Archive | ಎರೆಡು ಸಾಲಿನ ಕಥೆ RSS feed for this section

ಪ್ರೇಮಲೋಕದ ಕಥೆಗಳು

14 ಫೆಬ್ರ

೧. ಪ್ರೇಮಲೋಕದ ಪಾಲಿನ ಅತ್ಯಂತ ಪವಿತ್ರ ಮಾತೆಂದರೆ, ನೀನಿಲ್ಲದೇ ಬದುಕುವುದಿಲ್ಲ ಅನ್ನುವುದಲ್ಲ, ಜೀವ ಬಿಡ್ತೀನಿ ಅನ್ನುವುದೂ ಅಲ್ಲ, ಬದಲಾಗಿ “ನೀನೇ ಹೇಳು ನೀನೇ ಹೇಳು” ಅನ್ನುವುದು.

೨. ನವಿಲೂರಿನ ಹುಡುಗಿಯೊಬ್ಬಳು ಯಾರನ್ನೋ ಮದುವೆಯಾಗಿ ಹೊಸ ಬದುಕಿನ ಹೊಸ್ತಿಲೊಳಗೆ ಒಂದು ಹೆಜ್ಜೆ ಇಡುತ್ತಿರುವಾಗಲೇ ಅದೇ ಊರಿನ ಮುಗ್ಧ ಹುಡುಗನೊಬ್ಬ ಬದುಕಿನಿಂದಾಚೆ ಹೆಜ್ಜೆಯಿಟ್ಟು ತುಂಬ ದಿನಗಳಾಗಿದ್ದವು.

೩. ಪ್ರೇಮಿಗಳ ಎದೆಗಳೊಳಗೆ ಕಾಮನೆಗಳು, ಬಯಕೆಗಳು, ಕನಸುಗಳು,ಹಲವಾರು ತುಡಿತ, ಕಣ್ಣೀರು ಸುಖ ಸಂತೋಷಗಳು ತುಂಬಿಕೊಳ್ಳುವುದರ ಜೊತೆಗೆ ಮಗುವೊಂದು ಮಲಗಿಕೊಳ್ಳಬೇಕಂತೆ.

೪. ಹೊಸದಾಗಿ ಮದುವೆಯಾಗಿದ್ದರು..! ಬೆಳಗ್ಗೆ ಎದ್ದ ಕೂಡಲೇ ಹುಡುಗ ಅವಳ ಮುಖ ನೋಡಬೇಕೆಂದುಕೊಂಡರೆ ಅವಳಿಲ್ಲ. ಕೋಪದಿಂದ ತುಳಸಿ ಪೂಜೆ ಮಾಡುತ್ತಿದ್ದವಳನ್ನ ಎಳೆದುಕೊಂಡು ಹೋಗಿ ತಬ್ಬಿಕೊಂಡು ಉಸಿರುಗಟ್ಟಿಸಿದ.

೫. ಯಾವತ್ತೂ ಕಣ್ಣೀರು ಹಾಕುವುದಿಲ್ಲವೆಂದು ಹುಡುಗನ ನೆತ್ತಿ ಮುಟ್ಟಿ ಪ್ರಾಮಿಸ್ ಮಾಡಿದ್ದಳು. “ನಿಂಗೆ ನನ್ ಮೇಲೆ ಸ್ವಲ್ಪಾನು ಪ್ರೀತಿಯಿಲ್ಲ” ಅಂತ ಹುಡುಗ ಅಂದಕೂಡಲೇ ಕಣ್ಣೀರಾಗಿದ್ದಳು.

೬. ಅವನಿಗೆ ಒಳ್ಳೆಯದಾಗಲಿ ಅಂತ ಪೂಜೆ ಮಾಡಿಸಲು ಸರತಿ ಸಾಲಿನಲ್ಲಿ ಅವಳು ನಿಂತಿದ್ದಳು. ಮಧ್ಯಾಹ್ನವಾದರೂ ಅವಳ ಸರದಿ ಬರಲಿಲ್ಲ. ಅವನ ನೆನಪಾಗಿ ಮನೆಗೆ ಹೋದವಳ ಮೇಲೆ ದೇವರು ಮುನಿಸಿಕೊಂಡ. ಆದರೆ ಅವನು ಮುದ್ದಿಸಿದ.

೭. ಪ್ರೀತಿಯ ಲೋಕದ ಜಗಳ, ಮುನಿಸು,ಕೋಪ,ವಿರಹ,ಕಣ್ಣಿರು ಇವುಗಳ ಅಂತ್ಯ ಸಂಸ್ಕಾರಕ್ಕೆ “ನಾಳೆ ಸಿಕ್ತೀನಿ ಬಿಡು” ಅನ್ನುವ ಮಾತೆ ಉತ್ತಮ ಪುರೋಹಿತನಂತೆ.

೮. ಅವನು ಸಂಜೆ ಅವಳ ಮುಡಿಗೆ ಮಲ್ಲಿಗೆ ತರುವುದನ್ನ ಮರೆತಂತೆ ನಾಟಕವಾಡಿದ. ಆದರೆ ಅವಳು ಅವನ ತಬ್ಬಿಕೊಳ್ಳದೇ ನಾಟಕವಾಡಲು ಮನಸ್ಸಾಗಲಿಲ್ಲವಂತೆ.

೯. ಊಟಕ್ಕೆ ಕುಳಿತಿದ್ದ ಪ್ರೇಮಿಗಳಿಬ್ಬರಿಗೆ ಬಿಕ್ಕಳಿಕೆ ಶುರುವಾಯಿತು.ಸ್ನೇಹಿತರು ತಲೆಯ ಮೇಲೆ ಮೊಟಕಿದರು, ನೀರು ಕುಡಿಸಿದರು, ಬಿಕ್ಕಳಿಕೆ ನಿಲ್ಲಲಿಲ್ಲ. ಆದಷ್ಟು ಬೇಗ ಇಬ್ಬರ ಮದುವೆಗೆ ಪುರೋಹಿತರನ್ನ ಹುಡುಕುವ ಬಗ್ಗೆ ಒಂದೆರೆಡು ಮಾತನಾಡಿದ ಕೂಡಲೇ……….!!!

೧೦. ಹುಡುಗಿ ಯಾವುದೋ ಧ್ಯಾನದಲ್ಲೋ ಇನ್ಯಾರದೋ ನೆನಪಿನಲ್ಲೋ ಅರಳಿಕಟ್ಟೆಗೆ ಮೂರು ಸುತ್ತು ಹಾಕುತ್ತಿದ್ದಳು. ಅರಳಿಕಟ್ಟೆಯ ಮುಂದೆ ಚಪ್ಪಲಿ ಹೊಲೆಯುತ್ತ ಕುಳಿತಿದ್ದ ಅವನು ಅವಳ ಸುತ್ತಿದ್ದಕ್ಕೆ ಲೆಕ್ಕವಿನ್ನು ಸಿಕ್ಕಿಲ್ಲ.

( ವಿಜಯ ಕರ್ನಾಟಕ ಪತ್ರಿಕೆಯ ಫೆಬ್ರವರಿ ೧೪, ಸಿಂಪ್ಲಿ ಸಿಟಿ ಪೇಜ್, ಪ್ರೇಮಿಗಳ ದಿನದ ವಿಷೇಶಾಂಕಕ್ಕೆ ಸುಮ್ಮನೆ ಗೀಚಿದ್ದು)

ಒಂದೆರೆಡು ಸಾಲಿನ ಕಥೆಗಳು ಭಾಗ ೪

14 ಜುಲೈ

೧.ಜಗತ್ತಿನ ಉತ್ತಮ ವಿರಹ ಕವಿಯ ಕವನಗಳ ಜೀವಾಳ ಮತ್ತು ನೋವಿನ ರಹಸ್ಯಗಳೆಲ್ಲ ಆತನ ವಿಫಲ ಪ್ರೇಮದ ಗುರುತುಗಳಂತೆ.

೨.ಕೇವಲ ಮಾರು ದೂರವಿದ್ದ ಹಾದಿಯನ್ನ ಒಬ್ಬಳೇ ದಾಟಲಾಗದೇ ಕುಸಿದು ಕುಳಿತ ಅವಳ ಅಸಹಾಯಕತೆಗೆ ನಗಬಾರದು. ಬದಲಾಗಿ ಅವಳ ಅಪ್ಪಟ ಪ್ರೀತಿಗೆ ಚಪ್ಪಾಳೆ ತಟ್ಟಬೇಕಂತೆ.

೩.ದೇವರ ಮುಂದೆ ದೀಪಗಳನ್ನ ಹಚ್ಚಿ ತನ್ನ ಕನಸುಗಳೇನೆಂದು ಹೇಳಿಕೊಂಡ ಅವಳ ಪ್ರೀತಿಗೆ ದೇವರೇ ಲೆಕ್ಕ ತಪ್ಪಿದ್ದು ಸುಳ್ಳಲ್ಲ.

೪.ಒಂದಷ್ಟು ಕಣ್ಣೀರ ಕತೆಗಳನ್ನ ಹುಡುಕೊಂಡು ಹೋದವರು ಬರಿಗೈಯ್ಯಲ್ಲಿ ವಾಪಾಸಾದರು. ಬಹುಷ್ಯ ನಾಡಿನ ರೈತರ ವಿಳಾಸ ಮರೆತಿದ್ದರು ಅನ್ನಿಸುತ್ತೆ.

೫.ಅತೀ ಹೆಚ್ಚು ಕಳ್ಳತನವಾದ ಸ್ಥಳಗಳನ್ನೆಲ್ಲ ಪೋಲೀಸರು ಹುಡುಕುತ್ತಿದ್ದರು. ತುಂಟ ಗೆಳೆಯನೊಬ್ಬ ತನ್ನ ಗೆಳತಿಯ ತುಟಿಗಳಿಗೆ ಕಾವಲು ನಿಂತ .

೬.ಭಗ್ನ ಪ್ರೇಮಿಯನ್ನ ಎಲ್ಲರೂ ದೂರವಿಟ್ಟರು. ಆದರೇ ತುಂಬು ಹೃದಯದಿಂದ ವಿರಹ ಗೀತೆಗಳು ಅಪ್ಪಿಕೊಂಡು ಮತ್ತಷ್ಟು ಶ್ರೀಮಂತವಾದವು.

೭.ಅವನ ನೆನಪಿಗೊಂದರಂತೆ ಇವಳು ಹಚ್ಚಿಟ್ಟಿದ್ದ ದೀಪಗಳ ಸಾಲುಗಳ ನೋಡಿ ಅಸಂಖ್ಯಾತ ನಕ್ಷತ್ರಗಳು ಸೋಲೊಪ್ಪಿಕೊಂಡು ಮರೆಯಾದವು

೮.ಅಗಲುವ ಭಯದಿಂದ ಮನೆಯಿಂದ ಹೊರ ಬಂದ ಜೋಡಿಗಳು ರಾತ್ರಿಯಿಡೀ ತಬ್ಬಿಕೊಂಡು ಮಲಗಿದ್ದರೂ ದೇಹಗಳು ಬೆಸೆದುಕೊಳ್ಳಲ್ಲಿಲ್ಲವಂತೆ.

೯.ಅವಳ ನೆನಪಿನಲ್ಲಿ ಒಂದು ಸಾಲಿನಲ್ಲಿ ಕಥೆ ಬರೆಯ ಹೊರಟಾಗಲೆಲ್ಲ ಒಂದು ಕತೆ ಹೊಳೆಯಲಿಲ್ಲ. ಬದಲಾಗಿ ಇವನಿಗೆ ಕತೆಗಳ ಕಣಜಗಳೆ ಸೃಷ್ಟಿಯಾದವು.

೧೦.ನಿನ್ನ ಮನಸ್ಸು ಶೃಂಗಾರ ಬಂಗಾರವೆಂದು ಹೊಗಳಿದ ಗೆಳೆಯನತ್ತ ತಿರುಗಿ ಕೂಡ ನೋಡದ ಹುಡುಗಿ ವಾಸ್ತವಿಕತೆಯ ಒಂದು ಸಾಲಿನ ಮಾತಿಗೆ ತಿರುಗಿ ಮುಗುಳ್ನಕ್ಕಳು.

( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಎರೆಡು ಸಾಲಿನ ಕಥೆಗಳು ಭಾಗ 3

2 ಫೆಬ್ರ

ಕೂಡಲೇ ಅವಳಲ್ಲಿ ಒಂದು ಸುಳ್ಳು ಹೇಳಬೇಕಿತ್ತು ಇವನು. ಅವಳ ಕಣ್ಣುಗಳ ನೋಡಿ ತಡವರಿಸುತ್ತಲೇ ಸತ್ಯ ಹೇಳಿ ಒಂದು ಮುತ್ತು ಪಡೆದುಕೊಂಡ…!

——————————————————————-
ಮದುವೆಯಾಯಿತು.ಅವನು ಬದುಕಲು ಬೇಕಾಗುವ ಸಾಮಾನುಗಳ ಪಟ್ಟಿ ತಯಾರಿಸುತ್ತಿದ್ದ.
ಮತ್ತೆ ಇವಳ ಮುಖವನ್ನೊಮ್ಮೆ ನೋಡಿದ .ಸಾಮಾನುಗಳ ಪಟ್ಟಿ ಯಾಕೋ ಪೂರ್ತಿಯಾಗಲಿಲ್ಲ.
——————————————————————-

ಅದೆಷ್ಟೋ ಹಾಡುಗಳನ್ನ ಬರೆದಿದ್ದ. ಈಗ ಒಂದು ಬರೆಯಲಾಗುತ್ತಿಲ್ಲ ಅನ್ನುತ್ತಿದ್ದಾನೆ. ಮತ್ತೆ ಅವಳು ನೆನಪಾಗುತ್ತಿದ್ದಾಳೆ..ನೆನಪಾಗುತ್ತಿಲ್ಲ ಅನ್ನುತ್ತಿದ್ದಾನೆ…!
——————————————————————-

ಬಂಜೆ ಅಂದು ಮೂದಲಿಸಿದರು ಮಂದಿ. “ ನಿನಗೆ ನಾನು ಮಗು ನನಗೆ ನೀನು ಮಗು” ಅನ್ನುವ ತನ್ನವನ ಮಾತು ನೆನಪಾಗಿ ದುಃಖ ಕಮ್ಮಿ ಮಾಡಿಕೊಂಡಳು…!
——————————————————————-

ತಾನೆಷ್ಟು ಪ್ರೀತಿಸುತ್ತೇನೆ ಅಂತ ತನ್ನ ಗೆಳತಿಗೆ ಹೇಳುತ್ತಿದ್ದ. “ಎಷ್ಟು ಪ್ರೀತಿಸ್ತೀಯ” ಅಂದು ಕಣ್ಣು ಮಿಟುಕಿಸಿದಳು. ಇವನಿಗೆ ಆಕಾಶದಲ್ಲಿನ ನಕ್ಷತ್ರಗಳ ಲೆಖ್ಖ ಸಿಗಲಿಲ್ಲ.
——————————————————————-

ಪ್ರೀತಿಸಿದ್ದನ್ನ ಕುಷಿಯಿಂದ ಪುಟಗಟ್ಟಲೇ ಬರೆದುಕೊಂಡಳು.. ದ್ವೇಶಿಸಿದ್ದನ್ನ ಬಿಕ್ಕಳಿಸುತ್ತ ಒಂದು ಸಾಲು ಬರೆಯಲಾಗದೆ ಖಾಲಿಯಾದಳು.!
——————————————————————-

ಚಂದನೆಯ ಹೆಸರಿನ ಗೆಳೆಯ ಸತ್ತು ಹೋಗಿದ್ದ. ಹಾಳುಜನ ಕೂಡಲೇ ಅವನಿಗೊಂದು ಹೆಸರಿಟ್ಟಿದ್ದರು. “ಬಾಡಿ” ಇನ್ನು ಬಂದಿಲ್ಲವಂತೆ ಅನ್ನುತ್ತಿದ್ದರು.
——————————————————————-

“ ನನಗಿಷ್ಟ ಇಲ್ಲ ನೀನು” ಅಂದವನನ್ನೊಮ್ಮೆ ನೋಡಿದಳು. “ಮೊದಲು ನಾನಾಡಿದ ಮಾತುಗಳನ್ನ ಕಾಪಿ ಮಾಡ್ತೀಯೇನೊ” ಅಂದು ನಕ್ಕಳು. ಅವನು ನಗಲಿಲ್ಲ. ಮತ್ತೆ ಅವಳು ಯಾವತ್ತೂ ನಗಲಿಲ್ಲ.
——————————————————————-

ಗೆಳೆಯ ಗೆಳತಿಗೆ ದೇವರು ಪ್ರತ್ಯಕ್ಷವಾಗಿ ಏನು ವರ ಬೇಕು ಅಂತ ಕೇಳಿದ. “ಒಂದಿಷ್ಟು ಚಳಿಗಾಲ ಪ್ಲೀಸ್”ಅಂದು ಇಬ್ಬರೂ ನಕ್ಕರು.
——————————————————————-

ಒಂದು ದಿನ ತುಂಬಾ ಸುಂದರವಾದ ಹೂವುಗಳ ಓಟದ ಸ್ಪರ್ಧೆ ನಡೆಯಿತು. ನನ್ನವಳಿಗೆ ಮೊದಲ ಬಹುಮಾನ ಸಿಕ್ಕಿತು.
——————————————————————-

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಒಂದೆರೆಡು ಸಾಲಿನ ಕತೆಗಳು.(ಭಾಗ ೨)

22 ಡಿಸೆ

——————————————————–
ಶೆಟ್ಟರ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದ ಗಂಡನಿಗೆ, ತನ್ನ ಹೆಂಡತಿಯ ಗಲ್ಲದ ನೆನಪಾಗಿ, ನಾಚಿ ನೀರಾಗಿ, ಬೆಲ್ಲ ತರುವುದು ಮರೆತುಬಿಟ್ಟ.
——————————————————–
ಅಮ್ಮನಿಗೀಗಾಗಲೇ ಅರ್ಜೆಂಟ್ ಕಾಶಿಗೆ ಹೋಗಬೇಕಾಗಿದೆ. ದೇವರ ಮನೆಯಲ್ಲಿರುವ ಹಳೆಯ ಡಬ್ಬಿಗೆ ಅಗಾಗ ಒಂದೆರೆಡು ರೂಪಾಯಿಗಳನ್ನ ತುಂಬುತ್ತಿದ್ದಾಳೆ ಅದರೂ ತುಂಬುತ್ತಿಲ್ಲ..ಮಗ ಎಮ್ ಎನ್ ಸಿ ಕಂಪನಿಯ ನೌಕರನಂತೆ.
——————————————————–
ನಾಲ್ಕು ಹೆಜ್ಜೆಗಳು ಒಟ್ಟಿಗೆ ಹೋಗಬೇಕು ಅಂತ ಎರೆಡು ಹೆಜ್ಜೆಗಳು ಬಯಸಿದ್ದವು. ಎರೆಡು ಹೆಜ್ಜೆಗಳು
ಒಪ್ಪಲಿಲ್ಲ.ಕೊನೆಗೆ ನಾಲ್ಕೂ ಹೆಜ್ಜೆಗಳು ಅನಾಥವಾದವಂತೆ.
——————————————————–
ಗೆಳೆಯ ಗೆಳತಿ ಬೆಟ್ಟು ಕಟ್ಟಿದರು.ಚಳಿಗಾಲ ಬೆಚ್ಚಗಿರುತ್ತೆ ಅಂದ ಗೆಳೆಯ ಬೆಟ್ಟು ಗೆದ್ದುಬಿಟ್ಟ.
——————————————————–
ಒಂದು ಕತೆಯ ಪಾತ್ರಕ್ಕೆ ನ್ಯಾಯ ಸಿಕ್ಕಿಲ್ಲವಂತೆ. ನ್ಯಾಯಕ್ಕಾಗಿ ಕಾದಂಬರಿಕಾರನ ಹತ್ತಿರ ಧರಣಿ ಕೂತಿದೆ. ಕಾದಂಬರಿಕಾರ ತನ್ನ ತಾನು ಸಂತೈಸಿಕೊಳ್ಳುತ್ತಿದ್ದಾನೆ.
———————————————————
ಪ್ರೇಮಿಗಳು ಮದುವೆಯಾದರು.ಮದುವೆಯಾಗಲು ಕಾರಣರಾದ ಎಲ್ಲರನ್ನು ನೆನೆಸಿಕೊಂಡು
ಕೃತಜ್ನತೆ ಅರ್ಪಿಸಿದರು. ಆದರೆ ಯಾಕೋ ನಾಲ್ಕೂ ಕಣ್ಣುಗಳು ಧಾರಾಕಾರವಾಗಿ ಅಳುತಿದ್ದವು.
———————————————————
ಅವಳ ಗೆಜ್ಜೆ ಸದ್ಧು ಮದುವೆಯ ಮೊದಲು ಹೇಗೆ ಕೇಳಿಸುತ್ತಿತೋ ಈಗ ಹಾಗೆಲ್ಲ ಕೇಳಿಸುತ್ತಿಲ್ಲವಂತೆ.
ಗೆಜ್ಜೆ ತೆಗೆದಿಟ್ಟು ಮನೆಯಲ್ಲಿ ಒಡಾಡಬಾರದ ಅಂದು ಸಿಡುಕುತ್ತಿದ್ದಾನೆ.
———————————————————
ಒಂದೂರಲ್ಲಿ ಒಂದು ಹುಡುಗನಿದ್ದ. ಮದುವೆಯಾದ. ಒಂದು ತಿಂಗಳು ಹನಿಮೂನು ಮುಗಿಸಿಕೊಂಡುಬಂದ.
ಅದೇ ಊರಿನಲ್ಲಿ ಒಂದು ಮುದ್ದಾದ ಹುಡುಗಿ.ಆ ಹುಡುಗಿಯ ಆತ್ಮಕ್ಕೂ ಒಂದು ತಿಂಗಳಾಗಿತ್ತು.
———————————————————-
ಇದು ನಿನಗೆ ನಾನು ಬರೆಯುತ್ತಿರುವ ಕೊನೆಯ ಪತ್ರ ಅನ್ನುವ ಪತ್ರ ಅವಳಿಗೆ ಸಿಕ್ಕಿದ್ದು ಒಂದರ ಹಿಂದೊಂದು ಜೋಡಿಸಿಟ್ಟ ಅವನ ೫೦೦ ಪ್ರೇಮ ಪತ್ರಗಳ ಅಡಿಯಲ್ಲಂತೆ.
———————————————————–
ಅವನು ಡಿವೋರ್ಸ್ ತಗೊತೀನಿ ಅಂತ ತಮಾಷೆಗೆ ಅಂದ. ಇವಳು ದೇವರ ಮುಂದೆ ಹಣತೆ ಹಚ್ಚಿಟ್ಟು
ನಿಜಕ್ಕೂ ಅತ್ತಿದ್ದಳೂ ಅನ್ನುವುದಕ್ಕೆ ಸಾಕ್ಷಿಯಾಗಿ ಹಣತೆಯಾರಿತ್ತು.ಅಲ್ಲಿ ಅವಳ ಕಣ್ಣೀರಿತ್ತು

(ವಿಜಯ-ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಒಂದೆರೆಡು ಸಾಲಿನ ಕತೆಗಳು.

27 ಆಕ್ಟೋ

——————————————————————————————–
ಇಲ್ಲಿಗೆ ಅವಳ ನನ್ನ ಕತೆ ಮುಗಿಯಿತೆಂದು ಒಂದು ಹಾಳೆಯಲ್ಲಿ ಬರೆದು ಪೂರ್ಣವಿರಾಮ ಹಾಕಲಿಕ್ಕೆ ಹೋದ ಅಷ್ಟರಲ್ಲಿಯೇ ಪೆನ್ನಿನ್ನ ಇಂಕು ಕಾಲಿಯಾಗಿತ್ತು.
——————————————————————————————–
ಮತ್ತೆಂದೂ ಅವನ ಮುಖ ನೋಡಬಾರದೆಂದು ನೊಂದುಕೊಂಡು ಮನೆಗೆ ಹಿಂದಿರುಗಿದ ಹುಡುಗಿಯ ಮುಖದಲ್ಲೇ ಅವನಿದ್ದ.
——————————————————————————————–
ನೇರ ನಡೆ, ನೇರ ನುಡಿ ನೇರ ಮನಸ್ಸಿನ, ನೇರ ಹೃದಯದ ಹುಡುಗ,,, ಮನೆಯ ಗೋಡೆಯನ್ನ ಪ್ರತಿನಿತ್ಯ ಹಾರುತ್ತಿದ್ದ. ಪಕ್ಕದಲ್ಲಿ ಜೋಯಿಸರ ಮಗಳ ಮನೆಯಿತ್ತು.
——————————————————————————————–
ಕೆಲಸ ಮಾಡದೆ ಸೋಮಾರಿತನದಿಂದ ಮನೆಯಲ್ಲಿ ಕುಳಿತಿದ್ದ ದಡೂತಿ ದೇಹದವನಿಗೆ ಪುಟಾಣಿ ಗಡಿಯಾರ ತನ್ನ ಟಿಕ್ ಟಿಕ್ ಸದ್ದಿನಲ್ಲಿ ಚಡಿಯೇಟು ಕೊಟ್ಟಂತೆ ಭಾಸವಾಗುತ್ತಿತ್ತು.
——————————————————————————————–
ನಿನ್ನನ್ನ ಯಾರೂ ಮುದ್ದಿಸುವುದಿಲ್ಲ ಅಂತ ಗುಲಾಬಿ ಚೆಂಡುಹೂವಿನ ಕಾಲೆಳೆಯುತ್ತಿತ್ತು. ಗುಲಾಬಿ ಕೀಳಲು
ಬಂದ ಮಗು ಕೈಗೆ ಮುಳ್ಳು ಚುಚ್ಚಿ ಅಳುತ್ತಿತ್ತು. ನಾನು ಯಾರನ್ನು ಅಳಿಸುವುದಿಲ್ಲವೆಂದ ಚೆಂಡುಹೂವು ತನ್ನ ಸೇಡು ತೀರಿಸಿಕೊಂಡಿತು.
——————————————————————————————–
ಇವಳ ಜಗತ್ತಿನಲ್ಲಿ ಪ್ರೀತಿ ಪ್ರೇಮಕ್ಕೆ ಮೂರು ಕಾಸಿನ ಕಿಮ್ಮತ್ತಿಲ್ಲ . ಇವಳ ಬದುಕು ಸರಿದಾರಿಗೆ ಬಂದಿದ್ದು ಅವನು ತನ್ನ ದಿಕ್ಕು ಬದಲಿಸಿದ ಮೇಲಂತೆ.
——————————————————————————————–
ತಪ್ಪು ಯಾರದ್ದು ಅಂತ ಜಗಳವಾಡಿದರು.ಕೊನೆಗೂ ಉತ್ತರ ಸಿಗದೆ ಇಬ್ಬರು ತಬ್ಬಿಕೊಂಡರು.
——————————————————————————————–
ಕೊನೆಗು ಅವನದು ಅಂತ ಏನು ಉಳಿಯಲಿಲ್ಲ ಎಂದುಕೊಂಡ ಹುಡುಗಿ ಬಿಕ್ಕಳಿಸುವ ಹೊತ್ತಿಗೆ, ಅವಳ
ಈಮೈಲಿಗಿಟ್ಟ ಅವನ ಹೆಸರಿನ ಪಾಸ್‌ವರ್ಡ್ ಅವಳ ದುಃಖ ಕಮ್ಮಿ ಮಾಡಿತ್ತು.
——————————————————————————————–
ಒಂದು ಕಡೆ ಇವನ ಪ್ರೀತಿ, ಮತ್ತೊಂದು ಕಡೆ ಅವಳ ಪ್ರೇಮವನ್ನ ಒಂದು ತಕ್ಕಡಿಯಲ್ಲಿ ತೂಕಹಾಕಿದರು. ಗಾಬರಿಗೆ ಬಿದ್ದ ತಕ್ಕಡಿ ತೂಗಲೇ ಇಲ್ಲ.
——————————————————————————————–
ತುಂಬಾ ಒಳ್ಳೆ ಹುಡುಗ..ತುಂಬಾ ಸುಳ್ಳು ಹೇಳಿ ಅವಳ ಪ್ರೀತಿಯನ್ನ ಪಡೆದಿದ್ದ. ಈಗ ಒಂದೇ ಒಂದು ಸತ್ಯ ಹೇಳಲಾಗದ ಪರಿಸ್ಥಿತಿಯಲ್ಲಿದ್ದಾನೆ…
———————————————————————————————

(ವಿಜಯ-ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)