂಡತಿಗೆ ಬಡಿಸುತ್ತಿದ್ದ…ತನ್ನ ಹೆಣ್ಣುಮಕ್ಕಳ ಮೇಲೆ ಅದೆಷ್ಟು ಪ್ರೀತಿಯೋ ಗೊತ್ತಿಲ್ಲ..ಮಕ್ಕಳು ಅಷ್ಟು ಚಿಕ್ಕವರಲ್ಲದಿದ್ದರೂ ತಾನೆ ತಲೆ ಬಾಚಿ ಶಾಲೆಗೆ ಕಳಿಸುತ್ತಿದ್ದ…ಮೊದಲಿನ ಹಾಗೆ ಮನೆಯಲ್ಲಿ ಜಗಳಗಳಿರಲಿಲ್ಲ ಜಗಳ ಮಾಡೋಕೆ ಯಾರಿದ್ದಾರೆ ಅಲ್ಲಿ? ರೋಗಿಷ್ಟ ಹೆಂಡತಿಯ ಹತ್ತಿರ ಏನು ಜಗಳ ಆಡಿಯಾನು? ಅವಳಾದರು ಯಾಕೆ ಜಗಳ ಆಡಿಯಾಳು? ಹೀಗೆ ಅವಳು ಕಷ್ಟ ಪಟ್ಟು ಮನೆಕೆಲಸ ನೋಡಿಕೊಂಡರೆ ಇವನು ತನ್ನ ಜಮೀನು ಕೆಲಸ ನೋಡಿಕೊಳ್ಳುತ್ತಿದ್ದ….

ಮನುಷ್ಯ ಒಂದೊಂದು ಸಲ ಎಷ್ಟು ಬಲಹೀನನಾಗಿಬಿಡುತ್ತಾನೆಂದರೆ ಅದನ್ನ ಕಲ್ಪನೆ ಮಾಡಿಕೊಳ್ಳುವುದು ಕಷ್ಟವಾಗಿ ಬಿಡುತ್ತದೆ..ಕೆಲವೊಂದು ಸಂದರ್ಭಗಳಲ್ಲಿ ತಾನೇನು ಮಾಡುತ್ತಿದ್ದೇನೆ ಎಂಬ ಅರಿವಿದ್ದರು ಕೆಲವು ಪ್ರಮಾದಗಳಾಗಿಬಿಡುತ್ತವೆ…ಆ ತಪ್ಪುಗಳಿಗೆ ಯಾರು ಹೊಣೆ? ಮನುಷ್ಯ ತಾನು ಮಾಡಿದ ತಪ್ಪುಗಳು ಬೇರೆಯವರ ಮೇಲೆ ಯಾವ ಪರಿಣಾಮ ಬೀರುತ್ತವೆ ಅಂತ ಯೋಚನೇ ಕೂಡ ಮಾಡುವುದಿಲ್ಲ… ಯಾವುದೋ ದುಶ್ಚಟಗಳ ದಾಸರಾಗಿ ಯಾರಿಗೋ ನೋವು ಕೊಟ್ಟು ಯರದೋ ಮನೆಯ ಸರ್ವನಾಶಕ್ಕೆ, ಅಥವ ಕೆಲವೊಂದು ಸಲ ತನ್ನ ಮನೆಯ ಅವನತಿಗೇ ತಾನೆ ಕಾರಣವಾಗಿಬಿಡುತ್ತಾನೆ. ಅದಕ್ಕೆ ಈ ಹಿರಿಯಪ್ಪ ಸೂಕ್ತ ಉದಾಹರಣೆ……..

ಹೀಗಿದ್ದಾಗಲೇ ಒಂದು ದಿನ ಕಂಟಪೂರ್ತಿ ಕುಡಿದು ಬಂದು ..ಹೆಂಡತಿಗೆ ಊಟಕ್ಕೆ ಬಡಿಸಲು ಹೇಳಿದ್ದಾನೆ.. ತುಂಬಾ ರಾತ್ರಿಯಾಗಿದ್ದರಿಂದ ಹೆಂಡತಿ ಗಂಡನಿಗೆ ಊಟ ಬಡಿಸಿ ಹೋಗಿ ಮಲಗಿದ್ದಾಳೆ… ೨ ಹೆಣ್ಣುಮಕ್ಕಳು ತಮ್ಮ ಪಾಡಿಗೆ ತಾವು ಏನನ್ನೋ ಓದಿಕೊಳ್ಳುತ್ತ ಕೂತಿವೆ.. ಹಿರಿಯಪ್ಪ ಊಟದ ಮದ್ಯೆ ನೀರು ಕೇಳಿದ್ದಾನೆ..ಪಾಪ ಮಕ್ಕಳು ನೀರು ತರುವುದು ಸ್ವಲ್ಪ ಸಮಯವಾಗಿದ್ದೇ ತಡ..ಜೋರಾಗಿ ಕೂಗಾಡುತ್ತಾ..”ಈ ಮನೆಯಲ್ಲಿ ನನ್ನ ಕಂಡರೆ ಯಾರಿಗೂ ಅಗೋಲ್ಲ ನನಗೆ ಒಂದು ಲೋಟ ನೀರು ಕೊಡುವವರು ಈ ಮನೆಯಲ್ಲಿ ದಿಕ್ಕಿಲ್ಲ ನಾನು ವಿಷ ಕುಡುಯುತ್ತೇನೆ” ಅಂದವನೇ ಜಮೀನಿಗೆ ಸಿಂಪಡಿಸಲೂ ಅಂತ ತಾನೆ ಇಟ್ಟಿದ್ದ ಕಳೆನಾಶಕ[ವಿಷ]ವನ್ನ ಕುಡಿದ ಅಮಲಿನಲ್ಲಿ ಕಠಪೂರ್ತಿ ಕುಡಿದು ಬಿಟ್ಟ……..

ಮೊದಲೇ ನಮ್ಮದು ಒಂದು ಚಿಕ್ಕ ಹಳ್ಳಿ.ಅಲ್ಲಿ ಯಾವ ಆಸ್ಪತ್ರೆಯಾಗಲಿ ಪ್ರಥಮ ಚಿಕಿತ್ಸೆಗೆ ಅನುಕೂಲವಾಗುವಂತ ಯಾವುದೇ ವ್ಯವಸ್ತೆಯಾಗಲಿ ಇಲ್ಲ…ಮದ್ಯೆರಾತ್ರಿ ಪಕ್ಕದೂರಿನ ಆಟೊ ಮಾಡಿಕೊಂಡು ಪಕ್ಕದೂರಿನ ಆಸ್ಪತ್ರೆಗೆ ತೆಗೆದುಕೊಂಡು ಹೋದರೆ ಅಲ್ಲಿ ವಿಷ ಕುಡಿದವರನ್ನ ಬದುಕಿಸಬಲ್ಲ ಔಷದಿಗಳಾಗಲಿ ಇಲ್ಲ. ನರಸತ್ತ ಸರ್ಕಾರಿ ಆಸ್ಪತ್ರೆಯಲ್ಲಿ. ಕೇವಲ ನರಸತ್ತ ವೈದ್ಯಮಹಾಶಯರೇ ಇರೋದು..ಮತ್ತೆ ಅದೇ ದಿನ ರಾತ್ರಿ ಶಿವಮೊಗ್ಗದ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸೋಕೆ ಅಂತ ಕರೆದುಕೊಂಡು ಹೋದರೆ ಅಲ್ಲಿಯಾಗಲೆ ಹಿರಿಯಪ್ಪ ಅರೆಜೀವವಾಗಿದ್ದ… ಅಲ್ಲಿನ ಬೇವರ್ಸಿ ಡಾಕ್ಟರ್ ಕೂಡ, ೨ ದಿನ ಆಸ್ಪತ್ರೆಯಲ್ಲಿ ಇಟ್ಟುಕೊಡು ಹದಿನೆಂಟು ಸಾವಿರ ಬಿಲ್ ಮಾಡಿ, ಆಮೇಲೆ ಬದುಕುವುದಿಲ್ಲವೆಂದು ಹೇಳಿ ಮತ್ತೆ ಹಿರಿಯಪ್ಪನ ಹೆಂಡತಿ ಮಕ್ಕಳ ಮೇಲೆ ಅಷ್ಟೂ ಸಾಲದ ಹೊರೆ ಹಾಕಿ ಬಿಟ್ರು… ಮತ್ತೆ ಸಾಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಕೊಡಿಸೋಷ್ಟರಲ್ಲಿ ಹಿರಿಯಪ್ಪ ಬಾಗಶ: ಶವವಾಗಿದ್ದ…. ಈ ಸಲ ಊರಿಗೇ ಹೋಗಿದ್ದಾಗ ಊರಿನ ಹುಡುಗರನ್ನೆಲ್ಲ ಕರೆದುಕೊಂಡು ಕೊನೆಯ ಬಾರಿಗೆ ಹಿರಿಯಪ್ಪನನ್ನ ನೋಡಿ ಬರಲು ಹೋಗಿದ್ದೆ…..ಆಸ್ಪತ್ರೆಗೆ ಹೋಗಿ ಚಿಕ್ಕಪ್ಪಾ………… ಯಾಕೆ ನೀನು ವಿಷ ಕುಡಿದು ನಿನ್ನ ಹೆಂಡತಿ ಮಕ್ಕಳಿಗೆ ವಿಷ ಕೊಟ್ಟೆಯೊ ಪಾಪಿ……….ಅಂತ ಕೇಳಿದರೆ ಎಲ್ಲಿ ಹಿರಿಯಪ್ಪ? ಕೇವಲ ಕಣ್ಣಲ್ಲಿ ನೀರು ತುಂಬಿಕೊಂಡು ಆಕಾಶ ನೋಡುತ್ತಿದ್ದ…ಮೈ ಕೈ ಎಲ್ಲ ಬಾತುಕೊಂಡು ಕಲ್ಲಿನ ತರ ಕಠಿಣವಾಗಿದ್ದವು..ಹಿರಿಯಪ್ಪನೂ ಕಲ್ಲಿನ ತರಾನೆ..ಯಾವುದೇ ಕಷ್ಟ ಬಂದ್ರು ಹೆದರದೆ ತನ್ನ ಸಂಸಾರವನ್ನ ಒಂದು ಹಂತಕ್ಕೆ ತಂದಿಟ್ಟಿದ್ದ…..ಆಸ್ಪತ್ರೆಯಿಂದ ಹೊರಗೆ ಹೊರಟ ನಮ್ಮನ್ನೆಲ್ಲ ನೋಡಿ ಏನೋ ಮಾತಾಡೊಕೆ ಅಂತ ಹೊರಟರೆ ಬಾಯಿಂದ ಬರಿ ಗಾಳೀ ಬರ್ತ ಇತ್ತು..ಕೊನೆ ಸಲ ಹಿರಿಯಪ್ಪನನ್ನ ಕಣ್ಣುತುಂಬ ನೋಡಿಕೊಡು ಮನೆಗೆ ಹೋದ ೨ ನೆ ದಿನಕ್ಕೆ ಸುದ್ದಿ ಬಂತು….

ಹಿರಿಯಪ್ಪ ಸತ್ತೊದ್ನಂತೆ…………………………….

ಅದಕ್ಕೆ ನಾನು ಈ ಘಟನೆಗೆ “ಒಂದು ಮನೆಯ ದೀಪವಾರಿದ ಕತೆ” ಅಂತ ಹೆಸರಿಟ್ಟಿದ್ದು… ಅಷ್ಟು ಕಷ್ಟ ಪಟ್ಟು, ಮನೆಯವರನ್ನೆಲ್ಲ ಎದುರುಹಾಕಿಕೊಂಡು, ಮನೆಯನ್ನು ಕಟ್ಟಿ, ಮಕ್ಕಳನ್ನು ಸಾಕುತ್ತ, ತಾನು ಕಷ್ಟಪಟ್ಟು ಕೆಲ್ಸ ಮಾಡಿಕೊಂಡಿದ್ದ ಹಿರಿಯಪ್ಪನನ್ನ ಕೇವಲ ಒಂದು ನಿಮಿಷದ ಮೈಮರೆವು ಬಲಿತೆಗೆದುಕೊಂಡು ಬಿಡ್ತು…. ಹಿರಿಯಪ್ಪನೇನೊ ಸತ್ತ…ಅವನ ಹೆಂಡತಿಯ ಗತಿ? ತನ್ನ ಜೀವವೆಂದೆ ನಂಬಿದ್ದ ೨ ಹೆಣ್ಣುಮಕ್ಕಳ ಗತಿ? ಉತ್ತರಿಸಬೇಕಾದ ಹಿರಿಯಪ್ಪ ಎಲ್ಲಿದ್ದಾನೊ… ಸಾವುಗಳಿಗೆ ನಿಯತ್ತಿರೋದಿಲ್ಲ ಅಂತ ನನ್ನ ಅನಿಸಿಕೆ.ಹಿರಿಯಪ್ಪನ ಬಡಕುಟುಂಬವನ್ನ ನೆನೆಸಿಕೊಂಡರೆ ಯಾಕೋ ಕಣ್ಣುತುಂಬಿಬರುತ್ತೆ. ಅಪ್ಪ ಸತ್ತಾಗ ಆ ಹೆಣ್ಣುಮಕ್ಕಳೂ ಅಪ್ಪನ ಕುಯ್ದಿಟ್ಟ ದೇಹದ ಮೇಲೆ ಬಿದ್ದುಹೊರಲಾಡುತ್ತಿದ್ದುದ್ದನ್ನ ನೆನಸಿಕೊಂಡರೆ ಯಾಕೊ ಹಿರಿಯಪ್ಪನನ್ನ ರಟ್ಟೆ ಹಿಡಿದು ಕೇಳಬೇಕೆನಿಸುತ್ತೆ…..ಈ ಪಾಪದ ಮಕ್ಕಳೇನು ಮಾಡಿದ್ದವು? ಯಾವ ತಪ್ಪಿಗಾಗಿ ಇಂತ ಶಿಕ್ಷೆ.? ಯಾರ ತಪ್ಪಿಗಗಿ? ಉತ್ತರ ಕೊಡಬೇಕಾದ ಮಹಾನುಭಾವ ಸತ್ತು ಮಲಗಿದ್ದ…ಬದುಕುಳಿದ ಪಾಪಿ ಹೆಂಡತಿ ಮತ್ತು ಪಾಪದ ಮಕ್ಕಳ ಮುಖದಲ್ಲಿ ತಬ್ಬಲಿತನವೆಂಬುದು ಮನೆಮಡಿತ್ತು…

Apr
20

ಇದ್ದಿದ್ದೆ ಒಂದು ಚಿಕ್ಕ ಗುಡಿಸಲು, ಗುಡಿಸಿಲ ಮೇಲೆ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಇದೆಯೋ ಇಲ್ಲವೋ ಅನ್ನುವಷ್ಟು ಹುಲ್ಲು.ಈಗಲೋ ಆಗಲೋ ಧರೆಗುರುಳಲೂ ಸರತಿ ಸಾಲಿನಲ್ಲಿ ನಿಂತಿರುವ ಆ ಮನೆಯ ಬಿರುಕು ಬಿಟ್ಟ ಗೋಡೆಗಳು,ರಾತ್ರಿ ಮಳೆ ಬಂತೆಂದರೆ ಮನೆಯೊಳಗೆ ಈಜಾಡಬಹುದಾದಷ್ಟು ನೀರು ಮನೆಯ ಒಳಗೆ ಜಮಾವಣೆಯಾಗುತ್ತಿತ್ತು…ಇದ್ದ 3 ಜನಮಕ್ಕಳನ್ನು ರಾತ್ರಿ ಒಂದು ಬದಿಗೆ ಕೂರಿಸಿ ತಾನು ಮನೆಯ ಒಳಗಿದ್ದ ಅಷ್ಟೂ ನೀರನ್ನ ಹೊರಗೆ ಹಾಕಿ ಮಕ್ಕಳನ್ನೆಲ್ಲ ಹೇಗೋ ಮನೆಯ ಒಳಗೆ ಮಲಗಿಸಿ ತಾನು ತೂಕಡಿಸುತ್ತ ಮನೆಯ ಹೊರಗೆ ಕುಳಿತರೇ…”ಯಾವ ಮಿಂಡ ಬರ್ತಾನೆ ಅಂತ ಕಾಯ್ತ ಇದ್ದೀಯೇ ಹಾದರಗಿತ್ತೀ” ಅಂತಲೇ ತೂರಾಡುತ್ತ ಬರುವ ಕುಡುಕ ಗಂಡನ ಬೈಗುಳ ಕೇಳಿದೊಡನೆ ಕಣ್ಣೀರಾಗುವ ತಾಯಿ ಗಂಡನ ಬೈಗುಳಗಳಿಗೆ ಸೊಪ್ಪು ಹಾಕದೆ ಕುಡಿದು ತೂರಾಡುತ್ತಿದ್ದ ಗಂಡನನ್ನ ನಿಧಾನವಾಗಿ ಬೀಳದಂತೆ ಮನೆಯ ಒಳಕ್ಕೆ ಕರೆದುಕೊಂಡು ಹೋಗಿ ಕೂರಿಸಿ ಉಣ್ಣಲಿಕ್ಕೆ ಬಡಿಸಿದರೇ..”ಯಾಕೆ ಇಷ್ಟೇ ಅನ್ನ ಇದೆ? ಎಲ್ಲ ನಿನ್ ಮಿಂಡ ತಿಂದು ಹೋಗಿ ಬಿಟ್ನ? ಅಂತ ಹೇಳಿ ಬೆಂಕಿಕೊಳ್ಳಿಯನ್ನ ತೆಗೆದು ಗುಬ್ಬಿ ಗಾತ್ರದ ತಾಯಿಗೆ ಬಡಿದನೆಂದರೇ ತಾಯಿ ಜೋರಗಿ ಕೂಗುವಂತೆಯೂ ಇಲ್ಲ .ಅಕ್ಕ ಪಕ್ಕದ ಮನೆಯವರಿಗೇ ಗೊತ್ತಾದರೇ?..” ಇಲ್ಲ ಕಣ್ರಿ ಇದ್ದಿದ್ದೆ ಪಾವು ಅಕ್ಕಿ ಅದನ್ನೆ ಮಾಡಿದ್ದು ಅಷ್ಟೆ” ಅಂತ ತಾಯಿ ಕಣ್ಣೀರಾದರೇ ಅದ್ಯವುದರ ಪರಿವೇ ಇಲ್ಲದಂತೆ ದನಕ್ಕೆ ಬಡಿದ ಹಾಗೆ ಬಡಿದು ಅಂತ ಮಳೆಗಾಲದ ಚಳಿಮಳೆಯಲ್ಲಿ ಮನೆಯಿಂದ ಹೊರಗೆ ಕಳುಹಿಸುತ್ತಿದ್ದ ತಾಯಿಯನ್ನ. ಮುದುರಿ ಮಲಗಿರುವ ಮಕ್ಕಳು ತುಟಿ ಕಚ್ಚಿ ಹಿಡಿಯ ಬೇಕಿತ್ತು ದುಃಖ… ಮಕ್ಕಳತ್ತರೇ ಮಕ್ಕಳಿಗೂ ಅದೇ ಗತಿ ಕೈಗೆ ಸಿಕ್ಕಿದನ್ನ ತೆಗೆದುಕೊಂಡು ಬಾರಿಸುತ್ತಿದ್ದ…ಆದರೂ ದೈರ್ಯ ಮಾಡಿ ಇದ್ದ ಒಬ್ಬ ಮಗ ” ಅಪ್ಪಾ ಅವ್ವಾಗೆ ಚಳಿ ಆಕೈತಿ ಒಳಕ್ಕೆ ಕರಿಲಾ ಅವ್ವನ್ನ?” ಅಂತ ಮೈ ನಡುಗುತ್ತ ಕೇಳಿದರೇ..” ಗೊತ್ತಲೆ ಸೂಳೆ ಮಗನೇ ನೀನು ನಿಮ್ಮವ್ವನ ಪರ ನೀನು ಹೊರಗೆ ಹೋಗಿ ಸಾಯಿ ನಿಮ್ಮವ್ವನ ಜೊತೆ” ಅಂತ ಹೇಳಿ ಮಗನನ್ನು ಅಂತ ಚಳಿಮಳೆಯಲ್ಲಿ ಹೊರಗೆ ಕಳುಹಿಸುತ್ತಿದ್ದ.. ಅಂತ ಚಳಿಮಳೆಯಲ್ಲಿ ಅಮ್ಮನಿಗೆ ಮಗ ಮಗನಿಗೆ ಅವ್ವ ಮಾತ್ರ ಸಮಧಾನ ಹೇಳಿ ಆ ಯಾತನಮಯ ರಾತ್ರಿಯನ್ನ ಕಳೆಯುತ್ತಿದ್ದರು…!ಅಂತ ಸಮಯದಲ್ಲಿ ಆ ದೇವರಾದವನು ಎಲ್ಲಿ ಹುಲ್ಲು ಮೆಯ್ಯುತ್ತಿದ್ದನೊ….

ಮಗಳೇ ಕಾಪೀ ಕೊಡು ಅಂತ ತನ್ನ ಮುದ್ದಿನ ಇಬ್ಬರೂ ಹೆಣ್ಣುಮಕ್ಕಳನ್ನ ಕೇಳುತ್ತಿದ್ದ ಬೆಳಗ್ಗೆ ಎದ್ದ ಕೂಡಲೇ.. ” ಹೋಗಪ್ಪ ನನಗೆ ಬೆಂಕಿ ಒಟ್ಟೋಕೆ ಬರಕಲ್ಲ ಕಾಪೀ ಮಾಡಾಕು ಬರಾಕಲ್ಲ ಅವ್ವನಿಗೆ ರಾತ್ರಿ ಹಂಗೆ ಹೊಡೆದು ಮನೆಯಿಂದ ಹೊರಗೆ ಕಳ್ಸಿದೆ, ನಾವ್ ಮಾಡಿಕೊಡಕಲ್ಲ ಹೋಗು ಅಂತ ಮುದ್ದಿನ ಹೆಣ್ಣು ಮಕ್ಕಳೂ ಹೇಳಿದರೇ” ತಲೆ ತಗ್ಗಿಸಿದ ಅಪ್ಪ ತಲೆ ಮೇಲೆತ್ತುತ್ತಿರಲಿಲ್ಲ .ಯಾವ ಮುಖವಿಟ್ಟಾದರೂ ತನ್ನಿಬ್ಬರು ಹೆಣ್ಣುಮಕ್ಕಳನ್ನ ನೋಡಿಯಾನು?..ತಗ್ಗಿಸಿದ ತಲೆ ತಗ್ಗಿಸಿಕೊಂಡೆ ಮತ್ತೆ ಮನೆಯಲ್ಲಿ ಅವ್ವ ಯಾರಿಗೂ ಕಾಣದಂತಹ ಛಹಾ ಡಬ್ಬಿಗಳಲ್ಲಿ ಮತ್ತೆ ಕಾರದ ಪುಡಿ ಡಬ್ಬಿಗಳಲ್ಲಿ ಅಡಗಿರಿಸುತ್ತಿದ್ದ ಚಿಲ್ರೆ ಕಾಸುಗಳನ್ನ ಸೇರಿಸಿ ತನ್ನ ಜೇಬಿಗಿಳಿಸಿಕೊಂಡು ಮನೆಯಿಂದ ಹೊರಕ್ಕೆ ಹೋದಮೇಲೆಯೇ ತನ್ನ ನೀಚ ತಲೆಯೆತ್ತುತ್ತಿದ್ದ.ಅದೇ ಚಿಲ್ಲರೇ ಕಾಸನ್ನ ಚೌಡಮ್ಮನ ಮನೆನಲ್ಲಿ ಎರೆಡು ಕ್ವಾಟರ್ ಸಾರಾಯಿ ಕುಡಿದುಕೊಂಡು ಬಂದು ತನ್ನ ಪೌರುಷವನ್ನ ಮತ್ತೆ ಮಕ್ಕಳ ಮುಂದೆ ತೋರಿಸುತ್ತಿದ್ದ… ” ಎಲ್ಲೆ ನಿಮ್ಮವ್ವ ರಾತ್ರಿ ಮನೆಯಿಂದ ಹೊರಗೆ ಹೋದವಳು ಇನ್ನು ಬಂದಿಲ್ಲವಲ್ರೆ? ಯಾರ ಜೊತೆಗೆ ಹೋದ್ಲು ” ಅಂತ ಕೇಳಿದರೇ… ” ಅವ್ವ ಸಾವಕಾರ್ ಗದ್ದೆ ಗೆ ಸಸಿ ಕೀಳಾಕೆ ಹೋದ್ಲು ಬೆಳಗ್ಗೆ ೫ ಗಂಟೆಗೆನೆ” ಅಂತ ಮಕ್ಕಳು ಹೇಳಿದ ಕೂಡಲೇ ಸಾವಕಾರ್ ಗದ್ದೆಗೆ ತೂರಾಡುತ್ತ ಹೋಗೇ ಬಿಡುತ್ತಿದ್ದ..ಅಲ್ಲಿ ಆ ಚಳಿಮಳೆಯಲ್ಲಿ ರಾತ್ರಿ ಪೂರ ನಿದ್ದೆಗೆಟ್ಟು ನಡಬಗ್ಗಿಸಿ ಸಸಿ ಕೀಳುತ್ತಿದ್ದವಳನ್ನ ಹಾಗೆ ಕುರಿಯನ್ನ ಎಳೆದುತರುವ ಹಾಗೆ ಗದ್ದೆಯಿಂದ ಹೊರತಂದು ಬಾರಿಸುತ್ತಿದ್ದ “ಒಂದು ಲೋಟ ಟೀ ಮಾಡಿಕೋಡಾಕೆ ಆಗಲ್ಲ ನಿಂಗೆ ನಿನ್ನ ಚರ್ಮ ಸುಲಿತೀನಿ ಹಾದರಗಿತ್ತೀ” ಅಂತ ಕೂಗಾಡುತ್ತಿದ್ದ…” ರೀ ಇನ್ನು ಸ್ವಲ್ಪ ಸಸಿ ಕಿತ್ತು ಬರ್ತೀನಿ ಮಕ್ಕಳ ಸ್ಕೂಲ್ ಪೀಜಿಗೆ ಆಕೈತಿ” ಹೋಗ್ರಿ ಮನಿಗೇ ಅಂತ ಕೇಳಿಕೊಂಡರೂ ಬಿಡುತ್ತಿರಲಿಲ್ಲ..ಗೌಡರ ಗದ್ದೆಯಿಂದ ಹೊಡೆಯುತ್ತ ಬರುತ್ತಿದ್ದವನು ಮನೆತನಕ ಬಂದರೂ ಬಿಡುತ್ತಿರಲಿಲ್ಲ.. ಊರಿನ ತನ್ನ ವಾರಿಗೆಯ ಹೆಂಗಸರ ಮುಂದೆ ತನಗಾಗುತ್ತಿದ್ದ ಅವಮಾನಕ್ಕೆ ಒಂದೊಂದು ಸಲ ಕುಸಿದು ಬೀಳುತ್ತಿದ್ದಳು…

ಒಂದೇ ಚಿಂತೆ ತನ್ನ ನೆರೆಹೊರೆಯವರೆಲ್ಲ ಗಂಡ ಹೆಂಡತಿ ಮಕ್ಕಳೊಡನೆ ಚೆನ್ನಾಗಿರಬೇಕಾದರೆ ನನಗ್ಯಾಕಪ್ಪ ಇಂತಾ ಹಿಂಸೆ ಅಂತ ದಿನಾ ಕೊರಗುತ್ತಾ ಇದ್ಲು. ತನ್ನೊಳಗೆ ಎಲ್ಲಾ ನೋವ ನುಂಗಿಕೊಂಡಿರುತ್ತಿದ್ದಳೇ ವಿನಹಾ ಅಪ್ಪಿ ತಪ್ಪಿ ಕೂಡ ನೆರೆಹೊರೆಯವರಲ್ಲಿ ತನ್ನ ಕಷ್ಟ ಹೇಳಿಕೊಳ್ಳುತ್ತಿರಲಿಲ್ಲ.ಕೂಲಿ ನಾಲಿ ಮಾಡಿ ಅಷ್ಟಿಷ್ಟು ಉಳಿದ ಹಣದಲ್ಲಿ ಮನೆಗೆ ಒಂದಿಷ್ಟು ಮಣ್ಣಿನ ಗಡಿಗೆಗಳನ್ನ ಶೇಕರಿಸಿಟ್ಟುಕೊಂಡರೇ ಕುಡಿದಾಗ ಅದರ ಮೇಲು ಅವನ ಕಣ್ಣು ಬೀಳುತ್ತಿದ್ದು..” ಮಗನೇ ಬಾರಲಾ ಇಲ್ಲಿ ಒಡೆದ್ ಹಾಕು ಆ ಗಡಿಗೇನ..ಯಾಕ್ ಬೇಕು ಈ ಚಿಕ್ ಮನೆಗೆ ಅಷ್ಟೋಂದು ಗಡಿಗೆಗಳು ಒಡೆದ್ ಹಾಕ್ಲ ” ಅಂತ ತನ್ನ ಮಗನಿಗೆ ಹೇಳಿದರೇ ಮಗ ಆದವನೂ ಹೇಗಾದರೂ ಒಡೆದಾನು? ” ಇಲ್ಲ ನಾನ್ ಒಡಿಯಾದಿಲ್ಲ ಅಂತ ಹೇಳಿದ ಕೂಡಲೇ ಅಲ್ಲಿದ್ದ ಮಣ್ಣಿನ ಗಡಿಗೆಯನ್ನ ಮಗನ ಮುಖಕ್ಕೆ ಬೀಸುತ್ತಿದ್ದ. ಹೀಗೆ ಮಾಡುತ್ತಿದ್ದುದ್ದರಿಂದಲೇ ಕೆಲವೊಂದು ಸಲ ಮಗ ಅಪ್ಪನ ಹೆದರಿಕೆಗೆ ಮಣಿದು ಅವ್ವಾ ಪ್ರೀತಿಯಿಂದ ಕೂಡಿಟ್ಟ ಮಣ್ಣಿನ ಗಡೀಗೆಗಳನ್ನ ನೋವಿನಿಂದ ಒಡೆದುಹಾಕುತ್ತಿದ್ದುದೂ ಇತ್ತು. ಒಂದೊಂದೆ ಮಣ್ಣಿನ ಗಡೀಗೆಗಳನ್ನ ಒಡೆದು ಹಾಕುತ್ತಿದ್ದರೆ ಅವ್ವ ಮಾತ್ರ ಮೂಲೆಯಲ್ಲಿ ಕುಳಿತು ಕಣ್ಣೀರಾಗುತ್ತಿದ್ದಳು. ಅಷ್ಟು ಮಣ್ಣಿನ ಗಡಿಗೆಗಳನ್ನ ಕೂಡಿ ಹಾಕಲಿಕ್ಕೆ ಅವಳು ಪಟ್ಟ ಕಷ್ಟವನ್ನ ನೆನೆಸಿಕೊಂಡರೆ ಎಂತವನಿಗಾದರೂ ಕರುಳು ನೋಯದೇ ಇರುವುದಿಲ್ಲ…

ಅದೆಷ್ಟು ಸಲ ಮನೆಯಿಂದ ನಡುರಾತ್ರಿ ಮಳೆಯಲ್ಲಿ ತೋಯುತ್ತ ನಿದ್ರೆ ಬಾರದ ರಾತ್ರಿಗಳನ್ನ ಕಳೆದಿದ್ದಾಳೋ ದೇವರಿಗೇ ಗೊತ್ತು… ಮನೆಯ ಗೋಡೆಗೆ ಹೊಂದಿಕೊಂಡಂತೆ ಇರುವ ಸದಾ ಕಾಲ ನೀರಿರುವ ಬಾವಿ. ಮನೆಯಿಂದ ಹೊರಗೆ ಹಾಕಿದ ಕೂಡಲೇ ಹೋಗಿ ಬಾವಿ ಕಟ್ಟೆಯ ಮೇಲೆ ಕೂರುತ್ತಿದ್ದಳು. ಮನಸ್ಸು ಮಾಡಿದ್ದರೇ ಯಾವತ್ತೋ ಒಂದು ದಿನ ಅದೇ ಬಾವಿಯಲ್ಲಿ ಹೆಣವಾಗಿ ತೇಲಬಹುದಿತ್ತು ಅವಳು. ಮಕ್ಕಳ ಮೇಲಿನ ಅತಿಯಾದ ಪ್ರೀತಿ ಅವಳನ್ನ ಅಂತ ಅನಾಹುತ ಮಾಡಿಕೊಳ್ಳದಂತೆ ತಡೆದಿತ್ತು.” ಅಣ್ಣಾ..ಅವ್ವ ಬಾವಿ ಕಟ್ಟೆ ಮ್ಯಾಲೆ ಕುಂತಾಳೇನೋ ನೋಡೋ ನಂಗೆ ಹೆದ್ರಿಕೆ ಆಗ್ತ ಐತಿ” ಅಂತ ತಂಗಿ ಹೇಳಿದರೇ ಅಪ್ಪನಿಗೆ ಗೊತ್ತಗದಂತೆ ಮುರುಕು ಬಾಗಿಲನ್ನ ತಳ್ಳಿಕೊಂಡು ಅಣ್ಣ ಹೊರಗೇ ನೋಡಿದರೇ ಅದೇ ಭಾವಿಕಟ್ಟೆಯ ಮೇಲೆ ಅದೇ ಚಳಿಯಲ್ಲಿ ಮುದುರಿ ಕುಳಿತುಕೊಂಡಿರುತ್ತಿದ್ದ ಗುಬಿ ಗಾತ್ರದ ಅವ್ವನ ಸ್ಥಿತಿ ನೋಡಿ ಕಣ್ಣೀರಾಗುತ್ತಿದ್ದ. ಅಳುತ್ತಿದ್ದ ಮಗನನ್ನ ಸಮಾಧಾನ ಪಡಿಸಿ “ನೀನ್ ಹೋಗಿ ಮಲಿಕ್ಯ ಮಗನೇ ಬಾಳ ಹೊತ್ತಾತು” ಅಂತ ತಾನು ಹಾಗೆ ಮುದುರಿ ಕುಳಿತುಕೊಳ್ಳುತ್ತಿದ್ದಳು.ಬೆಳಗ್ಗೆ ತನ್ನ ಕುಡುಕ ಗಂಡನ ನಿಶೆ ಇಳಿದಿದ್ದನ್ನ ನೋಡಿಕೊಂಡೆ ಮಕ್ಕಳಿಗೆ ಇದ್ದ ಅರೆಪಾವು ಅಕ್ಕಿಯಲ್ಲೆ ಗಂಜಿ ಮಾಡಿ ಹಾಕಿ ಶಾಲೆಗೆ ಕಳಿಸಿ ತಾನು ಮಾತ್ರ ಏನೂ ತಿನ್ನದೇ ಕೂಲಿ ಕೆಲಸಕ್ಕೆ ಹೊರಡುತ್ತಿದ್ದಳು. ಹಾಗೆ ಹಸಿದು ಹೋಗುತ್ತಿತ್ತ ಅವ್ವನನ್ನ ಮಕ್ಕಳೂ ಯಾಕಮ್ಮ ನೀನು ಹಂಗೆ ಹೋಕೀಯಾ ಅಂತ ಕೇಳಿದ್ರೆ..” ಅಯ್ಯೋ ಅಲ್ಲಿ ಮಧ್ಯಾಹ್ನ ಊಟ ಕೋಡುತ್ತಾರೆ ಕಣ್ರೋ ನೀವ್ ಹೋಗಿ ಅಂತ ಸಮಾಧಾನ ಮಾಡುತ್ತಾ ಕಳಿಸುತ್ತಿದ್ದಳು..

ಅವಳಿಗೆ ಯಾವತ್ತೂ ಒಡವೆ ಬಗ್ಗೆ ವ್ಯಾಮೋಹವಿರಲಿಲ್ಲ.ಇದ್ದ ತಾಳಿಗೆ ೧೦ ಬಂಗಾರದ ಗುಂಡು ಮಾಡಿಸಿ ಹಾಕಿಕೊಳ್ಳಬೆಕೆಂಬ ಆಸೆ ಮೊದಮೊದಲು ಇತ್ತಾದರೂ ಕೊನೆಕೊನೆಗೆ ತಾಳಿಯ ಮೇಲೆ ಕೂಡ ಅಂತ ನಂಬಿಕೆ ಮತ್ತೆ ವ್ಯಾಮೋಹವಿಲ್ಲದೇ ಹೋಯಿತು. ಕಾರಣ? ಕುಡಿದುಕೊಂಡು ಬಂದ ಗಂಡ ತಾಳಿಯನ್ನ ವಾರಕ್ಕೆರೆಡು ಬಾರಿ ಹರಿದು ಮನೆಯಿಂದ ಹೊರಗೆ ಕಳುಹಿಸುತ್ತಿದ್ದ.ಹರಿಯುವುದು ಮತ್ತೆ ಊರಿನ ಕೆಲವು ಹಿರಿಯರು???? ರಾಜಿ ಮಾಡಿಸಿ ಕಟ್ಟಿಸುವುದು ಮಾಮೂಲೆ ಆಗಿತ್ತು.ಒಂದೊಂದು ಸಲ ಸಿಟ್ಟಿಗೆದ್ದು ನನಗೆ ನನ್ ಮಕ್ಲು ಸಾಕು ಇಂತ ಗಂಡ ನಂಗೆ ಬೇಕಾಗಿಲ್ಲ. ಹಿಂಗೇ ಇದ್ರೆ ನನ್ ಮಕ್ಳನ್ನು ಸಾಯಿಸಿ ಬಿಡ್ತಾನೆ ಇವ್ನು.ನನ್ ಮಕ್ಳು ಕಟ್ಟಿಕೊಂಡು ನಾನ್ ಎಲ್ಲಾದ್ರು ಹೋಕೇನಿ ಅಂತ ಜೋರಾಗಿ ಅಳ್ತ ಇದ್ಲು. ಮತ್ತೆ ಎಲ್ಲವನ್ನು ಸರಿ ಮಾಡಿ?? ಊರ ಹಿರಿಯರೂ ಅವರವರ ಮನೆಗೆ ಹೊರಟರೇ,ಅಂತಾ ಅವ್ವನ ಎದೆಯಲ್ಲಿ ಕೂಡ ನಡುಕ..! ಇವತ್ತು ಮತ್ತೆ ಕುಡಿದು ಬಂದು ಮನೆ ಹೊರಗೆ ನಿಲ್ಲಿಸುತಾನೆಂದು. ತಾನಾದರೂ ಎಷ್ಟು ದಿನ ಹೀಗೆ ನಿದ್ದೆಗೆಟ್ಟು ಇಂತ ನರಕಯಾತನೆಯನ್ನು ಸಹಿಸಿಕೊಂಡಾಳು?..

“ಅಕ್ಕಾ ಅಕ್ಕಾ ನಿನ್ ಗಂಡ ಕುಡಿದು ಊರು ಹೊರಗಿನ ತೋಟದಲ್ಲ್ ಬಿದ್ದಾನೆ ಮೈಮೇಲೆ ಜ್ನಾನ ಇಲ್ಲ ಮಳೆ ಬ್ಯಾರೆ ರವಷ್ಟ್ ಜಾಸ್ತೀನೆ ಬರ್ತ ಐತೆ” ಅಂತ ಊರ ದನಗಳನ್ನ ಕಾಯುವ ಹುಡುಗಾ ಹೇಳಿದ್ದೆ ತಡ.” ಈ ಮನೆಹಾಳ್ರು ನನ್ ಮನೆ ನೆ ತೆಗುದ್ರಪ್ಪಾ ಇವರ್ ಮನೆ ಹಾಳಾಗ ಈ ಸಾರಾಯಿ ಕುಡ್ಸೋರ ಮನೆ ಕಾಯ್ವಾಗ” ಅಂತ ಅಷ್ಟು ಮಳೆನಲ್ಲಿ ಕಂಬಳಿ ಹಾಕೋಂಡು, ಅಂತ ಮಳೆನಲ್ಲಿ ಓಡಿಹೋಗಿದ್ದಳು ತಾಯಿ. ಅಲ್ಲಿ ಕುಡಿದು ಬಿದ್ದಿದ್ದ ತನ್ನ ಗಂಡಾನನ್ನ ನಿಧಾನವಾಗಿ ಎಬ್ಬಿಸಿ ತಂದು ಮನೆನಲ್ಲಿ ಮಲಗಿಸಿ ಮತ್ತೆ ಬಯ್ಯೋಕೆ ಶುರು ಮಾಡ್ತ ಇದ್ಲು. ಅಷ್ಟರಲ್ಲಿ ನಮ್ಮೂರಿನ ಸಾರಾಯಿ ಮಾರೋ ಮನೆಯ ಯಜಮಾನ?? … “ಅಯ್ ಅದ್ಯಾಕಂಗೆ ಬೈಯ್ತಿಯಾ ನಿನ್ ಗಂಡನ್ ಮನೆನಲ್ಲಿ ಕಟ್ಟಾಕೋ ಕುಡಿಯಾಕೆ ಕಳ್ಸ್ ಬ್ಯಾಡ”ಅಂತ ಹೇಳಿದ ಕೂಡಲೇ ” ಹೂನೋ ಬೇವರ್ಸಿ ನನ್ ಗಂಡನ್ ಕಟ್ಟಾಕೊತೀನಿ ಮನೆಹಾಳ ಮೊದಲು ನಿನ್ನ ಹೆಂಡ್ರು ಮದ್ಯ ರಾತ್ರಿ ನಮ್ ಮನೆ ಪಕ್ಕದ್ ಮನೆ ಹನುಮಂತನ ಮನಿ ಒಳಕ್ಕೆ ಪುಸುಕ್ಕ್ ಅಂತ ಯಾಕ್ ಹೊಕ್ಕೊತ್ತಳೆ ಅಲ್ಲವ ಅವಳನ್ನ ಮೊದಲು ಕಟ್ಟಾಕೊಳೋ ರಂಡೆಗಂಡ ಮನೆಹಾಳ ನನಗೆ ಹೆಳಾಕ ಬರ್ತಿಯ ,ನಮ್ಮೂರಿನ ಹೆಂಡ್ರು ಮಕ್ಕಳ ಶಾಪ ತಟ್ಟದೇ ಬಿಡಾದಿಲ್ಲ ನೋಡು ” ಅಂತ ಅವನ ಮೇಲೆ ಜಗಳಕ್ಕೆ ಹೊರಟಿದ್ದಳು ಒಂದು ಸಲ..

ಮನೆಯಲ್ಲಿ ಗಂಡ ಎಷ್ಟೇ ಹೊಡೆದರೂ ಪಕ್ಕದ ಮನೆಯವರಿಗೆ ಗೊತ್ತಾಗದೇ ಇರುತ್ತಿದ್ದಳು..ಯಾಕೆ ಕೈಮೇಲೆಲ್ಲ ಸುಟ್ಟ ಗಾಯ ಅಂತ ಕೆಲಸಕ್ಕೆ ಹೋದಾಗ ಕೆಲ್ಸದ ಹೆಂಗಸರೂ ಕೇಳಿದರೇ” ಅಯ್ಯೋ ಅದಾ ಬೆಳಗ್ಗೆ ನಲ್ಡಿ ಮನೆ[ಸ್ನಾನದ ಮನೆ] ಗೆ ಬೆಂಕಿ ಹಾಕೋವಾಗ ಹೀಗ್ ಆಯ್ತಪ್ಪ ಅಂತ ದು:ಖ ಮುಚ್ಚಿಡುತ್ತಿದ್ದಳು.ಅದೆಷ್ಟು ದಿನ ಉಪವಾಸ ಮಾಡಿದ್ದಳೋ ದೇವರಿಗೇ ಗೊತ್ತು. ಮನೆಯಲ್ಲಿದ್ದ ಅಕ್ಕಿಯೆಲ್ಲ ಕಾಲಿಯಾಗಿ ತಿನ್ನೋಕೆ ಏನು ಇಲ್ಲವಾದಗ ಅಲ್ಲಿ ಇಲ್ಲಿ ಶೇಕರಿಸಿಟ್ಟ ನುಚ್ಚನ್ನ ಗಂಜಿ ಮಾಡಿ ಮಕ್ಕಳಿಗೆ ತಿನ್ನಿಸಿ ತಾನು ಮಾತ್ರ “ಹೊಟ್ಟೇ ಯಾಕೊ ನೋವು ಕಣ್ರೋ ನನಗೆ,ಮದ್ಯಾನ ಜಾಸ್ತಿ ಊಟ ಮಾಡಿದೆ ಅಂತ ಕಾಣುತ್ತೆ ಗೌಡರ ತೋಟದ ಕೆಲ್ಸಕ್ಕೆ ಹೋದಾಗ” ಅಂತ ಹೇಳಿ ತಾನು ಮಾತ್ರ ಹಾಗೆಯೇ ಮಲಗುತ್ತಿದ್ದಳು.ಇಂತ “ಮಹಾನ್ ಸುಳ್ಳುಗಳನ್ನೇನು ” ಕಮ್ಮಿ ಹೇಳುತ್ತಿರಲಿಲ್ಲ.

ಇದ್ದ ಹರಕಲು ಮುರುಕಲು ಮನೆಯ ೪ ಗೋಡೆಗಳಲ್ಲಿ ಆ ಹೊತ್ತಿಗಾಗಲೇ ೨ ಗೋಡೆ ಅರ್ದ ಕುಸಿದು ಕುಳಿತಿದ್ದವು. ಕಂಡ ಕಂಡವರನ್ನೆಲ್ಲ ಕಾಡಿ ಬೇಡಿ ಗ್ರಾಮಪಂಚಾಯತಿ ಕಛೇರಿಗೆ ಅಲೆದು ಅಲೆದೂ ಒಂದು ಆಶ್ರಯಾ ಮನೆಯನ್ನ ಮಂಜೂರು ಮಾಡಿಸಿಕೊಂಡೇ ಬಿಟ್ಟಳು. ಹೇಗಿದ್ರು ಸರ್ಕಾರಿ ಮನೆ ಅಲ್ಲವ ಅರ್ದಂಬರ್ದ ಆಗಿದ್ದ ಮನೆಗೆ ತನ್ನ ಗಂಡನನ್ನ ಕಾಡೀಬೇಡಿ ಅದಕ್ಕೆ ಚಂದನೆಯ ಗೋಡೆ ಕಟ್ಟಿಕೊಂಡು, ನೋಡನೋಡುತ್ತಿದ್ದಂತೆಯೆ ಒಂದು ಚಂದನೆಯ ಮನೆ ಊರ ಹೊರಗೆ ನಿಂತಿತ್ತು. ಒಂದೆ ಸಮಾಧಾನ ಅವಳಿಗೆ ಇನ್ನು ಮುಂದೆ ನನ್ನ ಮಕ್ಕಳು ಮಳೆಯಲ್ಲಿ ತೋಯುವ ಹಾಗಿಲ್ಲ.ರಾತ್ರಿಪೂರ ನಿದ್ದೆಗೆಟ್ಟು ಮಳೆಬಂದಾಗ ಒಳನುಗ್ಗುತ್ತಿದ್ದ ನೀರನ್ನ ಆಚಗೆ ಹಾಕೊ ಕರ್ಮವಿಲ್ಲ. ಹೀಗೆ ಬದುದು ಸಾಗುತ್ತಿರುವಾಗಲೇ ಒಂದು ದಿನ ಕುಡಿದು ಬಂದ ಗಂಡ ಊಟ ಬೇಕೆಂದಾಗ ” ಸ್ವಲ್ಪ ಅಕ್ಕಿ ಇತ್ತು ಮಕ್ಕಳಿಗೆ ಗಂಜಿ ಮಾಡಿ ಹಾಕಿ ಮಲಗಿಸಿಬಿಟ್ಟೆ ರೀ ನಾ ಕೂಡ ಏನು ತಿಂದಿಲ್ಲ” ಅಂದಿದ್ದು ಒಂದೆ ಮಾತು ಅದ್ಯಾವ ಮಹತಾಯಿ ಹೆತ್ತಿದ್ದಳೋ ಅವನನ್ನ ೩ ಮಕ್ಕಳಲ್ಲಿ ಅವನಿಷ್ಟ ಪಡುತ್ತಿದ್ದ ಒಂದು ಹೆಣ್ಣು ಮಗಳನ್ನ ಹೊರಗೆ ಕರೆದು ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಮನೆಗೆ ಬೆಂಕಿ ಕೊಟ್ಟೆ ಬಿಟ್ಟ..!!!! ಬೇಸಿಗೆ ಕಾಲ ಹುಲ್ಲಿನ ಮನೆಯದ್ದರಿಂದ ಬಹುಬೇಗ ಇಡೀ ಮನೆ ಬೆಂಕಿಯುಂಡೆಯಂತಾದರೇ ಮನೆಯಿಂದ ಯಾರು ಹೊರಗೆ ಬರಬಾರದೆಂದು ಮನೆ ಮುಂದೆ ಅರ್ದ ಕಟ್ಟಿದ್ದ ಗೋಡೆಯ ಹತ್ತಿರ ಕೊಡಲಿಯನ್ನು ಹಿಡಿದುಕೊಂಡು ನಿಂತಿದ್ದ ಮಹಾನುಭಾವ.ಮನೆ ಹಿಂದೆ ಕಟ್ಟಿದ ಅರ್ದ ಗೋಡೆಯನ್ನ ಹಾರಿ ತಪ್ಪಿಸಿಕೊಳ್ಳಲಡ್ಡಿಯೇನು ಇರಲಿಲ್ಲ. ಆದರೆ ತಾಯಿ ಮಕ್ಕಳ ಪುಸ್ತಕಗಳನ್ನ ಬಟ್ಟೆಬರೆಗಳನ್ನ ತೆಗಿಯೋಕೆ ಹೋಗಿ ಕೈಸುಟ್ಟುಕೊಂಡಿದ್ದಳು. ಮಗನೂ ಚಿಕ್ಕವನೇನು ಆಗಿರಲಿಲ್ಲ ಅಮ್ಮ ಮತ್ತು ತಂಗಿಯನ್ನ ಬಲವಂತವಾಗಿ ಮನೆ ಹಿಂದಿನ ಗೋಡೆಯಿಂದ ಆಚೆಗೆ ಕಳಿಸಿ ತಾನು ಗೋಡೆ ಹಾರಿ ಪ್ರಾಣ ಉಳಿಸಿಕೊಂಡಿದ್ದ. ಬೆಂಕಿ ಬಿದ್ದ ಮನೆಯಲ್ಲಿದ್ದ ಅಷ್ಟೂ ಬಟ್ಟೆಬರೆಗಳು ದಿನನಿತ್ಯ ಉಪಯೋಗಿಸುವ ಸಾಮನುಗಳು ನೋಡನೋಡುತ್ತಿದ್ದಂತೆಯ ಬೆಂಕಿಯಲ್ಲಿ ಸುಟ್ಟು ಕರುಕಲು. ತಾಯಿ ಎದೆಬಡಿದುಕೊಂಡು ಅಳುತಿದ್ದರೆ ಬೆಂಕಿ ಹಾಕಿದ ಮಹಾನುಭಾವ ಮಾತ್ರ ತನಗೇನು ಆಗೇ ಇಲ್ಲವೆಂದು ಊರ ಜನರ ಬೈಗುಳಗಳಿಗೆ ತಲೆತಗ್ಗಿಸಿ ನಿಂತಿದ್ದ. ತನ್ನದೆಲ್ಲವನ್ನು ಕಳೆದುಕೊಂಡು ತಾಯಿ ರೋಧಿಸುತ್ತಿದ್ದುದ್ದನ್ನ ಕಂಡ ಮಗ ಸಿಟ್ಟಿನಿಂದ ಅಲ್ಲೆ ಇದೆ ಮರದ ತುಂಡನ್ನ ತೆಗೆದುಕೊಂಡು ಅಟ್ಟಾಡಿಸಿಕೊಂಡು ಬಡಿಯುತ್ತಿದ್ದರೆ ಯಾರೆಂದರೇ ಯಾರು ಬಿಡಿಸಲು ಬಂದಿರಲಿಲ್ಲ. ಹಾಗೆ ಸಿಟ್ಟಿನಿಂದ ಕಾಲಿನಲ್ಲಿ ತುಳಿಯುತ್ತಿದ್ದ ಮಗನನ್ನ ದೂರತಳ್ಳಿದವಳೇ ” ಅಪ್ಪನಿಗೇ ಹೊಡೆಯುವಷ್ಟು ದೈರ್ಯ ಬಂತೇನೋ ನಿನಗೆ” ಅಂದು ಗಂಡನನ್ನ ಬಿಡಿಸಿಕೊಂಡಿದ್ದಳು.

ಅವತ್ತು ಅವನಿಗಾದ ಅವಮಾನದಿಂದ ಕುದ್ದು ಹೋಗಿದ್ದ.೩ ದಿನಕ್ಕೆ ತನ್ನ ಕುಡುಕ ಗೆಳೆಯರ ಸಹಕಾರದಿಂದ ಒಂದು ಚಿಕ್ಕ ಮನೆಯನ್ನ ಮಾಡಿಯೇ ಬಿಟ್ಟ. ಊರ ಮುಂದೇಯೇ ತನಗೆ ಮೈ ಕೈಯಲ್ಲಿ ರಕ್ತ ಬರುವಂತೆ ಹೊಡೆದ ಮಗನ ಮೇಲೆ ಅದ್ಯಾವ ಸಿಟ್ಟಿತ್ತೆಂದರೇ… ಸಿಕ್ಕರೆ ಅವನ ತಲೆ ಕಡಿಯುತ್ತೇನೆಂದು ಅಬ್ಬರದಿಂದ ಅಬ್ಬರಿಸುತ್ತಿದ್ದ.ದುಷ್ಟ ಅಪ್ಪನ ಹೆದರಿಕೆಯಿಂದ ಕಂಗಾಲಾದ ಮಗ ಮನೆ ಬಿಟ್ಟು ಊರಿಂದ ಹೊರ ಬಂದು ಬಿಟ್ಟ. ಮತ್ತೆ ಊರಿಗೆ ಹೋಗಿದ್ದು ೨ ವರ್ಷಗಳ ನಂತರ ಅವನ ತಂಗಿ ಪೋನ್ ಮಾಡಿ ” ಅಣ್ಣಯ್ಯಾ ಅಪ್ಪನಿಗೆ ಲಕ್ವಾ ಆಗೈತಿ ಕಣೋ” ಅಂತ ಕಣ್ಣೀರಿಟ್ಟಾಗಲೆ.

೩ ವರ್ಷಗಳ ನಂತರ ಊರಿಗೆ ಹೋದವನಿಗೆ ಅಲ್ಲಿದ್ದದ್ದನ್ನ ಕಂಡು ಮಾತೆ ಹೊರಡುತಿರಲಿಲ್ಲ. ಅಪ್ಪ ಅಸಹಾಯಕತೆಯಿಂದ ಕುಳಿತಿದ್ದ ಕೈ ಕಾಲುಗಳೆಲ್ಲ ನಡುಗುತ್ತಿದ್ದವು. ಒಂದೆ ಸಮನೇ ಕಣ್ಣೀರು ಹಾಕುತ್ತಿದ್ದ .ಗೊತ್ತಾಗಿರಬೇಕು ಅವನಿಗೆ ಯಾರು ಮತ್ತೆ ಯಾವುದು ಶಾಶ್ವತವಲ್ಲವೆಂದು. ಅವತ್ತು ಒಂದೆ ಒಂದು ಮಾತು ಆಡಲಿಲ್ಲ ಸುಮ್ಮನೆ ಕಣ್ಣೀರು ಹಾಕುತ್ತಿದ್ದ. ತಾಯಿ ಒಂದು ಮೂಲೆಯಲ್ಲಿ ಅಳುತ್ತ ಕೂತಿದ್ದಳು. ಅವತ್ತಿಂದ ಸ್ವಲ್ಪ ಬದಲಾದನಾದರೂ ಪೂರ್ತಿ ಬದಲಾಗಲಿಲ್ಲ ಅದು ಅವನ ಜಾಯಮಾನ. ಕುಡಿದು ಕುಡಿದು ಅರೋಗ್ಯ ಪೂರ್ತಿ ಹಾಳು ಮಾಡಿಕೊಂಡ. ಊರಲ್ಲಿ ಸ್ವಲ್ಪ ದಿನ ಇದ್ದು ಹಿಂದಿರುಗಿದ ಮಗನಿಗೆ ಮತ್ತೆ ಸುದ್ದಿ ಬಂತು. ಅಪ್ಪನಿಗೆ ಮಾತು ಹೊರಟು ಹೋಗಿದೆ ಸರಿಯಾಗಿ ನಡೆಯಲಿಕ್ಕು ಬರುತ್ತಿಲ್ಲ. ಮತ್ತೆ ಊರಿಗೆ ಹೋದಾಗ ನೋಡಿದರೇ ಅಪ್ಪನ ಸ್ಥಿತಿ ಕಂಡು ಕಣ್ಣೀರಾಗಿದ್ದ. ಅವತ್ತಿಂದ ಇವತ್ತಿನವರೆಗೂ ತಾಯಿ ಅವನ ಸೇವೆ ಮಾಡುತ್ತಲೇ ಇದ್ದಾಳೆ ಕೈ ಹಿಡಿದು ಕೂರಿಸುವುದರಿಂದ ಹಿಡಿದು ಅವನ ಎಲ್ಲ ಕೆಲಸಗಳನ್ನು ತಾಯಿ ತನ್ನ ಕೆಲಸಗಳೆಂದೇ ಮಾಡುತ್ತಿದ್ದಾಳೆ.ಸ್ವಲ್ಪವೂ ಅಸಹ್ಯ ಪಡದೇ ಸ್ವಲ್ಪವೂ ಬೇಸರವಿಲ್ಲದೇ. ಸರಿಯಾಗಿ ನಡೆಯಲು ಬಾರದ ಗಂಡ ಕೈ ಸನ್ನೆ ಮಾಡಿ ನನಗೆ ಸರಾಯಿ ಬೇಕೆಂದು ಕೇಳಿದಾಗ ಪಕ್ಕದೂರಿನಿಂದ ಯಾರದೋ ಕೈನಲ್ಲಿ ೫ ರೂಪಾಯಿ ಕೊಟ್ಟು ಸಾರಾಯಿ ತರಿಸಿ ತಾನೆ ಕುಡಿಸಿ ಇವತ್ತಿಗೂ ಗಂಡನ ಸೇವಯೆನ್ನ ಪ್ರೀತಿಯಿಂದ ಮಾಡುತ್ತಿದ್ದಾಳೆ. ಅವಳಿಗೆ ತನ್ನ ಗಂಡ ಕರುಣಿಸಿದ ಹಿಂಸೆ ಕಣ್ಣೀರು ಅವಮಾನ ಇದ್ಯಾವುದರ ಚಿಂತೆ ಇಲ್ಲ. ಈಗ ತನ್ನ ಗಂಡನಿಗೆ ಹೆಂಡತಿ ಮತ್ತೆ ತಾಯಿ ಎರೆಡು ಅವಳೆ…..

ಇದಕ್ಕೆ ಯಾವ ತರಹದ ಪ್ರೀತಿ ಅಂತೀರಿ? ಯಾವ ತರಹದ ಸಹನೆ ಅಂತೀರಿ? ಭೂಮಿ ತೂಕದವಳೂ ಭೂಮಿ ತೂಕದವರೂ ಅಂದರೆ ಇಂತ ತಾಯಂದಿರೇ ಅಲ್ಲವೇ?…

Apr
20

ಭಾನುವಾರ..! ವಾರಪುರ್ತಿ ಕಂಪ್ಯೂಟರ್ ಮುಂದೆ ಕುಳಿತು ಕುಟ್ಟಿದ್ದರ ಫ಼ಲವೇನೊ ಅನ್ನುವಂತೆ ಕುಂಭಕರ್ಣ ನಿದ್ರೆ.ಅವತ್ತಾದ್ರು ಪೂರ್ತಿ ಮಲಗಿ ಸೇಡುತೀರಿಸಿಕೊಳ್ಳಬೇಕೆಂದು ಎಲ್ಲೋ ಅನಾಥವಾಗಿ ಬಿದ್ದಿದ್ದ ಬೆಡ್ ಶೀಟ್ ಎಳೆದುಕೊಂಡು ಮತ್ತೆ ನಿದ್ರಾದೇವಿಗೆ ಶರಣಾಗಬೇಕು, ಅನ್ನುವಷ್ಟರಲ್ಲಿಯೇ “ಮಹಾಜನಗಳೇ ಮತಭಾಂಧವರೇ” ಅನ್ನುತ್ತ ಮೈಕಾಸೂರ ಅರಚಿಕ್ಕೊಳ್ಳತೊಡಗಿದ. ಅವನ ಆರ್ಭಟಕ್ಕೆ ನಿದ್ರಾದೇವಿ ಕೋಪಿಸಿಕೊಂಡು ನನ್ನಿಂದ ದೂರವಾದಳು.

ಮನಸ್ಸಿನಲ್ಲಿಯೇ ಮೈಕಾಸುರನಿಗೆ ಶಪಿಸುತ್ತ ಕೊಣೆಯ ಕಿಟಕಿ ತೆಗೆದುನೋಡಿದರೆ ಪಕ್ಕದಲ್ಲಿಯೆ ಯಾವುದೋ ಸಮಾರಂಭ ನಡೆಯುವ ಎಲ್ಲಾ ಸೂಚನೆಗಳಿದ್ದವು.ಅಲ್ಲಿ ಹಾಕಿರುವ ಕಟೌಟುಗಳನ್ನ ನೋಡಿದರೆ ಸಾಕಿತ್ತು ಯಾವುದೋ ರಾಜಕೀಯ ಸಮಾರಂಭ ಸದ್ಯದಲ್ಲೇ ಆರಂಬವಾಗಲಿದೆ ಅಂತ. ಚಿಕ್ಕವರಾಗಿದ್ದಾಗಿನ ನೆನಪು ಮತ್ತೆ ಮರುಕಳಿಸಿದಂತಾಯಿತು. ಬಣ್ಣ ಬಣ್ಣದ ಕರಪತ್ರಗಳನ್ನ ರಾಜಕೀಯ ಪಕ್ಷಗಳು ತರವಾರಿ ವಾಹನಗಳ ಮೂಲಕ ನಮಗೆಲ್ಲ ಹಂಚಿತ್ತಿದ್ದಿದ್ದು.ನಾವೆಲ್ಲ ಆ ವಾಹನಗಳ ಹಿಂದೆ ಓಡುತ್ತ ಕರಪತ್ರಗಳನ್ನ ತೆಗೆದುಕೊಳ್ಳುತ್ತಿದ್ದಿದ್ದು. ಇದೆಲ್ಲ ನೆನಪಾಗಿ ಸಮಾರಂಭ ಹೇಗಿರುತ್ತೆ ಅಂತ ನೋಡೆಬಿಡುವಾ ಅಂತ ಮನಸ್ಸಿನ ಮಹರಾಯ ಹೇಳಿದ ಹಾಗಾಯ್ತು.ಸರಿ ಮುಖ ತೊಳೆದ ಹಾಗೆ ಮಾಡಿ ಸಮಾರಂಭ ನಡೆಯುವ ಜಾಗದ ಕಡೆಗೆ ಹೆಜ್ಜೆ ಹಾಕಿದೆ.

ಸುಮಾರು ಐದುನೂರು ಕುರ್ಚಿಗಳನ್ನ ಹಾಕಿದ್ದರೂ ಅಂತ ಕಾಣುತ್ತೆ. ಸುಮಾರು ಇಪ್ಪತ್ತರಿಂದ ಮೂವತ್ತು ಕುರ್ಚಿಗಳ ಮೇಲೆ ಕೊಳಗೇರಿಯ ಮಕ್ಕಳು ಆಸೀನರಾಗಿದ್ದರು.ಬಾಕಿ ಉಳಿದ ಕುರ್ಚಿಗಳ ಮುಖದಲ್ಲಿ ಅನಾಥಭಾವ ಎದ್ದುಕಾಣುತ್ತಿತ್ತು. ಅಲ್ಲಿದ್ದ ಮಕ್ಕಳು ಕುರ್ಚಿಯ ಮೇಲೆ ಆಟವಾಡುತ್ತ ಪಕ್ಕದಲ್ಲಿಯೆ ಆಳೆತ್ತರ ನಿಲ್ಲಿಸಲಾಗಿದ್ದ ಚಿತ್ರನಟಿ ಉಮಾಶ್ರಿಯ ಕಟೌಟನ್ನ ನೋಡಿ.. “ಒ ಒ ಒ ಪುಟ್ಟಮಲ್ಲಿ” ಅನ್ನುತ್ತ ಕಟೌಟಿನ ಸುತ್ತ ಆಟವಾಡುತ್ತಿದ್ದರು. ನಿರಿಕ್ಷೆಯಷ್ಟು ಜನ ಸೇರಿಸಲಾಗದ ಸಮಾರಂಭದ ಮುಖಂಡರುಗಳ ಮುಖದಲ್ಲಿ ಯಾಕೊ ಸೂತಕದ ಕಳೆ.ಕೊನೆಗೂ ಬೆಂಗಳೂರಿನ ಅಷ್ಟೂ ಕೊಳಗೇರಿ ಮಕ್ಕಳು ಹೆಂಗಸರನ್ನೆಲ್ಲ ತುಂಬಿಕೊಂಡ ಮೂರು ಬಸ್ಸುಗಳು ಸಮಾರಂಭದ ಮುಂದೆ ಪ್ರತ್ಯಕ್ಷವಾದವು. ಸಂಘಟಕರ ಮುಖದಲ್ಲಿ ಮಂದಹಾಸ. ತಕ್ಷಣವೇ ಅಲ್ಲಿದ್ದ, ಮರಿ ರಾಜಕಾರಣಿ ಯಾರಿಗೋ ಪೋನು ಹಚ್ಚಿ” ಸಾರ್ ಎಲ್ಲ ರೆಡಿ..ನೀವು ಬರಬಹುದು” ಅಂದ ಸರಿಯಾಗಿ ಹತ್ತು ನಿಮಿಷಕ್ಕೆ ಸಮಾರಂಭಕ್ಕೆ ಬರಬೇಕಾದ ಮಹಾನುಭಾವರೆಲ್ಲ ಬಂದು ತಮ್ಮ ತಮ್ಮ ಆಸನಗಳಲ್ಲಿ ವಿರಾಜಮಾನರಾದರು.

ಗಜ ಚಿತ್ರದ “ಸಿಂಗಾರಿ ಯಾರೆ ನೀ ಬುಲ್ ಬುಲ್’ ಅಂತ ಕೀರಲು ಧ್ವನಿಯ ಗಾಯಕ ಹುಚ್ಚಾಪಟ್ಟೆ ಹಾಡುತ್ತಿದ್ದರೆ ಅಲ್ಲಿಗೆ ಬಂದಿದ್ದ ಹೆಂಗಸರು ಮಕ್ಕಳ ಕಣ್ಣುಗಳೆಲ್ಲ ಪಕ್ಕದಲ್ಲಿ ಬೇಯುತ್ತಿದ್ದ ಬಿರಿಯಾನಿಯನ್ನ ಬೇಟೆಯಾಡುತ್ತಿದ್ದವು. ಸುಮ್ಮನೆ ಹೆಂಗಸರು ಮಕ್ಕಳ ಮದ್ಯೆ ನಿಂತುಕೊಂಡು ರಾಜಕಾರಣಿಗಳ ಭಂಡಬಾಷಣವನ್ನ ಕೇಳುತ್ತಿದ್ದೆ. ಅಷ್ಟರಲ್ಲಿ ಪಕ್ಕದಲ್ಲಿಯೇ ಕುಳಿತಿದ್ದ ಹೆಂಗಸು “ ನಿಮಗೆಷ್ಟು ಕೊಟ್ರು ಅಂತ ತಮಿಳಲ್ಲಿ ಕೇಳಿದರೆ..” “ಮುಪ್ಪತ್ತಂಜಿ ಕುಡುತ್ತಾರಮ್ಮ” ಅಂದಿದ್ದು ಮತ್ತೊಬ್ಬ ಹೆಂಗಸು. ಮತ್ತೇನನ್ನೊ ಮಾತನಾಡುತಿದ್ದರೂ ನನಗೆ ತಮಿಳು ಬಾರದೆ ಸುಮ್ಮನಿರಬೇಕಾಯಿತು. ಹಾಗೆಯೆ ಹಿರಿ ಮರಿ ಕುರಿ ರಾಜಕಾರಣಿಗಳ ಭಾಷಣವಂತೂ ಮಿತಿಮಿರಿತ್ತು. ಬೇರ ಪಕ್ಷಗಳ ಮುಖಂಡರುಗಳ (ಇಲ್ಲದ) ಮಾನವನ್ನ ಹರಾಜು ಹಾಕುತ್ತ “ ಇಷ್ಟೋಂದು ಜನಸಾಗರವನ್ನ ನೋಡಿ ತುಂಬ ಕುಷಿಯಾಗ್ತ ಇದೆ. ನಮ್ಮ ಪಕ್ಷಕ್ಕೆ ಈ ಸಲ ಬಹುಮತ ಗ್ಯಾರಂಟಿ” ಹೀಗೆ ಭಾಷಣ ಮುಂದುವರಿತಾನೆ ಇತ್ತು. ಬೇರೆ ಬೇರೆ ಪಕ್ಷಗಳಿಂದ ಪಕ್ಷಾಂತರ ಮಾಡಿದ ಪುಡಾರಿಗಳಿಗೆ ಒಂದೊಂದು ಹಾರವನ್ನೂ ಹಾಕುತ್ತಿದ್ದರು. ಹಾರವನ್ನು ಹಾಕಿಸಿಕೊಂಡ ಪುಡಾರಿಗಳು ಕ್ಯಾಮರಾಗೆ ಪೋಸು ಕೊಟ್ಟು ಇಷ್ಟಗಲ ನಗುತ್ತಿರುವಾಗ ಇದರ ಮದ್ಯದಲ್ಲಿಯೆ ಬಿರಿಯಾನಿ ರೆಡಿಯಾಗಿ ಜನರೆಲ್ಲ ಹೋ……ಅನ್ನುತ್ತ ಬಿರಿಯಾನಿ ಸ್ಥಳದತ್ತ ನುಗ್ಗಿದರು. ಹಾಕಿದ್ದ ೫೦೦ ಕುರ್ಚಿಗಳು ಅನಾಥ ಮತ್ತೆ ಖಾಲಿ ಖಾಲಿ. ಬಿರಿಯಾನಿ ಮಂಟಪವೆಲ್ಲ ನೂಕುನುಗ್ಗಲಿನಿಂದ ಜೋಲಿ ಜೋಲಿ. ಸಮಾರಂಭದಲ್ಲಿದ್ದಂತಹ ಮುಖಂಡರ ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತ ಇಲ್ಲವ ಅನ್ನುವ ಗೊಂದಲ.

ರಾತ್ರಿ ಯಾಕೊ ಹೊಟ್ಟೆನೋವು ಅಂತ ಊಟಮಾಡದೆ ಮಲಗಿದ್ದರ ಪ್ರಭಾವವೇನೊ ಹೊಟ್ಟೆಚುರುಗುಡುತ್ತಿತ್ತು. ಹೇಗಿದ್ರು ಅಣ್ಣಾವ್ರ ಸಿನಿಮಾಗಳ ಬಿಡುಗಡೆಯ ದಿನ ಟಿಕೇಟು ಕೌಂಟರಿನ ಮುಂದೆ ಟಿಕೇಟು ಪಡೆಯಲು ಉಪಯೊಗಿಸುತ್ತಿದ್ದ ಎಲ್ಲ ತರಾವರಿ ವಿದ್ಯೆಗಳನ್ನ ಉಪಯೋಗಿಸಿ ಅಲ್ಲಿದ್ದ ಕೊಳಗೇರಿ ಹೆಂಗಸು ಮಕ್ಕಳ ಮೇಲೆಲ್ಲ ಯುದ್ಧಸಾರಿದವನಂತೆ ಸವಾರಿ ಮಾಡುತ್ತ ಹೊಟ್ಟೆಬಿರಿಯೆ ಬಿರಿಯಾನಿ ತಿಂದು ರೂಮಿನ ಕಡೆ ಹೆಜ್ಜೆ ಹಾಕಿದೆ. ಹೆಜ್ಜೆಯೇನೋ ಹಾಕುತ್ತಿದ್ದೆ, ಆದರೆ ನನ್ನ ಕಾಲುಗಳಲ್ಲಿ ಚಪ್ಪಲಿಗಳೇ ಇರಲಿಲ್ಲ.

Apr
17

ಅವಳು

ಕನಸುಗಳಿಗೆ
ಕಾರಣಳಾದವಳು
ಕನಸೇ ಆಗಿ ಹೋದವಳು.
——————————-
ಜಾಣತನ

ನಿನ್ನ ತೋಳುಗಳ
ಬಲೆಗೆ ಬೀಳದೆ
ನನ್ನ ಪಿಯೂಸಿ
ಪಾಸುಮಾಡಿಕೊಂಡಿದ್ದು.
——————————-

ಮೂರ್ಖತನ

ನನ್ನ ಕತ್ತಲೆಗೆ
ಬೆಳಕ ನೀಡದ
ನಿನ್ನೆರೆಡು ಕಣ್ಣುಗಳನ್ನ
ಬೆಳಗುವ ದೀಪಗಳಿಗೆ
ಹೋಲಿಸಿ ಪದ್ಯ ಬರೆದಿದ್ದು.
——————————-
ಭಾವನೆಗಳು

ಹೃದಯವೆಂಬ
ತೋಟದಲ್ಲಿನ
ಸುಂದರ ಹೂವುಗಳು
——————————-
ನೀನೆಂದರೆ

ನನ್ನರ್ದ
ಕನಸುಗಳಿಗೆ
ಕಾರಣ..
ಇನ್ನರ್ದ
ನೋವುಗಳಿಗೆ
ಪ್ರೇರಣ.
——————————-

ನೆನಪು

ನನ್ನ ಸಕಲ
ನೊವು ನಿರಾಸೆಗಳಿಗೆ
ನಾನು ಕಂಡುಕೊಂಡ
ಔಷಧ.
——————————-

ಹಾರೈಕೆ

ಹೃದಯಗಳೇ
ನೀವು ಕಳೆದುಕೊಂಡ
ಒಲವೆಲ್ಲ
ಇಂದಲ್ಲ ನಾಳೆ
ಉಲ್ಕೆಗಳ ರೂಪದಲ್ಲಿ
ಸುರಿದು ಬರಲಿ.
——————————-
ತೃಪ್ತಿ

ನಲಿವೇ ಆಗಬೇಕೆಂದಿಲ್ಲ
ನಿನ್ನೊಲವಿನ
ನೋವಾದರೂ ಸಾಕು.
——————————-

ಮಾಯಗಾತಿ.

ಬೆಂಬಿಡದೆ ಕಾಡುತ್ತೇವೆಂದ
ಕಹಿ ಕನಸುಗಳಿಗೆ
ನಿನ್ನ ಒಲವ ಕುರಿತು ಹೇಳಿದೆ
ಪಾಪದ ಕನಸುಗಳು ಕೂಡ
ಕನವರಿಸುತ್ತಿವೆಯಂತೆ ನಿನ್ನ.
——————————-

ಸಾಮ್ಯತೆ.

ನೀನು ನನ್ನಿಂದ
ದೂರಾಗುತ್ತಿರುವುದಕ್ಕೂ
ನಾನು ಸಾವಿಗೆ
ಹತ್ತಿರವಾಗುತ್ತಿರುವುದಕ್ಕು
ಅಂತಹ ವ್ಯತ್ಯಾಸವೇನಿಲ್ಲ ಬಿಡು
——————————-

ಸಾಗರ.

ನಿನ್ನ ಒಲವು
ಮತ್ತು ಅದರ
ವಿಶಾಲತೆಯ ಮುಂದೆ
ಸೋತು ಸುಣ್ಣವಾಗಿದ್ದು.
——————————-

ಹೃದಯ.

ನಿನ್ನನ್ನ ಕಣ್ಣುಗಳಲ್ಲಿ
ತುಂಬಿಕೊಂಡ ದಿನ
ನಲಿದಾಡಿದ್ದು
ದೂರಾಗುತ್ತಲೇ ಅತ್ತು
ಗೋಳಾಡಿದ್ದು.
——————————-

ನಿಜ.

ಗಟ್ಟಿಯಾಗಿ ನಿನ್ನ
ಕೈ ಹಿಡಿದಿದ್ದು
ಆಸೆಯಿಂದಲ್ಲ..
ನನ್ನ ಬಿಟು ಹೋಗುತ್ತೇನೆಂದ
ನಿನ್ನ ಮೇಲಿನ ಬಯದಿಂದ.
——————————-
ಸುಳ್ಳು.

ನನ್ನ ಕನಸಿಗೆ ಪ್ರತಿ ದಿನ
ನೀನು ಬರುವುದೇ
ಇಲ್ಲವೆಂದು ಎದೆತಟ್ಟಿಕೊಂಡು
ನಾನು ಹೇಳಿದ್ದು.
——————————-

ದುರಂತ.

ನಾನು ನಿನಗೆ
ನೆನಪಾಗದಿರುವುದು
ನೀನು ನನಗೆ ನೆನಪೇ ಆಗಿರುವುದು.
——————————-

ಸುಳ್ಳು.

ನಿನ್ನ ಕನಸಿಗೆ ನಾನು
ನನ್ನ ಕನಸಿಗೆ ನೀನು
ಬಂದೇ ಇಲ್ಲವೆಂದು
ಎದೆತಟ್ಟಿಕೊಂಡು ಹೇಳಿದ್ದು.
——————————-

ಗುಲಾಬಿ.

ನನಗಿಂತಲೂ
ಮೊದಲೇ
ನನ್ನವಳ ಬಂಗಾರದ
ಬೆರಳ ಸ್ಪರ್ಶಿಸಿದ
ನನ್ನ ಪ್ರೀತಿಯ ಶತೃ.
——————————-

ಶಾಪ

ದೇವರೇ ಅವನಿಗೋಸ್ಕರ
ಕೂಡಿಟ್ಟ ಅಷ್ಟು
ಕನಸುಗಳಲ್ಲಿ
ಒಂದಾದರು ಸುಳ್ಳಾದರೆ
ನಿನಗೆ ಮರಣ ಬರಲಿ.
——————————-

ಬಾ

ಎದೆಯ ದೀಪ
ಉರಿದು ದಣಿದು
ಆರುವ ಮುನ್ನ.
——————————-
ನಾನು

ನಿನ್ನ ನೆನಪೆಂಬ ನೋವುಗಳ
ಗೋಡೆಗಳಲ್ಲಿ ಪ್ರೀತಿಯ
ಚಿತ್ರ ಬಿಡಿಸುತ್ತ ನಿಂತ
ಒಬ್ಬ ವಿಧೂಷಕಿ ಅಷ್ಟೆ.
——————————-

ಬಯಕೆ

ಈ ಎದೆಯ
ಅಗೆದು ಬಗೆದು ಮೀಟಿ
ತೋಟ ಮಾಡಿ
ನನಗೊಂದು ಗುಲಾಭಿ
ಕೊಡ್ತೀಯಾ ಗೆಳೆಯ..
——————————-

ತುಂಟ

ಗೆಳತಿ ತನ್ನ ಹಣೆಗಿಟ್ಟ
ಅಷ್ಟೂ ಮುತ್ತುಗಳ
ಹೊರತಾಗಿಯೂ, ತನ್ನದೇ
ಕೆನ್ನಗಿಲ್ಲವಲ್ಲವೆಂದು ಜಗಳ ತೆಗೆದ
——————————-

——————————————————
ಇವೆಲ್ಲ ಕನ್ನಡದ ದಿನಪತ್ರಿಕೆ ವಿಜಯ-ಕರ್ನಾಟಕದಲ್ಲಿ ಪ್ರಕಟವಾದಂತವು… :)
——————————————————

Mar
10

null

ಸಂಜೆ ಮುಡಿದ ಮಲ್ಲಿಗೆ
ಮೆಲ್ಲಗೆ ಬಾಡಿದೆ,
ಹಣೆಯ ಕುಂಕುಮ
ಯಾರೋ ತೀಡಿದ ಹಾಗಿದೆ…

ಅಧರಾಮೃತದ ಬಟ್ಟಲು ಕಾಲಿ,
ನೋಡು ನಡೆಯುವಾಗಲು ಯಾಕಿಷ್ಟು ಜೋಲಿ….
ಕೆನ್ನೆ ಬೆಂಕಿಯ ಕೆನ್ನಾಲಿಗೆ!!
ನಿನ್ನ ಗಲ್ಲವೇನು ಬೆಲ್ಲದುಂಡೆಯ?
ಯಾಕಿಷ್ಟು ಗಾಯಾ…!

ಕೊರಳಬಳ್ಳಿಯಲ್ಯಾರು ಜೋಕಾಲಿ ಆಡಿದರು,
ಎದೆಯ ಹೊಲದೊಳಗ್ಯಾರು ಓಕುಳಿ ಹಚ್ಚಿದರು…
ಎದೆಯ ಇಳಿಜಾರಿನಲ್ಲಿ
ಸುಖದ ಹೂವೆನೆ,
ಮತ್ತೆ ಹಿತವಾದ ನೋವೇನೆ….

ಮುತ್ತಿನ ಮೂಗುತಿ ಎಲ್ಲಿ ಮರೆತೆಯೆ?
ಇಂತ ಬಂಗಾರದ ಮೈಯ್ಯಿಗೂ ಬಟ್ಟೆಯ ಕೊರತೆಯೆ…!!
ಸೆರಗಲ್ಲೇನು ಮಕ್ಕಳನ್ನಾಡಿಸುತ್ತಿದ್ದೆಯ?
ಕಣ್ಣುಗಳಲ್ಲಿ ಬೆಳದಿಂಗಳನ್ನೇ ಸುರಿದುಕೊಂಡಿದ್ದೀಯ….

ಬೆಳ್ಳಿ ಗೆಜ್ಜೆಗಳನ್ನೇನು ಗಿರವಿ ಇಟ್ಟೆಯ,
ಹಸಿರು ಬಳೆಗಳನ್ನ ಬೆಂಕಿಯಲ್ಲಿ ಸುಟ್ಟೆಯ…
ರೆಪ್ಪೆಗಳೇಕೆ ಕಾಡಿಗೆ ಬೇಡುತ್ತಿವೆ?
ನಿನ್ನ ತುಂಟ ಹೊಕ್ಕಳೇಕೆ ಎನೋ ಹೇಳುತ್ತಿದೆ…
ಅಕ್ಕಾ.. ನಿನ್ನ ಗುಟ್ಟುರಟ್ಟು ಮಾಡಿಬಿಟ್ಟೆ
ಮಜವೇನೆ? ಇಲ್ಲ ನನಗೆ ಸಜೆಯೇನೆ?..
ಅಕ್ಕಾ……ನಿಜವೇನೆ….

Feb
28

null

ಹೂಳಿಟ್ಟ ಅಗಾಧ
ಆಸೆಗಳನ್ನ ಮತ್ತೆ
ಹೊರತೆಗೆದು
ಚಿಗುರೊಡೆಯುವಂತೆ
ಮಾಡಬೇಕಿದೆ………..
ಗಾಯಗೊಂಡ
ಎದೆಯ ಸೀಳಿ ಸೀಳಿ
ಮರಣಹೊಂದಿದ
ಕೆಲವು ನೆನಪುಗಳಿಗೆ
ಮತ್ತೆ ಜೀವ ಕೊಡಬೇಕಿದೆ…….
ನಡೆಯಬೇಕಾದ
ದಾರಿಯಲ್ಲಿರುವ
ಕೆಲವು ಮುಳ್ಳುಗಳಿಗೆ
ಹೂವಿನ ಸ್ನೇಹವ
ಮಾಡಿಸಬೇಕಿದೆ………………
ಎಲ್ಲಾ ಕಳೆದುಕೊಂಡ
ಈ ತೋಳುಗಳಿಗೆ
ತಬ್ಬಿಕೊಳ್ಳುವ
ಪರಿಯ ಹೇಳಬೇಕಿದೆ…………..
ನೀನಿಲ್ಲದ ನಿನ್ನೆಗಳಿಗೆ
ನೀನಿರುವ ನಾಳೆಯ
ನದಿತೀರದ ಸಂಜೆಗಳ
ಕುರಿತುಹೇಳಲೇಬೇಕಿದೆ………..
ಆಗುಂಬೆಯಂತಾಗಿದ್ದ
ಕಣ್ಣುಗಳಿಗೆ ಸ್ವಲ್ಪ
ಬೆಳದಿಂಗಳನ್ನು ತುಂಬಬೇಕಿದೆ………..
ಮಾತುಗಳಿಲ್ಲದೆ ಮೌನವಾಗಿದ್ದ
ತುಟಿಗಳಿಗೀಗ ಮತ್ತೆ ಬೀಗ
ಹಾಕಿಕೊಳ್ಳುವ ಕಲೆಯ ಕಲಿಸಬೆಕಿದೆ……….

Dec
07

null

ಸಾದ್ಯವಾದಷ್ಟು ದೂರವೇ ಇರು
ಸಾದ್ಯವಾದರೆ ತೊಲಗು ನೀನು
ದಿಕ್ಕುಗಳೇ ಇರಬಾರದು ನಿನಗೆ
ದಾರಿಗಳೆಲ್ಲ ಚಕ್ರವ್ಯೂಹಗಳಾಗಬೇಕು
ಮತ್ತೆ ನನ್ನೊಳಗಿಳಿಯಲು ಹೊರಟೀಯ ಜೋಕೆ
ಈ ದಿನದಿಂದ ದೈವ ನನ್ನ ಜೊತೆಗಿದೆ ದ್ರೋಹಿ
ಇಷ್ಟು ದಿನ ನೀನು ನನ್ನ ಜೊತೆಗಿದ್ದ ಹಾಗೆ…!

ಸಾದ್ಯವಾದರೆ ಎರೆಡು ಹನಿ ಕಣ್ಣೀರು ಕೆಡಹು
ನನಗಾಗಿ ಅಲ್ಲ, ನನಗದು ಬೇಕಿಲ್ಲ
ನಿನ್ನ ಕಣ್ಣುಗಳಲ್ಲಿರುವ ಕೆಲವೇ ಕೆಲವು
ನನ್ನ ಕನಸುಗಳು ಈಚೆಗೆ ಬರಬೇಕಿದೆ,
ಮರುಭೂಮಿಯಲ್ಲಿ ಮಲ್ಲಿಗೆ ಬೆಳೆಯುವುದಿಲ್ಲವೆಂಬ
ಸತ್ಯವನ್ನ ನನ್ನ ಕನಸುಗಳಿಗೆ ನಾನು ಹೇಳಬೇಕಿದೆ…!

ಸಾದ್ಯವಾದರೆ ಮತ್ತೆ ನೀನು
ನನ್ನ ನೆನಪಿಗೆ ಬರಬಾರದು
ಈಗಷ್ಟೆ ಕನಸುಗಳ ದಫನ್ ಆಗಿದೆ ಇಲ್ಲಿ
ಮತ್ತೆ ಅವು ಚಿಗುರೊಡೆಯಬೇಕಲ್ಲವ?
ಚಿಗುರೊಡೆಯುವ ನನ್ನ ಕನಸುಗಳಿಗೆ
ನಾನು ಅಸುನೀಗಿದ ಕತೆಯ ಹೇಳಬೇಕಿದೆ..

Sep
08

ಕಾದಿದ್ದೆ ಬಂತು
ಭೂಮಿಯಾಕಾಶಗಳ ಮದ್ಯೆ
ಮನಸ್ಸು ಶಬರಿಯಾಗಿಸಿಕೊಂಡು
ಇಲ್ಲದ ರಾಮನಿಗಾಗಿ……

ನಟ್ಟ ನಡುರಾತ್ರಿ ಎದ್ದು
ಹೋದ ಬುದ್ಧನಂತೆ ಹೋದೆಯಲ್ಲ
ನಾನು ಅನುಭವಿಸಿದ ನೋವು
ನಿರಾಶೆ ತಬ್ಬಲಿತನಗಳ ಲೆಕ್ಕ
ಕೇಳುವೆ ಕೊಡು ನೋಡುವಾ…

ಶುಭ್ರವಾಗಿತ್ತಲ್ಲವ ಮನದ ಕೊಳ
ಒಂದಷ್ಟು ದಿನದಲ್ಲಿ ಅದೆಷ್ಟು ನೀರು
ರಾಢಿಯಾಗಿದ್ದಕ್ಕೆ ಬೇಸರವಿಲ್ಲ
ಮತ್ತದೇ ನೀರು ತುಂಬಲು
ನಾನೆಷ್ಟು ನೀರು ಸುರಿಸಬೇಕು?

ಇಲ್ಲ ಇಂದಿನಿಂದ
ನನ್ನೊಳಗೆ ಯಾವ ಬೀಜವೂ
ಮೊಳಕೆಯೊಡೆಯುವುದಿಲ್ಲ..
ಆದರೂ ಬೆಳೆದು ಹೆಮ್ಮರವಾಗುವಂತಹ
ನನ್ನ ಅಗಾದ ಆಸೆಗಳಿಗೆ ಬಂಜೆತನ ಬಂದಿಲ್ಲ..

ಬತ್ತಿದೊಡಲು ತುಂಬುವುದಿಲ್ಲ
ಎದೆಯೊಳಗೆ ಹಾಲಿನ ನದಿ ಹರಿಯುವುದಿಲ್ಲ
ನಿನ್ನಪ್ಪುಗೆಯಾ ಮಾಯೆಯಲ್ಲಿ ದೇಹ ಮುರಿದು
ದಣಿದು ಬೆವರ ಹೊಳೆಹರಿಯುವುದಿಲ್ಲ…ಪಾಪಿ ನೀನು

Jul
10

null

ಮೇಘಗಳೇ ನೀವೆಷ್ಟು ಚಿಕ್ಕವರು
ನನ್ನ ಕಣ್ಣುಗಳ ಮುಂದೆ..
ನಾನು ಸುರಿಸಿದಷ್ಟು ಕಣ್ಣೀರು
ನೀವು ಸುರಿಸಲಿಲ್ಲ ನೀರು…!

ಎಷ್ಟು ವರ್ಶವಾಯಿತು ಗೆಳೆಯ
ಶಬರಿಯಂತೆ ಕಾದಿದ್ದು ನಾನಲ್ಲ
ನನ್ನ ಕಣ್ಣುಗಳು….ಬಯಕೆಯಿಂದ
ನೀ ನನ್ನ ಮೈ ಮುಟ್ಟಲೇ ಬೇಡ
ಬಾ ಮುತ್ತಿಡು ನನ್ನ ಕಂಗಳಿಗೆ…!

ನನಗೆ ಗೊತ್ತು ಮೋಸವಾಗಿದ್ದು
ನನಗೆ..ದುಃಖಿಸಿದ್ದು ನಾನಾದರೂ
ಬೋರ್ಗರೆದು ಅತ್ತಿದ್ದು ಮಾತ್ರ ಕಣ್ಣುಗಳು
ಒಂದು ಸಲ ನನ್ನ ಕಂಗಳ ಮೇಲೆ ನಿನ್ನ ಬೆರೆಳು..!
ಆಮೇಲೆ ಸತ್ತರು ಚಿಂತೆಯಿಲ್ಲ…ಕಣ್ಣುಗಳು ಮಾತ್ರ ನಿನ್ನವು…!

ಹೃದಯ ಸುಳ್ಳು ಹೇಳುವುದಿಲ್ಲವಂತೆ
ಹಾಗಾದರೆ ನನ್ನ ಕಣ್ಣುಗಳು ಯಾವತ್ತು?
ನೀನಾಡುವ ಒಂದು ಮಾತಿಗೆ ಜಾತಕ
ಪಕ್ಷಿಯ ಹಾಗೆ ಕಾತರಿಸಿದ್ದು ಕಿವಿಗಳಲ್ಲ ಕಣ್ಣುಗಳು….
ಅಲ್ಲಿರುವ ಬೆಳಕು ನೋಡಿಯು ನೀ ಅರಿಯಲಿಲ್ಲ…!

ನಾನಿಷ್ಟವಗಲಿಲ್ಲವ ಹೇಳು ಕಾರಣ ಬೇಕಿಲ್ಲ
ಒಂಟಿಬಾಳು ನನಗೆ ಹೊಸದಲ್ಲ..
ಅದು ನನ್ನ ಹಕ್ಕೆಂದು ಭಾವಿಸಿಯಾಗಿದೆ
ಆದರೆ ನನ್ನ ಕಣ್ಣುಗಳನ್ನ ಮಾತ್ರ ಜರೆಯಬೇಡ
ಒಟ್ಟು ಸಾವಿರ ಚಿತ್ರಗಳಿರಬೇಕಲ್ಲಿ
ಕಣ್ಣು ನನ್ನವಾದರು ಅಲ್ಲಿರುವ ಚಿತ್ರ ಮಾತ್ರ ನಿನ್ನದೆ…!