ಕಾದಿದ್ದೆ ಬಂತು
ಭೂಮಿಯಾಕಾಶಗಳ ಮದ್ಯೆ
ಮನಸ್ಸು ಶಬರಿಯಾಗಿಸಿಕೊಂಡು
ಇಲ್ಲದ ರಾಮನಿಗಾಗಿ……

ನಟ್ಟ ನಡುರಾತ್ರಿ ಎದ್ದು
ಹೋದ ಬುದ್ಧನಂತೆ ಹೋದೆಯಲ್ಲ
ನಾನು ಅನುಭವಿಸಿದ ನೋವು
ನಿರಾಶೆ ತಬ್ಬಲಿತನಗಳ ಲೆಕ್ಕ
ಕೇಳುವೆ ಕೊಡು ನೋಡುವಾ…

ಶುಭ್ರವಾಗಿತ್ತಲ್ಲವ ಮನದ ಕೊಳ
ಒಂದಷ್ಟು ದಿನದಲ್ಲಿ ಅದೆಷ್ಟು ನೀರು
ರಾಢಿಯಾಗಿದ್ದಕ್ಕೆ ಬೇಸರವಿಲ್ಲ
ಮತ್ತದೇ ನೀರು ತುಂಬಲು
ನಾನೆಷ್ಟು ನೀರು ಸುರಿಸಬೇಕು?

ಇಲ್ಲ ಇಂದಿನಿಂದ
ನನ್ನೊಳಗೆ ಯಾವ ಬೀಜವೂ
ಮೊಳಕೆಯೊಡೆಯುವುದಿಲ್ಲ..
ಆದರೂ ಬೆಳೆದು ಹೆಮ್ಮರವಾಗುವಂತಹ
ನನ್ನ ಅಗಾದ ಆಸೆಗಳಿಗೆ ಬಂಜೆತನ ಬಂದಿಲ್ಲ..

ಬತ್ತಿದೊಡಲು ತುಂಬುವುದಿಲ್ಲ
ಎದೆಯೊಳಗೆ ಹಾಲಿನ ನದಿ ಹರಿಯುವುದಿಲ್ಲ
ನಿನ್ನಪ್ಪುಗೆಯಾ ಮಾಯೆಯಲ್ಲಿ ದೇಹ ಮುರಿದು
ದಣಿದು ಬೆವರ ಹೊಳೆಹರಿಯುವುದಿಲ್ಲ…ಪಾಪಿ ನೀನು