ನೀನೊಂತರ ಪುಣ್ಯಕೋಟಿಯ ಹಾಗೆ ಬೆಂಕಿಯಲ್ಲಿ ಅರಳಿದ ಹೂವು ಕಣೆ

3 ಫೆಬ್ರ

ಹಾಯ್ ಬಂಗಾರ, ನನ್ನ ಹೃದಯದ ಅರಸಿ,ನಾನಿಲ್ಲಿ ಚಕ್ರವಾಕ ಪಕ್ಷಿತರ ನಮ್ಮೂರ ಕಲ್ಯಾಣಿ ಹತ್ರ ನೀನೊಬ್ಳೆ ಬರ್ತೀಯ ಅಂತ ಕಾಯ್ತ ಇದ್ರೆ ನೀನ್ ಮಾತ್ರ ನಿಮ್ “ಚಿಕ್ಕಮ್ಮಹೆಳವನಕಟ್ಟೆ ಗಿರಿಯಮ್ಮ ಜೊತೆ ಬರೋದ? ಒಳ್ಳೆ ಮನೆತನದಿಂದ ಬಂದ ಹುಡುಗ ಕಣಮ್ಮ ನಾನು, ಅವರೆಲ್ಲಾದ್ರು ನನ್ನನ್ನ ನೋಡಿದ್ರೆ ನಮ್ಮ ಸಂಬಂಧ ಮೊದ್ಲಿನ್‌ತರ ಉಳಿತಾ ಇತ್ತಾ ಹೇಳು? ಪ್ಲೀಸ್ ಈ ಹೃದಯಸಾಕ್ಷಿಯಾಗಿ ಪ್ರೀತಿಯಿಂದ ಹೇಳ್ತಾ ಇದ್ದೀನಿ, ನನ್ನ ನಾಳೆಯ ಬದುಕು ಅನ್ನುವ ಪುಸ್ತಕದಲ್ಲಿ ನಿನ್ನ ಪ್ರೀತಿಯ ಜೋಗುಳ ಇರಲೇಬೇಕು, ನೀನಡೆವ ಹಾದಿಯಲ್ಲಿ ಒಲುಮೆಗೀತೆ ಹಾಡ್ತ ನಿನ್ನ ಹೆಜ್ಜೆಗಳಿಗೆ ನಾನು ಬೆಳಕು ತರ್ತೀನಿ.

ನೀನು ನನ್ನ ಜೊತೆ ಇಲ್ಲದ ದಿನಕ್ಕೆ ಗ್ರಹಣ ಹಿಡಿದ ಹಾಗಾಗುತ್ತೆ, ಇಲ್ಲಿರುವುದು ಸುಮ್ಮನೆ ಅನ್ನುವ ಸತ್ಯ ಅನಾವರಣವಾಗುತ್ತೆ, ಪ್ರತಿ ದಿನ ನೀನು ನನ್ನ ಜೀವನದಲಿ ಯಾವತ್ತೂ ಅಳಿಸಲಾಗದಂತಹ ಪ್ರೀತಿಯ ರಂಗೋಲಿ ಬಿಡಿಸುತ್ತಿರಬೇಕು ಚಿನ್ನ, ಆದ್ರೆ ಯಾಕ್ ನೀನು ನನ್ನ ಪಾಲಿನ ಗುಪ್ತಗಾಮಿನಿಯಾಗಿ ಹರಿತಾ ಇದ್ದೀಯಾ? ನೀನ್ ತಿಳ್ಕೊಂಡ ಹಾಗೆ ಅಂಬಿಕ, ಪಾರ್ವತಿ, ಸಾವಿತ್ರಿ, ಚಿತ್ರಲೇಖ, ಲಕುಮಿ ಇವರೆಲ್ಲರೂ ಜಸ್ಟ್ ನನ್ನ ಕ್ಲಾಸ್‌ಮೇಟ್ಸ್ ಅಷ್ಟೇ ಕಣೆ, ನಾನ್ ಸುಳ್ಳು ಹೇಳ್ತಿಲ್ಲ, ಬೇಕಾದ್ರೆ ಬನಶಂಕರಿ ದೇವಿಯ ಮೇಲೆ ಆಣೆ ಮಾಡ್ತೀನಿ. ನಿನಗೆ ಹೇಳದೇ ಇಲ್ಲಿಯವರೆಗೂ ನಾನ್ ಮಾಡಿದ ಒಂದೇ ಒಂದು ತಪ್ಪು ಅಂದ್ರೆ ಪಕ್ಕದ ಮನೆ ಸುಂದ್ರಿ ಸೀತೆಜೊತೆ ಅರುಂಧತಿ ಸಿನಿಮಾದ ಸೆಕೆಂಡ್ ಷೋಗೆ ಹೋಗಿದ್ದು.ನಮ್ಮಿಬ್ಬರ ಬಗ್ಗೆ ನಿನಗೇನಾದ್ರು ಸಣ್ಣ ಅನುಮಾನ ಇದ್ಯಾ? ಸರಿ ಇನ್ ಮೇಲೆ ನಾನು ಅವಳು ಅಣ್ಣತಂಗಿ ಸರಿನಾ?ನಂಬಿಕೆ ಬಂತಾ?ಈಗ್ಲಾದ್ರೂ ಸ್ವಲ್ಪ ನಗು ಮರಾಯ್ತಿ, ನನ್ ಮನಸ್ಸಿಗೂ ಸ್ವಲ್ಪ ತಂಗಾಳಿ ಬೀಸಿದ ಹಾಗಾಗ್ಲಿ.

ನನ್ನ ನೋವುಗಳಿಗೆ ಕಾರಣ ಯಾರೇ ಇರಲಿ ಕಣೆ, ಆದ್ರೆ ನನ್ನ ನಲಿವುಗಳಿಗೆ ಪ್ರೇರಣ ಶಕ್ತಿ ಎಲ್ಲ ನೀನೆ.ನಿನ್ನ ಪರಿಚಯವಾಗಿ ಕೇವಲ ನೂರು ದಿನಗಳು ಅಷ್ಟೆ, ಈಗಾಗ್ಲೆ ಸಾವಿರ ಸಾವಿರ ಜನ್ಮದ ಪ್ರೀತಿ ಹೇಳುವ ಆಸೆ ನನಗಾಗ್ತಿದೆ, ಇದು ಯಾವಜನ್ಮದ ಮೈತ್ರಿಕಣೋ? ನೀನು ನನ್ನ ಮೇಲೆ ಮಾಡಿರುವ ಎಲ್ಲ ಆಪಾದನೆಗಳಿಂದಲೂ ಒಂದಲ್ಲ ಒಂದು ದಿನ ಮುಕ್ತನಾಗೇ ಆಗ್ತೀನಿ, ನಿನ್ನ ಪ್ರೀತಿ ಇಲ್ಲದ ಮೇಲೆ ನಾನು ಏನಾಗ್ತೀನೋ ಅನ್ನೋ ಭಯ ಶುರುವಾಗ್ತಿದೆ, ಪ್ಲೀಸ್ ನನ್ನ ಬಿಟ್ಟು ಹೋಗ್ಬೇಡ, ನಿನ್ನಿಷ್ಟದಂತೆ ಯಂಡಮೂರಿ ಅವರ ಕನ್ನಡ ಅನುವಾದ ಪುಸ್ತಕಗಳನ್ನ ನಿನಗೆ ತಂದುಕೊಡ್ತೀನಿ, ನಿನ್ನಿಷ್ಟದ ಗೆಜ್ಜೆಪೂಜೆ: ಸಿನಿಮಾ ಕರ್ನಾಟಕದ ಯಾವ ಟೆಂಟಲ್ಲಿದ್ರೂ ನಿನ್ನ ಕರೆದುಕೊಂಡು ಹೋಗಿ ತೋರಿಸ್ತೀನಿ, ನೀನು ಪ್ರೀತಿಸುವ ಸೂರ್ಯಕಾಂತಿ ಹೂವನ್ನ ತಂದು ನಿನ್ನ ಮುಡಿಗೆ ಮುಡಿಸ್ತೀನಿ.

ನೀನೊಂತರ ಪುಣ್ಯಕೋಟಿಯ ಹಾಗೆ ಬೆಂಕಿಯಲ್ಲಿ ಅರಳಿದ ಹೂವು ಕಣೆ.ಯಾರು ಬೇಕಾದ್ರೂ ನಿನಗೆ ಮೋಸ ಮಾಡ್ಬೋದು ಸ್ವಲ್ಪ ಹುಷಾರಾಗಿರು. ಪಕ್ಕದ ಮನೆ ಪಾಂಡುರಂಗವಿಠಲ ಅಂಕಲ್, ಸಂಕ್ರಾತಿ ಬಾರ್ ಅಂಡ್ ರೆಸ್ಟೋರೆಂಟಿನ ಕ್ಯಾಷಿಯರ್ ಪಾಪ ಪಾಂಡು, ನಿನ್ನ ಮುಂದೆ ಪ್ರೀತಿಯ ಗಾಳಿಪಟ ಹಾರಿಸ್ಕೊಂಡು ನಿನ್ನ ಕುತ್ತಿಗೆಗೆ ಮಾಂಗಲ್ಯ ಕಟ್ಟೋಕೆ ರೆಡಿ ಆಗ್ತಿದ್ದಾರೆ,ಆದ್ರೆ ಆ ಬಗವಂತ ನೀವಿಬ್ರು ಪಾರ್ವತಿ ಪರಮೇಶ್ವರರ ಹಾಗೆ ಕೃಷ್ಣ ರುಕ್ಮಿಣಿಯ ಹಾಗೆ ಅಂತ ತೀರ್ಮಾನಿಸಿಯಾಗಿದೆ,ಗೋಧೂಳಿ ಮುಹೂರ್ತದಲ್ಲಿ ಇಬ್ರು ಮದ್ವೆ ಆಗೇ ಬಿಡೋಣ, ನಮ್ಮ ಮನೆ ದೇವತೆಯಾದ ಅಮ್ಮ ನಾಗಮ್ಮನ ಆಶೀರ್ವಾದ ನಮ್ಮ ಮೇಲೆ ಇದ್ದೇಇದೆ, ನೂರು ಕಾಲ ಚನ್ನಾಗಿರಿ ಅಂತ ಹಾರೈಸೋಕೆ ನಮ್ಮ ಗುರುರಾಘವೇಂದ್ರ ಸ್ವಾಮಿಗಳು ಇದ್ದೇ ಇದ್ದಾರೆ, ಪ್ರೀತೀನ ಯಾವತ್ತೂ ಮಾಯಾಮೃಗ ಅಂದ್ಕೊಬಾರದು ಗೆಳತಿ,ಅದೊಂದು ಹೊಸ ಚಿಗುರು ತರ, ಪ್ರಾಮಾಣಿಕತೆಯಿಂದ ಬೆಳಸಿದ್ರೆ ಹೆಮ್ಮರವಾಗುತ್ತೆ, ಅದೇ ಮರದಲ್ಲಿ ನಾನು ನೀನು ಹಾಗು ನಮ್ಮವೆರಡು ಮಕ್ಕಳು ಜೋಕಾಲಿ ಆಡಬಹುದು.

ನಮ್ ಕುಟುಂಬದ ಬಗ್ಗೆ ನೀನ್ ಯೋಚನೆ ಮಾಡೋದೆ ಬೇಡ, ನಿನ್ನ ಪಕ್ಕದಲ್ಲಿ ನಿಲ್ಲಿಸ್ಕೊಂಡು ಅಮ್ಮ ನಿನಗಾಗಿ ಏನ್‌ತಂದಿದ್ದೀನಿ ನೋಡು ಅಂದ್ರೆ ಗೋಕುಲನಿವಾಸದೊಳಗಿಂದ ನಮ್ಮ ತಾಯವ್ವ ಹೊರಗೆ ಬಂದು ನಮ್ಮ ನಮ್ಮ ಮನೆಗೆ ನಮ್ಮ ಮನೆ ಮಗಳು ಬಂದ್ಲು ಅಂತ ನಿನ್ನ ಮನೆ ತುಂಬಿಸಿಕೊಂಡು ಬಾಗಿಲ ಮುಂದೆ ಕಾರ್ತೀಕ ದೀಪ ಹಚ್ಚುತ್ತಾಳೆ. ನಿನಗೆ ಕುಂಕುಮ ಬಾಗ್ಯ ಸಿಕ್ತು ಅಂತ ಕನ್ನಡಿ ನೋಡ್ಕೊಂಡು ನನ್ನ ಮರೆತು ಬಿಡಬೇಡ ಪ್ರೀತಿಯ ಪಾರಿಜಾತವೆ..:)

ನಿನ್ನೊಲುಮೆಯಿಂದಲೇ

ನವಿಲೂರ ಹುಡುಗ

ನನ್ನ ಮುಂದಿನ ಬದುಕಲ್ಲಿ ನೀವು ನನ್ನಜೊತೆ ಇರ್ತೀರ?

14 ಜನ

ಜಗತ್ತಿನ ಸಾಧಾರಣ ಸುಂದರಿ,ಹಾಗು ನನ್ನಜಗತ್ತಿನ ದೀಪಿಕ,ಐಶು,ಜಿಂಟಾ,ರಾಧಿಕ,ರಮ್ಯ,ದಿವ್ಯ,ಸೌಮ್ಯ ಕಾವ್ಯರಿಗಿಂತಲೂ ಎರಡು ಕೈ ಮಿಗಿಲಿಲಾದ, ಜಗತ್ತಿನಎಲ್ಲ ಪೋಲಿ ಹುಡುಗರ ಪಾಲಿನ ಸೋದರಿ,ಹಾಗು ನನ್ನ ಪಾಲಿನ,ಪುಟ್ಟಿ,ಪಾಪು, ಜಾನು ಮುದ್ದು, ಲವ್ಲಿ,ಬಂಗಾರು,ಸೋ ಸ್ವೀಟಿ ಚೂಟಿಯಾದ, ರಾಜಾಜಿ ನಗರದದಗ್ರೇಟ್ ವಿವೇಕಾನಂದಕಾಲೇಜಿನ,ಸಮಸ್ತ ಸುಂದರ ಸುಂದರಿಯರ ಪಾಲಿನ ಸುಹಾಸಿನಿಯಾದ, ಹಾಗು ಕಬ್ಬನ್ ಪೇಟೇ ಅವಿನ್ಯೂರೋಡಿನ ಲೋಟಸ್ ಫ್ಯಾನ್ಸಿ ಸ್ಟೋರಿನಯಜಮಾನಿಯಾದ, ಎಲ್ಲಕ್ಕಿಂತಲೂ ೨೦೧೨ ಮಾರ್ಚ್ ೧೪ ಮತ್ತು ೧೫ರಂದು ನನ್ನ ಮೊದಲ ಹಾಗು ಕೊನೆಯ ಹೆಂಡತಿಯಾಗುವತಯಾರಿಯಲ್ಲಿರುವ ಹಾಗು, ೨೦೧೩ ಮಾರ್ಚ್ ೧೪ ಅಥವ ೧೫ರಂದು ನನ್ನ ಮುದ್ದು ಮಗುವಿನ ತಾಯಿಯಾಗಲುಗಡಿಬಿಡಿಯಲ್ಲಿರುವ,ನನ್ನ ಪ್ರೀತಿಯ ನಳಿನಿ ಮೇಡಮ್‌ಗೆ, ಈ ಪತ್ರದ ಮೂಲಕ ಲವ್ ಯೂಅಂತ ಹೇಳ್ತಾ ಇದ್ದೀನಿ,ಜೊತೆಗೆ ಮೊನ್ನೆತಾನೆ ಆಚರಿಸಿಕೊಂಡ ನಿಮ್ಮ ಬರ್ಥ್‌ಡೇ ಗೆ ವಿಷ್ ಮಾಡಲಾಗದ ನನ್ನ ಮರೆಗುಳಿತನವನ್ನ ಕ್ಷಮಿಸಿ ಮೇಡಂಅನ್ನುತ್ತ ಮತ್ತೊಮ್ಮೆ ಲವ್ ಯೂಅಂತಿದ್ದೀನಿ,

ಚಿನ್ನಾ, ಈ ಬದುಕು ನನ್ನನ್ನಎಲ್ಲಿಂದಎಲ್ಲಿಗೆಕರೆದುಕೊಂಡು ಬಂತುಅಂತಯೋಚಿಸುತ್ತಾ ಹೊರಟರೆಅದೇ ನಾಲ್ಕು ಮಾಂಗಲ್ಯ,ಐದುರಂಗೋಲಿ ಸೀರಿಯಲ್ಲುಗಳ ಎಪಿಸೋಡುಗಳಾಗುವಷ್ಟು ಸರಕಾಗುತ್ತದೆ,ನನ್ನಂತ ಸಾಧಾರಣ ಹುಡುಗನಿಗೆ,ನಿಮ್ಮಂತ ಸಿಂಪಲ್ ಡಿಂಪಲ್ ಸೂಪರ್ ಹುಡುಗಿಯನ್ನಜೊತೆ ಮಾಡ್ತಇರೋ ನಮ್ಮಎರಡೂ ಮನೆಯವರಿಗೆಥ್ಯಾಂಕ್ಸ್ ಹೇಳ್ಬೇಕು ಅನ್ನಿಸ್ತಿದೆ. ನನಗೆಂತ ಹೃದಯ ಬೇಕು ಅಂದುಕೊಂಡಿದ್ದೆನೋಅದೇ ಹೃದಯವನ್ನ ನನ್ನಜೊತೆ ಮಾಡ್ತಿರೋದೇವರಿಗೆಇಲ್ಲಿಂದಲೇ ನನ್ನ ನೂರು ಧನ್ಯವಾದಗಳನ್ನ ಇಲ್ಲಿಂದಲೇರವಾನೆ ಮಾಡ್ತಿದ್ದೀನಿ ಮುದ್ದು.ಗೊತ್ತುಗುರಿಯಿಲ್ಲದೆ ಸಾಗುತ್ತಿದ್ದ ನನ್ನ ಬದುಕಿನೊಳಗೆ ನಿಮ್ಮ ಮೊದಲ ಹೆಜ್ಜೆಯಿಟ್ಟು ಬರ್ತಿದ್ದೀರಿ, ಐವತ್ತುಕೇಜಿ,ಪ್ರೀತಿ,ನೂರುಕೇಜಿ ಮಮತೆ, ಟನ್ನುಗಟ್ಟಲೆ ನಂಬಿಕೆಯನ್ನ ಹೊತ್ತುಕೊಂಡು ನನಗೋಸ್ಕರ ಬನ್ನಿ ನಳಿನಿ ಮೇಡಮ್. ಅದರಜೊತೆಗೆ ಕೆಲವು ಗ್ರಾಮುಗಳಷ್ಟು ನೋವನ್ನುತಂದು ನನ್ನೆದೆಗೆ ಸುರಿದುಬಿಡಿ, ಹೇಗಿದ್ದರು ಅತ್ತು ಹಗುರಾಗಲಿಕ್ಕೆ ನಿಮ್ಮ ಮಮತೆತುಂಬಿದ ಮಡಿಲುಇದ್ದೇಇದೆ.

ಒಂದು ಬದುಕನ್ನಕಟ್ಟಲಿಕ್ಕೆ ಹೊರಟಿದ್ದೀವಿ, ನಮ್ಮ ಸಿಟ್ಟು ಸೆಡವು ಕೋಪ ತಾಪ,ಅಹಮ್ಮು,ಅಹಂಕಾರಗಳನ್ನ ಮೂಟೆಕಟ್ಟಿ ಪಕ್ಕಕ್ಕೆತ್ತಿಬಿಡೋಣ, ಒಂದು ಮುತ್ತಾದರೂ ಸರಿಒಂದುತುತ್ತಾದರೂ ಸರಿ, ಇಬ್ಬರೂ ಹಂಚಿಕೊಳ್ಳೋಣ, ಯಾರುಯಾರನ್ನೂ ಹಚ್ಚಿಕ್ಕೊಳ್ಳಲಾಗದಷ್ಟು ಹಚ್ಚಿಕ್ಕೊಳ್ಳೋಣ,ಮೆಚ್ಚಿಕ್ಕೊಳ್ಳೋಣ, ತಪ್ಪು ನನ್ನದಿದ್ದರೂಚಿಂತೆಯಿಲ್ಲ ನಾನೇ ಕ್ಷಮೆ ಕೇಳ್ತೀನಿ, ತಪ್ಪು ನಿಮ್ಮದಿದ್ದರೂ ಪರ್ವಾಗಿಲ್ಲ, ಲವ್ ಯು ಮುದ್ದುಅಂತ ನಾನೆ ಮುದ್ದು ಮಾಡ್ತೀನಿ, ಆದ್ರೆ ಕೆಲವೊಂದು ಸಲ ನಿಮಗೆ ದುರಾಸೆ, ಎರೆಡೆರೆಡು ಮಕ್ಕಳು ಬೇಕು ಅಂತ ನನ್ನಜೊತೆ ಜಗಳಕ್ಕೇ ನಿಲ್ತೀರಿಅಲ್ವ? ಪ್ರೀತಿಯಿಂದ ಜಗಳ ಆಡೋಕೆರೆಡಿಇದ್ದೀರ ಹೇಳಿ ನಾನು ತಯಾರಾಗೇ ಇದ್ದೀನಿ, ಒಂದೇ ಮಗು ಸಾಕು ಅನ್ನುವ ನನ್ನಜನ್ಮ ಸಿದ್ಧ ಹೋರಾಟದಲ್ಲಿಯಾವುದೇ ಬದಲಾವಣೆಯಿರುವುದಿಲ್ಲ ತಿಳ್ಕೊಳ್ಳಿ ಅಷ್ಟೆ.

ತುಂಬಾ ಭಾವುಕ ಹುಡುಗನಂತೆ ನಾನು, ನನಗೆ ಯಾವುದೂ,ಯಾರೂಗ್ರೇಟ್‌ಅನ್ನಿಸೋದೆಇಲ್ವಂತೆ.ಎಲ್ಲದಕ್ಕು ಸ್ವಲ್ಪಅತಿಯಾಗಿರಿಯಾಕ್ಟ್ ಮಾಡ್ತೀನಂತೆ, ಅದೇಕಾರಣಕ್ಕೆಯಾರೂ ನನ್ನನ್ನ ಅಷ್ಟಾಗಿ ಹಚ್ಚಿಕ್ಕೊಳ್ಳಲಿಲ್ಲ, ನನ್ನ ಪ್ರಪಂಚ ನನ್ನದು, ನನ್ನ ಬದುಕು ನನ್ನದುಅಂತ ನಾನು ಕೂಡಯಾರನ್ನೂ,ಯಾವುದನ್ನು ಅಷ್ಟು ಸುಲುಭವಾಗಿ ಮೆಚ್ಚಿಕ್ಕೊಳ್ಳಲಿಲ್ಲ. ಮುಂಗೋಪಿ ಅಂದ್ರು, ಭಾವನೇಗಳೇ ಇಲ್ಲದಯಾವುದೋ ಪ್ರಪಂಚದಜೀವಿ ಅಂದ್ರು ಐ ಡೋಂಟ್‌ಕೇರ್‌ಚಿನ್ನ, ನಾನು ಏನಂತ ನನಗೆ ಮಾತ್ರಗೊತ್ತು, ನನ್ನ ಮುಂದಿನ ಬದುಕಲ್ಲಿ ನೀವು ನನ್ನಜೊತೆಇರ್ತೀರಅನ್ನೊ ಸಂಗತಿಯೇತುಂಬಾ ಖುಷಿ ಕೊಡ್ತಿದೆ, ಇನ್ನು ಈ ಬದುಕಿನ ಪುಟಗಳೊಳಗೆ ಏನು ಬರುತ್ತೋ ಬರಲಿ, ಎಲ್ಲವನ್ನೂ ನಿಮ್ಮಜೊತೆಗೂಡಿ ಎದುರುಗೊಳ್ತೀನಿ, ಪ್ರಪಂಚದಲ್ಲಿ ಪ್ರೀತಿಅನ್ನೊ ಪ್ರಶ್ನೆಗೆಕೋಟ್ಯಾಂತರ ಉತ್ತರಗಳಿರಬಹುದು, ಆದರೆ ನನ್ನ ಪ್ರಪಂಚದ ಪ್ರೀತಿ,ನಂಬಿಕೆ,ಮಮತೆಅಂದ್ರೆ ,ಎಲ್ಲವೂ ನೀವೆ ಮೇಡಮ್. ಪರಿಚಯವಾದ ಇಷ್ಟೇ ದಿನಗಳನ್ನ ಅದೆಷ್ಟೋಜನುಮದ ಪ್ರೀತಿ ಮಮತೆ ತೋರಿಸಿದ್ದೀನಿ, ನಂಬಿಕೆ ಹುಟ್ಟಿಸಿದ್ದೀರಿ, ಇದೆಲ್ಲವನ್ನು ನಾವು ನಮ್ಮ ಬದುಕಿನ ಮುಸ್ಸಂಜೆಯವರೆಗೂ ಉಳಿಸಿಕೊಳ್ಳೋಣ ಏನಂತೀರಿ. ?

 

nimma

M

ಪ್ರೇಮಕಥೆಯ ಕೊನೆಯ ಪುಟವನ್ನ ಹರಿದೆಸೆದವಳು ನಾನಲ್ಲ

14 ಜನ

ರೀ ಹೇಗಿದ್ದೀರಿ? ಎಲ್ಲಿದ್ದೀರಿ?ಮೊದಲಿದ್ದ ನಿಮ್ಮ ಮಗುವಿನಂತ ಮುಗ್ಧತೆಯನ್ನ ಹಾಗೆ ಉಳಿಸಿಕೊಂಡಿದ್ದೀರೋ ಅಥವ ಬೆಂಗಳೂರೆಂಬ ಮಾಯಾವಿಯತೆಕ್ಕೆಯಲ್ಲಿ ಕಳೆದುಕೊಂಡಿದ್ದೀರೋ?ಈಗಲೂ ನಿಮ್ಮ ಹಣೆಯಲ್ಲಿ ವಿಭೂತಿ ಕುಂಕುಮಗಳೂ ಶೊಭಿಸುತ್ತಿವೆಯೆ?ಪ್ರತಿನಿತ್ಯ ಮನೆಯಲ್ಲಿಗಾಯತ್ರಿ ಮಂತ್ರವನ್ನ ಈಗಲೂ ಜಪಿಸುತ್ತಿದ್ದೀರಾ?ನಿಮ್ಮತಲೆಯ ಕೂದಲಿಗೆ ಈಗಲಾದರೂ ಶಾಂಪುವಿನ ದರ್ಶನ ಮಾಡಿಸುತ್ತಿದ್ದೀರೋ ಅಥವ “ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೇ ಆರೋಗ್ಯ”ಅಂತ ಯಾಮಾರಿಸುತ್ತಿದ್ದೀರೋ?ನಿಮ್ಮನ್ನ ಮರೆಯೋಕಾಗ್ತಿಲ್ಲರೀ, ಬದುಕಿನಲ್ಲಿ ಕೆಲವೊಂದು ಆದರ್ಶಗಳನ್ನಿಟ್ಟುಕೊಂಡವರಿಗೆ ನೀವೊಂದು ಆದರ್ಶ. ಪಿಜಾರೋ, ಸ್ಕೋಡ, ಫೆರಾರಿ ಕಾರುಗಳಲ್ಲಿ ಮೋಜು ಮಸ್ತಿ ಮಾಡಲು ಕಾಲೇಜಿಗೆ  ಬರುತ್ತಿದ್ದ ಹುಡುಗರ ಮದ್ಯೆ ಅಟ್ಲಾಸ್ ಸೈಕಲ್ಲು ತುಳಿದುಕೊಂಡು ಬರುತ್ತಿದ್ದ ನೀವು ತುಂಬಾನೆ ಹಿಡಿಸಿದ್ರಿ. ಹುಡುಗಿಯರನ್ನ ಬೈಕು ಹತ್ತಿಸಿಕೊಳ್ಳೋಕೆ ನಾ ಮುಂದುತಾ ಮುಂದು ಅಂತ ಕಿತ್ತಾಡುತ್ತಿದ್ದ ಅಷ್ಟೂ ಹುಡುಗರ ಮದ್ಯೆ ನಿಮ್ಮ ಡಕೋಟ ಸೈಕಲ್ಲನ್ನ ಅಷ್ಟು ದೂರ ತಳ್ಳಿಕೊಂಡು ಹೋಗಿ ಹತ್ತುತ್ತಿದ್ದ ನಿಮ್ಮ ಪುಕ್ಕಲುತನವೇ ನಿಮ್ಮೆಡೆಹೆ ನನ್ನನ್ನ ಸೆಳೆದಿದ್ದು.

ನೋಟುಗಳು,ಸೈಟುಗಳು,ಬಂಗಲೆಗಳು ನನ್ನಲ್ಲಿಯಾವತ್ತೂ ಪ್ರೀತಿಯನ್ನ ಹುಟ್ಟಿಸಲಿಲ್ಲ ಸಾರ್,  ನನಗೆ ದುಬಾರಿ ಬೈಕು ಕಾರುಗಳಲ್ಲಿ ಬರುತ್ತಿದ್ದಯಾವ ಹುಡುಗನ ಮೇಲೂ ಮನಸ್ಸಾಗಲಿಲ್ಲ, ಆಡಂಬರದ ಬದುಕಿನಿಂದ ದೂರವಿದ್ದು,ಹೃದಯಕ್ಕೆ ಹತ್ತಿರವಾಗಿದ್ದ ನಿಮ್ಮ ಮೇಲೆ ಇವತ್ತಿಗೂ ಮನಸ್ಸಿದೆ ಸಾರ್. ನಿಮ್ಮಿಂದ ನನಗೆ ಪತ್ರ ಬರುವುದಿಲ್ಲ, ನಾನು ಈ ಜನುಮದಲ್ಲಿ ನಿಮ್ಮ ಮುಖ ನೋಡಲಾಗುವುದಿಲ್ಲ ಅನ್ನುವ ಸತ್ಯ ನನಗೆ ತಿಳಿದ್ದಿದ್ದರೂ, ನಿಮ್ಮ ನೆನಪಾದಾಗಲೆಲ್ಲ ನನ್ನೆದೆಯ ಭಾರವನ್ನ ಕಳೆದುಕೊಳ್ಳಲು ಪತ್ರ ಬರೆಯುತ್ತಲೇ ಇದ್ದೀನಿ.ಈ ಪ್ರೀತಿತುಂಬಿದ ಪತ್ರಗಳನ್ನ ನಿಮಗೆ ತಲುಪಿಸುವುದಾದರೂ ಹೇಗೆ ಸಾರ್?ಇನ್ನು ಮೂರು ದಿನ ಕಳೆದರೆ ನಿಮ್ಮ ಹುಟ್ಟುಹಬ್ಬ,  ಹೌದು ನಿಮಗೆಷ್ಟು ವರ್ಷವಾಯಿತು? ನನ್ನ ಲೆಕ್ಕ ತಪ್ಪಿಲ್ಲದಿದ್ದರೆ ಮೂವತ್ತುಅಲ್ವ?ನನ್ನ ಹೃದಯದ ಲೆಕ್ಕ ನಿಜವೇಆಗಿದ್ದರೆ ನೀವಿನ್ನೂ ಮದುವೆಯಾಗಿರುವುದಿಲ್ಲ, ಅಪ್ಪಟ ಪ್ರೇಮಿಯಂತೆ ನನ್ನ ಪ್ರೀತಿಸಿದವರು ನೀವು, ಥೂ ಹೋಗಾಚೆ ಎಂದು ನಿಮ್ಮ ಬದುಕಿನಿಂದಎದ್ದು ಬಂದವಳು ನಾನು ಅಲ್ವ ಸಾರ್?ಅಪ್ಪಅಮ್ಮನ ಪ್ರೀತಿಗೋಸ್ಕರ ನನ್ನ ಪ್ರೀತಿ ಬಲಿಕೊಟ್ಟೆಅನ್ನುವ ಸತ್ಯ ನಿಮಗೆ ಗೊತ್ತಿರಲಿಕ್ಕಿಲ್ಲಅಲ್ವ ಸಾರ್, ಕೊನೆಗೂ ನಿಮಗೊಂದುಕಾರಣವನ್ನೂ ಹೇಳದೆ ನಿಮ್ಮ ಬದುಕಿನಿಂದ ಹೊರಗೆ ಬಂದ ನನ್ನನ್ನದಯವಿಟ್ಟು ಕ್ಷಮಿಸಿಬಿಡಿ.

ಕೋಟ್ಯಾಧಿಪತಿಗಂಡ,ಬಂಗಲೆಯಂತಹ ಮನೆ,ಕೈಗೊಂದುಕಾಲಿಗೊಂದು ಆಳು, ವಿಲಾಸಿ ಜೀವನ,ಕಷ್ಟ ತಿಳಿಯದ ಬದುಕು, ನನಗಿದೆಲ್ಲ ಬೇಕಿರಲಿಲ್ಲ, ನನಗೆ ನೀವು ಬೇಕಿತ್ತು, ನಿಮ್ಮ ಮಗುವಿನಂತಹ ಪ್ರೀತಿ ಬೇಕಿತ್ತು, ಬದುಕಿನಲ್ಲಿ ಕಷ್ಟಗಳು ತಿಳಿಯದೆ ಬದುಕು ಪರಿಪೂರ್ಣವಾಗುವುದಾದರೂ ಹೇಗೆ? ಕೊನೆಗೂ ಯಾವುದೂ ನನ್ನಕೈಗೆಟುಕಲಿಲ್ಲ, ಕೊನೆಯ ಪಕ್ಷ ಈ ಬದುಕು ಮುಗಿಯುವುದರೊಳಗೆ ಮತ್ತೆ ನಿಮ್ಮನ್ನ ನೋಡುತ್ತಿನೋ ಇಲ್ವೋ ಅದೂ ಗೊತ್ತಿಲ್ಲ, ಬರೆದ ಅಷ್ಟೂ ಪತ್ರಗಳನ್ನೂ ನಿಮಗೆ ತಲುಪಿಸಬೇಕು ಸಾರ್, ಒಂದು ಸುಂದರ ಪ್ರೇಮಕಥೆಯಕೊನೆಯ ಪುಟವನ್ನ ಹರಿದೆಸೆದವಳು ನಾನಲ್ಲಅನ್ನುವ ಸತ್ಯವನ್ನ ನಿಮಗೆ ತಿಳಿಸಬೇಕು, ಮೊದಲು ದಿನಕ್ಕೆಷ್ಟು ಬಾರಿ ನಿಮ್ಮ ಹೆಸರನ್ನಕರೆದು ಗೋಳು ಹೋಯ್ದುಕೊಳ್ಳುತ್ತಿದ್ದ ನಾನು ಇವತ್ತು ನಿಮ್ಮ ಹೆಸರು ಹೇಳುವ ಯೋಗ್ಯತೆಯನ್ನೂ ಕಳೆದುಕೊಂಡಿದ್ದೀನಿ ಸಾರ್, ದೇವರಲ್ಲಿ ನನ್ನ ಮೊದಲ ಕೊನೆ ಬೇಡಿಕೆಯೊಂದೆ, ನೀವು ಚನ್ನಾಗಿರಬೇಕು, ಪ್ಲೀಸ್ ಮದುವೆಯಾಗಿ ಸಾರ್, ಎಲ್ಲ ಹುಡುಗಿಯರೂ ನನ್ನಷ್ಟುಕ್ರೂರಿಯಾಗಿರೋದಿಲ್ಲ. ದೇವರಂತ ನಿಮಗೆ ದೇವತೆಯಂತ ಹುಡುಗಿ ಸಿಕ್ಕೇ ಸಿಕಾಳೆ. ದಯವಿಟ್ಟು ಕ್ಷಮಿಸಿಬಿಡಿ ತಪ್ಪು ನನ್ನದಲ್ಲ ಆ ದೇವರದ್ದು.  ನನ್ನಐದು ತಿಂಗಳ ಮಗುವಿಗೆ ನಿಮ್ಮದೇ ಹೆಸರಿಟ್ಟಿದ್ದೀನಿ ಸಾರ್, ಮೇಲ್‌ಐಡಿಗೆ  ಪಾಸ್‌ವರ್ಡ್‌ಕೂಡ ನಿಮ್ಮ ಹೆಸರೆ..! ಈ ಜನುಮದಲ್ಲಿ ನಾನು ಪಡೆದುಕೊಂಡು ಬಂದಿದ್ದಿಷ್ಟೆ.

ಯಾವತ್ತೂ ನಿಮ್ಮವಳು

 ಮೋಸದ ಹುಡುಗಿ

 

ನಂದಿನ್ನೂ ಎಸ್.ಎಸ್.ಎಲ್.ಸಿ ಮುಗಿದಿರಲಿಲ್ಲ,ಕೆಲವರು ಅಲೆಲೆಲೆ ಜಿಂಕೆಮರಿ ಅಂತಿದ್ರು,

19 ಜೂನ್

ಹೆಸರು ಮಾನಸ ಗೌಡ, ಚಿಕ್ಕಮಂಗಳೂರ ಚಿಕ್ಕಮಲ್ಲಿಗೆ.. 1992 ಜೂನ್ 6, ಕರ್ಕಾಟಕ ರಾಶಿ, ಮಿಥುನ ಲಗ್ನ, ಅಶ್ಲೇಷ ನಕ್ಷತ್ರ. ಇದು ನಂದು ಜೋಟ ಬಯೋಡೇಟ,  ಇವತ್ತಿಗೆ ಸರಿಯಾಗಿ 19 ತುಂಬಿ 20ರ ಮಾಯಾಲೋಕದೊಳಗೆ ಕಾಲಿಡ್ತ ಇದ್ದೀನಿ. ನಂದಿನ್ನೂ ಎಸ್.ಎಸ್.ಎಲ್.ಸಿ ಮುಗಿದಿರಲಿಲ್ಲ,ಕೆಲವರು ಅಲೆಲೆಲೆ ಜಿಂಕೆಮರಿ ಅಂತಿದ್ರು, ಮತ್ತೆ ನನ್ನ ಕನ್‌ಫ಼್ಯೂಸ್ ಮಾಡ್ಕೊಂಡು ಅಯ್ಯಾಂಗಾರ್ ಪಿಳ್ಳೆ ಅಳಗಾ ಇರುಕ್ಕು ಅಂತಿದ್ರು. ಚೂಡ್ರಾ ಎಲಾವುಂದಿ ಫಿಗರ್ರು.. ಮಂಚ ಗಮ್ಮತಗಾ ವುಂದಿ ಅಂದ ಹೈದರೆಷ್ಟೋ, ದಿಲ್ ದೇದಿಯಾ ಹೈ ಜಾನ್ ತುಮ್ಹೆ ದೇಂಗೆ ಅಂತ ಹೃದಯ ಪರಚಿಕೊಂಡ ಗಂಡುಮಕ್ಕಳೆಷ್ಟೋ, ಎಲ್ಲ ಹುಡುಗ್ರೂ ಇವಳೊಬ್ಳ ಹಿಂದೇನೆ ಹೋಗ್ತಾರೆ ಅಂತ ಸಿಟ್ಟುಮಾಡಿಕೊಂಡ ಹುಡುಗಿಯರೆಷ್ಟೋ. ಹೆಸರು ಕುಲ ಗೋತ್ರ ಗೊತ್ತಿಲ್ಲದ ಹೂಗಳನ್ನ ಕಿತ್ತು ತಂದು ನನ್ನ ಮುಂದಿಟ್ಟು ನಾಚಿಕೊಳ್ಳುತಿದ್ದ ಸಭ್ಯ ಗಿರಿ, ನನ್ನ ಹೆಸರಿನ ಹಚ್ಚೆಯನ್ನ ಮೈತುಂಬ ಬರೆಸಿಕೊಂಡು ನನ್ನ ಮುಂದೆ ಶರ್ಟು ಬಿಚ್ಚಿ ನಿಲ್ಲುತ್ತಿದ್ದ ಪೋಲಿ ಸೋಮ, ಚಿಲ್ಲರೆ ಕೊಡುವ ನೆಪದಲ್ಲಿ ನನ್ನ ಮೈಕೈ ಮುಟ್ಟುತ್ತಿದ್ದ ಮೂಕಂಬಿಕ ಜನರಲ್ ಸ್ಟೋರಿನ ಪುಟ್ಟರಾಜು ಅಂಕಲ್, ಒಂಬತ್ತನೆ ತರಗತಿಯಿಂದ ಎಸ್.ಎಸ್.ಎಲ್.ಸಿಯವರೆಗೆ ಪ್ರತಿ ದಿನ ಒಂದೊಂದು ಲವ್ ಲೆಟರ್ ಕೊಡುತಿದ್ದ ತಮಿಳು ಹುಡ್ಗ ಬ್ಲಾಕ್ ತಂಬಿ, ಒಂದು ವರ್ಷದಿಂದ ಇವತ್ತಿಗೂ ನನ್ನ ನಂಬರ್ ತಿಳಿದುಕೊಳ್ಳಲು ಪರದಾಡುತ್ತಿರುವ ಡೀಸೆಂಟ್ ಫೆಲೋ ಪ್ರದೀಪ್, ಅಮ್ಮನ ತಮ್ಮ ಕಿರಣ್, ಅಪ್ಪನ ಸ್ನೇಹಿತರ ಮಗ ಸಿ.ಡಿ ರಾಜಪ್ಪ, ನನಗೆ ಅರ್ಥವಾಗದ ಉರ್ದು ಗಝಲ್ಲುಗಳನ್ನ ಕಣ್ಣೀರು ತುಂಬಿಕೊಂಡು ನನ್ನ ಮುಂದೆ ತಲೆತಗ್ಗಿಸಿಕೊಂಡು ಹೇಳುತ್ತಿದ್ದ ಅಮರ ಪ್ರೇಮಿ ಸಯ್ಯದ್ ಅಶ್ರಫ್ ಎಂಬ ಅಮರ ಪ್ರೇಮಿ, ಕಾಡಿನಿಂದ ಇಡೀ ಜೇನು ತಂದು ನನ್ನ ಮುಂದಿಡುತಿದ್ದ ವಡ್ಡರ ಹುಡುಗ ಪೋಲಿ ಪಾಂಡು, ಅಷ್ಟೆತ್ತರದ ಹುಳಿಮಾವಿನ ಮರವನ್ನ ಹತ್ತಿ ನನಗೆ ಹಣ್ಣು ತಂದುಕೊಡುತ್ತಿದ್ದ  ಶಶಾಂಕ್..

 ಅಬ್ಬಾ..! ಒಬ್ಬೊಬರದೂ ಒಂದೊಂದು ತರಹದ ಪ್ರೀತಿ, ಕೆಲವೊಮ್ಮೆ ಖುಷಿಯಗ್ತಿತು,ಕೆಲವೊಮ್ಮೆ ಕೋಪ ಮತ್ತೊಮ್ಮೆ ಸಣ್ಣ ದಿಗಿಲು, ಇಷ್ಟು ಜನರ ಪ್ರೀತಿಯ(?)ಹೊಳೆಯಲ್ಲಿ ಮುಳುಗದೇ ಇವತ್ತು ಕಾಲೇಜಿನ ಮೆಟ್ಟಿಲ ಮೇಲೆ ಬಂದು ನಿಂತಿದ್ದೀನಿ, ನನ್ನ ಅಷ್ಟೊಂದು ಪ್ರೀತಿಸುತ್ತಿದ್ದ ಹುಡುಗರಲ್ಲಿ ಯಾರೊಬ್ಬರಿಗಾದರೂ ಎಸ್ ಎಂದುಬಿಡಲೇ ಅಂತ ಸಾವಿರ ಸಲ ಯೋಚಿಸುತ್ತಿರುವಾಗಲೇ ಅಸೆಬುರುಕ ಮನಸ್ಸು “ ಏಯ್ ಸುಮ್ನಿರು ಇನ್ನೂ ಚಂದದ ಹುಡುಗ ಸಿಕ್ತಾನೆ ಅಂತ ಗದರಿಸುತ್ತಿತು. ಹೃದಯ ಮಾತ್ರ “ಇನ್ನೂ ಒಳ್ಳೆಯ ಹುಡುಗ ಸಿಕ್ತಾನೆ ಕಾಯಬೇಕು ಹುಡುಗಿ ಅಂದ ಹಾಗಾಗುತ್ತಿತು, ನನಗೆ ಚಂದದ ಹುಡುಗನಿಗಿಂತ ಒಂದೊಳ್ಳೆ ಹುಡುಗ ಬೇಕು, ಒಂದೊಳ್ಳೆ ಅಪ್ಲಿಕೇಷನ್ ಬರಬಹುದು ಅನ್ನುವ ನಿರೀಕ್ಷೆಯಲ್ಲಿ ನಾನಿದ್ದೀನಿ.

 ನನ್ ಬಗ್ಗೆ ಎರಡೇ(?) ಸಾಲಲ್ಲಿ ಹೇಳ್ಬಿಡ್ತೀನಿ, ಕೋಪ ಬೇಗ ಬರುತೆ, ಅಳು ಮಾತ್ರ ಶತಾಬ್ಧಿ ಎಕ್ಸ್‌ಪ್ರೆಸ್‌ಗಿಂತಲೂ ಸ್ಪೀಡು, ಅಮ್ಮ ಅಂದ್ರೆ ಇಷ್ಟ, ಅಪ್ಪ ಅಂದ್ರೆ ಪ್ರಾಣ, ಚುರುಕು ಮಾತಿನ ಹುಡುಗಿ, ಸುದೀಪ್ ಅಂದ್ರೆ ಇಷ್ಟ, ದರ್ಶನ್ ಅಂದ್ರೆ ಅಷ್ಟಕಷ್ಟೆ, ಪಿಜ್ಜಾ ಬರ್ಗರ್ ಮುಖ ಮೂತಿ ನೋಡಿಲ್ಲ, ರಸ್ತೆ ಬದಿಯ ಪಾನಿ ಪೂರಿ ಜೊತೆಗೆ, ಮಲ್ಲೇಶ್ವರಂ ಜನತಾ ಹೋಟ್ಲಿನ ಮಸಾಲ ದೋಸೆ, ಸಿ.ಟಿ.ಅರ್ ಬೆಣ್ಣೆದೋಸೆ,ವೀಣ ಸ್ಟೋರ್ ಇಡ್ಲಿವಡೆ, ಹಳ್ಳಿ-ತಿಂಡಿಯ ಚಟ್ನಿಪುಡಿ, ೧೫ನೇ ಕ್ರಾಸಿನ ಮ್ಯಾಕ್ ಡೊನಾಲ್ಡು, ಜಯನಗರದ ಕೂಲ್ ಜಾಯಿಂಟು, ಸಜ್ಜನ್ ರಾವ್ ಸರ್ಕಲ್ಲಿನ ವಿ.ಬಿ ಬೇಕರಿ, ಸುಪ್ರಭಾತ ಕಾಫಿ ಹೌಸಿನ ಅನ್ನ ಸಾಂಬಾರ್, ಸಂಪಿಗೆ ರೋಡಿನ ಕರ್ನರ್ ಅಂಗಡಿಯ ಬೆಣ್ಣೆ ಗುಲ್ಕನ್ನು, ಅಂದ್ರೆ ಪಂಚಪ್ರಾಣ. ಪ್ರತಿ ದಿನ ಬೇಕು ಅಂತ ಏನಿಲ್ಲ, ವಾರಕ್ಕೆರಡು ಸಲ ಕರ್ಕೊಂಡ್ ಹೋದ್ರು ಓಕೆ. ಇನ್ನು ಹುಡುಗ ಹೇಗಿರ್ಬೇಕು ಅಂದ್ರೆ ತುಂಬಾ ಸುಂದರವಗಿರೋದೇನ್ ಬೇಡ, ಹಾಗಿದ್ರೆ ಗೆಳತಿಯರಿಗೆ ಮೀಟ್ ಮಾಡ್ಸ್‌ಬೇಕಾಗುತೆ, ಕಪ್ಪು ಬಣ್ಣದ ಹುಡುಗ ಹಾಲಿನಂತ ಮನಸ್ಸು, ನನ್ನನ್ನ ನನ್ನ ಮನೆಯವರನ್ನ ಪ್ರೀತಿಸಿ ಗೌರವಿಸುವ ಹೃದಯವಿರಬೇಕು, , ಸ್ವಲ್ಪ ಪೋಲಿ ಆಗಿದ್ರೆ ಓಕೆ, ಹದ್ದು ಮೀರಿದ್ರೆ ಯಾಕೆ ಅಂತ ಕೇಳ್ತೀನಿ, ಜೀನ್ಸ್ ಹಾಕ್ಲೇಬೇಕು ಅಂತ ಪೀಡಿಸೋ ಹಾಗಿಲ್ಲ, ಚೂಡಿಯಲ್ಲೆ ತುಂಬ ಮುದ್ದಾಗಿ ಕಾಣಿಸ್ಕೊಳ್ಳೋಕು ಬರುತ್ತೆ, ಪ್ರತಿ ಸಲ ಐ ಲವ್ ಯೂ ಹೇಳು ಅಂತ ಪೀಡಿಸೋ ಹಾಗಿಲ್ಲ, ನನಗಿಷ್ಟ ಆದ್ರೆ ಐ ಲವ್ ಯೂ ಅಂತೀನಿ, ಅದ್ರೆ ಲವ್ ಯೂ ಟೂ ಅಂತ ಹೇಳಲೇ ಬೇಕು, ಪಾರ್ಕಲ್ಲಿ ಕೂತಿರೋವಾಗ ಒಂದು ಫೀಟ್ ದೂರ, ನನಗೆ ತುಂಬಾ ಬೇಜಾರಾದಾಗ ನಾನು ಕರೆದಷ್ಟು ಹತ್ತಿರ, ಅಯ್ಯೋ ಪಾಪ ಅನ್ನಿಸಿದ್ರೆ ಯಾರಿಗೂ ಗೊತ್ತಾಗದ ಹಾಗೆ ಅವನಿಗೊಂದು ಸಣ್ಣ ಮುತ್ತು(ಶರತ್ತುಗಳು ಅನ್ವಯಿಸುತ್ತವೆ) ವಾಪಾಸು ಕೊಡುವ ಹಾಗಿಲ್ಲ ಅನ್ನುವ ಕರಾರಿಗೆ ಒಪ್ಪುವುದಾದರೆ ಮಾತ್ರ.

 ಏನಪ್ಪ ಈ ಹುಡುಗೀದು ದೊಡ್ಡ ಲೀಸ್ಟೇ ಇದೆ ಅಂತ ಕೋಪ ಮಾಡ್ಕೋತೀರೇನೋ. ನಿಮ್ಮನ್ನ ಸುಮ್ನೆ ಗೋಳು ಹೊಯ್ಕೊಬೇಕು ಅನ್ನಿಸ್ತು ಅದ್ಕೆ ಹೀಗೆಲ್ಲ ಮಾತಾಡ್ಬಿಟ್ಟೆ.  ಕೊನೆಯವರೆಗೂ ನಾನು ನಿನ್ ಜೊತೆ ಇರ್ತೀನಿ ಅನ್ನುವ ಸಣ್ಣ ಭರವಸೆ ನನಗೆ, ಮತ್ತು ಪ್ರಾಮಾಣಿಕವಾಗಿ ಒಂದೊಳ್ಳೆ ಬದುಕನ್ನ ನಿನ್ನ ಮಗಳಿಗೆ ಕೊಡ್ತೀನಿ ಅನ್ನುವ ಧೈರ್ಯವನ್ನ ನನ್ನ ಅಪ್ಪ ಅಮ್ಮನಿಗೆ ಕೊಡುವ ಯಾರಾದರೂ ಹುಡುಗ ಇದ್ರೆ ಯಾವುದೇ ಶರತ್ತಿಲ್ಲದೆ ಅವನ ಪ್ರೀತಿಗೆ ಎಸ್ ಅನ್ನೋಕೆ ಈ ನವಿಲೂರ ಹುಡುಗಿ ಕಾಯುತ್ತಿದ್ದಾಳೆ. ಪ್ಲೀಸ್ ಫೋನ್ ಮಾಡಿ. ಸ್ಟಿಲ್ ವೈಟಿಂಗ್

ನವಿಲೂರು ಹುಡುಗಿ

 8722೫೯೩೩೧?

 

ನಿನ್ನ ನಿಷ್ಕಲ್ಮಶ ಹೃದಯಕ್ಕೆ ಶರಣಾದ ಹುಡುಗ ನಾನೊಬ್ಬನೆ ಗೆಳತಿ.

19 ಜೂನ್

 ನಕ್ಷತ್ರದ ಹೆಸರಿನ ನನ್ನ ಮುದ್ದು ಗೌರಿಗೆ, ನನ್ನ ಜಗತ್ತಿನ ಸುಂದರಿಗೆ,ಗೆಳತಿಗೆ,ಆತ್ಮಬಂದುಗೆ, ನನ್ನ ಪಾಲಿನ ಮಮತೆಗೆ,ನನ್ನ ಬದುಕಿನ ಪ್ರತಿ ಕ್ಷಣಗಳನ್ನೂ ಸಾರ್ಥಕವಾಗಿಸಿದ ನನ್ನೊಲುಮೆಯ ಹುಡುಗಿಯ ಬಂಗಾರದ  ಹೃದಯದೊಳಗಿಡುತ್ತಿರುವ ಪ್ರೀತಿ ತುಂಬಿದ ನಾಲ್ಕನೆಯ ಪತ್ರವಿದು. ಮೊದಲ ಮೂರು ಪತ್ರಗಳಲ್ಲಿ ಕೇವಲ ನಿನ್ನೆಡೆಗಿನ ಆಕರ್ಷಣೆಯಿತ್ತು, ಆದರೆ ಈ ಪತ್ರ ಬರೆಯಲು ಕುಳಿತ ಈ ಹುಡುಗನ ಜೋಳಿಗೆಯಲ್ಲಿ ನಿನ್ನೆಡೆಗಿನ ಆಕರ್ಷಣೆಯ ಜೊತೆಗೆ ಆರಾಧನೆಯಿದೆ,ಜೊತೆಗೆ ಎಂದೂ ಮುಗಿಯದ ಪ್ರೇಮವಿದೆ,ಜೊತೆಗೆ ಎಂದೂ ಮುಗಿಯದ ಪ್ರೀತಿಯಿದೆ,ಅದರೆ ಜೊತೆಜೊತೆಗೆ ಎಲ್ಲಿ ನನ್ನ ಕಣ್ಣಿಗೂ ಕಾಣಿಸದಷ್ಟು ದೂರವಾಗಿ ಬಿಡುತ್ತೀಯಾ ಅನ್ನುವ ಸಣ್ಣ…ಕ್ಷಮಿಸು ದೊಡ್ಡ ತಲ್ಲಣವಿದೆ.

 ಗೆಳತಿ ಕೆಲವೊಂದು ಸಲ ನಮ್ಮ ಕಣ್ಣೆದುರಿಗಿರುವ ಪ್ರೀತಿ ಕಾಣಿಸುವುದಿಲ್ಲ, ಸಿರಿವಂತರ ಮನೆಯ ತಿಜೋರಿಗಳಲ್ಲಿ, ರೂಪವಂತರ ಎದೆಯ ಗೂಡುಗಳಲ್ಲಿ,ಪ್ರೀತಿ ಹುಡುಕಲು ಹೊರಟುಬಿಡುತ್ತೇವೆ.  ಹಣದ ಋಣವಿಟ್ಟುಕೊಂಡು ಹುಟ್ಟಿಕೊಂಡ ಪ್ರೀತಿ ಪ್ರೇಮಗಳಿಗೆ ಹೆಚ್ಚಿನ ಆಯುಷ್ಯವಿರುವುದಿಲ್ಲ ಗೆಳತಿ, ಒಂದು ಮುಷ್ಟಿ ಪ್ರೀತಿ ನಮ್ಮ ಈ ಬದುಕನ್ನ ಸುಂದರವಾಗಿ ಕಳೆಯುವಂತೆ ಮಾಡಬಲ್ಲದು. ನಿನಗಾಗಿ ಇಂತ ಸಾವಿರಾರು ಮುಷ್ಟಿ ಪ್ರೀತಿಯನ್ನ ಈ ಎದೆಯ ಗೂಡಿನಲ್ಲಿ  ಬಚ್ಚಿಟ್ಟುಕೊಂಡು ಕುಳಿತಿದ್ದೇನೆ, ನೀನೊಪ್ಪುವ ಮರು ಕ್ಷಣವೇ ಎಲ್ಲ ಪ್ರೀತಿಯನ್ನ ನಿನ್ನ ಮಡಿಲಿಗೆ ಮೊಗೆಮೊಗೆದು ಕೊಟ್ಟು ಈ ಬದುಕನ್ನ ಸಾರ್ಥಕವಾಗಿಸಿಕೊಳ್ಳುವ ಹಂಬಲವಿದೆ ಚಿನ್ನ. ಒಂದೇ ಒಂದು ದಿನವೂ ನಿನ್ನ ಮುಂದೆ ಮಂಡಿಯೂರಿ ಕುಳಿತು ನಿನ್ನೆಡೆಗಿರುವ ನನ್ನ ಅಗಾಧ ಪ್ರೀತಿಯನ್ನ ಹೇಳಿಕೊಳ್ಳಲಾಗಲಿಲ್ಲವಲ್ಲ ಅಂದುಕೊಂಡು ಈ ಕ್ಷಣಕ್ಕೂ ಕಣ್ಣೀರಾಗುತ್ತಲೇ ಇದ್ದೀನಿ. ನಿನ್ನ ಬಳಿ ಹೇಳಿಕೊಳ್ಳುವ ಮನಸ್ಸು ಕಂಡಿತ ಬೆಟ್ಟದಷ್ಟಿದೆ, ಆದರೆ ಹೇಳಿಕೊಂಡ ಮರುಕ್ಷಣವೇ ಎಲ್ಲಿ ನನ್ನಿಂದ ದೂರವಾಗುತ್ತೀಯಾ ಅನ್ನುವ ತಲ್ಲಣಗಳು ಸಾಗರದಷ್ಟಿದೆ.

 ನಿನಗೆ ಒಂದು ಮಾತು. ನೇರವಾಗಿ ಹೇಳಿಕೊಳ್ಳಲಾಗದ ಅಸಹಾಯಕತೆಯಲ್ಲಿ ಈ ಪತ್ರದ ಮುಂದೆ ಕುಳಿತು ನಿನ್ನೊಂದಿಗೆ ಮಾತನಾಡುತ್ತಿದ್ದೇನೆ. ನನ್ನ ಹಾಗೆ ಬದುಕುತ್ತಿರುವ ಪ್ರತಿ ಕ್ಷಣಗಳೂ ನಿನ್ನ ಬಗ್ಗೆಯೇ ಯೋಚಿಸುತ್ತ, ನಿನ್ನ ಒಳಿತನ್ನೆ ಬಯಸುತ್ತ, ಆಗಾಗ ನಿನ್ನ ಆರೋಗ್ಯದ ಬಗ್ಗೆ ಪ್ರಾರ್ಥಿಸುತ್ತಾ, ಕೇವಲ ನಿನ್ನನ್ನೇ ಧ್ಯಾನಿಸುತ್ತ, ಪ್ರೇಮಿಸುತ್ತ,ಪ್ರೀತಿಸುತ್ತಿರುವಂತಹ ಹುಡುಗ,  “ನೀನು ನನಗಿಷ್ಟ” ಅನ್ನುವ ಆರೂವರೆ ಅಕ್ಷರಗಳನ್ನ ಹೇಳಿಕೊಳ್ಳಲಾಗದೇ ಇರುವ ಪ್ರೀತಿಯ ಹೇಡಿಯಂತಹ ಹುಡುಗ ಮತ್ತೆ ನಿನಗೆ ಸಿಗುವುದಿಲ್ಲ, ಸಿಗಬಾರದೂ ಕೂಡ. ನಿನ್ನ ಚೆಲುವಿಗೆ,ನಗುವಿಗೆ ಸಿರಿತನಕ್ಕೆ, ಮರುಳಾದವರು ಹಲವರು ಇರಬಹುದು, ಆದರೆ ನಿನ್ನ ಅಮಾಯಕತೆಗೆ,ನಿನ್ನ ನಿಷ್ಕಲ್ಮಶ ಹೃದಯಕ್ಕೆ ಶರಣಾದ ಹುಡುಗ ನಾನೊಬ್ಬನೆ ಗೆಳತಿ.

 ಜಗತ್ತಿನ ಅತ್ಯಂತ ಪ್ರೇಮಿ ಮತ್ತು ಹೇಡಿ ಹುಡುಗನ ಈ ಪತ್ರವನ್ನ ಓದಿ ಏನಂದುಕೊಳ್ಳುತ್ತಿಯೋ ಅನ್ನುವ ಭಯದಲ್ಲಿ ಕೈ ನಡುಗುತ್ತಿವೆ, ನಿನ್ನ ಬಗೆಗಿನ ಪ್ರೀತಿಯನ್ನ ಬರೆಸಿಕೊಳ್ಳುತ್ತಿರುವ ಈ ಅಕ್ಷರಗಳ ಋಣ ದೊಡ್ಡದಿದೆ, ಇನ್ನೈದು ದಿನದಲ್ಲಿ ನಿನ್ನ ಹುಟ್ಟುಹಬ್ಬ, ನಿನಗೇನು ಉಡುಗೊರೆ ಕೊಡಬಲ್ಲೆನು ಅನ್ನುವುದನ್ನ ಇನ್ನೂ ನಿರ್ಧರಿಸಲಾಗಿಲ್ಲ, ಐದು ದಿನವಲ್ಲ ಇನ್ನೈದೂ ಜನ್ಮಗಳು ಕಳೆದರೂ ಅಷ್ಟೆ, ಈ ಬಡಪಾಯಿ ಹುಡುಗ  ನಿಷ್ಕಲ್ಮಶ ಪ್ರೀತಿ ಮತ್ತು ನಿನಗೊಂದು ಸುಂದರ ಬದುಕನ್ನ ಉಡುಗೊರೆಯನ್ನಾಗಿ ಮಾತ್ರ ಕೊಡಬಲ್ಲ. ಅದಕ್ಕಿಂತ ಹೆಚ್ಚಿನದನ್ನೇನು ಕೊಡಲಿ ನನ್ನ ನಕ್ಷತ್ರದ ಹೆಸರಿನವಳೇ?

                                                                                ಇಂತಿ ನಿನ್ನ ಪ್ರೀತಿಯ

.                                                                                 872259331?

 

ಕನ್ನಡಿ ಮುಂದೆ ಈಗಾಗಲೇ ನೂರಾರು ಸಾರಿ ರಿಹರ್ಸಲ್ ಮಾಡಿ ಆಗಿದೆ

19 ಜೂನ್

ಪರಿಚಯವಾಗಿ ಮೂರು ವರ್ಷದ ಮೇಲಾಗಿದ್ದಾರೂ ಒಂದು ಸಲವೂ ಒಟ್ಗೆ ನೀವಿಬ್ರೂ ಸಿನಿಮಾಗೆ ಹೋಗಿಲ್ವಾಅಂದುಕೊಂಡುಅದೇನೂ ಶತಮಾನದಜೋಕುಅನ್ನುವಂತೆ ಕಿಸಕ್ಕನೆ ನಗುತ್ತಿದ್ದಾರೆ ನನ್ನನ್ನ ನೋಡಿಕೊಂಡು ನನ್ನ ಗೆಳೆಯರು.ಸಿನಿಮಾಇರಲಿ, ಒಂದು ಪಾರ್ಕಿನ ಮುಖವನ್ನೂ ನೋಡಿಲ್ಲವೆಂದುಕೊಂಡರೆಏನಂದುಕೊಂಡಾರು?ಅದು ಸಾಯಲಿ ಬಿಡು, ಇಲ್ಲಿಯವರೆಗೂಒಬ್ಬರನ್ನೊಬ್ಬರೂ ನೋಡದೇ ಪ್ರೀತಿಸುತ್ತಿರುವ ವಿಷಯ ತಿಳಿದರೆ ಎದೆಒಡೆದುಕೊಂಡು ಸತ್ತಾರು.ಮೊನ್ನೆಎಲ್ಲರೂ ಕೇಕೆ ಹಾಕಿಕೊಂಡು ನಗುತ್ತಿದ್ದರು. ಸುಮ್ಮನಾಗಿಬಿಟ್ಟೆ, ಅವರಿಗೆ ಸಿನಿಮಾಥಿಯೇಟರಿನಕಾರ್ನರ್ ಸೀಟಿನ ಕತ್ತಲೆಯಕುತೂಹಲಕ್ಕಿಂತ ಮೊಬೈಲಿಗೆ ಕಿವಿಗೊಟ್ಟುಒಬ್ಬರಿಗೊಬ್ಬರು ಪ್ರೀತಿಸಿಕೊಳ್ಳುವುದರಲ್ಲಿನ  ಸುಖ ತಿಳಿದಿಲ್ಲ. ಪರಸ್ಪರದೈಹಿಕ ಆಕರ್ಷಣೆಗೊಳಗಾಗಿ ದೂರಇದ್ದುಕೊಂಡೇ ಹತ್ತಿರವಾಗುವ ಸುಖವನ್ನ ಮರೆತಿದ್ದಾರೆ. ಪ್ರೀತಿಯೆಂದರೆ ಸಿನಿಮಾ ಪ್ರೀತಿಯೆಂದರೆಕಾಫೀಡೇ, ಪ್ರೀತಿಯೆಂದರೆ ವೀಕೆಂಡಿನಎಂ.ಜಿರೋಡು ಬ್ರಿಗೇಡ್‌ರೋಡುಅಂದುಕೊಂಡವರೊಂದಿಗೆ ನನ್ನದೆಂತ ಮಾತುಅಂದುಕೊಂಡು ಸುಮ್ಮನಿದ್ದರೂ ಬೇಕೂ ಅಂತಾನೆಕೆಣಕುತ್ತಿದ್ದರು.ಕೊನೆಗು ತಾಳ್ಮೆ ಕಳೆದಿಕೊಂಡು ಸರಿ ನನ್ನ ಪೂರ್ಣಿಯಜೊತೆಗೆ ನಾಳೆನೇ ಬೇಕಾದರೆ ಸಿನಿಮಾಗೆ ಹೋಗ್ತೀನಿ ಅಂತ ಬೆಟ್‌ಕಟ್ಟಿಯೇ ಬಿಟ್ಟೆ.

ಅವರಿಗೆ ನನ್ನಜೊತೆ ಬೆಟ್‌ಕಟ್ಟುವುದಕ್ಕಿಂತ ನಿನ್ನಂತ ಸುಂದರಿಯನ್ನ ನೋಡೋಕುತೂಹಲವಿರಲೂಬಹುದು.ನನಗೆ?ನನಗೆ ನಿನ್ನ ನೋಡಲುಕುತೂಹಲವಿಲ್ಲವಾ?ನಿನ್ನ ನೋಡುವ ಘಳಿಗೆಗಾಗಿ ನಾನು ಕಾದು ಕುಳಿತ ಘಳಿಗೆಗಳೆಷ್ಟೋ, ಪರಸ್ಪರ ನೋಡಬೇಕೆಂಬ ಹಂಬಲ ಹೆಚ್ಚಾದಾಗ ಪ್ರತಿ ಸಲವೂ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದೆವು, ಮೀಟ್‌ಆದ್ರೆಈಗಿರುವಕುತೂಹಲ ಉಳಿಯೋದಿಲ್ಲ ಅಂತ.ಕುತೂಹಲ ಉಳಿಯೋದಿಲ್ಲ ಅನ್ನುವುದು ಸತ್ಯವಅಥವ ಪರಿಚಯದ ಮೊದಲ ದಿನಗಳಲ್ಲಿ ಒಬ್ಬರಿಗೊಬ್ಬರನ್ನ ನೋಡದೇ ಪ್ರೀತಿಸಬೇಕುಅಂದುಕೊಂಡ ನಮ್ಮ ಮಾತು ಸತ್ಯವ?ಬಿಡು ಮಾಡಿಕೊಂಡಒಪ್ಪಂದವನ್ನ ನಾನೆ ಮುರಿಯುತ್ತಿದ್ದೀನಿ ಸ್ನೇಹಿತರ ಸಲುವಾಗಿ.ಸ್ನೇಹಿತರ ಸಲುವಾಗಿ ಅನ್ನೋದು ಮಾತು ಸತ್ಯವೇಆದರೂ ನಿನ್ನ ನೋಡಬೇಕೆಂಬ ಹಂಬಲ ಹೆಚ್ಚಾದುದ್ದರಿಂದಲೇ ನಾನು ಬೆಟ್‌ಕಟ್ಟಿದ್ದು ಪೂರ್ಣಿ.

ನಾಳೆ ಹೋಗುವ ಸಿನಿಮಾಗೆಇವತ್ತಿಂದಲೇ ಭರ್ಜರಿತಯಾರಿ ಮಾಡಿಕೊಂಡಾಗಿದೆ, ಕನ್ನಡಿ ಮುಂದೆ ಈಗಾಗಲೇ ನೂರಾರು ಸಾರಿರಿಹರ್ಸಲ್ ಮಾಡಿ ಆಗಿದೆ, ಮೊದಲು ನೀನು ಎದುರಾದಾಗ ಏನು ಮಾಡ್ಬೇಕುಅಂತಾನೆ ತಿಳೀತಿಲ್ಲ. ನಮಸ್ಕಾರಅನ್ನಲ? ಹೇಗಿದ್ದೀಯಅನ್ನಲ? ಇಪ್ಪತ್ತು ನಿಮಿಷ ಮೊದಲೇ ಬಂದಿದ್ದರೂ ಏನು ಇಷ್ಟು ಲೇಟುಅಂದುಬಿಡಲ?ಬನ್ರಿ ನಿಮ್ಗೇನೆ ಕಾಯ್ತಿದ್ದೆಅನ್ನಲ?ಅಥವಾ? ಹೋಗು ನಿಜಕ್ಕೂಏನ್ ಮಾಡ್ಬೇಕುಅಂತ ತಿಳಿತಿಲ್ಲ, ಮೊದಲೇಚನ್ನಾಗಿತ್ತು, ಮೊಬೈಲಿನಲ್ಲೇ ಬೇಕಾದರೇ ಸಂಜೆಯಯವರೆಗೂ ಲವ್ ಯೂ ಪೂರ್ಣಿಅಂದುಬಿಡಬಹುದಿತ್ತು, ಮೊಬೈಲಿನಲ್ಲಿ ನಿನ್ನ ತಬ್ಬಿಕೊಳ್ಳುವ, ಮುತ್ತಿಕ್ಕುವ ಸ್ಮೈಲಿಗಳನ್ನ ಕಳಿಸಿಬಿಟ್ಟು ಸಭ್ಯ“ಪೋಲಿ” ಅನ್ನಿಸಿಕೊಳ್ಳಬಹುದಿತ್ತು, ನಿನ್ನ ನಾಳೆ ನಾನು ಭೇಟಿ ಆಗ್ತೀನಿ ಅನ್ನುವುದು ಪಕ್ಕ ಆಗಿ ಇವತ್ತೇ ಮಾತುಕಡಿಮೆಯಾಗಿದೆ. ಮನೆಯವರೆಲ್ಲ ವಿಚಿತ್ರವಾಗಿ ನೊಡ್ತಿದ್ದಾರೆ ಪೂರ್ಣಿ.

ಮೊದಲೆ ಪೆದ್ದಿ ನೀನು, ಮೆಜೆಸ್ಟಿಕ್ಕಿಂದ ಮಾರ್ಕೆಟ್‌ಗೆ ಹೋಗೋಕೆ ಒದ್ದಾಡ್ತೀಯಅನ್ನೋದು ನನಗೆ ಗೊತ್ತಿದೆ.ಅಡ್ಡ್ರೆಸ್‌ತೆಗೆದುಕೋ, ನಿಮ್ಮ ವಿದ್ಯಾರಣ್ಯಪುರ ಬಸ್ ಸ್ಟಾಪಿಂದಕಾಮಕ್ಯಥಿಯೇಟರಿಗೆ ಸುಮಾರು23ಕಿಲೋಮೀಟರ್. ಹಾಗೆ ಔಟರ್‌ರಿಂಗ್‌ರೋಡ್‌ಆದ್ಮೇಲೆ ಬಿ.ಇ.ಎಲ್‌ರೋಡ್, ಇದಾದ್ಮೇಲೆ ಹಾಗೆ ಮತ್ತಿಕೆರೆ ಮೈನ್‌ರೋಡಿಂದಯಶವಂತಪುರ ಫ್ಲೈಓವರ್ ಮುಖಾಂತರ ನವರಂಗ್ ಸರ್ಕಲ್‌ಗೆ ಬಾ. ಹಾಗೆ ಮಾಗಡಿರೋಡುಕಾರ್ಡ್‌ರೋಡ್‌ಅಂಡರ್ ಪಾಸ್ ಮೂಲಕ ವಿಜಯನಗರಕ್ಕೆ ಬಂದು ಹಾಗೆ ದೀಪಾಂಜಲಿ ನಗರದಿಂದ ಬಲಕ್ಕೆ ತಿರುಗಿಕೊಂಡುಅಲ್ಲೆ ನಾಯಂಡನಹಳ್ಳಿ ಹತ್ರ ಲೆಫ಼್ಟ್‌ತಗೊಂಡು ಹಾಗೆ ೩ ಕಿಲೋಮೀಟರ್ ನಿನ್ನ ಸ್ಕೂಟಿ ಪೆಪ್‌ನ ಕಿವಿ ಹಿಂಡು ಸಾಕು ಅಲ್ಲೆ ಬಲಕ್ಕೆ ಕಾಮುಕ್ಯಥಿಯೇಟರ್‌ಇದೆ. ಅಡ್ಡ್ರೆಸ್‌ಇನ್ನು ಸರಿಯಾಗಿಗೊತ್ತಗದೇಇದ್ದರೆ ಹೇಳು, ಪ್ರತಿತಿರುವು, ಪ್ರತಿ ಸಿಗ್ನಲ್, ಎಲ್ಲವನ್ನು ಬರೆದು ನಿನಗೆ ಕಳಿಸುತ್ತೇನೆ. ಎಲ್ಲವೂ ನನಗೆ ಗೊತ್ತಿದೆ.ನಿನ್ನ ನೋಡುವ ಹಂಬಲದಿಂದಅದೆಷ್ಟು ಸಲ ನಿನ್ನ ಮನೆಯವರೆಗೆ ಬಂದು ವಾಪಾಸ್ ಬಂದಿಲ್ಲ ಹೇಳು?ಇಲ್ಲಿಗೆ ಬಂದಾದ ಮೇಲೆ ಇಬ್ಬರೂಒಬ್ಬರನ್ನ ಹುಡುಕುವುದೇ ಬೇಡ, ಹೃದಯಗಳಿಗೆ ತಮ್ಮ ಸಂಬಂಧಿಕರನ್ನಗುರುತಿಸುವುದು ಅಷ್ಟು ಕಷ್ಟದ ಕೆಲಸವೇನಲ್ಲ. ನಿನ್ನಲ್ಲಿಒಂದು ವಿನಂತಿ, ಅಪ್ಪಿತಪ್ಪಿಯೂ ನಿನ್ನತೀರ್ಥರೂಪುತಂದೆಯವರೂದೂರ್ವಾಸ ಮುನಿಗಳ ಪರಮ ಶಿಷ್ಯರೂ ಆದ  ಮುನಿರಾಜಯ್ಯನವರಿಗೆ ನಮ್ಮ ಈ ಮಾಸ್ಟರ್ ಪ್ಲಾನ್ ತಿಳಿಯದಂತೆ ನೋಡಿಕೋ. ನಾಳೆಯ ಸಿನಿಮಾ, ಸಿನಿಮಾದಕತ್ತಲು, ನಿನ್ನ ಬೆಚ್ಚನೆಯ ತೋಳು, ಎಲ್ಲವನ್ನ ನೆನಪಿಸಿಕೊಳ್ಳುತ್ತಾ ….. !

ಸದ್ಯಕ್ಕೆ ಏನ್ ಇಲ್ಲ ಮೊಬೈಲು ನೋಡು ಒಂದು ಮುತ್ತು ಕಳುಹಿಸಿದ್ದೇನೆ. ವಾಪಾಸ್ ಕಳುಹಿಸತಕ್ಕದ್ದು.

                                                                                                ನವಿಲೂರ್ ಹುಡ್ಗ

                                                                                                 3622

 

ಲವ್ ಮಾಡ್ತೀಯಾ ಅಂತ ಕೇಳ್ತಿಲ್ಲ, ಮದುವೆ ಆಗ್ತೀಯ ಅಂತ ಕೇಳ್ತಿದ್ದೀನಿ

19 ಜೂನ್

ಪ್ರತಿಷ್ಠಿತ ಸರ್ಕಾರಿಪಿ.ಡಬ್ಲೂ.ಡಿಇಲಾಖೆಯಯಲ್ಲಿ ನೌಕರಿ ಮಾಡ್ತಇರೋಒಂದು ಬ್ಯೂಟಿಫುಲ್ ಹುಡುಗಿಗೆ, ಅಟ್ಲೀಸ್ಟ್ ಎಸ್.ಎಸ್.ಎಲ್.ಸಿ.ಪಾಸ್ ಮಾಡೋಕೂ ಆಗ್ದೆ ಎರೆಡೆರೆಡುಸಲ ಫೇಲ್ ಆಗ್ದೇ ಇರೋ ಸೋಮಾರಿ ಹುಡುಗಒಂದ್ ಲವ್ ಲೆಟರ್ ಬರಿಯೋಕ್ ಹೋದ್ರೆ ಹೇಗಿರತ್ತೆಗೊತ್ತ ಹುಡುಗಿ?ಇದೇ ತರ ತಗಡುತಗಡಾಗಿರತ್ತೆ.ಮೊದಲಿಗೆ ನಾನು ನಿನ್ನ ವಿಳಾಸ ಹುಡ್ಕೋಕೆ ಪಟ್ಟ ಕಷ್ಟಗಳನ್ನ ನೆನೆಸಿಕೊಂಡ್ರೆ, ಮೂರು ಮಾಹಾಭಾರತದಕಥೆ, ಎರಡುರಾಮಾಯಣದ ವ್ಯಥೆ, ಒಂದಷ್ಟುಕನ್ನಡ ಸಿನಿಮಾಗಳ ಸರಕು, ಮತ್ತಷ್ಟು ಗೋಳಿನ ಸೀರಿಯಲ್ಲುಗಳ ಸಾವಿರಾರು ಎಪಿಸೋಡುಗಳ ಸ್ಕ್ರೀನ್ ಪ್ಲೇ ಖಂಡಿತಆಗುತ್ತೆ.ನಿನ್ನತುಮಕೂರಿನ ಆದರ್ಶನಗರ್,ಅಶೋಕನಗರ್,ಎಸ್.ಐ.ಟಿ,ಎಂ.ಜಿ ರೋಡು,ಗಿರಿನಗರ, ಸೋಮೇಶ್ವರದ ಬೀದಿಬೀದಿಗಳನ್ನೆಲ್ಲ ಅಲೆದು ಕೊನೆಗೆ ಕೃಷ್ಣ ನಗರದ ನಿನ್ನ ಮನೆಯ ವಿಳಾಸ ಹುಡುಕುವಷ್ಟರಲ್ಲಿ ನಾನೂ ಕೂಡಇಪ್ಪತ್ತೊಂದನೆಯ ಶತಮಾನದ ವಾಸ್ಕೋಡಿಗಾಮನಾಗಿ ಹೋಗಿದ್ದೆ.

ಈ ಪತ್ರದ ಮೊದಲ ಸಾಲನ್ನ ಬರಿಯೋಕು ಕೆಲವಾರು ಗಂಟೆಗಳನ್ನ ನೀರಿನಂತೆಕರ್ಚು ಮಾಡಿದ್ದೀನಿ.ಕೊನೆಗೂ ನಿನಗೆ ನಾನು ಏನಂತಕರಿಬೇಕುಅಂತ ನಿರ್ಧರಿಸೋಕೆಆಗ್ಲೇಇಲ್ಲ. ವಿಜಿ ಅನ್ಬೇಕ? ವಿಜಯಅಂತ ಪ್ರೀತಿಯಿಂದಕರಿಬೇಕು? ಜಾನುಅಂತ ಮುದ್ದಿನಿಂದ ಕೂಗಬೇಕಾ? ಹೀಗೆ ನನ್ನಎಲ್ಲ ಪ್ರಯತ್ನಗಳು ವಿಫಲವಾದ ನಂತರ ನಿನಗೆ ನಾನು ಇಟ್ಟ ಪ್ರೀತಿಯ ಹೆಸರುತುಮಕೂರುತುಂಟಿ.

 ನಾನು ರೀತಿರಿವಾಜುಇಲ್ಲದ ಹುಡುಗ.ಸೋ ಡೈರೆಕ್ಟ್‌ಅಟ್ಯಾಕ್‌ಅಂತಾನೆಅಂದ್ಕೊ.ನಂಗೆ ನೀನಂದ್ರೆ ಇಷ್ಟ.ತುಂಬ ಇಷ್ಟಾ ಅಂತಾನೆಅಂದ್ಕೊ ಪರ್ವಾಗಿಲ್ಲ. ನಿಂಗೆ ಈ ಹುಂಬನ ಜೊತೆ ಲೈಫ್‌ಇಡೀಜೊತೆಗಿರೋಕ್ ಇಷ್ಟಾನಾ?  ಶಾಸ್ತ್ರ ಸಂಪ್ರದಾಯದ ಪ್ರಕಾರ ನಿಂಗೆ ಅಪ್ಲಿಕೇಷನ್ ಹಾಕಿ ನೀನ್‌ಅದ್ಕೆ ಒಪ್ಗೆ ಕೊಟ್ಟು, ನೀನ್ ಒಪ್ಗೆ ಕೊಡೋವರೆಗು ನಾನ್ ನಿನ್ ಹಿಂದೆ ಸುತ್ತಾಡಿ, ನಿನ್ ಹತ್ರಉಗುಸ್ಕೊಂಡು, ನಾನ್ ಬೇಜಾರ್ ಆಗಿ, ಮತ್ತೆ ನಾನ್ ಬೇರೆ ಹುಡುಗಿ ಹುಡುಕೊಂಡ್ ಹೋಗಿ, ನೀನ್ ನನಗೆ ಮಿಸ್ ಆಗಿ, ಇದೆಲ್ಲ ಬೇಕಾ?ಪತ್ರತಲುಪಿದ್‌ಕೂಡ್ಲೇಒಂದ್ ಪತ್ರ ಕಳಿಸಿಬಿಡು.ನಿಂಗೆ ನನ್ನಿಂದ ಪ್ರತಿದಿನ ಒಂದ್‌ಕ್ವಿಂಟಾಲ್ ಪ್ರೀತಿಒಂದ್‌ಕ್ವಿಂಟಾಲ್ ಮುದ್ದು, ಒಂದುಕ್ವಿಂಟಾಲ್ ಮಮತೆ, ಒಂದುಕ್ವಿಂಟಾಲ್‌ಅಕ್ಕರೆ, ಜೀವನ ಪರ್ಯಂತ ಸಿಗುತ್ತೆ.ಜೀವನ ಪರ್ಯಂತಕಷ್ಟಪಟ್ಟುದುಡಿತೀನಿ ನಿನ್ನಚನ್ನಾಗ್ ನೋಡ್ಕೋತೀನಿ ಇಷ್ಟ್ ಸಾಕಲ್ವ ?ಇದ್ಕಿಂತ ಹೆಚ್ಚ್ಗೆ ಒಬ್ಬ ಹುಡುಗಏನ್ ಹೇಳೊಕ್ ಸಾಧ್ಯ ಹೇಳು?

 ಸ್ವಲ್ಪಒರಟ, ಸಕತ್ ಮುಂಗೋಪಿ, ಸ್ವಲ್ಪಗಲೀಜು, ಸ್ವಲ್ಪ ಸೋಮಾರಿ, ಒಂದು ಸಣ್ಣಕೆಲ್ಸ, ಇದು ಸಧ್ಯದ ನನ್ ಬಯೋಡೇಟ.ನೀನು ನನಗೆ ಸಿಗುವುದೇ ಆದ್ರೆಇದೆಲ್ಲಖಂಡಿತ ಬದಲಾಗುತ್ತೆ, ಒಂದೊಳ್ಳೆ ಕೆಲ್ಸ ಹಿಡಿತೀನಿ, ಒರಟುತನಕಡ್ಮೆಆಗುತ್ತೆ, ನಿನ್ ಮುದ್ದು ಮುಖ ನೋಡಿದ್ರೆ ಕೋಪ ತನ್ನಿಂತಾನೆ ಹೊರಟ್‌ಹೋಗುತ್ತೆ,ಯಾವುದಕ್ಕೂ ನೀನ್ ಮನ್ಸು ಮಾಡ್ಬೇಕು ಅಷ್ಟೆ.ಪತ್ರನಇಷ್ಟ್ ವರಟಾಗಿ ಬರ್ದಿದ್ದಾನಲ್ಲಅಂದ್ಕೊಬೇಡ ಎಸ್.ಎಸ್.ಎಲ್.ಸಿ.ಫೇಲ್‌ಆದ ಹುಡುಗನಿಂದ ನೀನ್‌ಇನ್ನೆಂತ ಪತ್ರ ನಿರಿಕ್ಷಿಸೋಕ್ ಸಾಧ್ಯ ಹೇಳು?ಪತ್ರಒರಟಾಗಿದೆ ಅಷ್ಟೆ, ಆದ್ರೆಇಂಥಒರಟು ಹುಡುಗನ ಹತ್ರಾನು ಪ್ರೇಮ ಪತ್ರ ಬರೆಸಿಕೊಳ್ಳುವ ಅದೃಷ್ಟ ನಿಂಗಿದ್ಯಲ್ಲಜಾನು?ನೀನ್‌ಒಂಥರ ಸೂಪರ್‌ಅಲ್ವಾ?ತುಂಬಾ ಪ್ರಾಮಾಣಿಕ ಹುಡುಗ್ರು ಸಿಗೋದು ಈಗಿನ್‌ಕಾಲದಲ್ಲಿತುಂಬಾ ಕಷ್ಟ ಅಂತೆ.ಎಲ್ಲ ಹುಡುಗರ ಹಾಗೆ ಲವ್ ಮಾಡ್ತೀಯಾಅಂತ ಕೇಳ್ತಿಲ್ಲ, ಮದುವೆಆಗ್ತೀಯಅಂತ ಕೇಳ್ತಿದ್ದೀನಿ.ಎಷ್ಟು ಜನ ಹುಡುಗರಿಗೆಇಂಥ ನಿಯತ್ತಿರುತ್ತೆ ಹೇಳು ಜಾನು?ಮನೆ ಬಾಗಿಲಿಗೆ ಅದೃಷ್ಟ ಹುಡುಕೊಂಡ್ ಬಂದಿದೆಅಂದ್ಕೊಂಡ್ ಬಿಡು, ಬಿಟ್ರೆಚಾನ್ಸ್ ಸಿಗಲ್ಲ.ಈಗಾಗಲೇ ಪಕ್ಕದ ಮನೆಯ ಲಕ್ಷಕ್ಕನ ಮಗಳು ಯಾಕೋಒಂಥರಾನೋಡ್ತಾ ಇರ್ತಾಳೆ, ಹಾಳಾದ್ ವಯಸ್ಸುಯಮಾರ್‌ಬಿಟ್ಟುನಿಂಗೆ ಬೀಳೋ ತಾಳಿ ಅವಳಿಗೆ ಬಿದ್ರೆ ಕಷ್ಟ.ತುಂಬಾಎನ್ ಬೇಜಾರ್‌ಇಲ್ಲ, ನಿನ್ನಂತಒಂದು ಹುಡುಗಿ ಮಿಸ್ ಆಗ್ತಾಳಲ್ಲ ಅಂತ ಸ್ವಲ್ಪ ಬೇಜಾರು ಅಷ್ಟೆ.ಸರಿ ಸಧ್ಯಕ್ಕೆ ಇಷ್ಟು ಸಾಕು, ಪತ್ರ ಓದಿ ರಿಪ್ಲೆ ಮಾಡಿದ್ರೆ ನಾನ್‌ ಅದೃಷ್ಟವಂತಾ .ಇಲ್ಲದಿದ್ರೆ ನೀನು ದುರದೃಷ್ಟವಂತೆ.

                                                                                                ಬೆಂಗಳೂರು ಹುಡ್ಗ.

                                                                                                ನವಿಲೂರ್ ಪಾಳ್ಯ.

ನಿನ್ನ ಮೇಲಿದ್ದ ಪ್ರೀತಿ ಕಾಳಜಿ ಈಗ ನೂರು ಪಟ್ಟು ಜಾಸ್ತಿಯಾಗಿದೆ.

19 ಡಿಸೆ

ನಿನ್ನ ಕೋಪ ಹೇಗಿದೆ? ನಿನ್ ಸಿಡುಕುತನ? ನಿನ್ನ ಮೊಂಡತನ? ನಿನ್ನ ಸೋಮಾರಿತನ? ನಿನ್ನು ಮುದ್ದುತನ? ಮೊದ್ದುತನ? ಪೆದ್ದುತನ? ಮೊದಲಿನ ಹಾಗೆ ನಿನ್ನ ಕೋಪದ ಜ್ವಾಲಾಮುಖಿ ನಿಮ್ಮ ಮನೆಯವರ ಮೇಲೆ ಸಿಡಿಯುತ್ತಲೇ ಇದೆಯಾ? ದಿನಕ್ಕೆಷ್ಟು ಭಾರಿ ನನಗೆ ಶಾಪ ಹಾಕುತ್ತೀಯಾ? ನಾನು ಇಷ್ಟಪಟ್ಟು ನಿನಗೆ ಕೊಟ್ಟ ನವಿಲುಗರಿ, ನನ್ನದೇ ಹೆಸರಿಟ್ಟುಕೊಂಡು ತಬ್ಬಿಕೊಂಡಿರುತ್ತಿದ್ದ ಪಾಪದ ಟೆಡ್ಡಿಬೇರು, ನಾನು ನಿನಗೆ ನವಿಲೂರು ಜಾತ್ರೆಯಲ್ಲಿ ಕೊಡಿಸಿದ ಕಲರ್ ಕಲರ್ ಕನ್ನಡಕ, ಗಾಂಧಿಬಜಾರಲ್ಲಿ ಕೊಡಿಸಿದ ಪ್ರೇಮ ಪುಸ್ತಕ, ನಿನಗೇ ಅಂತ ಬರೆದ ನೂರಾರು, ಕ್ಷಮಿಸು ಸಾವಿರಾರು ಕವಿತೆಗಳು,ಎಲ್ಲವನ್ನೂ ನನ್ನ ಮೇಲಿನ ಕೋಪ ತೀರಿಸಿಕೊಳ್ಳಲು ಅಗ್ನಿ ದೇವನಿಗೆ ಸಮರ್ಪಿಸಿಯಾಗಿರಬೇಕು ಅಲ್ವಾ? ಬಿಡು ನಿನ್ನ ಕೋಪದ ಮಹಿಮೆ ಅಪಾರ ಎಂಬುದನ್ನ ನಿನ್ನ ಜೊತೆ ಕಳೆದ ಎರಡು ವರ್ಷ ಮೂರು ತಿಂಗಳು ಹದಿನಾಲ್ಕು ದಿನಗಳಲ್ಲಿ ಅರ್ಥ ಮಾಡಿಕೊಂಡಿದ್ದೇನೆ. ಅಂದ ಹಾಗೇ ನೀನು ಹೇಗಿದ್ದೀಯಾ? ನನ್ನನ್ನ ನಿನ್ನ ಬಲೆಯಲ್ಲಿ ಕೆಡವಿದ ನಿನ್ನ ಮನಮೋಹಕ ಕಂಗಳು ಹೇಗಿವೆ? ನನ್ನನ್ನ ಬಿಡದೇ ಕಾಡುತ್ತಿದ್ದ ನಿನ್ನ ನಗು ಹಾಗೆ ಇದೆ ತಾನೆ? ಅಂದ ಹಾಗೆ ಈ ಜನ್ಮದಲ್ಲಿ ನೀನು ನನಗೆ ಫೋನ್ ಮಾಡೋದು ಕನಸಿನ ಮಾತು ಅಲ್ವ? ಮೆಸ್ಸೇಜ್ ಮಾಡೊಲ್ಲ, ನನ್ನ ಬಗ್ಗೆ ಚಿಂತೆ ಮಾಡೊಲ್ಲ, ನಾನು ನಿನಗೆ ನೆನಪಾಗೊಲ್ಲ, ಅದೆಲ್ಲ ಗೊತ್ತಿದ್ರೂ ಈ ಪತ್ರ ಬರಿತ್ತಿದ್ದೀನಿ. ಆದ್ರೂ ಎಲ್ಲೋ ಒಂದು ಸಣ್ಣ ಆಸೆ, “ಸ್ಸಾರಿ ಕಣೋ ಕರಿಯಾ, ನಂದೇ ತಪ್ಪು, ಮನ್ಸಲ್ಲಿ ಏನು ಇಟ್ಕೋಬೇಡ, ನಾನ್ ಕೋಪ ಮಾಡ್ಕೊಳ್ದೆ ಇನ್ಯಾರು ಕೋಪ ಮಾಡ್ಕೊಬೇಕೊ? ನಡಿ ಪಾನಿಪೂರಿ ಕೊಡ್ಸು, ಪುನೀತ್ ಫಿೀಲ್ಮ್‌ಗೆ ಕರ್ಕೊಂಡ್ ಹೋಗು, ಹಾಗೆ ಕೆ.ಎಪ್.ಸಿ ಕಡೆ ಒಂದು ರೌಂಡ್ ಹೊಡ್ಕೊಂಡು ಬರೋಣ, ನಿಮ್ ಮನೆಗೆ ಕರ್ಕೊಂಡ್ ಹೋಗು ಪ್ಲೀಸ್” ಅಂತ ಒಂದು ಫೋನ್ ಮಾಡ್ತಿಯೇನೋ ಅಂತ ಇವತ್ತಿಗೂ ಈ ಕ್ಷಣಕ್ಕೂ ಕಾಯ್ತನೆ ಇದ್ದೀನಿ.

ನಿಮ್ಮ ಮನೆಗೆ ಬಂದು ನಿಮ್ಮ ಮನೆಯವರ ಮುಂದೆಯೆ ಕೆನ್ನೆಗೆ ನಾಲ್ಕು ಬಿಟ್ಟು ನಿನ್ನ ಹೆಗಲಮೇಲೆ ಕೂರಿಸಿಕೊಂಡು ಬಂದ್ಬಿಡ್ಬೇಕು ಅಂತ ತುಂಬಾ ಸಲ ಅನ್ನಿಸಿದೆ. ಆದರೆ ಅದೇ ಗುಳಿಗೆನ್ನೆಯ ದರ್ಶನಕ್ಕೆ ಹಗಲು ರಾತ್ರಿ ಅನ್ನದೆ ಕಾದಿದ್ದು ನೆನಪಾಗುತ್ತೆ, ಕೊಟ್ಟ ಮುತ್ತುಗಳು ನೆನಪಾಗುತ್ತೆ, ಮನೆಯವರೆಲ್ಲರೂ ನಮ್ಮ ಮದುವೆಗೆ ನೋ ಅಂದ್ರೂ ಕೂಡ ಎಲ್ಲರ ಮಾತನ್ನ ಧಿಕ್ಕರಿಸಿ ನನ್ನ ಮನೆಯಂಗಳಕ್ಕೆ ಬಂದ ನಿನ್ನ ಅಪಾರ ಪ್ರೀತಿ ನೆನಪಾಗುತ್ತೆ, ಎಲ್ಲಕ್ಕಿಂತಲೂ ನಮ್ಮ ಪ್ರೀತಿಗೆ ಸಾಕ್ಷಿಯಾಗಿ ನಮ್ಮದೇ ಪುಟ್ಟ ಕಂದ ಇನ್ನೇನು ನಿನ್ನ ಮಡಿಲಿಗೆ ಬಂದುಬಿಡುತ್ತೇ ಅನ್ನುವುದು ನೆನಪಾಗಿ ನಿನ್ನ ಮೇಲಿನ ಕೋಪ,ಸಿಟ್ಟು ಅಸಹನೆ ಎಲ್ಲವೂ ಮಾಯವಾಗಿ ನಾನೆ ನಿನ್ನ ಮಗುವಂತಾಗಿಬಿಡುತ್ತೇನೆ. ನೋಡು ನಿನ್ನ ಮೇಲಿದ್ದ ಪ್ರೀತಿ ಕಾಳಜಿ ಈಗ ನೂರು ಪಟ್ಟು ಜಾಸ್ತಿಯಾಗಿದೆ, ನಿನ್ನ ಮೊಂಡುತನ,ನಿನ್ನ ಸಿಟ್ಟು ಎಲ್ಲವನ್ನ ನಾನು ನನ್ನ ಪ್ರೀತಿಯಿಂದಾನೆ ಗೆಲ್ತೀನಿ ಅನ್ನೋ ಭರವಸೆ ಇದೆ, ಆದ್ರೆ ನಿನ್ನಲ್ಲಿ ಒಂದು ಒಂದೇ ಒಂದು ಪುಟಾಣಿ ಬೇಡಿಕೆ ಇದೆ, ಅದೇನಪ್ಪ ಅಂದ್ರೆ, ಪ್ಲೀಸ್ ಸ್ವಲ್ಪ ಕೋಪ ಕಡಿಮೆ ಮಾಡ್ಕೋ ಮರಾಯ್ತಿ, ಸಹನೆ ಬೆಳೆಸ್ಕೊ, ನನ್ನ ಮೇಲೆ ಸ್ವಲ್ಪ ಪ್ರೀತಿ ಇರಲಿ ಅನ್ನೋ ಮಾತು ನಿನಗೆ ಹೇಳೋದಿಲ್ಲ, ನೀನು ಪ್ರೀತಿಯ ವಿಷಯದಲ್ಲಿ ಯಾವತ್ತಿಗೂ ನನ್ನ ಪಾಲಿನ ಅಕ್ಷಯಪತ್ರೆ.

ಪ್ಲೀಸ್ ಬಂದುಬಿಡು, ಬದುಕಲ್ಲಿ ಕೋಪ ತಾಪಗಳಿಗೆ ಹೆಚ್ಚಿನ ಆಯುಷ್ಯ ಇರಲ್ಲ ಚಿನ್ನ. ಜಗತ್ತನ್ನೆ ಎದುರು ಹಾಕಿಕೊಂಡು ಬದುಕು ಕಟ್ಟಿಕೊಂಡವರು ನಾವು. ಸಣ್ಣ ಸಣ್ಣ ವಿಷಯಗಳಿಗೆ ಮನಸ್ಸು ಮುರಿದುಕೊಳ್ಳುವುದು ಬೇಡ, ಇವರದ್ದು ಬರಿ ಮೂರು ದಿನದ ಪ್ರೀತಿ ಅಂತ ಯಾರಾದ್ರೂ ಆಡ್ಕೊಂಡು ನಗೋದು ನಮ್ಗೆ ಬೇಕಾ ಹೇಳು? ಎಲ್ಲರ ಕಣ್ಣು ಕುಕ್ಕುವ ಹಾಗೆ ಬದುಕಿ ತೋರಿಸಬೇಕಲ್ವಾ ನಾವು? ಅವರ ಮಾತು ಹಾಳಾಗಲಿ ಬಿಡು. ಇನ್ನೇನು ಕೆಲವೇ ತಿಂಗಳು ನಮ್ಮ ಮಡಿಲಿಗೆ ಕುಮಾರ ಕಂಠೀರವನೋ, ಮುದ್ದು ಗೌರಿಯೋ ಬರುವ ಸಮಯ, ಸ್ವಲ್ಪಾನೆ ಯೋಚಿಸಿ ನೋಡು, ಜಗತ್ತಲ್ಲಿ ಯಾರು ಪ್ರೀತಿಸದ ಹಾಗೆ ನಿನ್ನನ್ನ ಪ್ರೀತಿಸಿದವನು ನಾನು.ನನಗಿಂತ ಸಾವಿರ ಸಾವಿರ ಪಟ್ಟು ನನ್ನನ್ನ ಪ್ರೀತಿಸಿದ ಮೊಂಡಿ ನೀನು. ಬೇಕಾದರೆ ನನ್ನದಲ್ಲದ ತಪ್ಪುಗಳಿಗೆ ನಾನೇ ಕ್ಷಮೆ ಕೇಳುತ್ತೇನೆ. ನಿನಗೆ ಮಾಡಿದ ಪ್ರಾಮಿಸ್‌ನಂತೆ ಜಯಂತ ಕಾಯ್ಕಿಣಿ ಸರ್ ಕೈಕಾಲು ಹಿಡಿದು ಖಂಡಿತ ಅವರನ್ನ ಮೀಟ್ ಮಾಡಿಸ್ತೀನಿ, ಪ್ಲೀಸ್ ಬಂದುಬಿಡು. ಅಷ್ಟೇ ಅಲ್ಲ, ಡಿಸೆಂಬರ್ ಚಳಿಯ ಹಾವಳಿ ವಿಪರೀತವಾಗುತ್ತಿದೆ. ಈ ಚಳಿಗೆ ನಿನ್ನದೆ ಹೊದಿಕೆ ಬೇಕು ಅನ್ನಿಸ್ತಿದೆ. ನನ್ನ ಕಷ್ಟ ನಿನಗೆ ಅರ್ಥವಾಗಿರಬೇಕು ಅಲ್ವಾ ಮುದ್ದು ಹೆಂಡತಿ.. J

ಕೇವಲ ನಿನ್ನವನು
ನವಿಲೂರ್ ಹುಡ್ಗಾ..:)

ಸ್ವಲ್ಪ ಸಮಾಧಾನವಿರಲಿ, ವ್ಯವಧಾನವಿರಲಿ ಗೆಳೆಯ.

28 ಸೆಪ್ಟೆಂ

ನೀನು ನನಗೆ ನೆನಪಾದ ಒಂದು ಸುಂದರ ಸಂಜೆ. ನಾನು ನಿನ್ನ ನೆನಪುಗಳ ಮೊಗ್ಗು ಹೊದ್ದುಕೊಂಡು ನಿನ್ನನ್ನೇ ಧ್ಯಾನಿಸುತ್ತಿದ್ದಾಗ ನನ್ನೊಳಗೆ ಸದ್ಧಿಲ್ಲದೆ ಮೂಡಿದ ಆಸೆ ನಿನ್ನ ಜೊತೆ ಒಂದು ದಿನ ಪೂರ್ತಿಯಾಗಿ ಕಳೆಯಬೇಕು. ಜನ ನಗ್ತಾರೆ ಗೊತ್ತು, ಏನ್ ಹುಡುಗೀನಪ್ಪ ಅನ್ಕೋತಾರೆ ಅಂತಾನೂ ಗೊತ್ತು, ತುಂಬಾ ಫಾಸ್ಟ್ ಇದ್ದಾಳಪ್ಪ ಹುಡುಗಿ ಅಂತಾನೂ ಹೇಳ್ತಾರೆ, ಜನರ ಮಾತು ಬಿಡು, ನನ್ನ ಸಭ್ಯ ಪೋಲಿ ಹುಡುಗ ನೀನು, ಯೋಗರಾಜಭಟ್ಟರ ಹೊಸ ಸಿನಿಮಾದ ಹಾಡಿನ ಸಾಲಿನ ಒಳ್ಳೆ ಲೋಪರ್ ಆದ ನೀನ್ ಕೂಡ ನನ್ನ ಮಾತನ್ನ ಹೇಗೆ ಅರ್ಥಮಾಡ್ಕೋತೀಯೋ ಕಾಣೆ, ನನಗನ್ನಿಸೋ ಪ್ರಕಾರ ಯಾವುದಾರು ಜನರೇ ಬಾರದ ಹಳೆಯ ಸಿನಿಮಾ ಟೆಂಟ್ಗೆ ಕರೆದುಕೊಂಡು ಹೋದ್ರೆ ಹೇಗೆ? ಯಾವುದಾದ್ರು ಪಾರ್ಕ್? ಹೋಗ್ಲಿ ಧೈರ್ಯ ಮಾಡಿ ಒಂದು ಲಾಡ್ಜು? ಯಾವುದಾದ್ರು ಪೋಲಿ ಗೆಳೆಯರ ರೂಮು? ಸರಿ ಅದು ನಿನ್ ಕರ್ಮ, ಹೇಗಂದುಕೊಂಡರೂ ಚಿಂತೆಯಿಲ್ಲ, ಅಪ್ಪಅಮ್ಮನ ಕಣ್ಣು ತಪ್ಪಿಸಿ, ತಂಗಿಗೆ ಪೂಸಿ ಹೊಡೆದು, ತಮ್ಮನಿಗೆ ನೂರು ಸುಳ್ಳು ಹೇಳಿ, ಅಣ್ಣನ ಬೈಕೆ ಪೆಟ್ರೋಲ್ ತುಂಬಿಸಿ ಹೊರಗೆ ಕಳಿಸಿ ನಿನ್ನ ಜೊತೆ ಒಂದು ದಿನ ಇರ್ಬೇಕು ಅನ್ನಿಸ್ತಿದೆ.

ನನಗೆ ಗೊತ್ತು ಇಂಥಾ ಸಮಯಕ್ಕೆ ಕಾದು ಕುಳಿತ ಸಭ್ಯ ಪೋಲಿ ಹುಡುಗ ನನ್ ಒಳ್ಳೆ ಲೋಪರ್ ನೀನು ಅಂತ. ನನ್ನ ಪತ್ರ ಒಡಿ ನೀನು ನೀನಾಗಿರಲ್ಲ, ಎಲ್ಲಾ ಮಾಸ್ಟರ್ಪ್ಲಾನುಗಳು ನಿನ್ ತಲೆಯಲ್ಲಿ ಹಗ್ಗಜಗ್ಗಾಟ ಆಡ್ತ ಇರುತ್ತೆ, ಪಾರ್ಕೋ, ಸಿನಿಮಾನೋ, ಗೆಳೆಯರ ರೂಮೋ, ಸ್ವಲ್ಪ ಸಮಾಧಾನ ದೊರೆ, ಸ್ವಲ್ಪ ನಿಧಾನಿಸು ಪ್ರಭುವೆ, ನಿನ್ನೆಲ್ಲ ಪೋಲಿಗುಣಗಳ ಹೊರತಾಗಿಯೂ ನಾನು ನಿನ್ನನ್ನ ಅದೆಷ್ಟು ಪ್ರೀತಿಸ್ತೀನಿ ಅಂತ ಹೇಳ್ಕೊಳ್ಬೇಕಾಗಿದೆ, ಇದೆಲ್ಲ ಪ್ರೀತಿ ಹೇಳಿಕೊಳ್ಳೋ ಜಾಗಗಳಲ್ಲ ಕರಿಯಾ, ಪ್ರಾಣಬಿಟ್ರೂ ನಾನಲ್ಲಿಗೆಲ್ಲ ಬರೊದಿಲ್ಲ, ನಿರಾಸೆಯಾಯಿತೇನೋ ಪಾಪ? ಸ್ವಲ್ಪ ಸಮಾಧಾನವಿರಲಿ, ವ್ಯವಧಾನವಿರಲಿ ಗೆಳೆಯ. ನಮ್ಮ ಮುಂದಿನ ಬದುಕಿನ ಬಗ್ಗೆ ನಿನ್ ಜೊತೆ ಮಾತಾಡ್ಬೇಕಾಗಿದೆ. ಫೋನಲ್ಲಿ ಬರಿ ಕಾಗೆ ಹಾರಿಸ್ತೀಯ, ಮಾಡೋಣ ಬಿಡೂ, ಆಗುತ್ತೆ ಬಿಡೂ, ಎಲ್ಲ ಸರಿ ಹೋಗುತ್ತೆ ಬಿಡು, ಇಂಥ ಮಾತುಗಳನ್ನ ನಾಲ್ಕುವರ್ಷಗಳಿಂದ ಕೇಳಿ ಕೇಳಿ ಹುಚ್ಚು ಹಿಡಿದಿದೆ, ಮನೆಯಲ್ಲಿ ಮದುವೆಗೆ ಹುಡುಗನ ಭೇಟೆ ಶುರುವಾಗಿದೆ. ಪ್ಲೀಸ್ ಏನಾದ್ರು ಮಾಡು ನನಗೆ ಗೊತ್ತಿಲ್ಲ, ಒಂದೊಳ್ಲೆ ಕೆಲ್ಸ, ಪರವಾಗಿಲ್ಲ ಅನ್ನುವಷ್ಟು ಸಂಬಳ, ನನ್ನನ್ನ ಸಾಕಬಲ್ಲೆ ಅನ್ನುವಷ್ಟು ನಂಬಿಕೆ, ಇಷ್ಟೇ ನಾನು ನಿನ್ನನ್ನ ಕೇಳ್ತಿರೋದು.

ಇದನ್ನೆಲ್ಲ ನಿನ್ ಜೊತೆ ಮಾತಾಡ್ಬೇಕು, ಪ್ಲಿಸ್ ಯಾರೂ ಇಲ್ಲದ ಜಾಗಕ್ಕೆ ನನ್ನ ಕರೆದುಕೊಂಡು ಹೋಗು, ದರಿದ್ರ ಮೊಬೈಲು ತರಬೇಡ, ನಿನಗೆ ಊರ ತುಂಬ ಗೆಳತಿಯರು, ಮೆಸ್ಸೇಜ್ ಕುಟ್ಟುತ್ತ ಕುಳಿತುಬಿಡ್ತೀಯಾ. ನಿನ್ನ ಸೋಮಾರಿತನವನ್ನ ನಾನು ಪ್ರಶ್ನಿಸಬೇಕು, ನಾನೆಷ್ಟು ಪ್ರೀತಿಸ್ತೀನಿ ಅಂತ ನಿನ್ನಲ್ಲಿ ಹೇಳ್ಕೊಳ್ಳ್ಬೇಕು, ನಿನ್ನ ಬೆನ್ನಿಗಂಟಿಕೊಂಡು ನೂರಾರು ಮೈಲಿ ಕುಳಿತುಕೊಳ್ಳಬೇಕು, ಬೈಕು ಬೋರಾದರೆ ಕಾಲು ನಡಿಗೆ, ನಿನ್ನೊಂದಿಗೆ ಹೆಜ್ಜೆ ಹಾಜಿ ನಡೆಯುವ ನಡೆಯುವ ಸೌಭಾಗ್ಯಕ್ಕಿಂತ ಬೇರೆ ಏನಿದೆ ನನಗೆ? ಬೇಕಾದರೆ ಒಂದೂ ಮಾತಿಲ್ಲದೆ ಸಂಜೆಯವರೆಗೂ ನಿನ್ನ ಕೈ ಹಿಡಿದುಕೊಂಡು ನಡೆಯಬಲ್ಲೆ. ಅಲ್ಲಿ ನಿನ್ನ ಕಳ್ಳ ನೋಟ, ನನ್ನ ಹುಸಿಮುನಿಸು ಎಲ್ಲ ಅದೆಷ್ಟು ಸೂಪರ್ ಅಲ್ವಾ? ತುಂಬಾ ಭಾವುಕ ಹುಡುಗಿ ನಾನು ಅದ್ಕೆ ಈ ರೀತಿ ಮಾತಾಡ್ತಿದ್ದೀನಿ, ಸರಿ ನಿಂಗೆ ಇದೆಲ್ಲ ಇಷ್ಟ ಆಗಲ್ಲ ಅಂದ್ರೆ ಹೇಳು, ನೀನು ಕರೆದಲ್ಲಿಗೆ ಬರ್ತೀನಿ, ನನ್ನ ಪ್ರೀತಿಗೆ ನನ್ನ ಗೆಳೆಯನಿಂದ ಯಾವ ಅಪಚಾರವೂ ಆಗೊಲ್ಲ ಅನ್ನುವ ನಂಬಿಕೆ ನನಗಿದೆ. ಆದ್ರೆ… ಆದ್ರೆ… ಆದ್ರೆ.. ನೀನು ನನ್ನಂತ ದಂತದ ಬೊಂಬೆಯನ್ನ ನೋಡಿಯೂ ಮುಟ್ಟಲಾಗದೆ, ಮುದ್ದಿಸಲಾಗದೆ ಇರೋದನ್ನ ನಾನು ನೋಡ್ಬೇಕು ಅನ್ನಿಸ್ತಿದೆ. ಅಯ್ಯೋ ಪಾಪ ಅನ್ನಿಸಿದ್ರೆ ಒಂದೇ ಒಂದು ಪುಟಾಣಿ ಮುತ್ತು. ಅದು ಕೆನ್ನೆಗೆ ಮಾತ್ರ.

ನವಿಲೂರು ಹುಡುಗಿ
3622

ನೀನು ನನಗೆ

7 ಸೆಪ್ಟೆಂ

( ವಿಶೇಷ ಸೂಚನೆ. ಈ ಸಾಲುಗಳನ್ನ ಸುಮ್ಮನೇ ಗೀಚಿದ್ದು, ಕವಿತೆ ಅಂದುಕೊಂಡು ಓದಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು)

ನೀನು ನನಗೆ ಮುಡಿಯಲಾರದ ಹೂವು
ಮರೆಯಲಾರದ ನೋವು
ಎದುರು ನೋಡುತ್ತಿರುವ ಸಾವು
ನೀನು ಗಾಳಿಗೆ ತೂರಿದ ನೀತಿ
ಪ್ರಾಮಾಣಿಕವಲ್ಲದ ಪ್ರೀತಿ.

ನೀನು ನನಗೆ ನೋವಿನ ಅಕ್ಷಯಪಾತ್ರೆ
ಹೃದಯದ ಸಣ್ಣ ನೋವಿಗೂ ಸ್ಪಂದಿಸದ
ನಿರಾಸೆಯ ಮಾತ್ರೆ.
ಯಾರೂ ನೋಡಲಾಗದ ಹಾಳೂರಿನ ಜಾತ್ರೆ
ಎಂದೂ ಮುಗಿಯದ ಅಂತಿಮ ಯಾತ್ರೆ.

ನೀನು ನನಗೆ ಮರೆತುಬಿಡುವಂತಹ ಚಿತ್ರ
ನಾನು ಒಂದಕ್ಷರವೂ ಓದಲಾಗದ ಪತ್ರ
ಸರಿಯಾದ ಪ್ರಶ್ನೆಗೆ ತಪ್ಪು ತಪ್ಪು ಉತ್ತರ
ಕೈಗೂಡದ ಕನಸುಗಳಿತೆ ತುಂಬ ಹತ್ತಿರ.

ನೀನು ನನಗೆ ಬೆಳಕಿನ ಕತ್ತಲು
ಭಾವನೆಗಳ ಪೂರ್ತಿ ಬೆತ್ತಲು
ನೀನು ನನಗೆ ಅಮವಾಸ್ಯೆಯ ಚಂದಿರ
ದೇವರಿಲ್ಲದ ಮಂದಿರ,
ಭರವಸೆಗಳೆ ಇಲ್ಲದ ಖಾಲಿ ಖಾಲಿ ಬಟ್ಟಲು
ಬದುಕಿನ ರೇಸಿನಲ್ಲಿ ಸಿಕ್ಕ ಸೋಲಿನ ಮೆಡಲ್ಲು.

ನೀನು ಆಸೆಗಳ ಮುಳುಗಿಸಿದ ಕಡಲು
ಆಸರೆಯಾಗದೇ ಹೋದ ಒಡಲು
ನಿದ್ದೆ ಬಾರದ ಮಡಿಲು
ನೀನು ನನಗೆ ಒಂದು ಸುಂದರ ಸಜ
ಆದರೂ ನಾನು ಪ್ರೀತಿಸಿದ್ದು ಎಷ್ಟೊಂದು ನಿಜ.