ನಿನ್ನ ಕೋಪ ಹೇಗಿದೆ? ನಿನ್ ಸಿಡುಕುತನ? ನಿನ್ನ ಮೊಂಡತನ? ನಿನ್ನ ಸೋಮಾರಿತನ? ನಿನ್ನು ಮುದ್ದುತನ? ಮೊದ್ದುತನ? ಪೆದ್ದುತನ? ಮೊದಲಿನ ಹಾಗೆ ನಿನ್ನ ಕೋಪದ ಜ್ವಾಲಾಮುಖಿ ನಿಮ್ಮ ಮನೆಯವರ ಮೇಲೆ ಸಿಡಿಯುತ್ತಲೇ ಇದೆಯಾ? ದಿನಕ್ಕೆಷ್ಟು ಭಾರಿ ನನಗೆ ಶಾಪ ಹಾಕುತ್ತೀಯಾ? ನಾನು ಇಷ್ಟಪಟ್ಟು ನಿನಗೆ ಕೊಟ್ಟ ನವಿಲುಗರಿ, ನನ್ನದೇ ಹೆಸರಿಟ್ಟುಕೊಂಡು ತಬ್ಬಿಕೊಂಡಿರುತ್ತಿದ್ದ ಪಾಪದ ಟೆಡ್ಡಿಬೇರು, ನಾನು ನಿನಗೆ ನವಿಲೂರು ಜಾತ್ರೆಯಲ್ಲಿ ಕೊಡಿಸಿದ ಕಲರ್ ಕಲರ್ ಕನ್ನಡಕ, ಗಾಂಧಿಬಜಾರಲ್ಲಿ ಕೊಡಿಸಿದ ಪ್ರೇಮ ಪುಸ್ತಕ, ನಿನಗೇ ಅಂತ ಬರೆದ ನೂರಾರು, ಕ್ಷಮಿಸು ಸಾವಿರಾರು ಕವಿತೆಗಳು,ಎಲ್ಲವನ್ನೂ ನನ್ನ ಮೇಲಿನ ಕೋಪ ತೀರಿಸಿಕೊಳ್ಳಲು ಅಗ್ನಿ ದೇವನಿಗೆ ಸಮರ್ಪಿಸಿಯಾಗಿರಬೇಕು ಅಲ್ವಾ? ಬಿಡು ನಿನ್ನ ಕೋಪದ ಮಹಿಮೆ ಅಪಾರ ಎಂಬುದನ್ನ ನಿನ್ನ ಜೊತೆ ಕಳೆದ ಎರಡು ವರ್ಷ ಮೂರು ತಿಂಗಳು ಹದಿನಾಲ್ಕು ದಿನಗಳಲ್ಲಿ ಅರ್ಥ ಮಾಡಿಕೊಂಡಿದ್ದೇನೆ. ಅಂದ ಹಾಗೇ ನೀನು ಹೇಗಿದ್ದೀಯಾ? ನನ್ನನ್ನ ನಿನ್ನ ಬಲೆಯಲ್ಲಿ ಕೆಡವಿದ ನಿನ್ನ ಮನಮೋಹಕ ಕಂಗಳು ಹೇಗಿವೆ? ನನ್ನನ್ನ ಬಿಡದೇ ಕಾಡುತ್ತಿದ್ದ ನಿನ್ನ ನಗು ಹಾಗೆ ಇದೆ ತಾನೆ? ಅಂದ ಹಾಗೆ ಈ ಜನ್ಮದಲ್ಲಿ ನೀನು ನನಗೆ ಫೋನ್ ಮಾಡೋದು ಕನಸಿನ ಮಾತು ಅಲ್ವ? ಮೆಸ್ಸೇಜ್ ಮಾಡೊಲ್ಲ, ನನ್ನ ಬಗ್ಗೆ ಚಿಂತೆ ಮಾಡೊಲ್ಲ, ನಾನು ನಿನಗೆ ನೆನಪಾಗೊಲ್ಲ, ಅದೆಲ್ಲ ಗೊತ್ತಿದ್ರೂ ಈ ಪತ್ರ ಬರಿತ್ತಿದ್ದೀನಿ. ಆದ್ರೂ ಎಲ್ಲೋ ಒಂದು ಸಣ್ಣ ಆಸೆ, “ಸ್ಸಾರಿ ಕಣೋ ಕರಿಯಾ, ನಂದೇ ತಪ್ಪು, ಮನ್ಸಲ್ಲಿ ಏನು ಇಟ್ಕೋಬೇಡ, ನಾನ್ ಕೋಪ ಮಾಡ್ಕೊಳ್ದೆ ಇನ್ಯಾರು ಕೋಪ ಮಾಡ್ಕೊಬೇಕೊ? ನಡಿ ಪಾನಿಪೂರಿ ಕೊಡ್ಸು, ಪುನೀತ್ ಫಿೀಲ್ಮ್‌ಗೆ ಕರ್ಕೊಂಡ್ ಹೋಗು, ಹಾಗೆ ಕೆ.ಎಪ್.ಸಿ ಕಡೆ ಒಂದು ರೌಂಡ್ ಹೊಡ್ಕೊಂಡು ಬರೋಣ, ನಿಮ್ ಮನೆಗೆ ಕರ್ಕೊಂಡ್ ಹೋಗು ಪ್ಲೀಸ್” ಅಂತ ಒಂದು ಫೋನ್ ಮಾಡ್ತಿಯೇನೋ ಅಂತ ಇವತ್ತಿಗೂ ಈ ಕ್ಷಣಕ್ಕೂ ಕಾಯ್ತನೆ ಇದ್ದೀನಿ.

ನಿಮ್ಮ ಮನೆಗೆ ಬಂದು ನಿಮ್ಮ ಮನೆಯವರ ಮುಂದೆಯೆ ಕೆನ್ನೆಗೆ ನಾಲ್ಕು ಬಿಟ್ಟು ನಿನ್ನ ಹೆಗಲಮೇಲೆ ಕೂರಿಸಿಕೊಂಡು ಬಂದ್ಬಿಡ್ಬೇಕು ಅಂತ ತುಂಬಾ ಸಲ ಅನ್ನಿಸಿದೆ. ಆದರೆ ಅದೇ ಗುಳಿಗೆನ್ನೆಯ ದರ್ಶನಕ್ಕೆ ಹಗಲು ರಾತ್ರಿ ಅನ್ನದೆ ಕಾದಿದ್ದು ನೆನಪಾಗುತ್ತೆ, ಕೊಟ್ಟ ಮುತ್ತುಗಳು ನೆನಪಾಗುತ್ತೆ, ಮನೆಯವರೆಲ್ಲರೂ ನಮ್ಮ ಮದುವೆಗೆ ನೋ ಅಂದ್ರೂ ಕೂಡ ಎಲ್ಲರ ಮಾತನ್ನ ಧಿಕ್ಕರಿಸಿ ನನ್ನ ಮನೆಯಂಗಳಕ್ಕೆ ಬಂದ ನಿನ್ನ ಅಪಾರ ಪ್ರೀತಿ ನೆನಪಾಗುತ್ತೆ, ಎಲ್ಲಕ್ಕಿಂತಲೂ ನಮ್ಮ ಪ್ರೀತಿಗೆ ಸಾಕ್ಷಿಯಾಗಿ ನಮ್ಮದೇ ಪುಟ್ಟ ಕಂದ ಇನ್ನೇನು ನಿನ್ನ ಮಡಿಲಿಗೆ ಬಂದುಬಿಡುತ್ತೇ ಅನ್ನುವುದು ನೆನಪಾಗಿ ನಿನ್ನ ಮೇಲಿನ ಕೋಪ,ಸಿಟ್ಟು ಅಸಹನೆ ಎಲ್ಲವೂ ಮಾಯವಾಗಿ ನಾನೆ ನಿನ್ನ ಮಗುವಂತಾಗಿಬಿಡುತ್ತೇನೆ. ನೋಡು ನಿನ್ನ ಮೇಲಿದ್ದ ಪ್ರೀತಿ ಕಾಳಜಿ ಈಗ ನೂರು ಪಟ್ಟು ಜಾಸ್ತಿಯಾಗಿದೆ, ನಿನ್ನ ಮೊಂಡುತನ,ನಿನ್ನ ಸಿಟ್ಟು ಎಲ್ಲವನ್ನ ನಾನು ನನ್ನ ಪ್ರೀತಿಯಿಂದಾನೆ ಗೆಲ್ತೀನಿ ಅನ್ನೋ ಭರವಸೆ ಇದೆ, ಆದ್ರೆ ನಿನ್ನಲ್ಲಿ ಒಂದು ಒಂದೇ ಒಂದು ಪುಟಾಣಿ ಬೇಡಿಕೆ ಇದೆ, ಅದೇನಪ್ಪ ಅಂದ್ರೆ, ಪ್ಲೀಸ್ ಸ್ವಲ್ಪ ಕೋಪ ಕಡಿಮೆ ಮಾಡ್ಕೋ ಮರಾಯ್ತಿ, ಸಹನೆ ಬೆಳೆಸ್ಕೊ, ನನ್ನ ಮೇಲೆ ಸ್ವಲ್ಪ ಪ್ರೀತಿ ಇರಲಿ ಅನ್ನೋ ಮಾತು ನಿನಗೆ ಹೇಳೋದಿಲ್ಲ, ನೀನು ಪ್ರೀತಿಯ ವಿಷಯದಲ್ಲಿ ಯಾವತ್ತಿಗೂ ನನ್ನ ಪಾಲಿನ ಅಕ್ಷಯಪತ್ರೆ.

ಪ್ಲೀಸ್ ಬಂದುಬಿಡು, ಬದುಕಲ್ಲಿ ಕೋಪ ತಾಪಗಳಿಗೆ ಹೆಚ್ಚಿನ ಆಯುಷ್ಯ ಇರಲ್ಲ ಚಿನ್ನ. ಜಗತ್ತನ್ನೆ ಎದುರು ಹಾಕಿಕೊಂಡು ಬದುಕು ಕಟ್ಟಿಕೊಂಡವರು ನಾವು. ಸಣ್ಣ ಸಣ್ಣ ವಿಷಯಗಳಿಗೆ ಮನಸ್ಸು ಮುರಿದುಕೊಳ್ಳುವುದು ಬೇಡ, ಇವರದ್ದು ಬರಿ ಮೂರು ದಿನದ ಪ್ರೀತಿ ಅಂತ ಯಾರಾದ್ರೂ ಆಡ್ಕೊಂಡು ನಗೋದು ನಮ್ಗೆ ಬೇಕಾ ಹೇಳು? ಎಲ್ಲರ ಕಣ್ಣು ಕುಕ್ಕುವ ಹಾಗೆ ಬದುಕಿ ತೋರಿಸಬೇಕಲ್ವಾ ನಾವು? ಅವರ ಮಾತು ಹಾಳಾಗಲಿ ಬಿಡು. ಇನ್ನೇನು ಕೆಲವೇ ತಿಂಗಳು ನಮ್ಮ ಮಡಿಲಿಗೆ ಕುಮಾರ ಕಂಠೀರವನೋ, ಮುದ್ದು ಗೌರಿಯೋ ಬರುವ ಸಮಯ, ಸ್ವಲ್ಪಾನೆ ಯೋಚಿಸಿ ನೋಡು, ಜಗತ್ತಲ್ಲಿ ಯಾರು ಪ್ರೀತಿಸದ ಹಾಗೆ ನಿನ್ನನ್ನ ಪ್ರೀತಿಸಿದವನು ನಾನು.ನನಗಿಂತ ಸಾವಿರ ಸಾವಿರ ಪಟ್ಟು ನನ್ನನ್ನ ಪ್ರೀತಿಸಿದ ಮೊಂಡಿ ನೀನು. ಬೇಕಾದರೆ ನನ್ನದಲ್ಲದ ತಪ್ಪುಗಳಿಗೆ ನಾನೇ ಕ್ಷಮೆ ಕೇಳುತ್ತೇನೆ. ನಿನಗೆ ಮಾಡಿದ ಪ್ರಾಮಿಸ್‌ನಂತೆ ಜಯಂತ ಕಾಯ್ಕಿಣಿ ಸರ್ ಕೈಕಾಲು ಹಿಡಿದು ಖಂಡಿತ ಅವರನ್ನ ಮೀಟ್ ಮಾಡಿಸ್ತೀನಿ, ಪ್ಲೀಸ್ ಬಂದುಬಿಡು. ಅಷ್ಟೇ ಅಲ್ಲ, ಡಿಸೆಂಬರ್ ಚಳಿಯ ಹಾವಳಿ ವಿಪರೀತವಾಗುತ್ತಿದೆ. ಈ ಚಳಿಗೆ ನಿನ್ನದೆ ಹೊದಿಕೆ ಬೇಕು ಅನ್ನಿಸ್ತಿದೆ. ನನ್ನ ಕಷ್ಟ ನಿನಗೆ ಅರ್ಥವಾಗಿರಬೇಕು ಅಲ್ವಾ ಮುದ್ದು ಹೆಂಡತಿ.. J

ಕೇವಲ ನಿನ್ನವನು
ನವಿಲೂರ್ ಹುಡ್ಗಾ..:)