ಕೋತಿಮರೀ!

ಮೊದಲೆಲ್ಲ ನಿನ್ನ ಹೀಗೆ ಕರಿಯೋಕೆ ಎಷ್ಟು ಚೆನ್ನಾಗಿರ್ತಿತ್ತು ಗೊತ್ತ? ಹೀಗೆ ಕರಿಯೋದೆ ಒಂದು ಹಬ್ಬ. ನಿನ್ನ ತುಂಟತನ, ನಿನ್ನ ಕಪಿಚೇಸ್ಟೆ, ನಿನ್ನ ಹುಡುಗುತನ, ಮತ್ತು ಕೋತಿ……..ಅಂತ ಹೇಳಿ ನೀನು ಹಲ್ಕಿರಿಯುತ್ತಿದ್ದ ನಿನ್ನ ಆ ನಿಶ್ಕಲ್ಮಶ ನಗು ಇದ್ಯಾವುದನ್ನೂ ನನ್ನಿಂದ ಮರಿಯೋಕಾಗುತ್ತಿಲ್ಲ. ನೀನು ಮಾತಿನ ಮಲ್ಲಿ, ಒಂದು ಸಲವು ನಾನು ನಿನ್ನ ಮುಂದೆ ಗೆದ್ದಿದ್ದಿಲ್ಲ ಬರೀ ಸೋತಿದ್ದೆ ಸೋತಿದ್ದು. ಆದರೂ ಪ್ರತಿ ಸಲ ಸೋತಾಗಲು ನಾನೆ ಗೆದ್ದೆ ಅನ್ನುವಷ್ಟು ಖುಷಿ, ಆದರೂ ನೀನು ನನ್ನವಳಲ್ಲ ಅನ್ನುವ ಒಂದೇ ಒಂದು ದೊಡ್ಡ ಸೋಲಿದೆಯಲ್ಲ? ಈ ಸೋಲು ಯಾವತ್ತು ನನ್ನ ಈ ಮುಖದಲ್ಲಿ ನಗುವನ್ನ ಕಾಣದಿರುವ ಹಾಗೆ ಮಾಡಿಬಿಡುತ್ತದೇನೊ..!!

ನನಗೆ ಯಾವುದನ್ನು ಮರಿಯೋದಕ್ಕೆ ಆಗುತ್ತಿಲ್ಲ. ಸುಮ್ಮನೆ ಮರೆತವನಂತೆ ನಾಟಕವಾಡುತ್ತೀನಿ ಅಷ್ಟೆ. ಸಮಸ್ತ ಮೊಬೈಲು ಕಂಪನಿಗಳು ನಮ್ಮಿಬ್ಬರಿಂದಾನೆ ಉದ್ಧಾರವಾದವೇನೊ. ಪ್ರತಿ ಸಲ ಮೊಬೈಲು ಕಳೆದುಕೊಂಡಾಗಲೂ ಕಾಯಿನ್ ಬೂಥುಗಳ ಗುಡಾಣದಂತಹ ಹೊಟ್ಟೆಗೆ ಬರ್ಜರಿ ಮೃಷ್ಟಾನ್ನ ಭೋಜನ ಮಾಡಿಸುತ್ತಿದ್ದೆವು ನೆನಪಿದೆಯಾ? ಮತ್ತೆ ನನ್ನ ಕಡುಗಪ್ಪು ಕೈ ಹಿಡಿದು ನೀನು ರೋಡು ದಾಟಿಸುತ್ತಿದ್ದ ಪರಿಯ ನೆನೆಸಿಕೊಂಡರೇ ಸಾಕು.. ದೇವರೇ.. ಈ ಕೈ ಯಾವತ್ತು ಸಡಿಲಾಗದಂತೆ ಶಾಪ ಕೊಟ್ಟುಬಿಡು ಅಂತ ಅದೆಷ್ಟು ಸಲ ಗೋಗರೆದಿದ್ದೆನೊ..! ನೆನಪಿದೆಯಾ? ಮೊದಲ ಸಲ ನಿನ್ನ ಮುಂದೆ ನಿಂತಾಗ ಬೆವರುತ್ತಿದ್ದ ಪರಿ? “ಯಾಕೊ ಹೀಗೆ ನಡುಗುತ್ತಿದ್ದೀಯ?” ಅಂತ ನೀನು ಕಿಚಾಯಿಸಿದರೆ. “ಬಿಸಿಲಲ್ಲಿ ಬಂದೆ ಅಲ್ಲವಾ ಅದಕ್ಕೆ” ಅಂದ ನಾನು ನಿನ್ನ ಮುಂದೆ ಮಂಗನಾಗಿದ್ದು? ಯಾಕಂದರೆ ಅದು ಜೂನ್ ತಿಂಗಳ ಮದ್ಯಕಾಲ. ಸೂರ್ಯನ ದರ್ಶನವಾಗಿ ಅದೆಷ್ಟು ದಿನಗಳಾಗಿದ್ದವೊ.. ಇನ್ನು ಬೆವರುವ ಮಾತೆಲ್ಲಿ?

ನೀನಾದರೂ ಅಷ್ಟೆ ಯಾವತ್ತು ನಾನು ನಿನಗಿಷ್ಟ ಅನ್ನುವ ಹಾಗೆ ನಡೆದುಕೊಳ್ಳಲಿಲ್ಲ. ಅಸಲಿಗೆ ನೀನು ಯಾವ ಹುಡುಗರನ್ನು ಕಣ್ಣೆತ್ತಿ ಕೂಡ ನೋಡುತ್ತಿರಲಿಲ್ಲ ಬಿಡು. ಆದರೆ ಒಂದು ಹುಡುಗಿ ಹೇಗಿರಬೇಕೊ ಹಾಗಿದ್ದೆ. ಈಗಲು ಹಾಗೆ ಇದ್ದೀಯ ಅದೇ ನಿನ್ನ ಇಷ್ಟಗಲ ಮಗುವಿನಂತಹ ನಗುವಿನೊಂದಿಗೆ. ಅದೇನ ನನಗಿಷ್ಟವಾಗಿದ್ದು? ಎಲ್ಲಾ ಹುಡುಗರ ಹಾಗೆ ನಾನು ಕೇವಲ ನಿನ್ನ ಮಾತಿಗೆ ನಿನ್ನ ನಗುವಿಗೆ ಕರಗಿಬಿಟ್ಟೆನ? ಇಲ್ಲ, ಸಾದ್ಯವೇ ಇಲ್ಲ. ನನಗೆ ಇಷ್ಟವಾಗಿದ್ದು ನೀನು ಅಷ್ಟೆ. ನಿನ್ನೊಳಗಿನ ಆ ನಗು ಮಾತ್ರವಲ್ಲ ಕಣೆ, ಅಮ್ಮನಂತ ಪ್ರೀತಿಯಿದೆ, ಅಕ್ಕನಂತಹ ಅಕ್ಕರೆಯಿದೆ. ಆದರೆ ನೋಡು ನನಗೆ ಇದ್ಯಾವುದನ್ನು ಅನುಭವಿಸುವ ಭಾಗ್ಯವೇ ಇಲ್ಲ. ನಾನು ಅನಾಥ ಅನ್ನುವ ಭಾವ ಕಾಡದಿರುತ್ತದ ಹೇಳು. ನೀನು ಬಿಡು ಎಲ್ಲ ಕುಲ್ಲಂ ಕುಲ್ಲ. ನಾನಿನ್ನು ನಿನಗೇನು ಹೇಳಿರಲೇ ಇಲ್ಲ. ಅಷ್ಟರಲ್ಲಿಯೇ ನೀನು, ಮಾತಿನ ಮದ್ಯೆ “ಈ ಪ್ರೀತಿ ಪ್ರೇಮ ಎಲ್ಲ ನನಗಿಷ್ಟ ಇಲ್ಲಪ್ಪ, ಅಪ್ಪಿತಪ್ಪಿ ಕೂಡ ನನ್ನ ಮೇಲೆ ಯಾವುದೇ ತರಹದ ಭಾವನೆಯಿಟ್ಟುಕೊಳ್ಳಬೇಡ ನಾವಿಬ್ಬರು ಗೆಳೆಯ ಗೆಳತಿಯರಾಗಿದ್ದರೇನೆ ಮಜಾ ಅಲ್ಲವ” ಅಂತ ಇಷ್ಟಗಲ ನಕ್ಕು ಬಿಟ್ಟು ಫೋನಿಟ್ಟೆ ನೆನಪಿದೆಯಾ? ಹೌದು ಹೌದು ಹೌದು ಅಂತ ನಾನು ನಕ್ಕು ಸುಮ್ಮನಾಗಿ ನೀನು ಪೋನಿಟ್ಟ ಮೇಲೆ ಬಿಕ್ಕುತ್ತಿದ್ದೆ.

ಇದೆಲ್ಲವನ್ನ ನಿನಗೆ ಫೋನಿನಲ್ಲೇ ಹೇಳಬಹುದಿತ್ತು. ನಿನ್ನ ಧ್ವನಿ ಕೇಳಿದ ಕೂಡಲೆ ಹೇಳಬೇಕಾಗಿರೊದನ್ನೆಲ್ಲ ಮರೆತು, ಮಂಗನ ಹಾಗೆ ಬಲವಂತದಿಂದ ಯಾವುದೋ ಜೋಕು ಹೇಳಿಕೊಂಡುಬಲವಂತದ ನಗುವನ್ನ ಮುಖದ ಮೇಲೆ ತಂದುಕೊಳ್ಳೊದಕ್ಕೆ ಒದ್ದಾಡುತ್ತೀನಿ. ಅದಕ್ಕೆ ಈ ಪತ್ರ. ಪತ್ರಬರೆದಾದ ಮೇಲಾದ್ರು ನಿನಗೆ ತಲುಪಿಸ್ತೀನಿ ಅನ್ನೊ ಬರವಸೆ ನನಗೂ ಇಲ್ಲ. ಒಂದು ಮಾತು,.. ನಿನ್ನ ನಿರಾಕಾರಣೆ ನನ್ನ ಜೀವನದಲ್ಲಿ ಒಂದು ಕಪ್ಪು ಚುಕ್ಕಿಯಷ್ಟೆ. ಆ ಕಪ್ಪು ಚುಕ್ಕಿ ಮರೆಯಾಗೊದು ಸ್ವಲ್ಪ ತಡವಾಗಬಹುದು. ಇದೇ ಕಾರಣಕ್ಕೆ ನಿನ್ನ ಮೇಲೆ ದ್ವೇಷ ಸಾದಿಸೊಲ್ಲ. ಕನಸಿನಲ್ಲಿಯೂ ಕೂಡ ನಿನ್ನ ಬಗ್ಗೆ ಕೆಡುಕು ಬಯಸೊಲ್ಲ. ಬಾರು ಪಬ್ಬುಗಳ ಗೆಳೆತನ ನನ್ನಿಂದಾಗಲ್ಲ. ಯಾಕಂದ್ರೆ ನಾನು ನಿನ್ನ ಗೆಳೆಯ. ನೀನು ಇಷ್ಟು ಒಳ್ಳೆಯವಳಾಗಿರುವಾಗ ನಾನು ಹೇಗೆ ಅಷ್ಟು ಕೆಟ್ಟವನಾಗಿರೋಕೆ ಸಾದ್ಯ? ಇನ್ನು ತುಂಬಾ ತುಂಬಾ ಹೇಳೋದಿತ್ತು. ಇಷ್ಟು ಹೇಳೋಷ್ಟರಲ್ಲಿಯೇ ಯಾಕೊ ಕಣ್ಣುಗಳೆಲ್ಲ ನೀರು ನೀರಾಗಿ ಪತ್ರವೆಲ್ಲ ಒದ್ದೆಯಾಗುತ್ತಿದೆ. ಉಳಿದಿದ್ದು ನನ್ನೊಳಗೆ ಉಳಿದು ಬಿಡಲಿ ಬಿಡು. ನಾನು ಅಳಿಯುವ ತನಕ

ಇಂತಿ ನಿನ್ನ ಪ್ರೀತಿಯ
ನಾನ್ಯಾರು ?

ಕೂಡಲೇ ಅವಳಲ್ಲಿ ಒಂದು ಸುಳ್ಳು ಹೇಳಬೇಕಿತ್ತು ಇವನು. ಅವಳ ಕಣ್ಣುಗಳ ನೋಡಿ ತಡವರಿಸುತ್ತಲೇ ಸತ್ಯ ಹೇಳಿ ಒಂದು ಮುತ್ತು ಪಡೆದುಕೊಂಡ…!

——————————————————————-
ಮದುವೆಯಾಯಿತು.ಅವನು ಬದುಕಲು ಬೇಕಾಗುವ ಸಾಮಾನುಗಳ ಪಟ್ಟಿ ತಯಾರಿಸುತ್ತಿದ್ದ.
ಮತ್ತೆ ಇವಳ ಮುಖವನ್ನೊಮ್ಮೆ ನೋಡಿದ .ಸಾಮಾನುಗಳ ಪಟ್ಟಿ ಯಾಕೋ ಪೂರ್ತಿಯಾಗಲಿಲ್ಲ.
——————————————————————-

ಅದೆಷ್ಟೋ ಹಾಡುಗಳನ್ನ ಬರೆದಿದ್ದ. ಈಗ ಒಂದು ಬರೆಯಲಾಗುತ್ತಿಲ್ಲ ಅನ್ನುತ್ತಿದ್ದಾನೆ. ಮತ್ತೆ ಅವಳು ನೆನಪಾಗುತ್ತಿದ್ದಾಳೆ..ನೆನಪಾಗುತ್ತಿಲ್ಲ ಅನ್ನುತ್ತಿದ್ದಾನೆ…!
——————————————————————-

ಬಂಜೆ ಅಂದು ಮೂದಲಿಸಿದರು ಮಂದಿ. “ ನಿನಗೆ ನಾನು ಮಗು ನನಗೆ ನೀನು ಮಗು” ಅನ್ನುವ ತನ್ನವನ ಮಾತು ನೆನಪಾಗಿ ದುಃಖ ಕಮ್ಮಿ ಮಾಡಿಕೊಂಡಳು…!
——————————————————————-

ತಾನೆಷ್ಟು ಪ್ರೀತಿಸುತ್ತೇನೆ ಅಂತ ತನ್ನ ಗೆಳತಿಗೆ ಹೇಳುತ್ತಿದ್ದ. “ಎಷ್ಟು ಪ್ರೀತಿಸ್ತೀಯ” ಅಂದು ಕಣ್ಣು ಮಿಟುಕಿಸಿದಳು. ಇವನಿಗೆ ಆಕಾಶದಲ್ಲಿನ ನಕ್ಷತ್ರಗಳ ಲೆಖ್ಖ ಸಿಗಲಿಲ್ಲ.
——————————————————————-

ಪ್ರೀತಿಸಿದ್ದನ್ನ ಕುಷಿಯಿಂದ ಪುಟಗಟ್ಟಲೇ ಬರೆದುಕೊಂಡಳು.. ದ್ವೇಶಿಸಿದ್ದನ್ನ ಬಿಕ್ಕಳಿಸುತ್ತ ಒಂದು ಸಾಲು ಬರೆಯಲಾಗದೆ ಖಾಲಿಯಾದಳು.!
——————————————————————-

ಚಂದನೆಯ ಹೆಸರಿನ ಗೆಳೆಯ ಸತ್ತು ಹೋಗಿದ್ದ. ಹಾಳುಜನ ಕೂಡಲೇ ಅವನಿಗೊಂದು ಹೆಸರಿಟ್ಟಿದ್ದರು. “ಬಾಡಿ” ಇನ್ನು ಬಂದಿಲ್ಲವಂತೆ ಅನ್ನುತ್ತಿದ್ದರು.
——————————————————————-

“ ನನಗಿಷ್ಟ ಇಲ್ಲ ನೀನು” ಅಂದವನನ್ನೊಮ್ಮೆ ನೋಡಿದಳು. “ಮೊದಲು ನಾನಾಡಿದ ಮಾತುಗಳನ್ನ ಕಾಪಿ ಮಾಡ್ತೀಯೇನೊ” ಅಂದು ನಕ್ಕಳು. ಅವನು ನಗಲಿಲ್ಲ. ಮತ್ತೆ ಅವಳು ಯಾವತ್ತೂ ನಗಲಿಲ್ಲ.
——————————————————————-

ಗೆಳೆಯ ಗೆಳತಿಗೆ ದೇವರು ಪ್ರತ್ಯಕ್ಷವಾಗಿ ಏನು ವರ ಬೇಕು ಅಂತ ಕೇಳಿದ. “ಒಂದಿಷ್ಟು ಚಳಿಗಾಲ ಪ್ಲೀಸ್”ಅಂದು ಇಬ್ಬರೂ ನಕ್ಕರು.
——————————————————————-

ಒಂದು ದಿನ ತುಂಬಾ ಸುಂದರವಾದ ಹೂವುಗಳ ಓಟದ ಸ್ಪರ್ಧೆ ನಡೆಯಿತು. ನನ್ನವಳಿಗೆ ಮೊದಲ ಬಹುಮಾನ ಸಿಕ್ಕಿತು.
——————————————————————-

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಹೇಗಿದ್ದಿಯೋ ಒರಟ ? ಬಿಡೋ ನನಗೆ ಗೊತ್ತಿದೆ. ಯಾವುದೋ ಲೇಡೀಸ್ ಕಾಲೇಜ್ ಮುಂದೆ ನಿನ್ನ ಯಮಹ ಆರ್ ಎಕ್ಸ್ ಬೈಕಿನಲ್ಲಿ ರೌಂಡಿಂಗ್ ಮಾಡ್ತಿರ್ತಿಯ, ನೀನು ನಿನ್ನ ಆ ಡಬ್ಬಾ ಗಾಡಿ ನ ಓಡ್ಸೋ ಸ್ಪೇಡಿಗೇನೆ ಎಷ್ಟೋ ಹುಡುಗೀರ ಎದೆಯಲ್ಲಿ ಅವಲಕ್ಕಿ ಕುಟ್ಟುತಿರ್ತೀಯ, ಯಾವ ಹುಡುಗಿ ನೋಡೋಕೆ ವೈನಾಗಿದ್ದಾಳೆ ಅಂತ ಕಣ್ಣಲ್ಲೆ ಬೇಟೆಯಾಡುತಿರ್ತೀಯ, ನೋಡೋ ನಿನ್ನ ಎಲ್ಲಾ ದಶಾವತಾರಗಳನ್ನು ನಾನು ಬಲ್ಲೆ. ಆದರೆ ನಿನ್ನ ಆ ಅಮಾಯಕ? ಕಣ್ಣುಗಳಲ್ಲಿದೆಯಲ್ಲಾ ಆ ಅಮಾಯಕತೆ..! ನಿನ್ನೆಲ್ಲಾ ತರಲೆಗಳನ್ನ ಕ್ಷಮಿಸುವಂತೆ ಮಾಡುತ್ತೆ ಕಣೋ. ಎಷ್ಟು ಚೆಂದವಿದ್ದಾವೋ ನಿನ್ನ ಈ ಜಿಂಕೆ ಕಣ್ಣುಗಳು? ಒಂದೇ ಒಂದು ಸಲ ಮುತ್ತಿಡಲ? ಪ್ಲೀಸ್ ಕಣೋ. ಯಾಕೋ ಇಷ್ಟು ಹತ್ತಿರವಾಗಿ ಬಿಟ್ಟೆ ಬಿಟ್ಟಿರಲಾರದಷ್ಟು ?ಮುದ್ದು ಒರಟ, ಐ ಲವ್ ಯೂ ಗೊತ್ತ.

ಒಂದು ದಿನಾ ಆದ್ರು ತಲೆ ಬಾಚಿದ್ದಿಯೇನೊ ತರಲೆ? ಎಷ್ಟು ದಿನ ಆಯ್ತೊ ನಿನ್ನ ಕುರುಚಲು ಗಡ್ಡಗಳಿಗೆ ಬ್ಲೇಡು ತಾಗಿಸಿ? ಬೆಂಗಳೂರಿನ ಅಷ್ಟೂ ರಸ್ತೆಗಳನ್ನ ನಿನ್ನ ಹರಕಲು ಮುರುಕಲು ಜೀನ್ಸ್‌ಲ್ಲೆ ಗುಡಿಸಿ ಸ್ವಚ್ಚ ಮಾಡುತ್ತೀಯಲ್ಲೊ? ನೋಡೋ ನಿನಗೇ ಅಂತಾನೆ ಮಿಂಚಿಂಗ್ ಮಿಂಚಿಗ್ ಡ್ರೆಸ್ಸೆಲ್ಲ ಹಾಕೊಂಡು ಕ್ಲಾಸಿನ ಮೊದಲ ಬೆಂಚಲ್ಲೆ ನಿನ್ನ ಕಣ್ಣುಗಳ ಬೇಟೆಯಾಡಲು ಕುಳಿತರೆ, ನಿನೇನೋ ಆ ಕುಂದಾಪುರದ ಕೋಮಲಾಂಗಿ ಪಕ್ಕದಲ್ಲೆ ಕುಳಿತುಕೊಂಡು ಹಲ್ಲುಗಿಂಜುವುದು? ಅದು ಅಲ್ಲದೇ ನಿಂದೇನು ಆ ಹಿಸ್ಟರಿ ಟೀಚರಮ್ಮ ಬಾಯಿಬಡಕಿ ಆಂಟಿಯ ಜೊತೆ ಕಣ್ಣು ಸನ್ನೆ ಬಾಯಿ ಸನ್ನೆ? ನನಗೆ ತುಂಬಾ ಕೋಪ ಬರತ್ತೆ ಕಣೋ, ಆ ಕೋಪದಲ್ಲಿ ಹಂಗೆ ನಿನ್ನ ತಬ್ಬಿಕೊಂಡು ನಿನ್ನ ಉಸಿರುಗಟ್ಟಿಸಿ ಹಾಗೆ ನಿನ್ನ ಕಣ್ಣುಗಳಿಗೆ ಲೊಚ್ಚ್ ಅಂತ ಒಂದು ಮುತ್ತು ಕೊಟ್ಟು ಬಿಡ್ತೀನಿ ನೋಡು.

ಎಷ್ಟು ಹುಡುಗೀರನ್ನ ನೋಡಿದ್ದೀಯ ನೀನು? ಅದಕ್ಕಿಂತ ಜಾಸ್ತಿನೇ ಜೊಲ್ಲು ಜೊಲ್ಲು ಹುಡುಗರನ್ನ ನಾನು ನೋಡಿದ್ದೀನಿ ಕಣೊ. ಆದರೆ ಯಾವತ್ತು ನಿನ್ನ ಹಾಗೆ ಅಮ್ಮಾ ತಾಯಿ ಅಂತ ಹೋಗಿಲ್ಲ ತಿಳ್ಕೋ. ಜೀವನ ಅಂದ್ರೆ ಒಂದು ಹುಡುಗಿಯ ತೋಳ ತೆಕ್ಕೆಯಲ್ಲಿ ಕರಗಿ ನೀರಾಗುವುದು ಅಂದುಕೊಂಡಿದ್ದೀಯೇನೊ ಬೆಪ್ಪ? ಎಷ್ಟು ದಿನ ನೀನು ಆ ಜೋಷ್ ನಲ್ಲಿರ್ತೀಯ ? ಎಷ್ಟು ದಿನ ನೀನು ಆ ಖುಷಿನಲ್ಲಿರ್ತೀಯ? ಇವೆಲ್ಲ ನೀರ ಮೇಲಿನ ಗುಳ್ಳೆಗಳು ಕಣೊ. ಬಾ ಜೀವನ ಅಂದ್ರೆ ನಾನು ನಿನಗೆ ಹೇಳಿ ಕೊಡ್ತೀನಿ, ನೀನು ನನಗೆ ಹೇಳಿ ಕೊಡು. ಜೀವನ ಪೂರ್ತಿ ನಾವಿಬ್ರೂ ಜೊತೆಯಾಗಿರಬಹುದು ಕಣೊ.ನಿನ್ನೆಲ್ಲ ತರಲೆ ತಾಪತ್ರಯಗಳ ಹೊರತಾಗಿಯೂ.

ನಿಜ ಹೇಳೋ ನನಗೇನಾಗಿದೆ? ಹಿಸ್ಟರಿ ಟೀಚರಮ್ಮ ತರ ಗುಂಡುಗುಂಡಾಗಿದ್ದೀನ? ಅಥವ ನಿನ್ನ ಕುಂದಾಪುರದ ಕೋಮಲಾಂಗಿ ತರ ಸಣಕಲು ಬಡಕಲು ಮೇಕೆ ತರ ಇದ್ದೀನ? ಒಂದು ಸಲ ನೋಡೊ ನನ್ನ , ಸುಮ್ಮನೆ ನನ್ನ ಮುಟ್ಟಬೇಕೆಂದರೂ ನೀನು ಕೈತೊಳೆದು ಮುಟ್ಟಬೇಕು ಕಣೊ ಹಾಗಿದ್ದೀನಿ. ಜೊತೆಗೆ ನಿನಗೇ ಅಂತಾನೆ ಜೋಪಾನವಾಗಿಟ್ಟುಕೊಂಡಿರುವ ಬಂಗಾರದಂತಹ ಹೃದಯ..! ಆದರೆ ನೀನು? ಮುಟ್ಟಿ ಕೈತೊಳೆದುಕೊಳ್ಳಬೇಕು ಹಾಗಿದ್ದೀಯ ಒರಟ, ನೋಡು ಪ್ರೀತಿಗೆ ಬಣ್ಣದ ಹಂಗಿಲ್ಲ ಕಣೊ, ನಿನ್ನ ಒರಟುತನ, ನಿನ್ನ ಸೋಮಾರಿತನ, ನಿನ್ನ ಅಲೆಮಾರಿತನ, ನಿನ್ನ ಲೋಲುಪತನ ನಿನ್ನ ಹೆಣ್ಣುಬಾಕತನ, ಇದ್ಯಾವುದು ನಿನ್ನ ಮೇಲಿರುವ ನನ್ನ ಆರಾಧನಾಭಾವವನ್ನ ಕಡಿಮೆಮಾಡದು ಕಣೊ . ನನಗೆ ಬೇಕೆಂದರೆ ಸಾಲು ಸಾಲು ಜೊಲ್ಲು ಮುಖದ ಹುಡುಗರನ್ನ ಸಾಲು ಸಾಲಾಗಿ ನಿಲ್ಲಿಸ್ತೀನಿ ಕಾಲೇಜಿನ ಕಾಂಪೌಂಡಿನ ಮುಂದೆ. ಆದರೆ ಅವರ ಕಣ್ಣುಗಳಲ್ಲಿ ನನ್ನ ಚಿತ್ರ ಕಾಣೊಲ್ಲಗೊತ್ತ. ಅದು ನಿನ್ನ ಕಣ್ಣುಗಳಲ್ಲಿ ಮಾತ್ರ ಕಣೋ. ಈ ಸಲದ ನಿನ್ನ ಯಮಹ ಬೈಕಿನ ಸಂಜೆಯ ಹುಡುಗಿಯರ ಕಾಲೇಜಿನ ರೌಂಡಿಂಗ್ಸ್ ಗೆ ನಾನು ಜೊತೆಯಾಗಿರ್ತೀನಿ. ನೋಡೋಣ ಅದ್ಯಾರು ನಿನ್ನ ಈ ಕೋತಿ ಮೂತಿಗೆ ಮರುಳಾಗ್ತಾರೆ ಅಂತ..ಯಾರಾದ್ರು ನಿನ್ ಕಡೆ ನೋಡ್ಲಿ, ಹಂಗೆ ಕಣ್ಣು ಕಿತ್ತಾಕಿಬಿಡ್ತೀನಿ. ನೀನು ಇಷ್ಟೊಂದು ಒರಟ ಆದ್ರೆ ನಾನಾಗಬಾರದೇನೊ? ಆದ್ರೆ ನೋಡೊ ಮನಸ್ಸು ಮಾತ್ರ ನವಿಲುಗರಿಯ ಹಾಗೇನೆ ಗೊತ್ತ. ಒಂದು ಸಲ ಸುಮ್ಮನೆ ಈ ಎದೆಯೊಳಗೆ ಬಾ…ನಿನ್ನ ಜೋಪಾನವಾಗಿ ಬಚ್ಚಿಟ್ಟುಕೊಳ್ಳುತ್ತೀನಿ.ನೀನು ಅಲ್ಲಿರುವ ನಿನ್ನದೇ ಹಾಡುಗಳನ್ನ ನನ್ನ ರಾಗದಲ್ಲೇ ಹಾಡುವಂತೆ. ಜಗತ್ತಿಗೆಲ್ಲ ಪ್ರೇಮಗೀತೆ ಅಮಲು ಹತ್ತಿಕೊಳ್ಳುವಂತೆ ಮಾಡೋಣ. ಏನಂತೀಯೊ ಓರಟ?

ನಾನು ನಿನ್ನ ರಸ್ತೆಯಲ್ಲಿ
ಕೊನೆಯವರೆಗೂ ಸಾಗಬೇಕಿತ್ತು,
ಮದ್ಯೆ ಮದ್ಯೆ ದಾರಿ ಹರಿದಿತ್ತು
ಮತ್ತೆ ಬೆಳಕು ಮುನಿದಿತ್ತು.
ಪೂರ್ತಿಯಾಗುವ ಮೊದಲೆ
ಪ್ರಯಾಣ ಮುಗಿದಿತ್ತು.

ನಿನಗೇ ಅಂತ ನಾನು
ಬರೆದಿಟ್ಟ ಹಾಡುಗಳ
ಎಲ್ಲಾ ಸಾಲುಗಳು
ಅಳಿಸಿಹೋಗಿದ್ದವು
ಮತ್ತೆ ಬೆರೆಯೋಣವೆಂದರೇ
ನೀನು ನೆನಪಾಗುತ್ತಿದ್ದಿಯಾ
ಮತ್ತೆ ನೆನಪಾಗುತ್ತಿಲ್ಲ!

ಹಾಗೆ ಒಂದು ಸಲ ಅತ್ತು
ಬಿಡೋಣವೆಂದು ಕೊಂಡರೇ
ನಿನಗೆ ಕೊಟ್ಟ ಮಾತು, ಮತ್ತೆ
ಅತ್ತಾಗ ನೀನಿಟ್ಟ ಮುತ್ತು ನೆನಪಾಯಿತು.!
ದುಃಖ ನುಂಗಿಕೊಂಡೆ..ಅದರೂ
ಮಾತು ಉಳಿಸಿಕೊಳ್ಳಲಾಗುತ್ತಿಲ್ಲ
ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ !

ಎಲ್ಲಾ ನೆನಪುಗಳಿಗೂ
ಒಂದು ಸಮಾಧಿ ಕಟ್ಟಿಸಬೇಕು!
ಎಲ್ಲಾ ಹನಿಗಳಿಗೂ ಒಂದು
ದೊಡ್ಡ ನದಿಯ ಹುಡುಕಬೇಕು !
ಮತ್ತೆ ನಾನು ದೂರ ದೂರ ಹೋಗಬೇಕು
ಕ್ಷಮಿಸು ಅಲ್ಲಿ ನೀನು ನೆನಪಾಗೊಲ್ಲ
ಮತ್ತೆ ನೆನಪಾಗಬಾರದು ಕೂಡ!

——————————————————–
ಶೆಟ್ಟರ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದ ಗಂಡನಿಗೆ, ತನ್ನ ಹೆಂಡತಿಯ ಗಲ್ಲದ ನೆನಪಾಗಿ, ನಾಚಿ ನೀರಾಗಿ, ಬೆಲ್ಲ ತರುವುದು ಮರೆತುಬಿಟ್ಟ.
——————————————————–
ಅಮ್ಮನಿಗೀಗಾಗಲೇ ಅರ್ಜೆಂಟ್ ಕಾಶಿಗೆ ಹೋಗಬೇಕಾಗಿದೆ. ದೇವರ ಮನೆಯಲ್ಲಿರುವ ಹಳೆಯ ಡಬ್ಬಿಗೆ ಅಗಾಗ ಒಂದೆರೆಡು ರೂಪಾಯಿಗಳನ್ನ ತುಂಬುತ್ತಿದ್ದಾಳೆ ಅದರೂ ತುಂಬುತ್ತಿಲ್ಲ..ಮಗ ಎಮ್ ಎನ್ ಸಿ ಕಂಪನಿಯ ನೌಕರನಂತೆ.
——————————————————–
ನಾಲ್ಕು ಹೆಜ್ಜೆಗಳು ಒಟ್ಟಿಗೆ ಹೋಗಬೇಕು ಅಂತ ಎರೆಡು ಹೆಜ್ಜೆಗಳು ಬಯಸಿದ್ದವು. ಎರೆಡು ಹೆಜ್ಜೆಗಳು
ಒಪ್ಪಲಿಲ್ಲ.ಕೊನೆಗೆ ನಾಲ್ಕೂ ಹೆಜ್ಜೆಗಳು ಅನಾಥವಾದವಂತೆ.
——————————————————–
ಗೆಳೆಯ ಗೆಳತಿ ಬೆಟ್ಟು ಕಟ್ಟಿದರು.ಚಳಿಗಾಲ ಬೆಚ್ಚಗಿರುತ್ತೆ ಅಂದ ಗೆಳೆಯ ಬೆಟ್ಟು ಗೆದ್ದುಬಿಟ್ಟ.
——————————————————–
ಒಂದು ಕತೆಯ ಪಾತ್ರಕ್ಕೆ ನ್ಯಾಯ ಸಿಕ್ಕಿಲ್ಲವಂತೆ. ನ್ಯಾಯಕ್ಕಾಗಿ ಕಾದಂಬರಿಕಾರನ ಹತ್ತಿರ ಧರಣಿ ಕೂತಿದೆ. ಕಾದಂಬರಿಕಾರ ತನ್ನ ತಾನು ಸಂತೈಸಿಕೊಳ್ಳುತ್ತಿದ್ದಾನೆ.
———————————————————
ಪ್ರೇಮಿಗಳು ಮದುವೆಯಾದರು.ಮದುವೆಯಾಗಲು ಕಾರಣರಾದ ಎಲ್ಲರನ್ನು ನೆನೆಸಿಕೊಂಡು
ಕೃತಜ್ನತೆ ಅರ್ಪಿಸಿದರು. ಆದರೆ ಯಾಕೋ ನಾಲ್ಕೂ ಕಣ್ಣುಗಳು ಧಾರಾಕಾರವಾಗಿ ಅಳುತಿದ್ದವು.
———————————————————
ಅವಳ ಗೆಜ್ಜೆ ಸದ್ಧು ಮದುವೆಯ ಮೊದಲು ಹೇಗೆ ಕೇಳಿಸುತ್ತಿತೋ ಈಗ ಹಾಗೆಲ್ಲ ಕೇಳಿಸುತ್ತಿಲ್ಲವಂತೆ.
ಗೆಜ್ಜೆ ತೆಗೆದಿಟ್ಟು ಮನೆಯಲ್ಲಿ ಒಡಾಡಬಾರದ ಅಂದು ಸಿಡುಕುತ್ತಿದ್ದಾನೆ.
———————————————————
ಒಂದೂರಲ್ಲಿ ಒಂದು ಹುಡುಗನಿದ್ದ. ಮದುವೆಯಾದ. ಒಂದು ತಿಂಗಳು ಹನಿಮೂನು ಮುಗಿಸಿಕೊಂಡುಬಂದ.
ಅದೇ ಊರಿನಲ್ಲಿ ಒಂದು ಮುದ್ದಾದ ಹುಡುಗಿ.ಆ ಹುಡುಗಿಯ ಆತ್ಮಕ್ಕೂ ಒಂದು ತಿಂಗಳಾಗಿತ್ತು.
———————————————————-
ಇದು ನಿನಗೆ ನಾನು ಬರೆಯುತ್ತಿರುವ ಕೊನೆಯ ಪತ್ರ ಅನ್ನುವ ಪತ್ರ ಅವಳಿಗೆ ಸಿಕ್ಕಿದ್ದು ಒಂದರ ಹಿಂದೊಂದು ಜೋಡಿಸಿಟ್ಟ ಅವನ ೫೦೦ ಪ್ರೇಮ ಪತ್ರಗಳ ಅಡಿಯಲ್ಲಂತೆ.
———————————————————–
ಅವನು ಡಿವೋರ್ಸ್ ತಗೊತೀನಿ ಅಂತ ತಮಾಷೆಗೆ ಅಂದ. ಇವಳು ದೇವರ ಮುಂದೆ ಹಣತೆ ಹಚ್ಚಿಟ್ಟು
ನಿಜಕ್ಕೂ ಅತ್ತಿದ್ದಳೂ ಅನ್ನುವುದಕ್ಕೆ ಸಾಕ್ಷಿಯಾಗಿ ಹಣತೆಯಾರಿತ್ತು.ಅಲ್ಲಿ ಅವಳ ಕಣ್ಣೀರಿತ್ತು

(ವಿಜಯ-ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಒಲವಿನ ಭಾನು.

ಹೀಗೆ ನಿನ್ನ ಹೆಸರು ಬರೆಯಲು ಹೊರಟ ಈ ಪೆನ್ನಿನ ಮೂತಿಯ ತುದಿ ಬಂಗಾರವಾಯಿತು..ಹಾಗೆಯೇ ನಿನ್ನ ಹೆಸರು ಬರೆಸಿಕೊಂಡ ಈ ಹಾಳೆಯ ಮೇಲೆ ಬಂಗಾರದ ಚಿತ್ತಚಿತ್ತಾರಗಳು.ನಿನ್ನ ನೆನಪು ಮಾಡಿಕೊಂಡ ನನ್ನ ಮನಸ್ಸಿಗೆ ಈಗಾಗಲೇ ಬಂಗಾರದ ಕಾಲುಗಳು.ನಿನ್ನ ತುಂಬಿಕೊಂಡ ಈ ಕಂಗಳಲ್ಲಿ ಬಂಗಾರದ ಕನಸುಗಳು.ನಿನ್ನ ಜೊತೆ ಇಡಬೇಕಾದ ಹೆಜ್ಜೆಗಳ ಹಿಂದುಮುಂದೆಲ್ಲ ಬಂಗಾರದ ಹೂವುಗಳು.ನನ್ನೊಳಗೆ ನೀನಿಟ್ಟ ಎಲ್ಲ ರಂಗೋಲಿಗಳು ಕೂಡ ಬಂಗಾರದ ಚುಕ್ಕಿಗಳು ಅಲ್ಲವ? ನಿನ್ನ ತಬ್ಬಿಕೊಂಡ ಈ ಎದೆಯ ಅಷ್ಟೂ ರೋಮಗಳಲ್ಲಿ ಬಂಗಾರದ ತೆನೆಗಳು.ನಿನ್ನ ಜೊತೆ ನಾನಿರುವ ಒಂದು ಚಿಕ್ಕ ಗುಡಿಸಲು ಕೂಡ ಬಂಗಾರದ ಅರಮನೆ. ಕೈಬಳೆ ಬಂಗಾರವಲ್ಲ, ನಿನ್ನ ಕೈ ಬಂಗಾರ. ಕಾಲ್ಗೆಜ್ಜೆ ಬಂಗಾರವಲ್ಲ, ನೀನಿಟ್ಟ ಪ್ರತಿಹೆಜ್ಜೆಂii ಸಪ್ಪಳ ಕೂಡ ಬಂಗಾರವೇ. ನಿನ್ನ ಜೊತೆಗಿದ್ದ ಈ ಆರುನೂರ ಇಪ್ಪತ್ತು ದಿನಗಳು ಬಂಗಾರದಂತ ದಿನಗಳೇ ಆಗಿದ್ದವು. ಇನ್ನು ಜೊತೆಗಿರುವ ಸಾವಿರಾರು ದಿನಗಳೂ ಬಂಗರದಂತ ದಿನಗಳೇ ಆಗಿರುತ್ತವೆ.

ಭಾನು… ನಿನಗೆ ಒಂದು ಪತ್ರಬರಿಲಿಕ್ಕೆ ಕುಳಿತವನಿಗೆ ನೋಡು ಏನೂ ತೋಚುತ್ತಿಲ್ಲ. ನೀನು ನನ್ನೆಡೆಗಿಟ್ಟಿರುವ ಪ್ರೀತಿಗೆ ಈ ಪತ್ರ ತುಂಬ ಚಿಕ್ಕದು ಕಣೆ. ಮೊದಮೊದಲು ತುಂಬಾ ಗೋಳು ಹೊಯ್ದುಕೊಂಡೆ ಕ್ಷಮೆಯಿರಲಿ. ನಾನಿರುವ ಕಲರ್ ಗೆ ಅಷ್ಟೊಂದು ಸ್ಕೋಪ್ ತಗೋಬಾರದಿತ್ತು ಅದಕ್ಕೊಂದು ಕ್ಷಮೆಬೇಕು. ನಿಂಜೊತೆ ಸಿನಿಮಾಗೆ ಬರಲಿಲ್ಲ ಅದಕ್ಕೂ ಕ್ಷಮೆಬೇಕು. ನಿಂಜೊತೆ ಗುಟ್ಟಾಗಿ ಕುಳಿತು ಬೈಟು ಟೀ ಕುಡಿಯಲಿಲ್ಲ, ಇಲ್ಲಿಯವರೆಗೆ ಒಂದು ಪುಟಾಣಿ ಐಸ್ಕ್ರೀಮ್ ತಿನ್ಸಿಲ್ಲ, ನಿನ್ನ ಕೆಲವು ನೋವುಗಳಿಗೆ ನಗು ತುಂಬಲಿಲ್ಲ,ಅದಕ್ಕೂ ಕ್ಷಮೆಯಿರಲಿ. ಕೆಲವು ಸಲ ತುಂಬಾ ಕೆಟ್ಟದಾಗಿ ಬೈದಿದ್ದೀನಿ ಅದಕ್ಕೊಂದು ದೊಡ್ಡ ಕ್ಷಮೆ ಇರಲಿ. ಆದರೂ ಇಂದಿಗೂ ಬೆಟ್ಟದಷ್ಟು ಪ್ರೀತಿಸುತ್ತಿದ್ದೀಯ ಅಲ್ಲವ, ಅದಕ್ಕೆ ನಿನ್ನ ಬಂಗರದಂತವಳು ಅಂತ ಕರೆದಿದ್ದು. ನಿಜಕ್ಕೂ ನಿನಗೆ ನಾನು ಅರ್ಹನ ಅಂತ ಯೋಚಿಸ್ತಿರೋವಾಗಲೇ, ಚಿನ್ನ.. ಮಿಸ್ ಯೂ ಅನ್ನುವ ನಿನ್ನ ಬಂಗಾರದಂತಹ ಎಸ್ಸೆಮ್ಮೆಸ್ಸ್ ಬಂದುಬಿಡುತ್ತೆ. ಎಲ್ಲವನ್ನು ಮರೆತು ನಾನು ಮಿಸ್ ಯು ಟೂ ಅಂದುಬಿಡುತ್ತೇನೆ.

ಭಾನು… ನಿಜಕ್ಕೂ ಹುಡುಗಿಯರಿಗೆ ಒಂದಿಷ್ಟು ಆಸೆಗಳು ಅಂತ ಇರ್ತಾವಂತೆ ನಿಜಾನ? ಹುಡುಗ ಸುಂದರವಾಗಿರ್ಬೇಕು, ಬಹಳ ಎತ್ತರವಾಗಿರಬೇಕು, ಕಣ್ಣು ತುಂಬಾ ಚಂದವಿರಬೇಕು, ಪಸ್ಟ್ ಕ್ಲಾಸ್ ಅನ್ನುವ ಕೆಲ್ಸ, ಕೈ ತುಂಬ ಸಂಬಳ..ಹೀಗೆ ಇಷ್ಟೆ ಚಿಕ್ ಚಿಕ್ಕ ಆಸೆಗಳು ಕಣೆ..ಇದೆಲ್ಲ ನಿಜ ಅಲ್ವ? ಆದರೇ ನಾನಿದರಲ್ಲಿ ಏನು ಅಲ್ಲವಲ್ಲೆ? ಸದ್ಯಕ್ಕೆ ನಾನು ಖಾಲಿ ಜೇಬಿನ ಪಕೀರ..ಈಗ ಹೇಳಿಕೊಳ್ಳುವಂತ ಕೆಲ್ಸವಾಗಲಿ,ಸಂಬಳವಾಗಲಿ,ಯಾವುದೂ ಇಲ್ಲ ಗೊತ್ತ? ಗೊತ್ತಿಲ್ಲದೇ ಏನು..! ನನ್ನನ್ನಿಷ್ಟಪಡುವ ವೂದಲ ದಿನದಂದೇ ನಿನ್ಗೆಲ್ಲ ತಿಳಿದಿತ್ತು..ಆದರೂ ಹಚ್ಚಿಕೊಂಡೆ ಮೆಚ್ಚಿಕೊಂಡೆ..ಯಾಕೆ? ಪ್ರಶ್ನೆ ಕೇಳಿದ್ದೀನಿ ಉತ್ತರ ಹೇಳಬೇಕಾದವಳು ನೀನು..ನನಗೆ ಗೊತ್ತು ನೀನು ಹೇಳೋಲ್ಲ..ಮಿಸ್ ಯೂ ಅಂತ ಮೆಸ್ಸೇಜ್ ಕಳ್ಸೋದು ಬಿಟ್ರೆ ಮತ್ತೇನು ಗೊತ್ತಿಲ್ಲ ನಿಂಗೆ.

ಮತ್ತೇನು ಇಲ್ಲಪ್ಪ..ಯಾಕೋ ಪತ್ರಬರಿಬೇಕು ಅನ್ನಿಸ್ತು ಅದ್ಕೆ ಒಂದೆರೆಡು ಸಾಲು ಬರೆದೆ. ಓದಿ ನಿನಗಿಷ್ಟ ಆಗಿ ಮಿಸ್ ಯೂ ಅಂತ ಒಂದೆಸ್ಸೆಮ್ಮೆಸ್ ಬಂದ್ರು ನನಗಷ್ಟೇ ಸಾಕು. ಮತ್ತೊಂದು ವಿಷ್ಯ.. ಬೆಳಗ್ಗಿನ ಜಾವಕ್ಕೇ ಎದ್ದು ನೀನು ಕೆಲ್ಸಕ್ಕೆ ಹೋಗೊದು ನೆನೆಸಿಕೊಂಡ್ರೆ ತುಂಬಾ ಬೇಜಾರು ಕಣೆ..ಹಂಗೆ ಬೆಳಗ್ಗೆ ೯ ಗಂಟೆಯವರೆಗೂ ನಿನ್ನ ತಬ್ಬಿಕೊಂಡು ಮುಸುಕೆಳೆದು ಮಲಗಿಬಿಡಬೇಕು ಅನ್ನಿಸುತ್ತೆ. ಮುಂದೊಂದು ದಿನ ಇದೆಲ್ಲ ಇದ್ದಿದ್ದೆ ಅಲ್ಲವ? ಸರಿ ನಿಂಗೆ ಇನ್ನೊಂದು ವಿಷ್ಯ ಹೇಳಬೇಕು ಅಂತ ಇದ್ದೀನಿ. ಅದೇನಪ್ಪ ಅಂದ್ರೆ ತುಂಬಾ ತುಂಬಾ ಲವ್ ಯೂ… ಮತ್ತೆ ತುಂಬಾ ತುಂಬಾ ಮಿಸ್ ಯೂ..

ಯಾವತ್ತೂ ನಿನ್ನ
ಕರಿಯ

ಕೆಲವೊಂದು ಸಮಯದಲ್ಲಿ ವಾರಪೂರ್ತಿ ಗುಬ್ಬಚ್ಚಿಯ ಹಾಗೆ ಕುಳಿತರೂ ಗುಬ್ಬಚ್ಚಿ ಗಾತ್ರದ ಒಂದು ಪುಟಾಣಿ ಕವನ ಬರಿಯುವುದೂ ಕೂಡ ಒಂದೊಂದು ಸಲ ಅಗದ ಮಾತು..ಆದರೇ ಇಲ್ಲಿ ನನ್ನ ಪ್ರೀತಿಯ ಗೆಳೆಯ “ನೀಲಿಹೂವಿನ” ರಂಜಿತ್ ಮತ್ತು ಗೆಳತಿ “ಹೇಮಾಂತರಂಗದ” ಹೇಮಾ ಹಾಗೆ ಸುಮ್ಮನೆ ಮಾತನಾಡುತ್ತಲೇ ಒಂದು ಶಾಕ್ ಕೊಟ್ಟಿದ್ದಾರೆ..ನನಗಿಷ್ಟ ಆಯ್ತು..ನಿಮಗೂ ಇಷ್ಟವಾಗುತ್ತೆ ಅನ್ನುವ ನಂಬಿಕೆಯೊಂದಿಗೆ ಅವರ ಒಪ್ಪಿಗೆಯನ್ನ ಕೇಳದೇ ಇಲ್ಲಿ ಹಾಕುತ್ತಿದ್ದೇನೆ. ಒಪ್ಪಿಸಿಕೊಳ್ಳಿ..

ಥಾಂಕ್ಸ್ ಹೇಮಾ ಡಿಯರ್ ಮತ್ತು ರಂಜಿತ್
————————————————————————————————
hema:
ದೇಹವಿದೆ ಉಸಿರಿಲ್ಲ,
ಕಣ್ಗಳಿವೆ ನೋಟವಿಲ್ಲ,
ಹೃದಯವಿದೆ ಪ್ರೀತಿಯಿಲ್ಲ,
ಆರ್ಕುಟ್ ಇದೆ…… ಬೇಕಾದವರ ಸ್ಕ್ರಾಪೇ ಇಲ್ಲ
——————————–
Ranjith:
ಏ ಜಂಭದ ಹುಡುಗೀ
ಹೆಚ್ಚಾಗಿವೆ ನಿನ್ನ ಮಾತುಗಳು ಈ ನಡುವೆ,
ಬಾಯಿಗೊಂದು ಬೀಗ ಬೇಕಿವೆ
ಅರ್ಜೆಂಟಾಗಿ ಮಾಡಬೇಕಿದೆ ಮದುವೆ,
ನನ್ನ ಒಂದು ಫೋನ್ ಕಾಲ್ ಸಾಕು ನಿನ್ನಪ್ಪನಿಗೆ,
ಕೂಡಲೇ ನೀನಂದು ವಧುವೇ..:)
—————————-
hema:
ಹೇ ರಂಜಿತ್, ನಿನಗಿದು ತರವೇ,
ಗೆಳೆಯನೆಂದುಕೊಂಡಿದ್ದೆ ನಿನ್ನನ್ನು,
ನನ್ನನ್ನೇ ನೇಣುಗಂಬಕ್ಕೇರಿಸಲು
ಅಣಿ ಮಾಡುತ್ತಿರುವೆ….
—————————-
Ranjith:
ಮದುವೆಗೆ ನೇಣೇಕೆ ಹೋಲಿಕೆ?
ನೂರು ಮಕ್ಕಳ ಜತೆ ಆಟವಾಡಿಕೊಂಡಿರಲು
ಮದುವೆಯೆ ಅಲ್ಲವೆ ಪೀಠಿಕೆ? ;-)
ಬೇಗ ನಿನಗೊಂದು ಸಾಥಿ ಸಿಗಲಿ ಎಂಬುದಷ್ಟೇ ನನ್ನ ಆಶಯ,
ಆಗಲೇ ನನ್ನೆದೆಯಲಿ ಕಾಯುತಿದೆ ನಿನಗೊಂದು ಶುಭಾಶಯ…
—————————-
hema:
ಇಂಜಿನಿಯರ್ ಕೆಲಸ ನಿಲ್ಲಿಸಿ,
ಮ್ಯಾಚ್ ಮೇಕರ್ ಕೆಲಸ ಶುರು ಮಾಡಿಬಿಡಿ,
ಜಟ್ ಪಟ್ ಅಂತ ನನಗೊಂದು ಗಂಡು ನೋಡಿಬಿಡಿ,
ವರ್ಷ ವರ್ಷವೂ ಆಟವಾಡಲಿಕ್ಕೆ ನಿಮಗೊಂದು ಪಾಪ
ಇನ್ನೂ ಬರೀಲಿಕ್ಕೆ ನನಗೆ ನಾಚಿಕೆಯಾಗುತ್ತೆ ಹೋಗೀಪಾ……
—————————-
Ranjith:
ಉತ್ತರಿಸಲಾಗದೇ ಬೆವರ್ ಬಂತೆ?
ಪೋವಾರ್ ಮೆದುಳಿಗೆ ಪವರ್ ಹೋಯ್ತೇ?:)
—————————-
Hema:
ಪವರ್ ಬೇರೆ ಬೇಕೆ ರಂಜಿತ್ ಗೆ ಉತ್ತರಿಸಲು?
ಬ್ರಹ್ಮಾಸ್ತ್ರ ಬೇಕೇನು ಗುಬ್ಬಿಯನ್ನು ಸಾಯಿಸಲು?
—————————-
Ranjith:
ಮಾಡಬೇಕು ಕವಿಗಳ ಸಂಗ..
ಬೇಕಿತ್ತೇ ನಿಮಗೆ ಅವರ ಜತೆ ಪಂಗಾ?
—————————-
Hema:
ಪಂಗ ತೆಗೆದರೆ ಅಲ್ಲವೆ ಕವಿತೆಗಳು ಹುಟ್ಟುವುದು,
ನಿಮ್ಮಿಂದ ನಾವು ಕವಿಯತ್ರಿ ಎನಿಸಿಕೊಳ್ಳುವುದು
—————————-
Ranjith:
ಅಂತೂ ಇಂತೂ
ಜಟ್ ಪಟ್ ಆಗಿ
ಮನದಾಸೆ ಹೊರಬಂತು…:)
ನಿಮ್ಮ ಖುಷಿಗಾಗಿ ಆಗುವುದ
ಬಿಟ್ಟು ಇಂಜಿನೀರು,
ಮ್ಯಾಚುಮೇಕರೇನು
ಆಗಬಲ್ಲೆ ಅಡುಗೆ
ಕಾಂಟ್ರಾಕ್ಟರು..
—————————-
hema:
ನಿಮ್ಮನ್ನು ಅಷ್ಟೊಂದು ಕಾಡಿಸಿ ಮಾಡಿಕೊಳ್ಳುವ ಮದುವೆಯಾದರೂ ಯಾಕೆ, ಅಡಿಗರನ್ನು ಅಡಿಗೆ
ಕಾಂಟ್ರಾಕ್ಟರ್ ಆಗಿಸಿ ನಾನೇನು ನರಕಕ್ಕೆ ಹೋಗಬೇಕೆ?
(ಅಂದಹಾಗೆ, ನಾನುಮದುವೆಗೆ ಅವಸರವೆಂದು ಹೇಳಿದೆನೆ?
ಕಾಣದ ಸುಂದರಿಗೆ ಕಾಯುತ್ತಿರುವುದು ನಾನಲ್ಲ ನೀನೆ )
—————————-
Ranjith:
ಹದ್ದನ್ನು ಗುಬ್ಬಿ ಎಂದುಕೊಳ್ಳುವುದು ಮುಗ್ಧತೆ,
ರಂಜಿತ್ ಗೆ ಉತ್ತರಿಸಲು ಒದ್ದಾಡುವುದನು ಬಿಟ್ಟು
ಮಾಡು ನೀ ನಿನ್ನ ಮದುವೆಗೆ ಸಿದ್ದತೆ..:)
—————————-
hema:
ಸಿದ್ದತೆ ಮಾಡಿಕೊಳ್ಳಲೇನಿದೆ ಮದುವೆಗೆ,
ಸಿಂಗಾರ ಬೇಕೇನು ವಧುವಿನಂತೆ ಕಾಣುವ ಹುಡುಗಿಗೆ?
—————————-
Ranjith:
ಕವಿಯತ್ರಿ ಅನ್ನಿಸಿಕೊಳ್ಳಬೇಕಾದ್ರೆ ತೆಗೆಯಿರಿ ಪಂಗ,
ನಿಮ್ಮಾಸೆಗೆ ತರಲಾರೆ ಭಂಗ..
‘ನನ್ನ’ ಗೆಳತಿಯಾಗಿ ಓದುಗರ ಕೈಲಿ
ನೀವನ್ನಿಸಿಕೊಳ್ಳದಿದ್ದರೆ
ಸಾಕು ಮಂಗ..
—————————-
hema:
ನಿಮ್ಮ ಆಶೀರ್ವಾದ ಹೀಗೆ ಇರಲಿ,
ನೀವು ಕಾಲೆಳೆಯುತ್ತೀರಿ ಅಂತಲಾದರೂ ನನ್ನಿಂದ
ಒಂದೆರೆಡು ಕವನಗಳು ಹೊರಬರಲಿ….
—————————-
Ranjith:
ಕಾಣದ ಸುಂದರಿಗೆ ಕಾಯುತಿರುವುದು ನಾನೇ,
ಕಾಯುವೆ ಆಕೆಗೆ, ಬಂದರೆ ಬರಲಿ ಏನೇ…
ನೀವೂ ಬೇಗ ಮದುವೆ ಆದರೆ,
ನಿಮ್ಮ ಮಗನ ಜತೆ ಮಾಡುವೆ
ನನ್ನ ಮಗಳ ಮದುವೆ..:)
—————————-
hema:
ನೀವು ಕಾಯುತಲೇ ಇದ್ದರೆ ಆಕೆಗೆ,
ಆಗುವುದೆಂದು ಮದುವೆ,
ಕಾಯುತ್ತಿರುವ ನನ್ನ ಮಗನಿಗೆ,
ನಿಮ್ಮ ಮಗಳು ಸಿಗುವುದೆಂದು?
ಕಾದು ಕಾದು ದೇವದಾಸನೇ ಆದಾನೇನೋ,
ಅವನೂ ನಿಮ್ಮಂತೆಯೇ ಮುಂದು…
—————————-
Ranjith:
ಸಿಂಗಾರವೇ ಹೆಣ್ಣಿನ ಸೌಂದರ್ಯಕ್ಕೆ ಒಡವೆ..
ವಧುವಿನಂತೆ ಕಾಣುವ ಹುಡುಗಿಯೆ ನಿನಗ್ಯಾಕೆ ಅದರ ಗೊಡವೆ..
ಆದರೆ ಸಿಂಗರಿಸಿಕೊಂಡರೆ,
ಹುಡುಗನ ಕಂಗಳಿಗೆ ಅವಳು
ತುಂಬಿದ ಸೀಸದ ಮದ್ಯವೆ..;-)
—————————-
hema:
ಸೀಸೆ ಮುಗಿಯುವವರೆಗಷ್ಟೆ ನಶೆ,
ವಯಸ್ಸು ಇಳಿಯುವವರೆಗಷ್ಟೇ ಆಶೆ….
—————————-
Ranjith:
ಸೌಂದರ್ಯವೆಂಬುದು ನಶೆ,
ಏರಿದಷ್ಟೇ ವೇಗವಾಗಿ ಇಳಿಯುವುದು..
ಪ್ರೀತಿಯೆಂಬುದು ಕೊಟ್ಟಂತೆ ಭಾಷೆ..
ಜೀವನಪೂರ್ತಿ ನಿಭಾಯಿಸಬೇಕಾವುದು..:)
—————————-
Ranjith:
ಮೈ ಡಿಯರ್ ಹೇಮಾ,
ನೀವೂ ಎಲ್ಲಾ
ಹುಡುಗಿಯರಂತೆ ಸೇಮಾ(same)..:)?
ಯಾಕೆ ನನ್ನ ಕೈಯ್ಯಿಂದ ಕಾಲೆಳೆಸಿಕೊಳ್ಳುವಿರಿ,
ಬಿದ್ದು ಬಿದ್ದು ಮೂತಿ ಮಣ್ಣಾಗಿಸಿಕೊಳ್ಳುವಿರಿ.!.;-)
ಹ ಹ ಹ..:)
—————————-
hema:
ಪ್ರೀತಿಯ ರಂಜಿತ್,
ನಿಮ್ಮ ಕವಿತೆಗಳಂತು ನಿಮ್ಮಂತೆ ಸಕತ್,
ಬರುವುದಾದರೇ ನಿಮ್ಮಿಂದ ನಮಗೂ ಒಂದೆರೆಡು ಕವನ
ಕಾಲೆಳಿಸಿಕೊಳ್ಳೋಕು ರೆಡಿನಾನು ಸರೀನಾ….
—————————-
Ranjith:
ಈ ರಂಜಿತ್-ಸಕತ್ ಪ್ರಾಸ
ಬೇರೆ ಯಾರೋ ಬಳಸಿದ್ದಲ್ಲವೇ?
ನೀವೂ ಭಾಳ ಶಾಣ್ಯ ಇದೀರಲ್ಲ..
ಪ್ರಾಸ ಬಳಸಿ ಅವರ ನೆನಪು ಮಾಡಿಸಿ
ಕಾಲೆಳೆಸಿಕೊಳ್ಳುವ ಮಾತಾಡುತ್ತ,
ನನ್ನ ಕಾಲೆಳೆದೇಬಿಟ್ಟಿರಲ್ಲ..:)
—————————-
hema:
ಛೆ ನಿಮ್ಮ ಕಾಲು ಎಳೆಯಲಾದೀತೆ,
ನೋಯಿಸಿಕೊಳ್ಳಬೇಡಿ ಮನಸ,
ಇಷ್ಟಕ್ಕು ನಿಮಗೆ ಆಕೆಯ ನೆನಪಾಗಬೇಕೆಂದು,
ನಾನು ಪಡಬೇಕಾಗಿಲ್ಲ ಪ್ರಯಾಸ,
ದಿನವೂ ಆಳುತ್ತಿದ್ದಾಳೆ ಆಕೆ ನಿಮ್ಮ ಕನಸ…
—————————-
Ranjith:
ನಾನಾಗಬೇಕಂತಿದ್ದೆ ಕಾಳಿದಾಸ,
ಅನ್ನುತಿರುವಿರಲ್ಲ ನನ್ನನ್ನು ದೇವದಾಸ,
ಸಿದ್ದತೆ ಮಾಡಿಕೊಳ್ಳುತಿರುವೆವು
ನಾವಿಬ್ಬರೂ ಬದುಕನು ಗೆಲ್ಲಲು,
ನಿಮಗೆ ತಾಳ್ಮೆ ಇರಲಿ,
ದೇವತೆಗಳೆ ಕಾಯುತಿರುವರಲ್ಲ
—————————-
hema:
ನಿಮಗೆ ಆ ಹುಡುಗಿ ಸಿಗಲಿ ಎಂದು,
ನಮ್ಮಂತ ಗೆಳೆಯರು ಹರಸುತಿಹರು
ನಿಮ್ಮ ಹುಡುಗಿಗೆ ಬೇಗ ಸಿಗಲು ಹೇಳಿ
ಅಕ್ಷತೆ ಚೆಲ್ಲಲೆಂದು ಕಾದ ದೇವತೆಗಳೂ,
ಸ್ವರ್ಗದಲ್ಲಿ ನಿದ್ದೆ ಮಾಡುತಿಹರು…..
—————————-
Ranjith:
ಹರಸುವ ಗೆಳೆಯರ ಬಾಯಿಗೆ
ಜಗದ ಸಿಹಿಯೆಲ್ಲಾ ಸೇರಲಿ..
ನಿದ್ರಿಸುವ ದೇವತೆಗಳಿಗೆಲ್ಲ
ನೋವಿನ ಸೊಳ್ಳೆ ಕಚ್ಚಲಿ..:)

ಟೊಕ್ಕಿ ಪುಟ್ಟುಗೆ.

ಟೊಕ್ಕಿ, ಕೊನೆಗೂ ನಿನ್ನಿಂದಾನೆ ಪತ್ರ ಬರುತ್ತೆ ಅಂತ ಕಾದ ನನ್ನ ಶಬರಿಯಂತ ಮನಸ್ಸಿಗಾದ ಗಾಯಕ್ಕೆ ಸ್ವಲ್ಪಾನೆ ಸ್ವಲ್ಪ ಸಮಾಧಾನದಿಂದಿರಲು ಹೇಳಿ ಪತ್ರ ಬರಿತಿದ್ದೀನಿ. ಪತ್ರ ಬರಿಯೋದಕ್ಕು ಮೊದಲೆ ಹೇಳಿಬಿಡ್ತೀನಿ. ಯಾವತ್ತೂ ಪತ್ರ ಬರಿಬಾರದು ಅಂದುಕೊಂಡ ಷರತ್ತನ್ನು ಗೌರವಯುತವಾಗಿ ಮುರಿತಿದ್ದೀನಿ. ಕೆಲವು ಘಳಿಗೆಗಳಲ್ಲಿ ನಿನ್ನ ನೆನಪುಗಳು ಹೆಗಲೇರುತ್ತವಲ್ಲವ ಅಂತ ಸಮಯದಲ್ಲಿ ನಾನು ಇಂತ ಕಠಿಣ ನಿರ್ದಾರಗಳನ್ನ ತೆಗೆದುಕೊಳ್ಳುವಂತೆ ಮಾಡಿಬಿಡ್ತಾವೆ..ನಿನ್ನ ನನ್ನ ಮುದ್ದು ಮೊಲದಂತಿದ್ದ ಪ್ರೇಮದ ಆಣೆ ಪ್ರಮಾಣಗಳಿಗೆ, ಕವಡೆ ಕಾಸಿನ ಕಿಮ್ಮತ್ತಿರೋದಿಲ್ಲ ಅಲ್ಲವ? ಇಲ್ಲಿಯವಗೆ ನೂರಾರು ಪ್ರಾಮಿಸ್ಸುಗಳನ್ನ ಮಾಡಿದ್ದೀನಿ.ಅಷ್ಟೆ ಸಲ ಅದನ್ನ ಮುರಿದಿದ್ದೀನಿ ಕೂಡ..ಅದೆಲ್ಲ ನಿನ್ನ ಮೇಲಿನ ಪ್ರೀತಿಯ ಸಲುವಾಗಿಯೇ ಅನ್ನೋದು ನಿನ್ನಷ್ಟೆ ಸತ್ಯ ಅಲ್ಲವ? ಪ್ರಾಮಿಸ್ಸುಗಳನ್ನ ಮುರಿಯೋದರಲ್ಲಿ ಕೂಡ ಅದೆಷ್ಟು ಪ್ರೀತಿಯಿರುತ್ತಿತ್ತು ಟೊಕ್ಕಿ?

ಸರಿ ಹೀಗೆಲ್ಲ ತಬ್ಬಿಕೊಳ್ಳೊಲ್ಲ ಅಂದಿದ್ದೆ..ಮರುದಿನವೆ ನಿನ್ನ ಉರಿಸುಗಟ್ಟಿಸಿದ್ದೆ.ಮತ್ಯಾವತ್ತು ನಿನ್ನ ಕೆನ್ನೆ ಕೆಂಪು ಮಾಡೋಲ್ಲ ಅಂದಿದ್ದೆ ಮರುದಿನವೆ ನಿನ್ನ ಕೆಂಪು ಕೆಂಪು ತುಟಿ ಮತ್ತಷ್ಟು ರಂಗು ರಂಗು. ಯಾವತ್ತು ನಿನ್ನ ಕಾಯಿಸೊಲ್ಲ ಅಂದು ನಿನ್ನ ನೆತ್ತಿಮುಟ್ಟಿ ಪ್ರಾಮಿಸ್ ಮಾಡಿದ್ದೆ..ಆದರೆ ಗಂಟೆಗಟ್ಟಲೆ ನೀನು ನನಗಾಗಿ ಚಡಪಡಿಸುತ್ತಾ ಕಾಯೋದನ್ನ ಮರದ ಮೆರೆಯಲ್ಲಿ ನೋಡಿ ಕಣ್ಣೀರಾಗಿದ್ದೆ. ಹೇಳು ನಾನು ಮುರಿದ ಅಷ್ಟೂ ಮಾತುಗಳಲ್ಲಿ ಮುಟಿಕೆಯಷ್ಟಾದರೂ ಪ್ರೀತಿಯಿತ್ತಲ್ಲವ ಟೊಕ್ಕಿ? ಮತ್ಯಾಕೆ ಈಗಿನ ನಿನ್ನ ನಡುವಳಿಕೆ ನನಗೊಂತರ ಬಯ ತರಿಸುತ್ತೆ? ದೂರವಾಗುತ್ತಾಳೆ ಅನ್ನುವ ಕೆಟ್ಟಾನುಕೆಟ್ಟ ಕನಸು ಬೀಳಿಸುತ್ತೆ? ಇಲ್ಲಿವರೆಗೂ ನಿನ್ನಲ್ಲಿ ನಾನಿಟ್ಟ ಪ್ರೀತಿಗೆ ನ್ಯಾಯ ಸಿಗುತ್ತ ಅನ್ನುವ ಪ್ರಶ್ನಾರ್ಥಕ ಚಿನ್ಹೆ ಇದಿರಾಗುತ್ತೆ?

ಟೊಕ್ಕಿ ನೀನು ದೂರವಾಗುತ್ತಿದ್ದಿ….ಆದರೇ ಇಲ್ಲಿ ನಿನ್ನ ಕುರಿತಾದ ಕೆಲವು ಕನಸುಗಳನ್ನ ಈ ಹೃದಯ ಹೆರಿಗೆ ಮಾಡಿಸುತ್ತಲೇ ಇದೆ. ಪ್ರತಿ ಕನಸಿಗು ನೀನು ನನ್ನವಳು ಅಂತ ಸುಳ್ಳೇ ಸಮಾಧಾನ ಮಾಡುತ್ತಾನೆ ಇದ್ದೀನಿ.. ಸರಿ ಬಾ ಇಲ್ಲಿ..! ಮೊದಲು ಹೇಳುತ್ತಿದ್ದೆ ಅಲ್ಲವ ಮೂರು ಹೋಗಿ ಆರಾಗಲಿ..ಆರು ಹೋಗಿ ಮೂರಾಗಲಿ…ನಾವೆಂದಿಗೂ ಒಂದೇ ಕಣೋ ಅಂತ? ಹಾಗಂತ ಇನ್ನೊಂದೇ ಬಾರಿ ಸುಳ್ಳಾದರೂ ಹೇಳಿ ಹೋಗು ಇಷ್ಟು ದಿನದ ನನ್ನ ಯಾತನೆಗೆ ಒಂಚೂರೇ ಚೂರು ?…..ಇಲ್ಲ ಬಿಡು ನೀನು ಹೇಳೋಲ್ಲ ನನಗೆ ಗೊತ್ತಿದೆ..

ಯಾವ ನೋವಾದರೂ ಸಹಿಸಬಹುದು ಪುಟ್ಟ. ಕಾರಣಗಳಿಲ್ಲದೆ ತಿರಸ್ಕಾರ ಅನ್ನುವುದಿದೆಯಲ್ಲ ಅದು ತುಂಬಾ ನೋವು ಕೊಡುತ್ತೆ.ಬೆಟ್ಟದಷ್ಟು ಪ್ರೀತಿಸಿದ್ದೆ..ಅಷ್ಟೆ ಪ್ರೀತಿ ನಿನ್ನಿಂದ ಸಿಕ್ಕಿದೆ ನನಗೆ..ನನ್ನ ದುರಾಸೆ ಅಂದರೇ, ಈ ಉಸಿರು ನಿಲ್ಲುತ್ತದಲ್ಲವ? ಅಲ್ಲಿಯವರೆಗು ನನಗೆ ನಿನ್ನ ಉಸಿರಾಟ ಕೇಳಿಸಬೇಕು ಅನ್ನೋದು ಪ್ಲೀಸ್ ಇಲ್ಲವೆನ್ನಬೇಡ. ಕಾರಣವಿಲ್ಲದೇ ಹೋದವಳು ನೀನು..ಪ್ಲೀಸ್ ಕಾರಣವಿಲ್ಲದ ಮತ್ತೆ ಬಂದುಬಿಡು..ಒಂದೆ ಒಂದು ಮಾತನಾಡದೆ ಹಂಗೆ ತಬ್ಬಿಬಿಡುತ್ತೇನೆ.ಮತ್ತೆ ನಿನ್ನ ಮುಂದೆ ಮಂಡಿಯೂರಿ ಕುಳಿತು ಇಲ್ಲಿ ಎಷ್ಟೂ ಜನುಮಗಳಿದ್ದಾವೊ ಅಷ್ಟೂ ಜನುಮದಲ್ಲೂ ನೀನು ನನ್ನ ಜೊತೆಗಿರು ಅಂದು ಕೇಳಬೇಕು .ಮತ್ತೆ ನಿನ್ನ ತುಟಿಗಳಿಗೆ ರಂಗು ರಂಗು ತುಂಬಬೇಕು, ನಿನ್ನ ಕಾಯಿಸಿ ಕಾಯಿಸಿ ಕಾಡಬೇಕು, ಮತ್ತೆ ನಾನು ನಿನಗೆ ಪ್ರೀತಿಯಿಂದ ಸಾವಿರ ಸಾವಿರ ಆಣೆ ಪ್ರಾಮಾಣಗಳನ್ನ ಮಾಡಬೇಕು ಮತ್ತೆ ಅದೇ ಪ್ರೀತಿಯಿಂದ ಅವೆಲ್ಲವನ್ನು ಮುರಿದುಹಾಕಬೇಕು ಪ್ಲೀಸ್ ಬರ್ತೀಯಲ್ಲವ?

ಅದೇ ನಿನ್ನ ಚೋಮು

——————————————————————————————–
ಇಲ್ಲಿಗೆ ಅವಳ ನನ್ನ ಕತೆ ಮುಗಿಯಿತೆಂದು ಒಂದು ಹಾಳೆಯಲ್ಲಿ ಬರೆದು ಪೂರ್ಣವಿರಾಮ ಹಾಕಲಿಕ್ಕೆ ಹೋದ ಅಷ್ಟರಲ್ಲಿಯೇ ಪೆನ್ನಿನ್ನ ಇಂಕು ಕಾಲಿಯಾಗಿತ್ತು.
——————————————————————————————–
ಮತ್ತೆಂದೂ ಅವನ ಮುಖ ನೋಡಬಾರದೆಂದು ನೊಂದುಕೊಂಡು ಮನೆಗೆ ಹಿಂದಿರುಗಿದ ಹುಡುಗಿಯ ಮುಖದಲ್ಲೇ ಅವನಿದ್ದ.
——————————————————————————————–
ನೇರ ನಡೆ, ನೇರ ನುಡಿ ನೇರ ಮನಸ್ಸಿನ, ನೇರ ಹೃದಯದ ಹುಡುಗ,,, ಮನೆಯ ಗೋಡೆಯನ್ನ ಪ್ರತಿನಿತ್ಯ ಹಾರುತ್ತಿದ್ದ. ಪಕ್ಕದಲ್ಲಿ ಜೋಯಿಸರ ಮಗಳ ಮನೆಯಿತ್ತು.
——————————————————————————————–
ಕೆಲಸ ಮಾಡದೆ ಸೋಮಾರಿತನದಿಂದ ಮನೆಯಲ್ಲಿ ಕುಳಿತಿದ್ದ ದಡೂತಿ ದೇಹದವನಿಗೆ ಪುಟಾಣಿ ಗಡಿಯಾರ ತನ್ನ ಟಿಕ್ ಟಿಕ್ ಸದ್ದಿನಲ್ಲಿ ಚಡಿಯೇಟು ಕೊಟ್ಟಂತೆ ಭಾಸವಾಗುತ್ತಿತ್ತು.
——————————————————————————————–
ನಿನ್ನನ್ನ ಯಾರೂ ಮುದ್ದಿಸುವುದಿಲ್ಲ ಅಂತ ಗುಲಾಬಿ ಚೆಂಡುಹೂವಿನ ಕಾಲೆಳೆಯುತ್ತಿತ್ತು. ಗುಲಾಬಿ ಕೀಳಲು
ಬಂದ ಮಗು ಕೈಗೆ ಮುಳ್ಳು ಚುಚ್ಚಿ ಅಳುತ್ತಿತ್ತು. ನಾನು ಯಾರನ್ನು ಅಳಿಸುವುದಿಲ್ಲವೆಂದ ಚೆಂಡುಹೂವು ತನ್ನ ಸೇಡು ತೀರಿಸಿಕೊಂಡಿತು.
——————————————————————————————–
ಇವಳ ಜಗತ್ತಿನಲ್ಲಿ ಪ್ರೀತಿ ಪ್ರೇಮಕ್ಕೆ ಮೂರು ಕಾಸಿನ ಕಿಮ್ಮತ್ತಿಲ್ಲ . ಇವಳ ಬದುಕು ಸರಿದಾರಿಗೆ ಬಂದಿದ್ದು ಅವನು ತನ್ನ ದಿಕ್ಕು ಬದಲಿಸಿದ ಮೇಲಂತೆ.
——————————————————————————————–
ತಪ್ಪು ಯಾರದ್ದು ಅಂತ ಜಗಳವಾಡಿದರು.ಕೊನೆಗೂ ಉತ್ತರ ಸಿಗದೆ ಇಬ್ಬರು ತಬ್ಬಿಕೊಂಡರು.
——————————————————————————————–
ಕೊನೆಗು ಅವನದು ಅಂತ ಏನು ಉಳಿಯಲಿಲ್ಲ ಎಂದುಕೊಂಡ ಹುಡುಗಿ ಬಿಕ್ಕಳಿಸುವ ಹೊತ್ತಿಗೆ, ಅವಳ
ಈಮೈಲಿಗಿಟ್ಟ ಅವನ ಹೆಸರಿನ ಪಾಸ್‌ವರ್ಡ್ ಅವಳ ದುಃಖ ಕಮ್ಮಿ ಮಾಡಿತ್ತು.
——————————————————————————————–
ಒಂದು ಕಡೆ ಇವನ ಪ್ರೀತಿ, ಮತ್ತೊಂದು ಕಡೆ ಅವಳ ಪ್ರೇಮವನ್ನ ಒಂದು ತಕ್ಕಡಿಯಲ್ಲಿ ತೂಕಹಾಕಿದರು. ಗಾಬರಿಗೆ ಬಿದ್ದ ತಕ್ಕಡಿ ತೂಗಲೇ ಇಲ್ಲ.
——————————————————————————————–
ತುಂಬಾ ಒಳ್ಳೆ ಹುಡುಗ..ತುಂಬಾ ಸುಳ್ಳು ಹೇಳಿ ಅವಳ ಪ್ರೀತಿಯನ್ನ ಪಡೆದಿದ್ದ. ಈಗ ಒಂದೇ ಒಂದು ಸತ್ಯ ಹೇಳಲಾಗದ ಪರಿಸ್ಥಿತಿಯಲ್ಲಿದ್ದಾನೆ…
———————————————————————————————

(ವಿಜಯ-ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಟೊಕ್ಕಿ..
ನೀನು ತುಂಬಾ ಕೆಟ್ಟವಳು. ಆದ್ರೂ ತುಂಬಾ ತುಂಬಾ ಒಳ್ಳೆಯವಳು. ಕೊನೆಗೂ ನೀನು ಮಲ್ಲಿಗೆ ತೋಟಕ್ಕೆ ಬರಲಿಲ್ಲ.ನನ್ನ ಮಲ್ಲಿಗೆಯ ಮಾಲೆ ಮುಡಿಯಲಿಲ್ಲ.ನನ್ನ ಎಲ್ಲಾ ಪತ್ರಗಳನ್ನ ಕಣ್ಣರಳಿಸಿ ಕೇಳಲಿಲ್ಲ. ನಾನದನ್ನ ಕಣ್ಣಲ್ಲಿ ತುಂಬಿಕೊಳ್ಳಲಿಲ್ಲ. ನಿನ್ನನ್ನ ಅಷ್ಟು ಸನಿಹದಿಂದ ನೋಡಿ ತಣಿಯುವ ನನ್ನ ಹೃದಯದ ಆಸೆ ಕೊನೆಗೂ ಈಡೇರಲಿಲ್ಲ. ಟೊಕ್ಕಿ ಕೇಳಿಲ್ಲಿ ಮಲ್ಲಿಗೆಯ ಮೊಗ್ಗುಗಳ ಮಾಲೆ ಮಾಡಿ ಹಿಡಿದಿಟ್ಟುಕೊಂಡಿದ್ದ ನನ್ನ ಕೈಗಳೂ ಸೋಲಲಿಲ್ಲ. ನಿನ್ನ ಬರುವಿಕೆಗೆ ಆಸೆಗಣ್ಣಿನಿಂದ ಸಂಜೆ ಸೂರ್ಯಾಸ್ತಮಾನದವರೆಗೂ ಕಾದ ನನ್ನ ಕಾಲುಗಳು ನೋಯಲಿಲ್ಲ ಕಣೆ. ಕೇವಲ ಕಾಲವೆಂಬುದು ನನ್ನ ಮುಂದೆ ಸತ್ತು ಮಲಗಿತು ಅಷ್ಟೆ . ನೀನು ಬರುವ ದಿನ ಸೂರ್ಯ ನಾನೇನು ಅವನ ಅಜನ್ಮ ಶತ್ರುವೇನೋ ಅನ್ನುವಂತೆ ನನ್ನ ಜೊತೆ ಕ್ರೂರವಾಗಿ ನಡೆದುಕೊಂಡ. ಎಂದಿನಂತೆ ತನ್ನ ಗಂಟುಮೂಟೆಕಟ್ಟದೆ ಕೊಂಚ ತಡವಾಗಿಯೆ ಮುಳುಗಿ ತನ್ನ ಹೋದ ಜನ್ಮದ ಕೊಪ ತೀರಿಸಿಕೊಂಡನೇನೊ…!

ಸೋಮಾರಿ ಕಣೆ ನಾನು. ಜಗತ್ತು ದಿನದ ತನ್ನರ್ದ ಕೆಲಸ ಮುಗಿಸಿದ ಮೇಲೇನೆ ಈ ನಿನ್ನ ಕಪ್ಪು ಬಣ್ಣದ ಹುಡುಗ ಹಾಸಿಗೆ ಬಿಟ್ಟು ಮೇಲೇಳುತ್ತಿದ್ದಿದ್ದು. ನೀನು ನಂಬಲ್ಲ ಕಣೆ ನಿನಗೆ ಮಲ್ಲಿಗೆಯ ಮುಡಿಸುವ ದಿನ ಬೆಳಗ್ಗೆ 6 ಕ್ಕೆ ಎದ್ದವನೇ ಸ್ನಾನ ಮಾಡಿ ವಾರ ಪೂರ್ತಿ ಸ್ನಾನ ಮಾಡದೆ ಇದ್ದ ಸೇಡು ತೀರಿಸಿಕೊಂಡೆ. ಯಾವತ್ತು ಬಾಚಣಿಗೆಯ ಮುಖವನ್ನೇ ಕಾಣದ ನನ್ನ ಮೂರು ಮತ್ತೊಂದು ಕೂದಲುಗಳಿಗೆ ಬಾಚಣಿಗೆಯ ದರ್ಶನ ಮಾಡಿಸಿದೆ. ಕನ್ನಡಿಗೆ ತುಂಬಾ ದಿನಗಳ ನಂತರ ನನ್ನ ಕಪ್ಪು ಕಪ್ಪು ಮುಖದ ಸಂದರ್ಶನ ಕೊಟ್ಟೆ. ಪೌಡರ್ ಹಚ್ಚಿದ್ದೇನು, ಹುಬ್ಬು ಕುಣಿಸಿದ್ದೇನು, ಮೆಲ್ಲಗೆ ನನ್ನಷ್ಟಕ್ಕೆ ನಕ್ಕಿದ್ದೇನು, ಕಲರ್ ಕಲ್‌ರ್ ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆಗಳ ಹುಡುಕಿದ್ದೇನು? ಮನೆಯಲ್ಲೇ ಇರುವ ದೇವರಿಗೆ ೭ ಸುತ್ತು ಕಮ್ಮಿ ಆಗುತ್ತೆ ಅಂತ ೧೪ ಸುತ್ತು ಸುತ್ತಿದ್ದೇನು? ಇಷ್ಟೆಲ್ಲ ಹುಚ್ಚಾಟಗಳ ಮರೆಯಲ್ಲಿ ನಿಂತು ಗಮನಿಸುತ್ತಿದ್ದ ನನ್ನ ತುಂಟ ಅಕ್ಕನೆದುರು ನಾಚಿಕೆಯಿಂದ ಹಲ್ಕಿರಿದು ತಲೆ ತಗ್ಗಿಸಿದ್ದೇನು?.. “ ಏನೋ ಕರಿಯ ವಿಷಯ” ಅಂತ ಅಕ್ಕ ಕೇಳಿದರೆ ಅಷ್ಟೆ ತುಂಟದನದಿಂದ “ಅಕ್ಕ ಟೊಕ್ಕಿ ಇವತ್ತು ಸಿಗ್ತಾಳಂತೆ ಹೋಗ್ಲ?” ಅಂತ ಕೇಳಿ ಮತ್ತೆ ಹಲ್ಕಿರಿದಿದ್ದೇನು?..

ನೋಡು ನಾನು ಅಷ್ಟೊಂದು ಆಸೆ ಇಟ್ಕೊಂಡು ಬಂದಿದ್ದೆ ನೀನು ಇಷ್ಟೊಂದು ನಿರಾಸೆ ಮಾಡಿಬಿಟ್ಟೆ. ಏನು ನಾನು ಕಪ್ಪಗಿದ್ದೀನಿ ಅಂತ ನ? “ಕರಿಯ ಐ ಲವ್ ಯೂ” ಅಂತ ಹಾಡು ಹೇಳಬಹುದಲ್ವ? ಕಪ್ಪು ಕಸ್ತೂರಿ ಕಣೆ ಟೊಕ್ಕಿ ಮರಿಬೇಡ. ನನಗೆ ಕೋಪ ಬಂದಿದೆ ನಿನ್ ಮೇಲೆ . ನಿನ್ನ ಡುಮ್ಮಿ ಅಂತೀನಿ. ಬೇಜಾರ್ ಆಗ್ತೀಂii? ಬೇಡ ಕಣೆ ನೀನ್ ಬೇಜಾರ್ ಆದ್ರೆ ನಾನ್ ಮಗು ತರ ರಚ್ಚೆ ಹಿಡಿದು ಅತ್ತುಬಿಡ್ತೀನಿ. ನನ್ ಜೊತೆ ಮಾತು ಬಿಡ್ತೀಯ? ನಾನೆ ಮುದ್ದು ಮಾಡಿ ಮಾತಾಡುಸ್ತೀನಿ. ಯಾವತ್ತು ನಿನ್ನ ಡುಮ್ಮಿ ಅನ್ನಲ್ಲ ಪ್ರಾಮಿಸ್ ಪ್ರಾಮಿಸ್.॒…………………………………….ಡುಮ್ಮಿ

ಸರಿ ಆ ಮಲ್ಲಿಗೆಯ ತೋಟಕ್ಕೆ ಯಾರೋ ಮಾಟ ಮಾಡಿಸಿದ ಹಾಗಿದೆ ಅಲ್ಲಿ ಬೇಡ. ನೀನು ನಮ್ಮ ಗಾಳಿ ಆಂಜನೇಯನ ಗುಡಿ ಹತ್ರಾನೆ ಬಾ. ಮೊದಲೇ ಹೇಳಿದ್ದೀನಿ ಸೀರೆ ಸುತ್ತಿಕೊಂಡು ಬರಬೇಡ ಹರಳೆಣ್ಣೆ ನಿನ್ನ ತಲೆಯಲ್ಲಿ ಇರಲೇ ಕೂಡದು..ನನಗೆ ಗೊತ್ತು ನೀನು ಕಳ್ಳಿ ತಲೆಗೆ ಹೂವು ಮುಡಿದುಕೊಂಡು ಬರೊದಿಲ್ಲ ಅಂತ. ಹೇಗಿದ್ರು ನಾನು ಮುಡಿಸ್ತೀನಿ ಅಲ್ಲವ?

ಈ ಸಲ ಬರ್ಲೇ ಬೇಕು ಇಲ್ಲ ಅಂದ್ರೆ ತುಂಬ ಕೋಪ ಬರುತ್ತೆ ಪ್ರೀತಿಯಿಂದ..

ಅದೇ ನಿನ್ನ
ಸಕತ್ ಕರಿಯ

« Previous PageNext Page »