ಕೂಡಲೇ ಅವಳಲ್ಲಿ ಒಂದು ಸುಳ್ಳು ಹೇಳಬೇಕಿತ್ತು ಇವನು. ಅವಳ ಕಣ್ಣುಗಳ ನೋಡಿ ತಡವರಿಸುತ್ತಲೇ ಸತ್ಯ ಹೇಳಿ ಒಂದು ಮುತ್ತು ಪಡೆದುಕೊಂಡ…!

——————————————————————-
ಮದುವೆಯಾಯಿತು.ಅವನು ಬದುಕಲು ಬೇಕಾಗುವ ಸಾಮಾನುಗಳ ಪಟ್ಟಿ ತಯಾರಿಸುತ್ತಿದ್ದ.
ಮತ್ತೆ ಇವಳ ಮುಖವನ್ನೊಮ್ಮೆ ನೋಡಿದ .ಸಾಮಾನುಗಳ ಪಟ್ಟಿ ಯಾಕೋ ಪೂರ್ತಿಯಾಗಲಿಲ್ಲ.
——————————————————————-

ಅದೆಷ್ಟೋ ಹಾಡುಗಳನ್ನ ಬರೆದಿದ್ದ. ಈಗ ಒಂದು ಬರೆಯಲಾಗುತ್ತಿಲ್ಲ ಅನ್ನುತ್ತಿದ್ದಾನೆ. ಮತ್ತೆ ಅವಳು ನೆನಪಾಗುತ್ತಿದ್ದಾಳೆ..ನೆನಪಾಗುತ್ತಿಲ್ಲ ಅನ್ನುತ್ತಿದ್ದಾನೆ…!
——————————————————————-

ಬಂಜೆ ಅಂದು ಮೂದಲಿಸಿದರು ಮಂದಿ. “ ನಿನಗೆ ನಾನು ಮಗು ನನಗೆ ನೀನು ಮಗು” ಅನ್ನುವ ತನ್ನವನ ಮಾತು ನೆನಪಾಗಿ ದುಃಖ ಕಮ್ಮಿ ಮಾಡಿಕೊಂಡಳು…!
——————————————————————-

ತಾನೆಷ್ಟು ಪ್ರೀತಿಸುತ್ತೇನೆ ಅಂತ ತನ್ನ ಗೆಳತಿಗೆ ಹೇಳುತ್ತಿದ್ದ. “ಎಷ್ಟು ಪ್ರೀತಿಸ್ತೀಯ” ಅಂದು ಕಣ್ಣು ಮಿಟುಕಿಸಿದಳು. ಇವನಿಗೆ ಆಕಾಶದಲ್ಲಿನ ನಕ್ಷತ್ರಗಳ ಲೆಖ್ಖ ಸಿಗಲಿಲ್ಲ.
——————————————————————-

ಪ್ರೀತಿಸಿದ್ದನ್ನ ಕುಷಿಯಿಂದ ಪುಟಗಟ್ಟಲೇ ಬರೆದುಕೊಂಡಳು.. ದ್ವೇಶಿಸಿದ್ದನ್ನ ಬಿಕ್ಕಳಿಸುತ್ತ ಒಂದು ಸಾಲು ಬರೆಯಲಾಗದೆ ಖಾಲಿಯಾದಳು.!
——————————————————————-

ಚಂದನೆಯ ಹೆಸರಿನ ಗೆಳೆಯ ಸತ್ತು ಹೋಗಿದ್ದ. ಹಾಳುಜನ ಕೂಡಲೇ ಅವನಿಗೊಂದು ಹೆಸರಿಟ್ಟಿದ್ದರು. “ಬಾಡಿ” ಇನ್ನು ಬಂದಿಲ್ಲವಂತೆ ಅನ್ನುತ್ತಿದ್ದರು.
——————————————————————-

“ ನನಗಿಷ್ಟ ಇಲ್ಲ ನೀನು” ಅಂದವನನ್ನೊಮ್ಮೆ ನೋಡಿದಳು. “ಮೊದಲು ನಾನಾಡಿದ ಮಾತುಗಳನ್ನ ಕಾಪಿ ಮಾಡ್ತೀಯೇನೊ” ಅಂದು ನಕ್ಕಳು. ಅವನು ನಗಲಿಲ್ಲ. ಮತ್ತೆ ಅವಳು ಯಾವತ್ತೂ ನಗಲಿಲ್ಲ.
——————————————————————-

ಗೆಳೆಯ ಗೆಳತಿಗೆ ದೇವರು ಪ್ರತ್ಯಕ್ಷವಾಗಿ ಏನು ವರ ಬೇಕು ಅಂತ ಕೇಳಿದ. “ಒಂದಿಷ್ಟು ಚಳಿಗಾಲ ಪ್ಲೀಸ್”ಅಂದು ಇಬ್ಬರೂ ನಕ್ಕರು.
——————————————————————-

ಒಂದು ದಿನ ತುಂಬಾ ಸುಂದರವಾದ ಹೂವುಗಳ ಓಟದ ಸ್ಪರ್ಧೆ ನಡೆಯಿತು. ನನ್ನವಳಿಗೆ ಮೊದಲ ಬಹುಮಾನ ಸಿಕ್ಕಿತು.
——————————————————————-

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)