Tag Archives: navilugari somu

ಹೆಸರಿನ ಹಂಗಿಲ್ಲದ ಹನಿಗಳು

30 ಡಿಸೆ

ಕವಿತೆಯ ಕೊನೆಯ
ಸಾಲಿನ ಬಳಿಕ,
ಸಂಜೆ ಕತ್ತಲಿನ ಕೊನೆಗೆ
ಮಾತುಗಳೆಲ್ಲ ಮುಗಿದ ನಂತರ
ಎಲ್ಲರ ಹಾರೈಕೆಗಳೂ ತೀರಿದ ತಕ್ಷಣ
ನೆನಪಾಗು.. ಬದುಕು ಮುಂದುವರಿಯಬೇಕು.
———————————————
ಮುಳುಗಲಿ ಜಗತ್ತು
ತೊಲಗಿ ಹೋಗಲಿ ಬೆಳಕು
ಆರಲಿ ಬಿಡು ದೀಪ
ನಾಶವಾಗಿ ಹೋಗಲಿ ಸುಖ ಸಂತೋಷ
ನಾನು ನಿನ್ನ ಮಡಿಲಲ್ಲಿರುವೆ.
——————————————————
ಅಲ್ಲಿ ಹರಿದ ತಾಯ ಸೆರಗಿತ್ತು
ಅಲ್ಲಿ ಅವಳ ಬಿರಿದ ಎದೆಯ
ಸುಂದರ ಬೆರಗಿತ್ತು.
ಹುಡುಗ ತಾಯ ಸೆರಗ ಹೊಲೆದುಕೊಟ್ಟ.
——————————————————–
ಅವನಿಗೆ ಕಾಯುತ್ತಿದ್ದ ಅವಳ
ನೆತ್ತಿಯ ಮೇಲೆ ದಶಕಗಳೆ
ಉರುಳಿ ತೆರಳಿ ಹೋಗಿದ್ದರೂ,
ಅವಳ ಎದೆಯ ಒಳಗೆ ಈಗಲೂ
ಅವನ ಪ್ರೀತಿಯ ಎರಡು ಸಾಲಿನ
ಕವಿತೆಳು ಜೀವ ತಳೆಯುತ್ತಲೇ ಇವೆ.
———————————————————-
ಜಗತ್ತು ಅವಳನ್ನು
ಹುಡುಕುತ್ತಿತ್ತು.
ಯಾರ ಕಣ್ಣಿಗೂ ಬೀಳದೆ
ಕವಿತೆಯೊಳಗಡಗಿ ಕುಳಿತಿದ್ದಳು
ನನ್ನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
——————————————————–
ಹಸಿವಿನಿಂದ ಹೊರಗೆ
ಕತ್ತಲಲ್ಲಿ ಮಲಗಿದ್ದ ಕೋಟ್ಯಾಂತರ
ಜನರ ಮೇಲೆ ಬೆಳದಿಂಗಳ ಸುರಿಸಿದ
ಚಂದಿರ, ಅವರ ಹಸಿವ ನೀಗಿಸಲಾರದ
ಅಸಾಹಾಯಕತೆಗೆ ಹನಿಗೂಡಿದ್ದಾನೆ.
————————————————————-
ಅವಳ ಕೈ ಹಿಡಿದುಕೊಂಡ
ಅವನ ಸಮಸ್ತ ಖುಷಿಗಿಂತ
ಹಿಡಿದ ಹಿಡಿತ ಸಡಿಲಾಗಬಾರದು
ದೇವರೆ ಎಂದು ಬೇಡಿಕೊಂಡ
ಪರಿ ದೊಡ್ಡದಿದೆ.
—————————————————————
ಪ್ರಪಂಚದ ಅತ್ಯುತ್ತಮ
ಚಿತ್ರಕಾರರೆಲ್ಲರೂ ಚಿತ್ರಿಸಿದ
ಚಿತ್ರಿಕೆಗಳೆಲ್ಲವೂ,
ನನ್ನ ಕಪ್ಪು ಬಿಳುಪು ಸುಂದರಿಯ ಹಳೆಯ
ಫೋಟೋದ ಮುಂದೆ ತಲೆ ತಗ್ಗಿಸಿವೆ.
————————————————————
ಹತ್ತು ಮಮತೆ,
ನೂರು ನಂಬಿಕೆ,
ಸಾವಿರ ಪ್ರಾಮಾಣಿಕತೆ,
ಸಾವಿರಾರು ಪ್ರೀತಿ ಪ್ರೇಮಗಳ
ಜೊತೆ ನನ್ನವನನ್ನ ತೂಗಿದ
ತಕ್ಕಡಿಯ ಭಾಗ
ಯಾವತ್ತೂ ಕೆಳಗೇ ಇರುತ್ತದೆ
————————————————————-
ನಾನು ಕೇಳಿದ ಅಷ್ಟೂ
ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರಿಸದ
ನಿನ್ನ ಪ್ರಮಾದಕ್ಕೆ ಒಂದು ಮುತ್ತನ್ನು
ಕೊಡಬೇಕೆಂಬ ಕಠಿಣ ಸಜೆಯನ್ನ ವಿಧಿಸುತ್ತಿದ್ದೇನೆ.

( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಕವಿತೆ ಕಳೆದು ಹೋಗಿದ

9 ನವೆಂ

ಮೊದಲು ತೊದಲುತ್ತ ಬೆರೆದಿದ್ದ
ಬರೆಯಲಾರದೆ ಬಿಕ್ಕಿ ಅತ್ತಿದ್ದ
ಎರಡು ಸಾಲು ಬರೆಯಲೂ
ಲೆಕ್ಕವಿಲ್ಲದಷ್ಟು ನೆನಪು ಮಾಡಿಕೊಂಡು
ಅರ್ದ ಬರೆದಿಟ್ಟಿದ್ದ ಕವಿತೆ ಕಳೆದು ಹೋಗಿದೆ.

ಅಲ್ಲಿ ಬರೆದ ಒಂದು ಸಾಲು
ಒಂದಕ್ಷರ ಏನೆಂದರೇನೂ ನೆನಪಿಲ್ಲ
ಅಲ್ಲಿ ನಾನು ಬರೆದ ಸಾಲುಗಳಿಗಿಂತ
ಬರೆಯದೇ ಉಳಿಸಿಕೊಂಡ ಸಾಲಿನ
ಸಾಲ ತೀರಿಸಲಾರದ ಕವಿತೆ ಕಳೆದುಹೋಗಿದೆ.

ಅವಳು ನನಗಂತಲೇ
ಬಿಟ್ಟು ಹೋದ ಎಂದೂ
ಮುಗಿಯದ ವಿರಹವನ್ನು
ಕೇವಲ ಮೂರು ಸಾಲುಗಳಲ್ಲಿ ಬರೆದ
ಕವಿತೆ ಕಳೆದು ಹೋಗಿದೆ.

ಅವಳೊಂದಿಗೆ ಕಳೆದ
ಕೆಲವೇ ಕೆಲವು ಕ್ಷಣಗಳನ್ನ
ನನ್ನಿಡೀ ಬದುಕಿಗೆ ವಿಸ್ತರಿಸಿಕೊಂಡ
ಕೆಲವು ಮಾಯಾವಿ ಸಾಲುಗಳ
ಕವಿತೆ ಕಳೆದು ಹೋಗಿದೆ.

ನನಗೆ ಬೆನ್ನು ಮಾಡಿ
ಹೊರಟು ಹೋದವಳ
ಮೊಗದಲ್ಲಿ ಮೂಡಿದ
ಸಣ್ಣ ನಗೆಯನ್ನೂ
ಪ್ರೀತಿಸಿ ಬರೆದ ಸಾಲುಗಳ
ಕವಿತೆ ಕಾಣೆಯಾಗಿದೆ.

ತಾಯಿ ಮತ್ತು ದೇವರು ಹಾಗು
ಅವಳು ಸಮನಾರ್ಥಕ ಪದಗಳೆಂದು
ಹೇಳಿ ನನೊಳಗೆ ಸುಖಿಸಿದ
ಸಾಲುಗಳ ಕವಿತೆ ಕಳೆದು ಹೋಗಿದೆ.

ದೂರಾಗುವ ಮಾತು ನೀನಾಡಿದ
ಕೂಡಲೇ ನಾನು ನಿನ್ನ ಕಾಲಿಗೊರಗಿ
———————-
———————-
ಆ ಕವಿತೆ ಕಳೆದು ಹೋಗಿದೆ
ಬದುಕು ಮುಂದುವರಿಯಬೇಕಿದೆ
ಕವಿತೆ ಬೇಕಿದೆ.

ಅವಳು

1 ನವೆಂ

ಕೆಲವೊಮ್ಮೆ
ಬಳ್ಳಾರಿ ಸೀಮೆಯ ಬಿಸಿಲು
ಮತ್ತೊಮ್ಮೆ
ಮಲೆನಾಡ ಬಾಳೇಗಿಡದ
ಟಿಸಿಲು.

ಒಪ್ಪಿಕೊಂಡರೆ ಎದೆಯೊಳಗೆ
ಡಜನ್ಗಟ್ಟಲೇ ಮುಗಿಲು.
ತಬ್ಬಿಕೊಂಡರೆ ಆಹಾ
ಕಲ್ಲೆದೆಗೂ ಎಂಥಹ ದಿಗಿಲು.

ನಾನು ಒಮ್ಮೊಮ್ಮೆ
ತುಂಟನಾದಾಗ
ಅವಳು ಹುಡುಗಿ
ಬೇಲೂರು.
ಒಳಗಣ್ಣ ತೆರೆದಾಗ
ಅವಳು ಗೌರಿ ನಮ್ಮೂರು.

ಆಹಾ ಹಿಂಡಿಬಿಡಬೇಕು
ಸಂಪಿಗೆಯಂತಹ ಮೂಗು.
ಹಾಗೆ ನಕ್ಕರಂತೂ
ಹೋಟೇಲ್ ಆಂದ್ರಾ ಶೈಲಿಯ ಸಾಗು.

ಕಾಣುತ್ತಾಳೆ ಒಮ್ಮೊಮ್ಮೆ
ಹೇಗೆಂದರೆ ಮಗು ಅತ್ತರೆ..
ಅಳಲಿ ನಗಲಿ ಬಿಡು
ಮಾರಾಯ ತುಟಿ ಸಕ್ಕರೆ.

ಬಿಸಿಲ ದೇಶ

20 ಆಕ್ಟೋ

ಕೇವಲ ತಿಂಗಳು ದಿನಗಳ
ಲೆಕ್ಕದಲ್ಲೇ ನಿಮ್ಮಂತವರ
ಆಸ್ತಿಯೆಲ್ಲ ಮಾಗಿ,
ವರ್ಷ ಪೂರ್ತಿ ಬಾಗಿ ದುಡಿದರೂ
ಬಿಸಿಲ ದೇಶದ ಇವರು ನಿತ್ಯ ರೋಗಿ.

ಬಗೆದು ಅಗೆದು ಬಿಟ್ಟಿರಿ
ತಾಯೊಡಲ, ತುಂಬಬಹುದು
ನಿಮ್ಮ ರೊಕ್ಕದ ಚೀಲ,
ಅಳುವ ಕಂದನ ಒಣಗಿದ
ತುಟಿಯ ಒರೆಸಲು ಲೊಳ್ಳೆ ಹಾಲಿಗೂ
ದೊರಕುತ್ತಿಲ್ಲ ರೂಪಾಯಿ ಸಾಲ.

ತನ್ನೊಡಲ ತುಂಬಿಕೊಂಡ
ನಿಮ್ಮ ರೊಕ್ಕದ ಚೀಲ
ಹಾಕುತ್ತಿರಬಹುದು ಕೇಕೆ,
ಅರೆ ಹೊಟ್ಟೆ ಮಗುವ, ಅರೆ ಬಟ್ಟೆ ತಾಯ ನೋಡಿ
ಮೊಸಳೆ ನೀರು ಸುರಿಸಿದರೆ ಸಾಕೆ?

ಸಾಕು ದಯಮಾಡಿ ಕೃಪೆ ತೋರಿ
ಭೂಮಿ ತಾಯ ಸೆರಗನ್ನು ಬಿಡಿ,
ಅದೋ ನೋಡಿ ಅಳುವ ಮಗುವಿನ
ಹಾಲಿಗೆ ಎರಡು ರೂಪಾಯಿಯನ್ನಾದರೂ ಕೊಡಿ.

ಪೋಲಿ

28 ಸೆಪ್ಟೆಂ

ಅವಳ ಬಿರಿದ ಮಲ್ಲಿಗೆ ಎದೆಯ
ಹಾಗೆ ನೋಡದಿರು ಗೆಳೆಯ.
ನೋಯದೇ ಇದ್ದೀತೆ, ಯಾರ ಕಣ್ಣೂ
ಬೀಳದಿರಲೆಂದು ಲಟಿಗೆ ತೆಗೆದು
ಮಗಳ ಹೊರಗೆ ಕಳುಹಿಸಿದ ತಾಯ ಹೃದಯ.

ನೋಡ ನೋಡುತ್ತಲೆ ಅವಳ
ತುಟಿಯ ಸವಿಯುವ ನಿನ್ನ
ದುರಾಸೆಯ ಆಚೆ ಚೆಲ್ಲು,
ಅವಳದೆಲ್ಲವ ಸವಿಯುವ ಅವಳ
ರಾಜಕುಮಾರನಿದ್ದರೂ ಇರಬಹುದು
ದೂರ ನಿಲ್ಲು.

ಕನಸಿನಲ್ಲಿಯೇ ಮೈಬಳಸಿ
ತೋಳ್ಬಳಸಿ ಅವಳದೆಲ್ಲವ
ಪಡೆದ ಕನಸು ಕಾಣಬೇಕೇ?
ಇನ್ನು ಚಿಕ್ಕ ಹುಡುಗಿ ಮಲ್ಲಿಗೆಯಂತ ಕೂಸು
ನಿಮ್ಮಂತವರ ವಿಕೃತವ ನೋಡಬೇಕೆ?

ಕೈಮುಗಿವೆ ದಯಮಾಡಿ
ಹಾಕಿಕೊಳ್ಳಿ ನಿಮ್ಮಾಸೆಗಳಿಗೆಲ್ಲ ಬೇಲಿ.
ನನಗದು ಅನ್ವಯಿಸುವುದಿಲ್ಲ
ನಾನಂತೂ ಹುಟ್ಟು ಪೋಲಿ.

ಒಂದೆರೆಡು ಸಾಲಿನ ಕಥೆಗಳು ಭಾಗ ೪

14 ಜುಲೈ

೧.ಜಗತ್ತಿನ ಉತ್ತಮ ವಿರಹ ಕವಿಯ ಕವನಗಳ ಜೀವಾಳ ಮತ್ತು ನೋವಿನ ರಹಸ್ಯಗಳೆಲ್ಲ ಆತನ ವಿಫಲ ಪ್ರೇಮದ ಗುರುತುಗಳಂತೆ.

೨.ಕೇವಲ ಮಾರು ದೂರವಿದ್ದ ಹಾದಿಯನ್ನ ಒಬ್ಬಳೇ ದಾಟಲಾಗದೇ ಕುಸಿದು ಕುಳಿತ ಅವಳ ಅಸಹಾಯಕತೆಗೆ ನಗಬಾರದು. ಬದಲಾಗಿ ಅವಳ ಅಪ್ಪಟ ಪ್ರೀತಿಗೆ ಚಪ್ಪಾಳೆ ತಟ್ಟಬೇಕಂತೆ.

೩.ದೇವರ ಮುಂದೆ ದೀಪಗಳನ್ನ ಹಚ್ಚಿ ತನ್ನ ಕನಸುಗಳೇನೆಂದು ಹೇಳಿಕೊಂಡ ಅವಳ ಪ್ರೀತಿಗೆ ದೇವರೇ ಲೆಕ್ಕ ತಪ್ಪಿದ್ದು ಸುಳ್ಳಲ್ಲ.

೪.ಒಂದಷ್ಟು ಕಣ್ಣೀರ ಕತೆಗಳನ್ನ ಹುಡುಕೊಂಡು ಹೋದವರು ಬರಿಗೈಯ್ಯಲ್ಲಿ ವಾಪಾಸಾದರು. ಬಹುಷ್ಯ ನಾಡಿನ ರೈತರ ವಿಳಾಸ ಮರೆತಿದ್ದರು ಅನ್ನಿಸುತ್ತೆ.

೫.ಅತೀ ಹೆಚ್ಚು ಕಳ್ಳತನವಾದ ಸ್ಥಳಗಳನ್ನೆಲ್ಲ ಪೋಲೀಸರು ಹುಡುಕುತ್ತಿದ್ದರು. ತುಂಟ ಗೆಳೆಯನೊಬ್ಬ ತನ್ನ ಗೆಳತಿಯ ತುಟಿಗಳಿಗೆ ಕಾವಲು ನಿಂತ .

೬.ಭಗ್ನ ಪ್ರೇಮಿಯನ್ನ ಎಲ್ಲರೂ ದೂರವಿಟ್ಟರು. ಆದರೇ ತುಂಬು ಹೃದಯದಿಂದ ವಿರಹ ಗೀತೆಗಳು ಅಪ್ಪಿಕೊಂಡು ಮತ್ತಷ್ಟು ಶ್ರೀಮಂತವಾದವು.

೭.ಅವನ ನೆನಪಿಗೊಂದರಂತೆ ಇವಳು ಹಚ್ಚಿಟ್ಟಿದ್ದ ದೀಪಗಳ ಸಾಲುಗಳ ನೋಡಿ ಅಸಂಖ್ಯಾತ ನಕ್ಷತ್ರಗಳು ಸೋಲೊಪ್ಪಿಕೊಂಡು ಮರೆಯಾದವು

೮.ಅಗಲುವ ಭಯದಿಂದ ಮನೆಯಿಂದ ಹೊರ ಬಂದ ಜೋಡಿಗಳು ರಾತ್ರಿಯಿಡೀ ತಬ್ಬಿಕೊಂಡು ಮಲಗಿದ್ದರೂ ದೇಹಗಳು ಬೆಸೆದುಕೊಳ್ಳಲ್ಲಿಲ್ಲವಂತೆ.

೯.ಅವಳ ನೆನಪಿನಲ್ಲಿ ಒಂದು ಸಾಲಿನಲ್ಲಿ ಕಥೆ ಬರೆಯ ಹೊರಟಾಗಲೆಲ್ಲ ಒಂದು ಕತೆ ಹೊಳೆಯಲಿಲ್ಲ. ಬದಲಾಗಿ ಇವನಿಗೆ ಕತೆಗಳ ಕಣಜಗಳೆ ಸೃಷ್ಟಿಯಾದವು.

೧೦.ನಿನ್ನ ಮನಸ್ಸು ಶೃಂಗಾರ ಬಂಗಾರವೆಂದು ಹೊಗಳಿದ ಗೆಳೆಯನತ್ತ ತಿರುಗಿ ಕೂಡ ನೋಡದ ಹುಡುಗಿ ವಾಸ್ತವಿಕತೆಯ ಒಂದು ಸಾಲಿನ ಮಾತಿಗೆ ತಿರುಗಿ ಮುಗುಳ್ನಕ್ಕಳು.

( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಹಾಯ್ಕುಗಳು !

7 ಮಾರ್ಚ್

ಅವನ ಮೇಲಿನ
ಒಂದು ದಿನದ ಹಂಬಲದ
ಮುಂದೆ ಶಬರಿಯ ವರ್ಷದ
ದಾಖಲೆಗಳೆಲ್ಲ ಚಿಂದಿಯಾದವು !
———————
ನಿನ್ನೆ ಮದ್ಯದ ಹನಿಯ
ಜೊತೆ ಸಿಗರೇಟಿನ
ಘಾಟು ಜೊತೆಯಾಗಿದ್ದಾಗ
ನೀನು ನೆನಪಾಗಲಿಲ್ಲ..
ಹಾಗಾದರೆ ಯಾರು ಪವಿತ್ರ !
———————

ನೋವನ್ನು
ಆಚರಿಸುತ್ತಿದ್ದೇನೆ !
ನಿನ್ನ ಸಹಾಯಕ್ಕೆ
ಧಿಕ್ಕಾರ ಹಾಗೂ
ಧನ್ಯವಾದಗಳು
———————
ಈಗೀಗ ಮಗ್ಗಲು
ಬದಲಿಸಲೂ ಭಯ !

ಪಕ್ಕದಲ್ಲಿ ನೀನಿಲ್ಲದಿದ್ದರೆ ?
———————

ನಿನ್ನ ಹೆಸರು
ಬರೆದ ಪೆನ್ನಿನ ತುದಿಯನ್ನ
ಅಕ್ಕಸಾಲಿಗ
ಕೊಂಡೊಯ್ದಿದ್ದಾನೆ !
———————

ಎಂತಹ ಅದೃಷ್ಟಶಾಲಿ !
ಕೊನೆಯ ಪಕ್ಷ
ನಿನ್ನ ನೆನಪಾದರೂ
ಜೊತೆಗಿದೆ
———————

( ಹಾಯ್-ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟಿತ)

ಒಂದೆರೆಡು ಹನಿ !

11 ಫೆಬ್ರ

ಸತ್ತ ಬೇರು
ಚಿಗುರಿಬಿಟ್ಟಿದೆ !
ನೀನೆ ಬೇಡಿಕೊಂಡಿರಬೇಕು!
ಇಲ್ಲಾ ಮರದ ಮರೆಗೆ ನಿಂತು
ಹಾಡಿರಬೇಕು !

ನೀನು ನಿನ್ನೆ
ಹಾಡಿದ ಹಾಡಿಗೆ
ತೂಕ ಬಂದುಬಿಟ್ಟಿದೆ !

ನನ್ನ ಜೊತೆ
ಅವನಿಲ್ಲವಾದ ದಿನ
ಜಗತ್ತಿನ ಸಮಸ್ತ
ದೇವರುಗಳಿಗೆ ಒಂದಿಷ್ಟು
ಶಾಪಗಳು ಹೆಗಲೇರಲಿವೆ !

ಇಲ್ಲಿ ಒಂದು ಪಂದ್ಯ,
ತಾಕತ್ತಿದ್ದರೆ ಸಮಸ್ತ
ಸಾಗರಗಳು ಈ ಎದೆಯ
ಒಲವನ್ನ ತುಂಬಿಸಿಕೊಳ್ಳಲಿ

ಒಂದು ದಿನ
ನಿನ್ನೊಂದಿಗೆ
ಮಾತನಾಡಲಿಲ್ಲ!
ಜೀವನಪೂರ್ತಿ
ನಿನ್ನ ಜೊತೆಗಿರುವ
ಶಿಕ್ಷೆ ವಿಧಿಸಿಬಿಡು !

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಎರೆಡು ಸಾಲಿನ ಕಥೆಗಳು ಭಾಗ 3

2 ಫೆಬ್ರ

ಕೂಡಲೇ ಅವಳಲ್ಲಿ ಒಂದು ಸುಳ್ಳು ಹೇಳಬೇಕಿತ್ತು ಇವನು. ಅವಳ ಕಣ್ಣುಗಳ ನೋಡಿ ತಡವರಿಸುತ್ತಲೇ ಸತ್ಯ ಹೇಳಿ ಒಂದು ಮುತ್ತು ಪಡೆದುಕೊಂಡ…!

——————————————————————-
ಮದುವೆಯಾಯಿತು.ಅವನು ಬದುಕಲು ಬೇಕಾಗುವ ಸಾಮಾನುಗಳ ಪಟ್ಟಿ ತಯಾರಿಸುತ್ತಿದ್ದ.
ಮತ್ತೆ ಇವಳ ಮುಖವನ್ನೊಮ್ಮೆ ನೋಡಿದ .ಸಾಮಾನುಗಳ ಪಟ್ಟಿ ಯಾಕೋ ಪೂರ್ತಿಯಾಗಲಿಲ್ಲ.
——————————————————————-

ಅದೆಷ್ಟೋ ಹಾಡುಗಳನ್ನ ಬರೆದಿದ್ದ. ಈಗ ಒಂದು ಬರೆಯಲಾಗುತ್ತಿಲ್ಲ ಅನ್ನುತ್ತಿದ್ದಾನೆ. ಮತ್ತೆ ಅವಳು ನೆನಪಾಗುತ್ತಿದ್ದಾಳೆ..ನೆನಪಾಗುತ್ತಿಲ್ಲ ಅನ್ನುತ್ತಿದ್ದಾನೆ…!
——————————————————————-

ಬಂಜೆ ಅಂದು ಮೂದಲಿಸಿದರು ಮಂದಿ. “ ನಿನಗೆ ನಾನು ಮಗು ನನಗೆ ನೀನು ಮಗು” ಅನ್ನುವ ತನ್ನವನ ಮಾತು ನೆನಪಾಗಿ ದುಃಖ ಕಮ್ಮಿ ಮಾಡಿಕೊಂಡಳು…!
——————————————————————-

ತಾನೆಷ್ಟು ಪ್ರೀತಿಸುತ್ತೇನೆ ಅಂತ ತನ್ನ ಗೆಳತಿಗೆ ಹೇಳುತ್ತಿದ್ದ. “ಎಷ್ಟು ಪ್ರೀತಿಸ್ತೀಯ” ಅಂದು ಕಣ್ಣು ಮಿಟುಕಿಸಿದಳು. ಇವನಿಗೆ ಆಕಾಶದಲ್ಲಿನ ನಕ್ಷತ್ರಗಳ ಲೆಖ್ಖ ಸಿಗಲಿಲ್ಲ.
——————————————————————-

ಪ್ರೀತಿಸಿದ್ದನ್ನ ಕುಷಿಯಿಂದ ಪುಟಗಟ್ಟಲೇ ಬರೆದುಕೊಂಡಳು.. ದ್ವೇಶಿಸಿದ್ದನ್ನ ಬಿಕ್ಕಳಿಸುತ್ತ ಒಂದು ಸಾಲು ಬರೆಯಲಾಗದೆ ಖಾಲಿಯಾದಳು.!
——————————————————————-

ಚಂದನೆಯ ಹೆಸರಿನ ಗೆಳೆಯ ಸತ್ತು ಹೋಗಿದ್ದ. ಹಾಳುಜನ ಕೂಡಲೇ ಅವನಿಗೊಂದು ಹೆಸರಿಟ್ಟಿದ್ದರು. “ಬಾಡಿ” ಇನ್ನು ಬಂದಿಲ್ಲವಂತೆ ಅನ್ನುತ್ತಿದ್ದರು.
——————————————————————-

“ ನನಗಿಷ್ಟ ಇಲ್ಲ ನೀನು” ಅಂದವನನ್ನೊಮ್ಮೆ ನೋಡಿದಳು. “ಮೊದಲು ನಾನಾಡಿದ ಮಾತುಗಳನ್ನ ಕಾಪಿ ಮಾಡ್ತೀಯೇನೊ” ಅಂದು ನಕ್ಕಳು. ಅವನು ನಗಲಿಲ್ಲ. ಮತ್ತೆ ಅವಳು ಯಾವತ್ತೂ ನಗಲಿಲ್ಲ.
——————————————————————-

ಗೆಳೆಯ ಗೆಳತಿಗೆ ದೇವರು ಪ್ರತ್ಯಕ್ಷವಾಗಿ ಏನು ವರ ಬೇಕು ಅಂತ ಕೇಳಿದ. “ಒಂದಿಷ್ಟು ಚಳಿಗಾಲ ಪ್ಲೀಸ್”ಅಂದು ಇಬ್ಬರೂ ನಕ್ಕರು.
——————————————————————-

ಒಂದು ದಿನ ತುಂಬಾ ಸುಂದರವಾದ ಹೂವುಗಳ ಓಟದ ಸ್ಪರ್ಧೆ ನಡೆಯಿತು. ನನ್ನವಳಿಗೆ ಮೊದಲ ಬಹುಮಾನ ಸಿಕ್ಕಿತು.
——————————————————————-

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ

30 ಡಿಸೆ

ನಾನು ನಿನ್ನ ರಸ್ತೆಯಲ್ಲಿ
ಕೊನೆಯವರೆಗೂ ಸಾಗಬೇಕಿತ್ತು,
ಮದ್ಯೆ ಮದ್ಯೆ ದಾರಿ ಹರಿದಿತ್ತು
ಮತ್ತೆ ಬೆಳಕು ಮುನಿದಿತ್ತು.
ಪೂರ್ತಿಯಾಗುವ ಮೊದಲೆ
ಪ್ರಯಾಣ ಮುಗಿದಿತ್ತು.

ನಿನಗೇ ಅಂತ ನಾನು
ಬರೆದಿಟ್ಟ ಹಾಡುಗಳ
ಎಲ್ಲಾ ಸಾಲುಗಳು
ಅಳಿಸಿಹೋಗಿದ್ದವು
ಮತ್ತೆ ಬೆರೆಯೋಣವೆಂದರೇ
ನೀನು ನೆನಪಾಗುತ್ತಿದ್ದಿಯಾ
ಮತ್ತೆ ನೆನಪಾಗುತ್ತಿಲ್ಲ!

ಹಾಗೆ ಒಂದು ಸಲ ಅತ್ತು
ಬಿಡೋಣವೆಂದು ಕೊಂಡರೇ
ನಿನಗೆ ಕೊಟ್ಟ ಮಾತು, ಮತ್ತೆ
ಅತ್ತಾಗ ನೀನಿಟ್ಟ ಮುತ್ತು ನೆನಪಾಯಿತು.!
ದುಃಖ ನುಂಗಿಕೊಂಡೆ..ಅದರೂ
ಮಾತು ಉಳಿಸಿಕೊಳ್ಳಲಾಗುತ್ತಿಲ್ಲ
ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ !

ಎಲ್ಲಾ ನೆನಪುಗಳಿಗೂ
ಒಂದು ಸಮಾಧಿ ಕಟ್ಟಿಸಬೇಕು!
ಎಲ್ಲಾ ಹನಿಗಳಿಗೂ ಒಂದು
ದೊಡ್ಡ ನದಿಯ ಹುಡುಕಬೇಕು !
ಮತ್ತೆ ನಾನು ದೂರ ದೂರ ಹೋಗಬೇಕು
ಕ್ಷಮಿಸು ಅಲ್ಲಿ ನೀನು ನೆನಪಾಗೊಲ್ಲ
ಮತ್ತೆ ನೆನಪಾಗಬಾರದು ಕೂಡ!