ಶತ್ರು……….!!

ಬಯಸಿ ಬಯಸಿ
ನಲ್ಲೆಯ ಬಳಿ
ಸಾಗಿದ ನಲ್ಲನಿಗೆ
ನಿರಾಸೆಗೊಳಿಸಿದ
ಅವಳ ಮಲ್ಲಿಗೆಯ ಲಜ್ಜೆ
—————————-
ಕಣ್ಣುಗಳು……….!!

ನಿನ್ನ ನೋಡಲಷ್ಟೆ
ಹೇಳಿದ್ದೆ, ಆದರೆ
ತಮ್ಮೊಳಗೆ ತುಂಬಿಕೊಂಡು
ಒಂದು ಪ್ರೇಮಗಿತೆಯ ಹುಟ್ಟಿಗೆ
ಕಾರಣವಾದವು.
————————–
ಕಾರಣ……….!!

ನೀನು ಹಾಡುತ್ತಿದ್ದೆ
ಪಕ್ಕದ ಮರದಲ್ಲೆ ವಾಸವಿದ್ದ
ಕೋಗಿಲೆ ತನ್ನ ರೆಕ್ಕೆ
ಪುಕ್ಕವನ್ನೆಲ್ಲ ಕಿತ್ತುಕೊಂಡು ರೋದಿಸುತ್ತಿತ್ತು
————————–
ಅಂದು ಹುಣ್ಣಿಮೆ……….!!

ಅಮವಾಸ್ಯೆಯ
ಕಗ್ಗತ್ತಲ ರಾತ್ರಿ
ಮನೆಯ ಅಂಗಳದಲ್ಲಿ
ನೀನೊಬ್ಬಳೆ ಪ್ರೇಮಗೀತೆ ಗುನುಗುತ್ತಿದ್ದೆ.
————————–

ನಗು……….!!

ನನ್ನಿಂದ ನೀನು
ದೂರಾವಾದ ಕ್ಷಣದಿಂದ
ನನ್ನ ಜೊತೆಗಿರುವ
ನನ್ನ ಬಲವಂತದ ಕೃತಕ ಗೆಳೆಯ
————————–

ಸತ್ಯ……….!!

ನನ್ನ ಎಲ್ಲ ಕನಸುಗಳಲ್ಲಿ
ನೀನೆ ಬರಬೇಕೆಂದು
ದೇವರಲ್ಲಿ ಬೇಡಿಕೊಂಡಿದ್ದು.
——————
ಕತ್ತಲು……….!!

ನೀನಿರದೆ
ನಾನು ಇಟ್ಟ ಪ್ರತಿ
ಹೆಜ್ಜೆಗಳ ಸಂಗಾತಿ
——————-

ನೀನು……….!!

ನನ್ನ ಉಹೆಗೂ
ನಿಲುಕದ ಅಚ್ಚರಿ
ನೀನು ನನ್ನೊಳಗೆ
ಅವಿತಿರುವ ನವಿಲುಗರಿ
————————–
ಮುಗಿಲು……….!!

ನಿನ್ನ ಅಮಲುಗಣ್ಣಿನ
ವಾರೆನೋಟವ
ನೋಡಿ ಓಡಿ ಬಾಗಿ
ನಾಚಿ ನೀರಾಗಿ ಕೆಂಪಾಗಿದ್ದು
————————–

ಹೆಗಲು……….!!

ಎಲ್ಲಾ ಕಳೆದುಕೊಂಡ
ನನಗೆ ಎಲ್ಲವನ್ನೂ
ತೋರಿಸಿಕೊಟ್ಟ
ಒಂದು ಆಲದ ಮರ.
————————–

ಬರವಸೆ……….!!

ನೋವಿನಲ್ಲಿ ಜೊತೆಯಾಗಿರ್ತೀನಿ
ಅಂತ ನಾನು ಮಾತು ಕೊಡಲ್ಲ.
ಅದರೆ ನೋವಿರದ ಹಾಗೆ
ನೋಡ್ಕೋತೀನಿ ಅಂತ ಒಂದು
ಮುತ್ತು ಕೊಡ್ತೀನಿ…..!
————————–
ವಿನಂತಿ……….!!

ಮೇಘಗಳೇ ಮುತ್ತಿನ
ಹನಿಗಳ ಜೊತೆ ಕೊಂಚ
ಅವಳ ಬಂಗಾರದ ನೆನಪುಗಳನ್ನೂ
ತಂದು ನನ್ನೆದೆಗೆ ಸುರಿಯಿರಿ
ನಾನು ಬದುಕಬೇಕಿದೆ..!
————————–

ಪ್ರೀತಿ……….!!

ಕಟ್ಟಕಡೆಯ ನನ್ನೆಲ್ಲ
ನಂಬಿಕೆಗಳು ಹುಸಿಯಾದ ಮೇಲೂ
ಈ ಹೃದಯ ನಿನ್ನೆಡೆಗಿಟ್ಟಿರುವ
ದನ್ಯತಾಭಾವ..!!
————————–

ಮನಸ್ಸು……….!!

ನಿನ್ನೆದೆಯ ಸಾಗರದಲ್ಲಿ
ಒಂದೇ ಒಂದು ಹನಿ
ನನ್ನದಲ್ಲದಿದ್ದರೂ
ಆಸೆಗಣ್ಣಿನಿಂದ ಬೊಗಸೆಯೊಡ್ಡಿ
ನಿಂತಿರುವ ಪುಟಾಣಿ ಮಗು
————————–
ಕವಿತೆ……….!!

ಪದಗಳಿದ್ದವು
ಖಾಲಿ ಹಾಳೆಗಳೂ ಇದ್ದವು
ಆದರೆ ಈ ಎದೆಯ ಬಾಗಿಲೊಳಗೆ
ನೀನಿರಲಿಲ್ಲ ನೋಡು
ಹಾಗಾಗಿ ಮುನಿಸಿಕೊಂಡು
ಕುಳಿತಿದೆ ಪೂರ್ತಿಯಾಗದೆ…
————————–
ಕೊರಿಕೆ……….!!

ಈ ಕಣ್ಣುಗಳಿಗೆ ನೀನು
ಹನಿಯಾಗಿ ಬರಬೇಕು
ಸುಮ್ಮನೆ ನೀನು ಜಾರುತ್ತಿದ್ದರೆ
ನಾನು ಹಗುರಾಗಬೇಕು
————————–
ಆಸೆ……….!!

ನನಗೊಂದು
ಪುಟಾಣಿ ಹಣತೆ ಬೇಕು
ಆ ಹಣತೆಯ ಹಾಲ ಬೆಳಕಿಗೆ
ನಿನ್ನ ಹೆಸರಿಡಬೇಕು
————————–

————————————————————-
ಇಲ್ಲಿರುವ ಎಲ್ಲ ಹನಿಗಳೂ ಕನ್ನಡದ ದಿನಪತ್ರಿಕೆಯಾದ ವಿಜಯ-ಕರ್ನಾಟಕದಲ್ಲಿ ಪ್ರಕಟವಾದಂತವು…
————————————————————–